ETV Bharat / state

ನಿಮ್ಮ ಬದುಕು ಸರಿಯಾಗಬೇಕಿದ್ದರೆ ಸ್ವತಂತ್ರವಾಗಿ ನಮಗೆ ಅಧಿಕಾರ ಕೊಡಿ: ಹೆಚ್​ಡಿಕೆ

author img

By

Published : Apr 20, 2022, 8:26 PM IST

ಹೆಚ್​ಡಿಕೆ
ಹೆಚ್​ಡಿಕೆ

'ನಾನು 20 ಸಾವಿರ ಕೋಟಿ ರೂಪಾಯಿಯನಷ್ಟು ರೈತರ ಸಾಲಮನ್ನಾ ಮಾಡಿದೆ. ನಾನು ಏನಾದರೂ ಅದನ್ನು ಬೇರೆ ಕಾರ್ಯಕ್ರಮಕ್ಕೆ ಅನುಮೋದಿಸಿ ಕಮಿಷನ್ ಪಡೆದಿದ್ದರೆ 10 ಸಾವಿರ ಕೋಟಿ ರೂ. ಸಿಗುತ್ತಿತ್ತು. ಆದರೆ, ಆ ರೀತಿ ಮಾಡಲಿಲ್ಲ. ನಮಗೆ ಸ್ವತಂತ್ರ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡಿ. ಎಲ್ಲಾ ನೀರಾವರಿ ಯೋಜನೆಗಳನ್ನೂ ಜಾರಿ ಮಾಡುತ್ತೇನೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು.

ಚಾಮರಾಜನಗರ: ನಾನು ಸಿಎಂ ಆಗಿದ್ದಾಗ 40% ಕಮಿಷನ್ ಪಡೆದಿದ್ದರೆ 10 ಸಾವಿರ ಕೋಟಿ ಬರುತ್ತಿತ್ತು. 20% ಪಡೆದಿದ್ದರೆ 5 ಸಾವಿರ ಕೋಟಿ ರೂ. ಸಿಗುತ್ತಿತ್ತು. ಆದರೆ, ನಾನು ಆ ರೀತಿ ಮಾಡಲಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಹನೂರು ಪಟ್ಟಣದ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಜೆಡಿಎಸ್​ನ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾನು 20 ಸಾವಿರ ಕೋಟಿ ರೂ.ನಷ್ಟು ರೈತರ ಸಾಲಮನ್ನಾ ಮಾಡಿದೆ. ನಾ ಏನಾದರೂ ಅದನ್ನು ಬೇರೆ ಕಾರ್ಯಕ್ರಮಕ್ಕೆ ಅನುಮೋದಿಸಿ, ಕಮಿಷನ್ ಪಡೆದಿದ್ದರೆ 10 ಸಾವಿರ ಕೋಟಿ ರೂ. ಸಿಗುತ್ತಿತ್ತು. ಆದರೆ, ನಾನು ಆ ರೀತಿ ಮಾಡಲಿಲ್ಲ. ಕಾಂಗ್ರೆಸ್ ಕಿರುಕುಳದ ನಡುವೆಯೂ ರೈತರ ಬಾಳು ಹಸನಾಗಬೇಕೆಂದು ಸಾಲಮನ್ನಾ ಮಾಡಿದೆ ಎಂದರು.


ನಾನು ಆ ಪಕ್ಷದ ಬಿ ಟೀಂ, ಈ ಪಕ್ಷದ ಟೀಂ ಎನ್ನುತ್ತಾರೆ. ನಾನು ಯಾವ ಪಕ್ಷದ ಬಿ ಟೀಂ ಕೂಡ ಅಲ್ಲ, ನಾನು ಎಲ್ಲ ಧರ್ಮ-ಜಾತಿ ಜನರ ಮನೆ ಮಗ. ಜನರ ಬಿ ಟೀಂ ನಾನು. ಜನರ ಬದುಕಿನ ನಡುವೆ ಆಟ ಆಡುತ್ತಿರುವ, ಅಧಿಕಾರಕ್ಕಾಗಿ ಹಪಹಪಿಸುತ್ತಿರುವ ರಾಷ್ಟ್ರೀಯ ಪಕ್ಷಗಳ ಬಗ್ಗೆ ಇನ್ನಾದರೂ ಜನರು ಎಚ್ಚೆತ್ತುಕೊಳ್ಳಬೇಕು. ನಿಮ್ಮಗಳ ಬದುಕು ಸರಿಯಾಗಬೇಕಿದ್ದರೆ ಈ ಬಾರಿ ಸ್ವತಂತ್ರವಾಗಿ ನಮಗೆ ಅಧಿಕಾರ ಕೊಡಿ, ಜೆಡಿಎಸ್ ಗೆಲ್ಲಿಸಿ ಎಂದು ಮನವಿ ಮಾಡಿದರು.

