ETV Bharat / state

Jagadish Shetter: ನನಗೆ ಅನ್ಯಾಯ ಮಾಡಿದವರಿಗೆ ಬಣಜಿಗ ಸಮುದಾಯ ತಕ್ಕ ಉತ್ತರ ಕೊಟ್ಟಿದೆ- ಶೆಟ್ಟರ್

author img

By

Published : Aug 13, 2023, 8:28 PM IST

ಮಾಜಿ ಸಿಎಂ ಜಗದೀಶ್ ಶೆಟ್ಟರ್
ಮಾಜಿ ಸಿಎಂ ಜಗದೀಶ್ ಶೆಟ್ಟರ್

Jagadish Shetter: ಬಳ್ಳಾರಿಯಲ್ಲಿ ನಡೆದ ಬಣಜಿಗ ಸಮಾವೇಶದಲ್ಲಿ ಕಾಂಗ್ರೆಸ್‌ ಮುಖಂಡ ಜಗದೀಶ್ ಶೆಟ್ಟರ್ ಅವರು ಬಿಜೆಪಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಾಗ್ದಾಳಿ

ಬಳ್ಳಾರಿ : ನಮ್ಮ ಸಮಾಜಕ್ಕೆ ಧಕ್ಕೆಯಾದರೆ ಏನಾಗುತ್ತೆ ಎಂದು ಈಗಾಗಲೇ ಎಲ್ಲರಿಗೂ ಗೊತ್ತಾಗಿದೆ. ನನಗೆ ಅನ್ಯಾಯ ಮಾಡಿದವರಿಗೆ ಬಣಜಿಗ ಸಮುದಾಯ ತಕ್ಕ ಉತ್ತರ ಕೊಟ್ಟಿದೆ ಎಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಬಳ್ಳಾರಿಯಲ್ಲಿಂದು ನಡೆದ ಬಣಜಿಗ ಸಮಾವೇಶಕ್ಕೆ ದೀಪ ಬೆಳಗುವ ಮೂಲಕ ಚಾಲನೆ ನೀಡಿ ಜಗದೀಶ್ ಶೆಟ್ಟರ್ ಮಾತನಾಡಿದರು.

ಬಣಜಿಗ ಸಮುದಾಯ ಒಂದು ಸ್ವಾಭಿಮಾನದ ಸಮಾಜ. ನಮ್ಮ ಸಮಾಜಕ್ಕೆ ಧಕ್ಕೆಯಾದ್ರೆ ಏನಾಗುತ್ತೆ ಎಂದು ಎಲ್ಲರಿಗೂ ಗೊತ್ತಾಗಿದೆ. ಅನ್ಯಾಯ ಮಾಡಿದವರಿಗೆ ಸಮುದಾಯ ಹೇಗೆ ಉತ್ತರ ಕೊಟ್ಟಿದೆ ಎಂದು ರಾಜ್ಯದ ಜನರಿಗೆ ಗೊತ್ತಾಗಿದೆ. ಅವರೀಗ ಎಲ್ಲಿ ಬೇಕೋ ಅಲ್ಲಿ ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ. ಜಗದೀಶ್ ಶೆಟ್ಟರ್ ಜೊತೆ ಇಡೀ ಸಮಾಜ ಇದೆ ಎಂದು ಸಂದೇಶ ಕೊಟ್ಟಿದ್ದೀರಿ ಎಂದರು.

