ETV Bharat / state

'ಹಿಂಡಲಗಾ ಜೈಲಿನಲ್ಲಿರುವ ಜೆ.ಹೆಚ್. ಪೂಜಾರ ನನ್ನ ಕೊಲೆಗೆ ಸ್ಕೆಚ್​ ಹಾಕಿದ್ದಾನೆ': ಕೆ.ಎಸ್. ಈಶ್ವರಪ್ಪ

author img

By

Published : Apr 14, 2023, 3:14 PM IST

Updated : Apr 14, 2023, 3:53 PM IST

ಹಿಂದುತ್ವದ ಕಾರಣಕ್ಕೆ ನನ್ನ ಕೊಲೆಗೆ ಸ್ಕೆಚ್​ ಹಾಕುತ್ತಾರೆಂದರೆ ನಾನು ಹೆದರುವವನಲ್ಲ ಎಂದು ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು.

ಕೆ ಎಸ್ ಈಶ್ವರಪ್ಪ
ಕೆ ಎಸ್ ಈಶ್ವರಪ್ಪ

ಕೆ.ಎಸ್.ಈಶ್ವರಪ್ಪ ಹೇಳಿಕೆ

ಬಳ್ಳಾರಿ: ಹಿಂಡಲಗಾ ಜೈಲಿನಲ್ಲಿರುವ ಜೆ.ಹೆಚ್. ಪೂಜಾರ ಎಂಬಾತನನ್ನು ಪ್ರಕರಣವೊಂದರಲ್ಲಿ ನಾಗ್ಪುರ ಪೊಲೀಸರು ಬಂಧಿಸಿದ್ದಾರೆ. ಈತ ನನ್ನ ಕೊಲೆಗೆ ಸ್ಕೆಚ್ ಹಾಕಿದ್ದಾನೆ ಎಂಬ ಬಗ್ಗೆ ಈಗಷ್ಟೇ ಮಾಹಿತಿ ಸಿಕ್ಕಿದೆ ಎಂದು ಕೆ.ಎಸ್. ಈಶ್ವರಪ್ಪ ತಿಳಿಸಿದರು. ಬಳ್ಳಾರಿ ನಗರದ ಖಾಸಗಿ ಹೊಟೇಲ್​ನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ವಿಚಾರ ಕೇಳಿ ನನಗೆ ಆಘಾತವಾಯಿತು. ಇದೇ ಆರೋಪಿ ಈ ಹಿಂದೆ ನಿತಿನ್ ಗಡ್ಕರಿ ಅವರ ಕೊಲೆಗೆ ಸ್ಕೆಚ್ ಹಾಕಿದ್ದ. ನನ್ನ ಕೊಲೆಗೆ ಸ್ಕೆಚ್ ಹಾಕಲಾಗಿದೆ ಎಂಬ ವಿಷಯದ ಬಗ್ಗೆ ಆರಗ ಜ್ಞಾನೇಂದ್ರ ನನಗೆ ಫೋನ್ ಮಾಡಿ ತಿಳಿಸಿದರು ಎಂದರು.

ನಾನು ಹಿಂದುತ್ವ ಪ್ರತಿಪಾದಿಸಿ ಮಾತನಾಡಿದಾಗ ಹಿಂದೊಮ್ಮೆ ನನಗೆ ಕೊಲೆ ಬೆದರಿಕೆ ಬಂದಿತ್ತು. ಈ ವಿಷಯವನ್ನು ಸದನಕ್ಕೆ ತಿಳಿಸಿದ್ದೆ. ಆಗ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇತ್ತು. ಭದ್ರತೆ ನೀಡಿದ್ದರು ಎಂದು ಹೇಳಿದ ಅವರು, ನನ್ನ ಕೊಲೆಗೆ ಸ್ಕೆಚ್ ಹಾಕಲು ಕಾರಣ ಏನೆಂದು ನನಗೆ ಗೊತ್ತಿಲ್ಲ. ಹಿಂದುತ್ವದ ಕಾರಣಕ್ಕೆ ಕೊಲೆಗೆ ಸ್ಕೆಚ್ ಹಾಕುತ್ತಾರೆಂದರೆ ನಾನು ಹೆದರುವವರಲ್ಲ ಎಂದು ಹೇಳಿದರು.