ಇದನ್ನೂ ಓದಿ: ಕಾಂಗ್ರೆಸ್​ನವರು ತಬ್ಬಲಿ ಮಕ್ಕಳು, ಯಾರ ಹೆಸರು ಹೇಳಿಕೊಂಡು ಮತ ಕೇಳ್ತಾರೆ? : ಬಿಎಸ್​ವೈ ವ್ಯಂಗ್ಯ

ಬಿಜೆಪಿ ಸರ್ಕಾರ ಬರಲು ಸಿದ್ದರಾಮಯ್ಯ ಕಾರಣ: ಈಗಿನ ಬಿಜೆಪಿ ಸರ್ಕಾರ ಬರಲು ಸಿದ್ದರಾಮಯ್ಯ ಕಾರಣ. ಈಗ ಡಂಗೂರ ಸಾರಿಕೊಂಡು, ಕಮಿಷನ್ ಸರ್ಕಾರ ಎಂದು ಗಲಾಟೆ ಮಾಡುತ್ತಿದ್ದಾರೆ. ಈ ಕೆಟ್ಟ ಆಡಳಿತಕ್ಕೆ ಆ ನಾಯಕನೇ ಕಾರಣ , ಇವರ ಕಾಲದಲ್ಲೂ ಕಮಿಷನ್ ಇತ್ತು ಎಂದು ಆರೋಪಿಸಿದರು. ಈಶ್ವರಪ್ಪನನ್ನು ಬಂಧಿಸಿ ಎಂದು ಹೋರಾಟ ಮಾಡುತ್ತಿದ್ದಾರಲ್ಲ, ಅವರನ್ನು ಬಂಧಿಸಿದರೆ ರೈತರ ಜಮೀನುಗಳಿಗೆ ನೀರು ಬರುತ್ತಾ? ಜನರಿಗೆ ಏನು ಬೇಕೋ ಅದನ್ನು ಇವರು ಕೇಳುತ್ತಿಲ್ಲ. ಜನರ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿಲ್ಲ ಎಂದು ಕಿಡಿಕಾರಿದರು.

ಪಂಚರತ್ನ ಕಾರ್ಯಕ್ರಮ ಘೋಷಣೆ: ಇದೇ ವೇಳೆ ಜೆಡಿಎಸ್‌ನಿಂದ ಪಂಚರತ್ನ ಕಾರ್ಯಕ್ರಮವನ್ನು ಘೋಷಿಸಿದ ಅವರು, 6 ಸಾವಿರ ಗ್ರಾಪಂಗಳಲ್ಲಿ ತಲಾ 30 ಹಾಸಿಗೆ ಆಸ್ಪತ್ರೆ, 24 ಗಂಟೆ ವೈದ್ಯರ ಸೇವೆ, ಪ್ರತಿ ಗ್ರಾಪಂನಲ್ಲಿ ಎಲ್​​ಕೆಜಿ ಯಿಂದ ಪಿಯು ತನಕ ಕನ್ನಡ, ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ, ಅನ್ನದಾತನ ಮನೆ ಬಾಗಿಲಿಗೆ ಬಿತ್ತನೆ ಬೀಜ ವಿತರಣೆ, ಗೊಬ್ಬರ ಬೆಲೆ ಕಡಿತ, ಕೋಲ್ಡ್ ಸ್ಟೋರೇಜ್ ಹಾಗೂ ಕುಟುಂಬಕ್ಕೊಂದು ಉದ್ಯೋಗ, ರೈತರಿಗೆ ಉಪ ಉತ್ಪನ್ನ ತಯಾರಿಕೆಗೆ ಸರ್ಕಾರದಿಂದಲೇ ತರಬೇತಿ ಎಂಬ ಪಂಚರತ್ನ ಕಾರ್ಯಕ್ರಮ ಘೋಷಣೆ ಮಾಡಿದರು.

ಡಿಜೆಹಳ್ಳಿಯಲ್ಲಿ ಗಲಾಟೆ ನಡೆಸಿದ್ದು ಯಾರು?: ಡಿಜೆ ಹಳ್ಳಿಯಲ್ಲಿ ಗಲಾಟೆ ಮಾಡಿಸಿದ್ದು ಯಾರು? ಯಾರೋ ಒಬ್ಬ ಕ್ಯಾಂಡಿಡೇಟ್ ಆಗಬೇಕು ಅಂತ ಓಡಾಡ್ತಿದ್ದಾರಲ್ಲ, ಅವರನ್ನೇ ಕೇಳಿ. ನಾನು ಯಾರ ಮೇಲೆ ಆಪಾದನೆ ಮಾಡಲ್ಲ. ಎರಡು ಮೂರು ಗಂಟೆಯಲ್ಲಿ ಸಾವಿರಾರು ಜನರು ಅಲ್ಲಿಗೆ ಏಕೆ ಬಂದರು?. ಗಲಾಟೆ ಮಾಡಿದ್ದು, ಕಲ್ಲು ಹೊಡೆಸಿದ್ದು ಫ್ರೀ ಪ್ಲ್ಯಾನ್ ಅಲ್ಲವೇ. ಹಿಂದೂ, ಮುಸ್ಲಿಂ ಸಮಾಜಕ್ಕೆ ಕೈ ಮುಗಿದು ಮನವಿ ಮಾಡ್ತೇನೆ. ಈ ನಾಡಿನಲ್ಲಿ ಸಾಮರಸ್ಯ ಸರಿಯಾದ ರೀತಿಯಲ್ಲಿ ಸ್ಥಾಪನೆ ಮಾಡಬೇಕಿದೆ. ಎಲ್ಲಾ ಸಮಾಜದವರು ವಿಶ್ವಾಸದಿಂದ ಬದುಕಬೇಕಿದೆ ಎಂದು ಕೋರಿದರು.

ಇದೇ ವೇಳೆ ಮೈಸೂರಿನಲ್ಲಿ ಸಿದ್ದರಾಮಯ್ಯ ಬ್ಯಾರಿಕೇಡ್ ತಳ್ಳಿ ಒಳ ನುಗ್ಗಿದ ವಿಚಾರಕ್ಕೆ ಟಾಂಗ್ ಕೊಟ್ಟ ಅವರು, ಇವರೆಲ್ಲಾ ಕಾನೂನು ಪಾಲನೆ ಮಾಡುವವರು ಅಲ್ಲವೇ? ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.