ETV Bharat / state

ಬಿ ಕೆ ಹರಿಪ್ರಸಾದ್ ರನ್ನು ತಕ್ಷಣ ಬಂಧಿಸಬೇಕು : ನಳಿನ್ ಕುಮಾರ್ ಕಟೀಲ್​ ಆಗ್ರಹ

author img

By ETV Bharat Karnataka Team

Published : Jan 4, 2024, 3:30 PM IST

Updated : Jan 4, 2024, 3:46 PM IST

MP Nalin Kumar Kateel spoke to the media.
ಸಂಸದ ನಳಿನ್ ಕುಮಾರ್ ಕಟೀಲ್ ಮಾಧ್ಯಮದವರ ಜೊತೆ ಮಾತನಾಡಿದರು.

'ಕರ್ನಾಟಕದಲ್ಲೂ ಗೋಧ್ರಾ ರೀತಿ ಘಟನೆ ನಡೆಯಲಿದೆ' ಬಿ ಕೆ ಹರಿಪ್ರಸಾದ್ ಹೇಳಿಕೆ ಬಗ್ಗೆ ಸಿಎಂ, ಗೃಹ ಸಚಿವರು, ಡಿಸಿಎಂ ತಮಗೇನು ಗೊತ್ತಿಲ್ಲ ಎನ್ನುತ್ತಿದ್ದಾರೆ. ಬಿ ಕೆ ಹರಿಪ್ರಸಾದ್ ತಮ್ಮಲ್ಲಿರುವ ಮಾಹಿತಿಯನ್ನು ಗೃಹ ಇಲಾಖೆಗೆ ನೀಡಲಿ, ಏಕೆಂದರೆ ಗೋಧ್ರಾ ಘಟನೆ ಹಿಂದೆ ಕಾಂಗ್ರೆಸ್ ಇತ್ತು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.

ಸಂಸದ ನಳಿನ್ ಕುಮಾರ್ ಕಟೀಲ್ ಮಾಧ್ಯಮದವರ ಜೊತೆ ಮಾತನಾಡಿದರು.

ಮಂಗಳೂರು: ಕರ್ನಾಟಕದಲ್ಲೂ ಗೋಧ್ರಾ ರೀತಿಯ ಘಟನೆ ಆಗಲಿದೆ ಎಂದು ಹೇಳಿಕೆ ನೀಡಿರುವ ವಿಧಾನ ಪರಿಷತ್​ ಸದ್ಯ ಬಿ ಕೆ ಹರಿಪ್ರಸಾದ್ ಅವರನ್ನು ಬಂಧಿಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಸಿಎಂ, ಗೃಹ ಸಚಿವರು, ಡಿಸಿಎಂ ತಮಗೇನು ಗೊತ್ತಿಲ್ಲ ಎನ್ನುತ್ತಿದ್ದಾರೆ. ಬಿ ಕೆ ಹರಿಪ್ರಸಾದ್ ತಮ್ಮಲ್ಲಿರುವ ಮಾಹಿತಿಯನ್ನು ಗೃಹ ಇಲಾಖೆಗೆ ನೀಡಲಿ, ಏಕೆಂದರೆ ಗೋಧ್ರಾ ಘಟನೆ ಹಿಂದೆ ಕಾಂಗ್ರೆಸ್ ಇತ್ತು. ಅಂದು ಗುಜರಾತ್​ನಲ್ಲಿ ಮೋದಿ ಸರ್ಕಾರವನ್ನು ಬೀಳಿಸಬೇಕೆಂಬ ಕುತಂತ್ರವನ್ನು ಕಾಂಗ್ರೆಸ್ ಪಕ್ಷ ಮಾಡಿತ್ತು. ಇಂದು ಮತ್ತೆ ಹರಿಪ್ರಸಾದ್ ಹೇಳಿಕೆ ಗಮನಿಸಿದರೆ, ಈ ಷಡ್ಯಂತ್ರವನ್ನು ಕಾಂಗ್ರೆಸ್ ಮಾಡುತ್ತದೆ ಎಂದು ಹೇಳಬಯಸುತ್ತೇನೆ. ತಕ್ಷಣ ಬಿ ಕೆ ಹರಿಪ್ರಸಾದ್ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ಸಿದ್ದರಾಮಯ್ಯರಲ್ಲಿ ರಾವಣನ ಗುಣವಿದೆ: ಹೆಚ್​ ಆಂಜನೇಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕಟೀಲ್​, ರಾಮ ಎಂಬುದು ಭಾವನಾತ್ಮಕ ನಂಬಿಕೆಗಳ ಸಂಕೇತ. ಮರ್ಯಾದ ಪುರುಷ ರಾಮನನ್ನು ಆದರ್ಶ ಪುರುಷನಾಗಿ ಸ್ವೀಕರಿಸಲಾಗಿದೆ. ರಾಮನಿಗೆ ಇನ್ನೊಂದು ಹೋಲಿಕೆಯಿಲ್ಲ. ರಾಮನಿಗೆ ರಾಮನೇ ಹೋಲಿಕೆ. ಹೆಸರಿಟ್ಟ ತಕ್ಷಣ ಎಲ್ಲರೂ ರಾಮನಾಗಲು ಸಾಧ್ಯವಿಲ್ಲ. ಸಿದ್ದರಾಮಯ್ಯರಲ್ಲಿ ರಾಮನ ಹೆಸರಿದೆ, ರಾವಣನ ಗುಣವಿದೆ ಎಂದು ಟೀಕಿಸಿದರು.