ಚುನಾವಣಾ ರಾಜಕೀಯದಿಂದ ದೂರ ಉಳಿಯಲು ತೀರ್ಮಾನಿಸಿರುವ ಕುರಿತು ಪ್ರತಿಕ್ರಿಯಿಸಿ, ಮೊನ್ನೆ ರಾಜ್ಯದ ಚುನಾವಣಾ ಪ್ರಭಾರಿ ಧರ್ಮೇಂದ್ರ ಪ್ರಧಾನ್ ಅವರು ಫೋನ್ ಮಾಡಿ ಮಾತನಾಡಿದರು. ನೀವು ಚುನಾವಣಾ ರಾಜಕೀಯಕ್ಕೆ ರಾಜೀನಾಮೆ ಎಂಬ ರೀತಿಯಲ್ಲಿ ರಾಜೀನಾಮೆ ಕಳುಹಿಸಬಾರದು ಎಂದು ತಿಳಿಸಿದರು. ಫಾರ್ಮ್ಯಾಟ್ ಕಳಿಸುವಂತೆ ಹೇಳಿದೆ. ಅವರು ಕಳಿಸಿದ ಫಾರ್ಮ್ಯಾಟ್‌ನಲ್ಲಿ ರಾಜೀನಾಮೆ ಪತ್ರ ಕಳಿಸುತ್ತೇನೆ ಎಂದರು.

ಪಕ್ಷ ನೀಡುವ ಕೆಲಸ ಮಾಡುತ್ತೇನೆ: ನನಗೆ ಟಿಕೆಟ್ ಸಿಕ್ಕಿಲ್ಲ. ಯಾರಿಗೇ ಸಿಗಲಿ, ಬಿಡಲಿ, ನಾನು ಟಿಕೆಟ್ ಕೊಡಿ ಎಂದು ಕೇಳಲ್ಲ. ನನಗೆ ಯಾವ ಭರವಸೆಯನ್ನೂ ಕೊಟ್ಟಿಲ್ಲ ಎಂದು ಹೇಳಿದ ಈಶ್ವರಪ್ಪ, ಪಕ್ಷ ನನಗೆ ಸಾಕಷ್ಟು ಅಧಿಕಾರ, ಸ್ಥಾನಮಾನ, ಹುದ್ದೆಗಳನ್ನು ನೀಡಿದೆ. ನಾನು ಬೂತ್ ಮಟ್ಟದಲ್ಲಿ ಕಾರ್ಯಕರ್ತ ಆಗಿದ್ದವ. ಈ ಹಂತಕ್ಕೆ ಬಂದಿದ್ದೇನೆ. ಪಕ್ಷವು ಚುನಾವಣಾ ರಾಜಕೀಯದಿಂದ ನಿವೃತ್ತ ಆಗಬೇಕೆಂದು ಹೇಳಿದರೆ ಅದನ್ನು ನಾನು ಒಪ್ಪುವೆ, ಪಕ್ಷ ನೀಡುವ ಎಲ್ಲ ಕೆಲಸಗಳನ್ನು ಮಾಡುವುದಾಗಿ ಹೇಳಿದರು.

ಒಂದು ಕಾಲದಲ್ಲಿ ನಮ್ಮ ಪಕ್ಷದಿಂದ ನಿಲ್ಲಲು ಅಭ್ಯರ್ಥಿಗಳೇ ಇರಲಿಲ್ಲ. ಈಗ ಟಿಕೆಟ್ ಸಿಕ್ಕಿಲ್ಲ ಎಂದು ಬೇರೆ ಪಕ್ಷಕ್ಕೆ ಹೋಗುವುದಾದರೆ ಇದು ನಮಗೆ ಹೆಮ್ಮೆಯ ವಿಷಯವೇ. ಟಿಕೆಟ್ ಸಿಕ್ಕಿಲ್ಲ ಎಂದು ಬೇರೆ ಪಕ್ಷಕ್ಕೆ ಹೋಗುವವರು ಪಕ್ಷಕ್ಕೆ ನಿಷ್ಠರಲ್ಲ ಎಂದರ್ಥ. ಹೋಗುವವರು ಹೋಗಲಿ. ಅದು ಅವರ ವೈಯಕ್ತಿಕ ತೀರ್ಮಾನ ಎಂದರು. ಬಳ್ಳಾರಿಯಲ್ಲಿರುವ ತಮ್ಮ ಮನೆ ದೇವರ ಪೂಜೆಗಾಗಿ ಈಶ್ವರಪ್ಪ ಕುಟುಂಬಸಮೇತ ಬಂದಿದ್ದರು. ಸುದ್ದಿಗೋಷ್ಟಿ ವೇಳೆ ರಾಮಲಿಂಗಪ್ಪ ಮೊದಲಾದವರು ಇದ್ದರು.

ಇದನ್ನೂ ಓದಿ : ಕೆಲವರ ಮಾತಿಗೆಲ್ಲ ನಾನು ಪ್ರತಿಕ್ರಿಯಿಸಲ್ಲ: ಸಚಿವ ವಿ.ಸೋಮಣ್ಣ ಗರಂ

Last Updated :Apr 14, 2023, 3:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.