ETV Bharat / state

ಗಡಾಯಿಕಲ್ಲು ಏರಿ ಕನ್ನಡ ಬಾವುಟ ಹಾರಿಸಿದ ಜ್ಯೋತಿರಾಜ್: ಕೇವಲ 2 ಗಂಟೆಯಲ್ಲಿ 1,700 ಅಡಿ ಎತ್ತರದ ಕಲ್ಲನ್ನೇರಿದ ಸಾಹಸಿ

author img

By

Published : Feb 13, 2023, 9:04 AM IST

Adventurer Jyothiraj Climbs Gadaikallu Of Belthangady
ಗಡಾಯಿಕಲ್ಲು ಏರಿ ಕನ್ನಡ ಬಾವುಟ ಹಾರಿಸಿದ ಜ್ಯೋತಿರಾಜ್

ಐತಿಹಾಸಿಕ ಗಡಾಯಿಕಲ್ಲು ಯಶಸ್ವಿಯಾಗಿ ಹತ್ತಿ ಕನ್ನಡ ಬಾವುಟ ಹಾರಿಸಿದ ಜ್ಯೋತಿರಾಜ್- 2 ಗಂಟೆಯಲ್ಲಿ 1,700 ಅಡಿ ಎತ್ತರದ ನರಸಿಂಹ ಗಡ ಹತ್ತಿ ಸಾಧನೆಗೈದ ಮಂಕಿಮ್ಯಾನ್.

ಐತಿಹಾಸಿಕ ಗಡಾಯಿ ಕಲ್ಲುಏರಿದ ಜ್ಯೋತಿರಾಜ್‌

ಬೆಳ್ತಂಗಡಿ(ದಕ್ಷಿಣ ಕನ್ನಡ): ಬೆಳ್ತಂಗಡಿ ತಾಲೂಕಿನಲ್ಲಿರುವ ಐತಿಹಾಸಿಕ ಗಡಾಯಿ ಕಲ್ಲುಅಥವಾ ನರಸಿಂಹ ಗಡವನ್ನು ಚಿತ್ರದುರ್ಗದ ಸಾಹಸಿ ಜ್ಯೋತಿರಾಜ್‌ ಅಲಿಯಾಸ್‌ ಕೋತಿರಾಜ್‌ ಬರಿಗೈಯಲ್ಲಿ ಏರಿ ಸಾಹಸ ಮೆರೆದಿದ್ದಾರೆ. ಫೌಂಡೇಶನ್ ಸ್ಥಾಪಿಸಿ ಹಲವಾರು ಮಕ್ಕಳಿಗೆ ತರಬೇತಿ ನೀಡುವ ಉದ್ದೇಶವನ್ನು ಇಟ್ಟುಕೊಂಡು ಸಮುದ್ರ ಮಟ್ಟದಿಂದ 1,700 ಅಡಿ ಎತ್ತರದ ಗಡಾಯಿಕಲ್ಲನ್ನು ಕೇವಲ 2 ಗಂಟೆಯಲ್ಲಿ ಹತ್ತಿ ಸಾಧನೆ ಮೆರೆದಿದ್ದಾರೆ. ಅದಲ್ಲದೇ ಮೇಲೆ ತಲುಪಿದ ಬಳಿಕ ಕನ್ನಡ ಬಾವುಟ ಹಾರಿಸಿ ಕರುನಾಡ ಪ್ರೇಮ ಮೆರೆದಿದ್ದಾರೆ.

ಭಾನುವಾರ ಬೆಳಗ್ಗೆ (ಫೆ.12) ಚಂದ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ದೇವಸ್ಥಾನದ ಮುಂಭಾಗದಿಂದ 2 ಕಿ.ಮೀ ನಡೆದುಕೊಂಡು ಹೋಗಿ ಗಡಾಯಿಕಲ್ಲು ಬುಡದಲ್ಲಿ 9.50ಕ್ಕೆ ತೆಂಗಿನಕಾಯಿ ಒಡೆದು 1,700 ಅಡಿ ಎತ್ತರದ ನರಸಿಂಹ ಗಡ ಹತ್ತಲು ಪ್ರಾರಂಭಿಸಿದ್ದಾರೆ. ವನ್ಯಜೀವಿ ಅರಣ್ಯ ವಿಭಾಗದಿಂದ ಅನುಮತಿ ಪಡೆದು ಉತ್ತರಾಭಿಮುಖವಾಗಿ ಕೈಗಳ ಸಹಾಯದಿಂದ ಗಡಾಯಿಕಲ್ಲು ಏರಲು ಆರಂಭಿಸಿದ್ದರು. ಸುರಕ್ಷತೆಯ ದೃಷ್ಟಿಯಿಂದ ಸೊಂಟಕ್ಕೆ ರೋಪ್ ಅಳವಡಿಸಿಕೊಂಡಿದ್ದರು.