ರಾಮರಾಜ್ಯ: ಭಾರತ ಹಿಂದೂರಾಷ್ಟ್ರ ಆದಲ್ಲಿ ಅಪಾಯಕಾರಿ ಎಂಬ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ನಳಿನ್ ಕುಮಾರ್​ ಅವರು, ಭಾರತ ಹಿಂದೂರಾಷ್ಟ್ರವೇ. ಹಿಂದೂ ಎನ್ನುವ ಶಬ್ದ ಜಾತ್ಯತೀತವಾದದ್ದು. ಮಹಾತ್ಮ ಗಾಂಧೀಜಿಯವರು ಈ ದೇಶದಲ್ಲಿ ರಾಮರಾಜ್ಯದ ಪರಿಕಲ್ಪನೆ ಕಂಡಿದ್ದರು. ಅವರು ಭಾರತವನ್ನು ಜಾತ್ಯತೀತ ಮಾಡಲು ಹೇಳಿಲ್ಲ‌. ರಾಮರಾಜ್ಯ ಮಾಡಲು ಹೇಳಿದ್ದರು. ರಾಮರಾಜ್ಯದ ಪರಿಕಲ್ಪನೆಯೇ ಹಿಂದೂ ರಾಷ್ಟ್ರದ ಪರಿಕಲ್ಪನೆ ಎಂದು ಹೇಳಿದರು.

ಗಾಂಧೀಜಿ ಒಪ್ಪಿರುವ ವಿಚಾರವನ್ನು ಯತೀಂದ್ರ ಒಪ್ಪೊಲ್ಲ ಅಂದ್ರೆ ಗಾಂಧಿಯನ್ನು ಯತೀಂದ್ರ ಒಪ್ತಾರೋ ಇಲ್ಲವೋ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಹಿಂದೂ ರಾಷ್ಟ್ರ ಆದ ಕಾರಣಕ್ಕೆ ಈ ದೇಶದಲ್ಲಿ ಜಾತ್ಯತೀತತೆ ಉಳಿದಿದೆ. ಹಿಂದೂ ರಾಷ್ಟ್ರದ ಪರಿಣಾಮ ಈ ದೇಶ ಉಳಿದಿದೆ. ಕಾಂಗ್ರೆಸ್ ಕಾಲದಲ್ಲಿ ಈ ದೇಶದಲ್ಲಿ ಪಾಕಿಸ್ತಾನದ ತರಹದ ಆಡಳಿತವಿತ್ತು. ಆಗ ಭಯೋತ್ಪಾದನೆ, ನಕ್ಸಲ್ ಚಟುವಟಿಕೆ ತಾಂಡವ ಆಡುತ್ತಿತ್ತು. ಈಗ ಹಿಂದೂರಾಷ್ಟ್ರದ ಪರಿಕಲ್ಪನೆಯಡಿ ಎಲ್ಲವೂ ನಿಂತಿದೆ ಎಂದು ಕಟೀಲ್​ ವಾಗ್ದಾಳಿ ನಡೆಸಿದ್ರು.

ಹುಬ್ಬಳ್ಳಿಯಲ್ಲಿ ಹಿಂದೂ ಕಾರ್ಯಕರ್ತನ ಬಂಧನದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಂಸದ ಕಟೀಲ್​, ನಾನೂ ಕರ ಸೇವಕ, ರಾಮ ಭಕ್ತ, ಹಿಂದೂ ಕಾರ್ಯಕರ್ತರನ್ನು ಬಂಧಿಸುತ್ತಿರುವ ಸರ್ಕಾರ ಶಕ್ತಿಯಿದ್ದರೆ ನನ್ನನ್ನು ಬಂಧಿಸಲಿ. ಇಲ್ಲದಿದ್ದರೆ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಎಚ್ಚರಿಕೆ ರವಾನಿಸಿದರು.

ಇದನ್ನೂಓದಿ:ರಾಮ ಮಂದಿರ ವಿಚಾರದಲ್ಲಿ ಕಾಂಗ್ರೆಸ್ ಮಾತ್ರ ರಾಜಕಾರಣ ಮಾಡುತ್ತಿದೆ: ಬಸವರಾಜ ಬೊಮ್ಮಾಯಿ

Last Updated :Jan 4, 2024, 3:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.