ETV Bharat / state

ಕಾಡುಗಳ್ಳರಿಗೆ ವರವಾದ ಕೊರೊನಾ: ದಿಢೀರನೇ ಹೆಚ್ಚಾಯ್ತು ಅಪರಾಧ ಪ್ರಕರಣ!

author img

By

Published : Nov 19, 2020, 6:03 PM IST

ಚಾಮರಾಜನಗರದಲ್ಲಿ ಅರಣ್ಯ ಅಪರಾಧ ಪ್ರಕರಣಗಳು ಲಾಕ್​ಡೌನ್ ಮುನ್ನಕ್ಕೂ ಅದರ ನಂತರವೇ ಹೆಚ್ಚು ದಾಖಲಾಗಿವೆ. ಏಪ್ರಿಲ್​​ನಿಂದ ಜೂನ್ ಅವಧಿಯಲ್ಲಿ 64, ಜುಲೈನಿಂದ ಸೆಪ್ಟೆಂಬರ್ ಅವಧಿಯಲ್ಲಿ 53 ಪ್ರಕರಣಗಳು ದಾಖಲಾಗಿವೆ. ಅದಕ್ಕೂ ಮುನ್ನ 44 ಪ್ರಕರಣಗಳು ಮಾತ್ರ ದಾಖಲಾಗಿದ್ದವು.

Theft arrest
ಕಳ್ಳರ ಬಂಧನ

ಚಾಮರಾಜನಗರ: ಲಾಕ್​​​ಡೌನ್​​ನಿಂದ​ ವಾಹನ ಓಡಾಡ ನಿಂತು ಸ್ವಚ್ಛ ಪರಿಸರಕ್ಕೆ ಕಾರಣವಾಯಿತು ಎಂಬುದು ಗೊತ್ತೇ ಇದೆ. ಆದರೆ, ಅರಣ್ಯ ಅಪರಾಧ ಪ್ರಕರಣಗಳೂ ಹೆಚ್ಚಾಗಿವೆ ಎಂದರೆ ನೀವು ನಂಬಲೇಬೇಕು. ಅರಣ್ಯ ಇಲಾಖೆಯು ಈಟಿವಿ ಭಾರತಕ್ಕೆ ಒದಗಿಸಿರುವ ಅಂಕಿ-ಅಂಶಗಳೇ ಅದಕ್ಕೆ ಸಾಕ್ಷಿ.

ಏಪ್ರಿಲ್​​ನಿಂದ ಸೆಪ್ಟೆಂಬರ್ ಅಂತ್ಯಕ್ಕೆ 39 ಬೇಟೆ ಪ್ರಕರಣಗಳು ಬಿಳಿಗಿರಿರಂಗನ ಬೆಟ್ಟ, ಮಲೆಮಹದೇಶ್ವರ ವನ್ಯಜೀವಿ ಧಾಮ ಹಾಗೂ ಕಾವೇರಿ ವನ್ಯಜೀವಿ ಧಾಮದಲ್ಲಿ ನಡೆದಿವೆ. ಒಟ್ಟು 65 ಇತರೆ ಅರಣ್ಯ ಅಪರಾಧ ಪ್ರಕರಣಗಳು ಕಳೆದ 7 ತಿಂಗಳಲ್ಲಿ ದಾಖಲಾಗಿದ್ದು, ಈ ಮೂಲಕ ಕಾಡುಗಳ್ಳರಿಗೆ ಕೊರೊನಾ ವರವಾಗಿ ಪರಿಣಮಿಸಿದೆ ಎನ್ನಬಹುದು.

ಇದೇ ಸಮಯದಲ್ಲಿ 40ಕ್ಕೂ ಹೆಚ್ಚು ಆರೋಪಿಗಳನ್ನು ಪೊಲೀಸರು ಮತ್ತು ಅರಣ್ಯ ಇಲಾಖೆ ಬಂಧಿಸಿದೆ. ಹಣಕ್ಕಾಗಿ ಅಲ್ಲದೇ ಮಾಂಸಕ್ಕಾಗಿ ಜಿಂಕೆ, ಕಾಡುಹಂದಿ, ಕಡವೆಗಳನ್ನು ಕೊಂದಿರುವುದು ಅರಣ್ಯ ಇಲಾಖೆ ನೀಡಿರುವ ವರದಿಯಿಂದ ತಿಳಿದುಬಂದಿದೆ.