Jyothiraj Climbs Gadaikallu
ಐತಿಹಾಸಿಕ ಗಡಾಯಿ ಕಲ್ಲುಏರಿದ ಜ್ಯೋತಿರಾಜ್‌

20 ನಿಮಿಷಗಳ ವಿರಾಮ: ಹತ್ತಲು ಸುಮಾರು 2 ಗಂಟೆ ಅವಧಿ ತೆಗೆದುಕೊಂಡಿದ್ದ ಜ್ಯೋತಿರಾಜ್‌ ಮಧ್ಯ 20 ನಿಮಿಷಗಳ ವಿರಾಮವನ್ನಷ್ಟೇ ಪಡೆದುಕೊಂಡಿದ್ದಾರೆ. ಈ ಮೂಲಕ ತಮ್ಮ ಸಾಧನೆಗೆ ಮತ್ತೊಂದು ಗರಿ ಸೇರಿಸಿಕೊಂಡಿದ್ದಾರೆ. ಇವರು ಮೇಲೇರಿ ಕನ್ನಡ ಧ್ವಜ ಹಾರಿಸಿದ ಕೂಡಲೇ ಸೇರಿದ್ದ ಜನಸ್ತೋಮ ಭಾರತಾಂಭೆಗೆ ಜೈಕಾರ ಹಾಕುವ ಮೂಲಕ ಜ್ಯೋತಿರಾಜ್ ಅವರಿಗೆ ಅಭಿನಂದನೆ ಸಲ್ಲಿಸಿದರು.

ಮಂಕಿಮ್ಯಾನ್ ಎಂದೇ ಪ್ರಸಿದ್ದಿ: ಈಗಾಗಲೇ ಚಿತ್ರದುರ್ಗದಲ್ಲಿ ಕೋಟೆ, ಹಲವಾರು ಎತ್ತರದ ಕಟ್ಟಡಗಳನ್ನು ಯಾವುದೇ ರೋಪ್ ಇಲ್ಲದೇ ಬರೀ ಕೈಯಲ್ಲಿ ಹತ್ತುವ ಮೂಲಕ 'ಮಂಕಿಮ್ಯಾನ್' ಎಂಬ ಹೆಸರು ಪಡೆದುಕೊಂಡಿದ್ದಾರೆ. ಇವರು ಇನ್ನಷ್ಟು ಸಾಧನೆ ಮೆರೆಯಲಿ. ಕರುನಾಡ ಕೀರ್ತಿ ಪತಾಕೆಯನ್ನು ಇನ್ನಷ್ಟು ಎತ್ತರಕ್ಕೆ ಹಾರಿಸಲಿ ಎಂಬುವುದೇ ನಮ್ಮ ಆಶಯ.

