ETV Bharat / state

ಬೆಣ್ಣೆ ಹಳ್ಳ ಪ್ರವಾಹ.. ಕಾರ್ಯಾಚರಣೆ, 32 ಜನರ ರಕ್ಷಣೆ, ಓರ್ವ ಯುವಕ‌ ನಾಪತ್ತೆ

author img

By

Published : Aug 30, 2022, 7:37 AM IST

Updated : Aug 30, 2022, 7:43 AM IST

ಬೆಣ್ಣೆ ಹಳ್ಳದಲ್ಲಿ ಸಿಲುಕಿದ್ದ32 ಜನರನ್ನು ರಕ್ಷಣೆ ಮಾಡಲಾಗಿದೆ. ತಾಲೂಕು ಆಡಳಿತ, ಪೊಲೀಸ್ ಹಾಗೂ ಅಗ್ನಿಶಾಮಕ ಸೇವೆಗಳ ಅಧಿಕಾರಿಗಳು, ಸಿಬ್ಬಂದಿ ತ್ವರಿತ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.

bennehalla-flood-32-people-rescued
ಬೆಣ್ಣೆ ಹಳ್ಳ ಪ್ರವಾಹ.. ಕಾರ್ಯಾಚರಣೆ, 32 ಜನರ ರಕ್ಷಣೆ

ಹುಬ್ಬಳ್ಳಿ: ತಾಲೂಕಿನ ಇಂಗಳಹಳ್ಳಿ ಸಮೀಪ ನಿನ್ನೆ ಅನಿರೀಕ್ಷಿತವಾಗಿ ಪ್ರವಾಹೋಪಾದಿಯಲ್ಲಿ ಉಕ್ಕಿಬಂದ ಬೆಣ್ಣೆಹಳ್ಳ. ಈ ಪರಿಣಾಮವಾಗಿ ಹಳ್ಳದಲ್ಲಿ ಸಿಲುಕಿದ್ದ ಸುಮಾರು 32 ಜನರನ್ನು ತಾಲೂಕು ಆಡಳಿತ, ಪೊಲೀಸ್ ಹಾಗೂ ಅಗ್ನಿಶಾಮಕ ಸೇವೆಗಳ ಅಧಿಕಾರಿಗಳು, ಸಿಬ್ಬಂದಿ ತ್ವರಿತ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಓರ್ವ ಯುವಕ ನಾಪತ್ತೆಯಾಗಿದ್ದಾನೆ. ಪತ್ತೆ ಕಾರ್ಯಾಚರಣೆ ಮುಂದುವರೆದಿದೆ.

ನಿನ್ನೆ ಬೆಳಗ್ಗೆ ಹೊಲಕ್ಕೆ ತೆರಳಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಇಂಗಳಹಳ್ಳಿ ಗ್ರಾಮದ ಬಳಿ ಬೆಣ್ಣೆಹಳ್ಳ ತುಂಬಿ ಬಂದ ಪರಿಣಾಮ ಜಮೀನು ಮಾಲೀಕ ಸೇರಿ 28 ಕೃಷಿ ಕೂಲಿ ಕಾರ್ಮಿಕರು ಹಳ್ಳದಲ್ಲಿ ಸಿಲುಕಿದ್ದರು. ಘಟನೆ ತಿಳಿದ ತಕ್ಷಣವೇ ಕೈಮಗ್ಗ, ಜವಳಿ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ತಾಲೂಕು ಆಡಳಿತಕ್ಕೆ ಸೂಚನೆ ನೀಡಿ, ರಕ್ಷಣೆ ಕಾರ್ಯಾಚರಣೆಗೆ ಏರ್ಪಾಡು ಮಾಡಿದರು.

ತಹಶೀಲ್ದಾರ್​​ ಪ್ರಕಾಶ ನಾಶಿ, ಪೊಲೀಸ್​ ಇನ್ಸ್​ಪೆಕ್ಟರ್ ರಮೇಶ ಗೋಕಾಕ್​​ ಹಾಗೂ ಅಗ್ನಿಶಾಮಕ ಹಾಗೂ ತುರ್ತುಸೇವೆಗಳ ಇಲಾಖೆ ಅಧಿಕಾರಿ ವಿನಾಯಕ‌ ಹಟ್ಟಿಕಾರ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರದೊಂದಿಗೆ, ಎಲ್ಲ 28 ಕೂಲಿ ಕಾರ್ಮಿಕರನ್ನು ಬೋಟ್ ಮೂಲಕ ರಕ್ಷಣೆ ಮಾಡಿ ಹೊರತಂದರು.

ಇನ್ನೊಂದು ಘಟನೆಯಲ್ಲಿ ಇಂಗಳಹಳ್ಳಿ ಕುಸುಗಲ್ ಮಧ್ಯೆ ಇರುವ ಸೇತುವೆ ದಾಟುತ್ತಿದ್ದ ನಾಲ್ವರು ಯುವಕರ ಪೈಕಿ ಮೂವರ ರಕ್ಷಣೆ ಮಾಡಲಾಗಿದೆ. ಆನಂದ ಹಿರೇಗೌಡ್ರ(24) ಎಂಬ ಯುವಕ ನಾಪತ್ತೆಯಾಗಿದ್ದಾನೆ. ಪತ್ತೆ ಕಾರ್ಯ ಮುಂದುವರೆದಿದೆ.

ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಈ ಭಾಗದಲ್ಲಿ ಹಿಂದೆಯೂ ಇಂತಹ ಘಟನೆಗಳು ಆಗಿದ್ದು, ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ. ಬೇರೆ ಕಡೆ ಮಳೆಯಾದರೂ ಕೂಡ ಈ ಭಾಗದ ರೈತರು ಎಚ್ಚರವಹಿಸಬೇಕು ಎಂದು ಹೇಳಿದರು. ಬೆಣ್ಣೆಹಳ್ಳ ಪ್ರವಾಹ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಯೋಜನೆ ರೂಪಿಸಲಾಗಿದೆ. ವಿಸ್ತೃತ ಯೋಜನಾ ವರದಿ ಸಿದ್ಧವಾಗಿದೆ. ಆರ್ಥಿಕ ಇಲಾಖೆಯ ಅನುಮೋದನೆ ಬಳಿಕ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.

ಇದನ್ನೂ ಓದಿ : ಏಕಾಏಕಿಯಾಗಿ ತುಂಬಿ ಬಂದ ಬೆಣ್ಣೆ ಹಳ್ಳ.. 25ಕ್ಕೂ ಹೆಚ್ಚು ಜನರ ರಕ್ಷಣೆ

Last Updated : Aug 30, 2022, 7:43 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.