ETV Bharat / state

ಪ್ರಕೃತಿ ವಿಸ್ಮಯ: ಅಲುಗಾಡಿದ 400 ವರ್ಷದ ಹುತ್ತ, ಮೂಕ ವಿಸ್ಮಿತರಾದ ಭಕ್ತರು

author img

By ETV Bharat Karnataka Team

Published : Nov 27, 2023, 10:52 PM IST

ಅಲುಗಾಡಿದ 400 ವರ್ಷದ ಹುತ್ತ
ಅಲುಗಾಡಿದ 400 ವರ್ಷದ ಹುತ್ತ

ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಉಣ್ಣಕ್ಕಿ ಉತ್ಸವದಲ್ಲಿ ನಡೆಯುವ ಪವಾಡ ಭಕ್ತರನ್ನು ಮಂತ್ರ ಮಗ್ಧರನ್ನಾಗಿಸಿದೆ. ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.

ಅಲುಗಾಡಿದ 400 ವರ್ಷದ ಹುತ್ತ

ಚಿಕ್ಕಮಗಳೂರು : ಪ್ರಕೃತಿಯ ವೈಚಿತ್ರ್ಯವೇ ಹಾಗೆ. ಇಲ್ಲಿನ ಅದೆಷ್ಟೋ ಸತ್ಯಗಳಿಗೆ ಕಾರಣ ಹುಡುಕ ಹೊರಟರೆ ಸೋಲು ಕಟ್ಟಿಟ್ಟ ಬುತ್ತಿ. ಭೂಗರ್ಭದ ಒಡಲಾಳದಲ್ಲಿ ಅಡಗಿರೋ ಒಂದೊಂದು ಸತ್ಯ ಹೊರಬಂದಾಗಲೂ ದೇವರಿರೋದು ಸತ್ಯ ಅನ್ಸುತ್ತೆ. ಈ ಊರಿನ ಜಾತ್ರೆಯನ್ನ ನೀವು ನೋಡಿದ್ರೆ ಪ್ರಕೃತಿಯ ವಿಚಿತ್ರವನ್ನ ಕಂಡು ಮೂಕವಿಸ್ಮಿತರಾಗ್ತೀರಿ. ಆ ಹುತ್ತಕ್ಕೆ ಸೂರಿಲ್ಲ. ತಡೆ ಗೋಡೆಗಳೂ ಇಲ್ಲ. ಆದರೂ ಮಳೆ-ಗಾಳಿಗೆ ಒಂದಿಂಚೂ ಕರಗಿಲ್ಲ. ಹುತ್ತದ ಸುತ್ತಲೂ ಕಲ್ಲು- ಸಿಮೆಂಟ್‍ಗಳಿಂದ ಬಂದೋಬಸ್ತ್ ಮಾಡಿದರೂ ಕೂಡ ದೀಪಾವಳಿ ಅಮಾವಾಸ್ಯೆಯ ನಂತರದ ಮಕ್ಕಳ ಹುಣ್ಣಿಮೆಯ ದಿನ ಮಹಾ ಮಂಗಳಾರತಿ ವೇಳೆ ಇಲ್ಲಿ ನಡೆಯೋ ವಿಚಿತ್ರವನ್ನ ಕಂಡ್ರೆ ಎಂತಹಾ ನಾಸ್ತಿಕರೂ ಕೂಡ ಆಸ್ತಿಕರಾಗದೇ ಇರರು.

ಹೌದು, ದನ ಕಾಯೋ ಹುಡುಗರು ಕಟ್ಟಿದ ಮಣ್ಣಿನ ಗೂಡು ಇಂದು ಸಾವಿರಾರು ಭಕ್ತರ ಇಷ್ಟ ದೈವವಾಯ್ತು. ಹೊಯ್ಸಳರ ಕಾಲದಿಂದಲೂ ನಡೆದು ಬರ್ತಿರೋ ಆಚರಣೆಗೆ 400 ವರ್ಷಗಳ ಇತಿಹಾಸವಿದೆ. ಪ್ರತಿ ವರ್ಷ ದೀಪಾವಳಿ ಅಮಾವಾಸ್ಯೆಯ ನಂತರದ ಮಕ್ಕಳ ಹುಣ್ಣೆಮೆಯಂದು ನಡೆಯೋ ಉತ್ಸವದಲ್ಲಿ ಮಹಾಮಂಗಳಾರತಿ ವೇಳೆ ಈ ಹುತ್ತ 10 ರಿಂದ 15 ಡಿಗ್ರಿ ಅಂತರದಲ್ಲಿ ಅಲುಗಾಡುತ್ತೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಉಣ್ಣಕ್ಕಿ ಉತ್ಸವಕ್ಕೆ ಸಾಕಷ್ಟು ಕಡೆಯಿಂದ ಭಕ್ತರು ಆಗಮಿಸುತ್ತಾರೆ. ಈ ಹುತ್ತ ಬರೀ ಮಣ್ಣಿನ ಗೂಡಲ್ಲ. ದೈವಿ ಶಕ್ತಿಯ ಗುಡಿ. 400 ವರ್ಷಗಳ ಹಿಂದೆ, ಚಿಕ್ಕದ್ದಿದ್ದ ಗೂಡು ಇಂದು 16 ಅಡಿಗೂ ಎತ್ತರ ಬೆಳೆದಿದೆ. ಈ ಹುತ್ತಕ್ಕೆ ಸೂರಿಲ್ಲ. ಮಳೆ - ಗಾಳಿಗೆ ಕರಗಿಲ್ಲ. ವರ್ಷ ಪೂರ್ತಿ ಮಣ್ಣಿನ ಗೊಂಬೆಯಂತೆ ನಿಂತ ಹುತ್ತ ವರ್ಷಕ್ಕೊಮ್ಮೆ ಭಕ್ತರನ್ನ ಮೂಕ ವಿಸ್ಮಿತರನ್ನಾಗಿಸುತ್ತೆ. ಈ ಪವಾಡವನ್ನ ನೋಡಲೆಂದೇ ಬಂದವರು ನಾಗಪ್ಪನ ಭಕ್ತರಾಗಿ ಪ್ರತಿ ವರ್ಷವೂ ಬರುವುದನ್ನು ರೂಢಿ ಮಾಡಿಕೊಂಡಿದ್ದಾರೆ.