Jyothiraj Climbs Gadaikallu
ಗಡಾಯಿಕಲ್ಲು ಏರಿ ಕನ್ನಡ ಬಾವುಟ ಹಾರಿಸಿದ ಜ್ಯೋತಿರಾಜ್

405 ಅಡಿ ಎತ್ತರದ ಧ್ವಜಸ್ತಂಭ ಏರಿ ಸಾಧನೆ: ಕಳೆದ ವರ್ಷ ಹೊಸಪೇಟೆಯಲ್ಲಿ ಸ್ಥಾಪನೆ ಆಗಿರುವ 405 ಅಡಿ ಎತ್ತರದ ಧ್ವಜಸ್ತಂಭ ಏರಿ ಸಾಧನೆ ಮಾಡಿದ್ದರು. ಧ್ವಜಸ್ತಂಭ ಏರಿದ ಜ್ಯೋತಿರಾಜ್ ಅದರಲ್ಲಿನ ನೆಟ್ಟುಗಳನ್ನು ಸಹ ಫಿಟ್ ಮಾಡಿದ್ದರು. ಈ ಮೂಲಕ 405 ಅಡಿ ಧ್ವಜಸ್ತಂಭ ಏರಿ ಸೈ ಎನಿಸಿಕೊಂಡಿದ್ದರು. ಧ್ವಜಸ್ತಂಭದಲ್ಲಿ ಹಗ್ಗ ಕೂಡ ಸುತ್ತಿಕೊಂಡಿತ್ತು. ಅದನ್ನು ಸರಿಪಡಿಸಿರುವೆ. ಮೇಲೇರಿ ಕೆಲಸ ಮಾಡಿರುವೆ. ಆಜಾದಿ ಕಾ ಅಮೃತ ಮಹೋತ್ಸವದಲ್ಲಿ ಈ ಕಾರ್ಯ ಮಾಡಿದ ಖುಷಿ ಇದೆ ಎಂದು ಜ್ಯೋತಿರಾಜ್ ಹೇಳಿದ್ದರು.

ಇದನ್ನೂ ಓದಿ: 405 ಅಡಿ ಎತ್ತರದ ಧ್ವಜಸ್ತಂಭ ಏರಿದ ಮಂಕಿಮ್ಯಾನ್ ಜ್ಯೋತಿರಾಜ್​

ಕರ್ನಾಟಕದ 'ಕೋತಿರಾಜ್': ಕೋತಿರಾಜ್ ಎಂದೇ ಖ್ಯಾತಿ ಪಡೆದ ಜ್ಯೋತಿರಾಜ್ ಕರ್ನಾಟಕದಲ್ಲಿರುವ ಬಂಡೆ, ಗೋಡೆ, ಬೆಟ್ಟಗಳನ್ನು ಸರಸರನೇ ಏರಿ ನೋಡುಗರನ್ನ ನಿಬ್ಬೆರಗಾಗಿಸುತ್ತಾರೆ. ಕಣ್ಣು ಮಿಟುಕಿಸುವಷ್ಟರಲ್ಲಿಯೇ ಎತ್ತರದ ಗೋಡೆ ಏರುವ ಛಲದಂಕ ಮಲ್ಲನೀತ. ನಿತ್ಯ ದೊಡ್ಡ ದೊಡ್ಡ ಬಂಡೆಗಳ ಜೊತೆಗೆ ತಾಲೀಮು ಮಾಡುತ್ತಾರೆ. ಅಮೆರಿಕದ ಪ್ರಸಿದ್ಧ ಏಂಜಲ್ಸ್ ಫಾಲ್ಸ್ ಏರಬೇಕು ಎಂಬ ಕನಸು ಕಂಡಿದ್ದ ಕೋತಿರಾಜ್​ಗೆ ಕೊರೊನಾ ತಡೆಯೊಡ್ಡಿತ್ತು. ರಾಜ್ಯ- ಹೊರ ರಾಜ್ಯದ ಬೃಹತ್ ಬಂಡೆಗಳು, ಬೆಟ್ಟ ಹಾಗೂ ಜೋಗ ಜಲಪಾತ ಏರಿ ಕೋತಿರಾಜ್ ಸಾಹಸ ಪ್ರದರ್ಶನ ಮಾಡಿದ್ದಾರೆ. ಕಠಿಣ ಪರಿಶ್ರಮದಿಂದ ಈ ಸಾಹಸಿ ಕಲೆ ಕರಗತ ಮಾಡಿಕೊಂಡಿರುವ ಕೋತಿರಾಜ್​ ಸ್ವಂತ ಖರ್ಚಿನಲ್ಲಿ 15 ಯುವಕರಿಗೆ ತರಬೇತಿ ಸಹ ನೀಡುತ್ತಿದ್ದಾರೆ.

ಇದನ್ನೂ ಓದಿ: ಲೀಲಾಜಾಲವಾಗಿ ಬಂಡೆಗಳನ್ನು ಏರುವ ಈತನೇ ಕರ್ನಾಟಕದ 'ಕೋತಿರಾಜ್'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.