ಬಣಜಿಗ ಕ್ಷೇಮಾಭಿವೃದ್ಧಿ ಸಂಘದಲ್ಲಿ ಸ್ವಲ್ಪ ಸಮಸ್ಯೆ ಇದೆ. ಆ ಎಲ್ಲ ಸಮಸ್ಯೆಗಳನ್ನು ನಿವಾರಣೆ ಮಾಡುತ್ತೇವೆ. ನಮ್ಮ ಸಮಾಜ ಎಲ್ಲ ವರ್ಗಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದೆ. ಲಿಂಗಾಯತ ಎಲ್ಲ ಉಪ ಪಂಗಡಗಳ ಗುರಿ ನಾವೆಲ್ಲ ಲಿಂಗಾಯತರು ಒಂದು ಎನ್ನುವುದಾಗಿರಬೇಕು.
2 ಎ ಬಗ್ಗೆ ನಾನು ಸಿಎಂ ಆಗಿದ್ದ ಸಂದರ್ಭದಲ್ಲಿ ಎಲ್ಲ ಜಿಲ್ಲಾಧಿಕಾರಿಗಳಿಗೆ ತಿಳಿಸಿ ಗೊಂದಲ ನಿವಾರಿಸಿದ್ದೆ. ಇನ್ನು ಮುಂದೆ ಸಮಾಜ ಬಾಂಧವರು ವಿದ್ಯಾರ್ಜನೆ‌ಗೆ ಹೆಚ್ಚಿನ ಒತ್ತು ಕೊಡಬೇಕು ಎಂದು ಸಲಹೆ ನೀಡಿದರು.

ಸಚಿವ ಬಿ.ನಾಗೇಂದ್ರ ಹೇಳಿಕೆ: ಪರಿಶಿಷ್ಟ ಪಂಗಡಗಳ ಕಲ್ಯಾಣ ಮತ್ತು ಯುವಜನ ಸಬಲೀಕರಣ, ಕ್ರೀಡಾ ಇಲಾಖೆ ಹಾಗೂ ಬಳ್ಳಾರಿ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಮಾತನಾಡಿ, ಬಣಜಿಗ ಸಮಾಜ ಹಿಂದಿನ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ತಮ್ಮ ಸಮಾಜಕ್ಕೆ ಧಕ್ಕೆಯಾದರೆ ಎಲ್ಲರೂ ಒಗ್ಗಟ್ಟಾಗಿ ಹೋರಾಡುವ ಗುಣ ಅವರಲ್ಲಿದೆ ಎಂದರು.

ಜಗದೀಶ್ ಶೆಟ್ಟರ್ ನಮ್ಮ ಪಕ್ಷಕ್ಕೆ ಒಬ್ಬರೇ ಬಂದಿಲ್ಲ. ಅವರು ಎಲ್ಲ ಮುಖಂಡರನ್ನೂ ಕರೆ ತಂದಿದ್ದಾರೆ. ನಮ್ಮ ಪಕ್ಷಕ್ಕೆ ಅವರ ದೊಡ್ಡ ಕೊಡುಗೆ ಇದೆ. ಅವರ ಬಣಜಿಗ ಸಮುದಾಯದ 2ಎ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸುತ್ತೇನೆ ಎಂದರು. ಇದೇ ವೇಳೆ ಪತ್ತಿನ ಸಹಕಾರ ಬ್ಯಾಂಕ್‌ನಲ್ಲಿ 5 ಲಕ್ಷ ಹಣವನ್ನು ಬ್ಯಾಂಕ್ ಠೇವಣಿ ಇಡುತ್ತೇನೆ ಎಂದು ಹೇಳಿದರು.

ಲಿಂಗನಾಯಕನಹಳ್ಳಿಯ ಚನ್ನವೀರ ಸ್ವಾಮೀಜಿ, ಸಂಡೂರಿನ ಪ್ರಭು ಸ್ವಾಮೀಜಿ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಅಲ್ಲಂ ವೀರಭದ್ರಪ್ಪ, ಹಾಸ್ಯನಟ ದೊಡ್ಡಣ್ಣ, ಸಂಗಮೇಶ, ವೈ.ಎಂ.ಸತೀಶ್, ಕೆ.ಎಸ್.ನಾಗರಾಜ್, ಪಂಪಾಪತಿ, ಶಾಂತ ಸೇರಿದಂತೆ ಇತರರು ಉಪಸ್ಥಿತರಿದರು.

ಇದನ್ನೂ ಓದಿ : Santhosh Lad: ಕಾಂಗ್ರೆಸ್​ಗೆ ಡ್ಯಾಮೇಜ್​ ಮಾಡಲು ಬಿಜೆಪಿ, ಜೆಡಿಎಸ್ ಯತ್ನ- ಸಚಿವ ಸಂತೋಷ್​ ಲಾಡ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.