ಉತ್ಸವದಂದು ಯಾವುದೇ ಗಾಯವಾಗದ ಕರುವಿನ ಕಿವಿಯನ್ನ ಕತ್ತರಿಸಿ, ದೇವರ ಕರು ಎಂದು ಕಾಡಿಗೆ ಬಿಡ್ತಾರೆ. ಇದರಿಂದ ಊರಿನ ದನ ಕರುಗಳು ಆರೋಗ್ಯದಿಂದ ಇದ್ದು, ಯಾವುದೇ ಅನಾಹುತಗಳು ನಡೆಯೋದಿಲ್ಲ ಅನ್ನೋದು ನಂಬಿಕೆ. ದನ ಕಾಯೋ ಹುಡುಗರು ಕಟ್ಟಿದ ಹುತ್ತವಾಗಿರುವುದರಿಂದ ಕರುವನ್ನ ಕಾಡಿಗೆ ಹೊಡೆಯೋ ಆಚರಣೆ ಬೆಳೆದು ಬಂದಿದೆ. ಉತ್ಸವದ ದಿನ ಕರುವನ್ನ ಹುತ್ತಕ್ಕೆ ಸುತ್ತಿಸುವ ವೇಳೆ ಕರುವಿನ ಮೇಲೆ ಮಂಡಕ್ಕಿ ಹಾಕ್ತೇವೆ ಎಂದು ಹರಕೆ ಕಟ್ಟಿಕೊಂಡ್ರೆ ಎಂತಹಾ ಕಷ್ಟವೂ ಕಳೆಯುತ್ತಂತೆ. ಪ್ರತಿ ವರ್ಷ ದೀಪಾವಳಿ ನಂತರದ ಮಕ್ಕಳ ಹುಣ್ಣಿಮೆ ಎಂದು ಈ ಉತ್ಸವ ನಡೆಯಲಿದೆ. ಚರ್ಮರೋಗ, ಮಕ್ಕಳಾಗದವರು, ದನಕರು ಸಾಯ್ತಿದ್ರೆ ಅಥವಾ ಆರೋಗ್ಯ ಹದಗೆಟ್ಟಿದ್ರೆ ಇಲ್ಲಿಗೆ ಹರಕೆ ಕಟ್ಟಿದ್ರೆ ಸಾಕು ವರ್ಷದೊಳಗೆ ಆ ಹರಕೆ ಈಡೇರಿಸುವುದರಿಂದ ಸುತ್ತ ಮುತ್ತಲಿನ ಜಿಲ್ಲೆಯ ಜನರು ಈ ನಾಗಪ್ಪನ ಮಾಯೆಗೆ ಬೆರಗಾಗಿದ್ದಾರೆ.

ಒಟ್ಟಾರೆಯಾಗಿ ತರ್ಕಕ್ಕೆ ನಿಲುಕದ ಈ ಗ್ರಾಮದ ಉತ್ಸವ ಇಂದಿಗೂ ಪ್ರಶ್ನಾತೀತ. ಹುತ್ತ ಅಲುಗಾಡುವುದರ ಹಿಂದೆ ವೈಜ್ಞಾನಿಕ ಕಾರಣವಿದ್ಯೋ ಅಥವಾ ದೈವಿ ಶಕ್ತಿಯ ಪ್ರಭಾವವಿದ್ಯೋ ಅನ್ನೋದು ಇಂದಿಗೂ ನಿಗೂಢ. ದನಕಾಯೋ ಹುಡುಗರ ಭಕ್ತಿಯ ಹಿಂದಿರೋ ಈ ಹುತ್ತ ಅಲುಗಾಡುತ್ತ ಪವಾಡವನ್ನೇ ಸೃಷ್ಟಿಸಿದರೆ, ಹುತ್ತ ಅಲುಗಾಡುವುದರ ಬಗ್ಗೆ ಆಸ್ತಿಕ ಹಾಗೂ ನಾಸ್ತಿಕರಲ್ಲಿ ಹಲವು ವಾದಗಳಿಗೆ. ಆದರೆ, ನೋಡುಗರ ಕಣ್ಮುಂದೆ ನಡೆಯೋ ಈ ವಿಚಿತ್ರ ಹಾಗೂ ವಿಶಿಷ್ಠ ಪವಾಡ ಮಾತ್ರ ಎಲ್ಲರನ್ನೂ ಮಂತ್ರ ಮುಗ್ಧರನ್ನಾಗಿಸಿದೆ.

ಇದನ್ನೂ ಓದಿ : ಪ್ರಕೃತಿಯ ವಿಸ್ಮಯ: ಮೂಡಿಗೆರೆಯಲ್ಲಿ ಅಲುಗಾಡಿತಾ 400 ವರ್ಷದ ಇತಿಹಾಸವಿರುವ ಹುತ್ತ!?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.