ETV Bharat / state

ಬೆಂಗಳೂರಲ್ಲಿ ಮಹಿಳಾ ಅಧಿಕಾರಿ ಹತ್ಯೆ ಪ್ರಕರಣ : ಸಚಿವ ಎಸ್ ಎಸ್​​ ಮಲ್ಲಿಕಾರ್ಜುನ್‌ ಹೇಳಿದ್ದೇನು?

author img

By ETV Bharat Karnataka Team

Published : Nov 5, 2023, 8:46 PM IST

ಸಚಿವ ಎಸ್ ಎಸ್​​ ಮಲ್ಲಿಕಾರ್ಜುನ್‌
ಸಚಿವ ಎಸ್ ಎಸ್​​ ಮಲ್ಲಿಕಾರ್ಜುನ್‌

Minister SS Mallikarjun reaction on DD murder case: ಪ್ರತಿಮಾ ಹತ್ಯೆ ಪ್ರಕರಣದ ಬಗ್ಗೆ ಹತ್ತಾರು ಸಂಶಯಗಳಿವೆ ಎಂದು ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಹೇಳಿದ್ದಾರೆ.

ಸಚಿವ ಎಸ್ ಎಸ್​​ ಮಲ್ಲಿಕಾರ್ಜುನ್‌

ದಾವಣಗೆರೆ : ಭೂ ಮತ್ತು ಗಣಿ ವಿಜ್ಞಾನ‌ ಇಲಾಖೆ ಡಿಡಿ ಪ್ರತಿಮಾ ಹತ್ಯೆ ಪ್ರಕರಣದ ಬಗ್ಗೆ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಸಚಿವ ಎಸ್​ ಎಸ್​ ಮಲ್ಲಿಕಾರ್ಜುನ್‌ ಅವರು ಪ್ರತಿಕ್ರಿಯಿಸಿದ್ದಾರೆ. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಿಮಾ ಪ್ರಕರಣದ ಬಗ್ಗೆ ಹತ್ತಾರು ಸಂಶಯಗಳಿವೆ. ಕೆಲವರು ಕೌಟುಂಬಿಕ‌ ಕಾರಣ ಎನ್ನುತ್ತಾರೆ. ಕೆಲವರು ಇಲಾಖೆ ವಿಚಾರ ಎನ್ನುತ್ತಾರೆ. ಮತ್ತೆ ಕೆಲವರು ಇಲಾಖೆಯ ಕಾರ್ ಚಾಲಕನನ್ನು ಸೇವೆಯಿಂದ ಬಿಡುಗಡೆಗೊಳಿಸಿದ್ದರು ಎಂದು, ಹೀಗೆ ಹಲವಾರು ವಿಚಾರಗಳು ಇವೆ ಎಂದರು.

ಈ ಎಲ್ಲ ವಿಚಾರಗಳ ಬಗ್ಗೆ ತನಿಖೆ ನಡೆಯುತ್ತಿದೆ. ಅಕ್ರಮ ಗಣಿಗಾರಿಕೆ ಬಗ್ಗೆ ಆರೋಪ ಕೇಳಿ ಬಂದಿದೆ. ‌ಹೀಗಾಗಿ ಈ ಸಾವಿನ ಬಗ್ಗೆ ತನಿಖೆ ಆದ ಮೇಲೆ ಸ್ಪಷ್ಟವಾಗಿ ಹೇಳಲಾಗುವುದು. ಜೊತೆಗೆ ನಿನ್ನೆಯ ಇಲಾಖೆ ವಿಡಿಯೋ ಕಾನ್ಫರೆನ್ಸ್​ನಲ್ಲಿ ಪ್ರತಿಮಾ ಭಾಗಿ ಆಗಿದ್ದರು. ಒಳ್ಳೆಯ ಅಧಿಕಾರಿ, ತೀರ್ಥಹಳ್ಳಿಯವರು, ಅವರಿಗೆ ಮಕ್ಕಳಿದ್ದಾರೆ. ಎಲ್ಲರಿಗೂ ಪೊಲೀಸ್ ಭದ್ರತೆ ಕೊಡಲು ಆಗುತ್ತಾ? ಎಂದು ಪ್ರಶ್ನಿಸಿದರು.

