ETV Bharat / state

ಮಾಂಬಳ್ಳಿ ಪೊಲೀಸ್ ಠಾಣೆ ಜಲಾವೃತ.. ಅಪಾಯಕ್ಕೆ ಸಿಲುಕಿದ್ದ ಅಧಿಕಾರಿಗಳ ರಕ್ಷಣೆ

author img

By

Published : Aug 30, 2022, 9:01 AM IST

Updated : Aug 30, 2022, 1:02 PM IST

ಕಾರಿನಲ್ಲಿ ಹಳ್ಳ ದಾಟುತ್ತಿದ್ದಾಗ ಇದ್ದಕ್ಕಿದ್ದಂತೆ ನೀರಿನ ಮಟ್ಟ ಹೆಚ್ಚಳವಾಗಿ ಹಳ್ಳದ ನೀರಿನಲ್ಲಿ ಅಧಿಕಾರಿಗಳು ಸಿಲುಕಿದ್ದಾರೆ. ನೀರು ರಭಸವಾಗಿ ಹರಿಯುತ್ತಿದ್ದ ಕಾರಣ ಕಾರಿನ ಮೇಲೆ ಹತ್ತಿ ನಿಂತುಕೊಂಡಿದ್ದಾರೆ.

Mamballi Police Station flooded
ಮಾಂಬಳ್ಳಿ ಪೊಲೀಸ್ ಠಾಣೆ ಜಲಾವೃತ

ಚಾಮರಾಜನಗರ: ರಾತ್ರಿ ಇಡೀ ಬಿಟ್ಟುಬಿಡದೇ ಸುರಿದ ಮಳೆಯಿಂದಾಗಿ ಗಡಿಜಿಲ್ಲೆಯಲ್ಲಿ ಅವಾಂತರ ಸೃಷ್ಟಿಯಾಗಿದೆ. ಯಳಂದೂರು ತಾಲೂಕಿನಲ್ಲಿರುವ ಮಾಂಬಳ್ಳಿ ಪೊಲೀಸ್ ಠಾಣೆಗೆ ನೀರು ನುಗ್ಗಿ ಇಡೀ ಠಾಣೆಯೇ ಜಲಾವೃತವಾಗಿದೆ. ಎಲ್ಲರನ್ನೂ ರಕ್ಷಿಸಲು ತೆರಳುವ ಪೊಲೀಸರಿಗೇ ಮಳೆಯಿಂದ ರಕ್ಷಣೆ ಸಿಗದಂತಾದ ಸ್ಥಿತಿ ನಿರ್ಮಾಣವಾಗಿದ್ದು, ಇಡೀ ಠಾಣೆ ತುಂಬೆಲ್ಲಾ 3 ರಿಂದ 4 ಅಡಿ ನೀರು ನಿಂತು ಅವಾಂತರ ಸೃಷ್ಟಿಸಿದೆ.

ಮೊಣಕಾಲುದ್ದ ನಿಂತಿರುವ ನೀರಿನಲ್ಲಿ ಪೊಲೀಸ್ ಕಾನ್​ಸ್ಟೆಬಲ್‌ ಒಬ್ಬರು ಠಾಣೆಯಲ್ಲಿ ಫಜೀತಿ ಅನುಭವಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸೋಮವಾರ ಸಂಜೆ ಮಳೆ ಹಾನಿ ಪರಿಶೀಲನೆಗೆ ಹೋಗಿ ಅಧಿಕಾರಿಗಳು ಹಳ್ಳದ ನೀರಿನಲ್ಲಿ ಸಿಲುಕಿಕೊಂಡು ಕೊನೆಗೆ ಸ್ಥಳೀಯರಿಂದ ರಕ್ಷಿಸಲ್ಪಟ್ಟ ಘಟನೆ ಚಾಮರಾಜನಗರ ತಾಲೂಕಿನ ಕಣ್ಣೆಗಾಲ - ಆಲೂರು ನಡುವೆ ನಡೆದಿದೆ.

ಮಾಂಬಳ್ಳಿ ಪೊಲೀಸ್ ಠಾಣೆ ಜಲಾವೃತ

ಮಳೆ ಹಾನಿ ಪರಿಶೀಲನೆ ನಡೆಸಿ ಅಧಿಕಾರಿಗಳು ಕಾರಿನಲ್ಲಿ ವಾಪಸ್ ಆಗುತ್ತಿದ್ದ ವೇಳೆ ಹಳ್ಳದ ನೀರಿನಲ್ಲಿ ಸಿಲುಕಿದ್ದಾರೆ. ಹಳ್ಳ ದಾಟುತ್ತಿದ್ದಾಗ ಇದ್ದಕ್ಕಿದ್ದಂತೆ ನೀರಿನ ಮಟ್ಟ ಹೆಚ್ಚಳವಾಗಿ ಹಳ್ಳದ ನೀರಿನಲ್ಲಿ ಅಧಿಕಾರಿಗಳು ಸಿಲುಕಿದ್ದಾರೆ. ನೀರು ರಭಸವಾಗಿ ಹರಿಯುತ್ತಿದ್ದ ಕಾರಣ ಕಾರಿನ ಮೇಲೆ ಹತ್ತಿ ನಿಂತುಕೊಂಡಿದ್ದಾರೆ.

ಸ್ಥಳೀಯರು ನೀರಿನಲ್ಲಿ ಮುಳುಗಿದ ಕಾರಿಗೆ ಹಗ್ಗ ಕಟ್ಟಿ ಎಳೆದು ಅಧಿಕಾರಿಗಳನ್ನು ರಕ್ಷಿಸಿದ್ದಾರೆ. ಎಇಇ ಕಾಂತರಾಜ್, ಎಇ ರಾಜು, ಚಾಲಕ ಮುರುಗೇಶ್ ಅವರನ್ನು ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ. ಇದರೊಟ್ಟಿಗೆ ಸುರಿಯುತ್ತಿರುವ ನಿರಂತರ ಮಳೆಗೆ ಹನೂರು ತಾಲೂಕಿನ ಗುಂಡಾಲ್ ಜಲಾಶಯ ಕೋಡಿ ಬಿದ್ದಿದೆ. ಇಂದು ಮುಂಜಾನೆಯಿಂದಲೂ ವರುಣ ಬಿಡುವು ನೀಡದೇ ಜಿಲ್ಲೆಯ ಹಲವೆಡೆ ಸುರಿಯುತ್ತಿದ್ದಾನೆ.

ಇದನ್ನೂ ಓದಿ : ಬೆಣ್ಣೆ ಹಳ್ಳ ಪ್ರವಾಹ.. ಕಾರ್ಯಾಚರಣೆ, 32 ಜನರ ರಕ್ಷಣೆ, ಓರ್ವ ಯುವಕ‌ ನಾಪತ್ತೆ

Last Updated :Aug 30, 2022, 1:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.