ನಿರುದ್ಯೋಗ-ಮಾಂಸದಾಸೆ

ಅರಣ್ಯ ಅಪರಾಧ ಹೆಚ್ಚಳದ ಕುರಿತು ಚಾಮರಾಜನಗರ ಸಿಸಿಎಫ್ ಮನೋಜ್ ಕುಮಾರ್ ಈಟಿವಿ ಭಾರತದೊಂದಿಗೆ ಮಾತನಾಡಿ, ನಾನು ಗಮನಿಸಿದಂತೆ ಲಾಕ್​​ಡೌನ್​​​ನಿಂದ ಉದ್ಯೋಗ ಕಳೆದುಕೊಂಡು ಚೆನ್ನೈ, ಬೆಂಗಳೂರಿನಿಂದ ವಾಪಾಸಾದವರು ಮಾಂಸಕ್ಕಾಗಿ ಜಿಂಕೆ, ಕಡವೆ ಬೇಟೆಯಾಡಿದ್ದಾರೆ‌ ಎಂದರು.

ಕಾಡೊಳಗೆ ಕಿರು ಉತ್ಪನ್ನ ತರಲು ಹೋದವರು ಮಾಂಸದಾಸೆಗೆ ಆಕಸ್ಮಿಕವಾಗಿಯೂ ಪ್ರಾಣಿಗಳನ್ನು ಕೊಂದಿದ್ದಾರೆ. ಅದರಲ್ಲೂಈ ಲಾಕ್​​ಡೌನ್​​ ಅವಧಿಯಲ್ಲಿ ಕೆಲಸವಿಲ್ಲದೇ ಹೆಚ್ಚು ಹಣ ಕೊಟ್ಟು ಮಾಂಸಕೊಳ್ಳಲಾಗದೇ ಬೇಟೆಯಾಡಿದವರೇ ಬಹಳ. ಕೆಲವರು ಹಣದಾಸೆಗೆ ಚರ್ಮ, ಮೂಳೆ ಇತ್ಯಾದಿಗಳಿಗಾಗಿ ಬಲಿ ಪಡೆದಿದ್ದಾರೆ ಎಂದರು.

ಚಾಮರಾಜನಗರ ಸಿಸಿಎಫ್ ಮನೋಜ್ ಕುಮಾರ್

ಅರಣ್ಯ ಅಪರಾಧ ತಡೆಗಟ್ಟಲು ಪೊಲೀಸ್ ಇಲಾಖೆ ಮಾದರಿಯಲ್ಲೇ ಕ್ಷಿಪ್ರ ಕಾರ್ಯಪಡೆಯೊಂದನ್ನು ರೂಪಿಸಿ ಗಸ್ತು ಹೆಚ್ಚಿಸಲಾಗಿದೆ. ಇಲಾಖೆ ಸಿಬ್ಬಂದಿಗೆ ಫೈರಿಂಗ್ ತರಬೇತಿ, ಸಾಕ್ಷಾಧ್ಯಾರಗಳನ್ನು ಕಲೆಹಾಕುವ ಬಗೆ, ಪರಿಣಾಮಕಾರಿ ಚಾರ್ಜ್ ಶೀಟ್ ಸಲ್ಲಿಕ ಕುರಿತು ತರಬೇತಿ ನೀಡಲಾಗುತ್ತದೆ ಎಂದು ಅವರು ಮಾಹಿತಿ ಹಂಚಿಕೊಂಡರು.

ಲಾಕ್​​​ಡೌನ್​​ಗೂ ಮುನ್ನ ಎಷ್ಟಿತ್ತು?

ಜನವರಿಯಿಂದ ಮಾರ್ಚ್ ಅಂತ್ಯಕ್ಕೆ 2 ಶ್ರೀಗಂಧ ಪ್ರಕರಣ, 8 ಬೇಟೆ ಸೇರಿದಂತೆ ಒಟ್ಟು 44 ಪ್ರಕರಣಗಳು ದಾಖಲಾಗಿತ್ತು. ಆದರೆ, ಏಪ್ರಿಲ್​​ನಿಂದ ಜೂನ್ ಅವಧಿಯಲ್ಲಿ 2 ಶ್ರೀಗಂಧ, 25 ಬೇಟೆ ಸೇರಿದಂತೆ ಒಟ್ಟು 64 ಪ್ರಕರಣಗಳು ದಾಖಲಾಗಿದೆ. ಇನ್ನು, ಜುಲೈನಿಂದ ಸೆಪ್ಟೆಂಬರ್ ಅವಧಿಯಲ್ಲಿ 3 ಶ್ರೀಗಂಧ, 14 ಬೇಟೆ ಸೇರಿದಂತೆ 53 ಕೇಸ್ ದಾಖಲಾಗಿದೆ. ಲಾಕ್​​ಡೌನ್​​ ಅವಧಿಯಲ್ಲೇ ಕಾಡುಗಳ್ಳರ ಕೈಚಳಕ ಹೆಚ್ಚಾಗಿರುವುದು ಅಂಕಿ-ಅಂಶಗಳು ದೃಢಪಡಿಸುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.