ನಿಮಗೆ ಯಾಕ್ ಬೇಕು ಅದೆಲ್ಲ, ನಮ್ ಫ್ಯಾಮಿಲಿ (ಪಕ್ಷ) ಮ್ಯಾಟರ್: ಶನಿವಾರ ನಡೆದ ಮೀಟಿಂಗ್​ಗೆ ನಾನು ಹೋಗಿರಲಿಲ್ಲ. ನಾಳೆ ಕ್ಯಾಬಿನೆಟ್ ಇದೆ ಹೋಗ್ತಿನಿ. ನಿಮಗೆ ಯಾಕ್ ಬೇಕು ಅದೆಲ್ಲ. ನಮ್ ಫ್ಯಾಮಿಲಿ (ಪಕ್ಷ) ಮ್ಯಾಟರ್ ಎಂದು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು. ಡಿಕೆಶಿ ಸಿಎಂ ಆದ್ರೆ ಜೆಡಿಎಸ್ ಶಾಸಕರು ಬೆಂಬಲ ಕೊಡ್ತಿವಿ ಅಂತ ಈಗ ಹೇಳ್ತಾರೆ. ಬಿಜೆಪಿಯವರು ಕೂಡ ಹೇಳ್ತಾರೆ. ಅದೆಲ್ಲ ಅಲ್ಲ. ನಮ್ಮ ಫ್ಯಾಮಿಲಿ ವಿಚಾರ ನಾವು ಸರಿ ಮಾಡಿಕೊಳ್ಳುತ್ತೇವೆ. ಇವರ್ಯಾರು ಎಂದು ಹೆಚ್​ಡಿಕೆಗೆ ಟಾಂಗ್ ಕೊಟ್ರು. ಗ್ಯಾರಂಟಿಯಿಂದ ಯಾವುದೇ ಅನುದಾನ ಬರುತ್ತಿಲ್ಲ ಎಂಬುದು ಸುಳ್ಳು. ನಾವು ಡಿಸೆಂಬರ್​ವರೆಗೂ ಸ್ವಲ್ಪ ನಿಧಾನವಾಗಿ ಹೋಗುತ್ತಿದ್ದೇವೆ ಅಷ್ಟೇ ಎಂದರು.‌

ಬಿಜೆಪಿ ಬರ ಅಧ್ಯಯನ ತಂಡ ರಚನೆ‌ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿಗರಿಗೆ ಕೆಲಸ ಇಲ್ಲ ಅನ್ಸುತ್ತೆ. ಕೇಂದ್ರಕ್ಕೆ ಹೋಗಿ ಬರ ಪರಿಹಾರ ತೆಗೆದುಕೊಂಡು ಬರಲಿ. ಇವರು ತೆಗೆದುಕೊಂಡು ಬಂದರೆ ದಾವಣಗೆರೆಯ ಹೈಸ್ಕೂಲ್ ಫೀಲ್ಡ್​ನಲ್ಲಿ ದೊಡ್ಡದಾಗಿ ಸನ್ಮಾನ ಮಾಡ್ತಿವಿ. ಕೇಂದ್ರ ಸರ್ಕಾರದ ವೈಫಲ್ಯವನ್ನು ನಮ್ಮ ಮೇಲೆ ಹಾಕ್ತಾರೆ. ನಮ್ಮ ಸಂಸದರು ಮೋದಿ ಮುಂದೆ‌ ಮಂಡಿಯೂರಿ ಕೂರುತ್ತಾರೆ. ಕೈ ಕಟ್ಟಿ ನಿಂತು ಪರಿಹಾರದ ಹಣ ಕೇಳಲಿ ಎಂದು ಸಂಸದ ಜಿ ಎಂ ಸಿದ್ದೇಶ್ವರ್ ವಿರುದ್ದ ಸಚಿವ ಎಸ್ ಎಸ್​ ಮಲ್ಲಿಕಾರ್ಜುನ್‌ ಕಿಡಿಕಾರಿದರು.

ಸಂಸದರು ಕೇಂದ್ರದಿಂದ ಏನು ಅನುದಾನ ತಂದಿದ್ದಾರೆ. ಸ್ಮಾರ್ಟ್ ಸಿಟಿ, ಜಲಸಿರಿ ಇವರು ತಂದಿದ್ದಾರಂತ. ಈ ಸಂಸದ ಗೆದ್ದರೆ ಕೊಳಪಟ್ಟಿ ಹಿಡಿತಾರೆ. ಸೋತರೆ ಕಾಲು ಹಿಡಿತಾರೆ ಎಂದು ಸಂಸದ ಜಿ ಎಂ ಸಿದ್ದೇಶ್ವರ್​ ವಿರುದ್ಧ ಸಚಿವ ಮಲ್ಲಿಕಾರ್ಜುನ್​ ಟೀಕಿಸಿದರು.

ಇದನ್ನೂ ಓದಿ : ಬಿಜೆಪಿಯವರಿಂದ 40 ಶಾಸಕರ ಆಪರೇಷನ್​ ಸಾಧ್ಯವಿಲ್ಲ, ತಿರುಕನ ಕನಸು: ಸಚಿವ ಎಸ್​.ಎಸ್.ಮಲ್ಲಿಕಾರ್ಜುನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.