ETV Bharat / state

ವಿಶ್ವವಿದ್ಯಾಲಯಗಳು ಡಿಜಿಟಲ್ ಸಾಕ್ಷರತೆಯ ಅಭಿವೃದ್ಧಿಗೆ ಒತ್ತು ನೀಡಲಿ: ರಾಜ್ಯಪಾಲ ಗೆಹ್ಲೋಟ್

author img

By ETV Bharat Karnataka Team

Published : Oct 27, 2023, 8:04 PM IST

Governor Thawar Chand Gehlot
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಬೆಳಗಾವಿಯ ತಾಂತ್ರಿಕ‌ ವಿಶ್ವವಿದ್ಯಾಲಯದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಸಭಾಂಗಣದಲ್ಲಿ ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ದಕ್ಷಿಣ ವಲಯ ಕುಲಪತಿಗಳ ಸಮಾವೇಶ ನಡೆಯಿತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪಾಲ್ಗೊಂಡಿದ್ದರು.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ

ಬೆಳಗಾವಿ: ''ವಿಶ್ವವಿದ್ಯಾಲಯಗಳು ಗ್ರಾಮಗಳ ಮಟ್ಟದಲ್ಲಿಯೂ ಡಿಜಿಟಲ್ ಸಾಕ್ಷರತೆ ಅಭಿವೃದ್ದಿಗಾಗಿ ಆದ್ಯತೆ ನೀಡಬೇಕಿದೆ. ಇದರೊಂದಿಗೆ, ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯ ಚಟುವಟಿಕೆಗಳನ್ನೂ ಕೈಗೊಳ್ಳಬೇಕಿದೆ'' ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಲಹೆ ನೀಡಿದ್ದಾರೆ.

ಇಲ್ಲಿನ ತಾಂತ್ರಿಕ‌ ವಿಶ್ವವಿದ್ಯಾಲಯದ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಸಭಾಂಗಣದಲ್ಲಿ ನಡೆದ ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ದಕ್ಷಿಣ ವಲಯ ಕುಲಪತಿಗಳ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿ ಅವರು ಭಾಷಣ ಮಾಡಿದರು. ''ಭಾರತದ ಪ್ರಮುಖ ಉನ್ನತ ಶಿಕ್ಷಣ ಸಂಘಟನೆಗಳಲ್ಲಿ ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಕೂಡ ಒಂದು. ಸಂಶೋಧನೆ ಆಧಾರಿತ ಉನ್ನತ ಶಿಕ್ಷಣ ಸುಧಾರಿಸುವಲ್ಲಿ ಇದು ತನ್ನದೇ ಆದ ವಿಶಿಷ್ಟ ಕೊಡುಗೆಗಳನ್ನು ನೀಡಿದೆ. ಪ್ರತಿವರ್ಷವೂ ವಿಶೇಷ ಸಮ್ಮೇಳನ ನಡೆಯುತ್ತದೆ. ಕಾಲಕಾಲಕ್ಕೆ ಉನ್ನತ ಶಿಕ್ಷಣದ ಸವಾಲುಗಳನ್ನು ಎದುರಿಸಿ, ಅಗತ್ಯ ಮಾರ್ಗದರ್ಶನ‌ ನೀಡುತ್ತಿದೆ'' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

''ದೇಶದ ಹಿತಾಸಕ್ತಿ ಹಾಗೂ ಉನ್ನತ ಶಿಕ್ಷಣದಲ್ಲಿ ಡಿಜಿಟಲ್‌ ಟೆಕ್ನಾಲಜಿ ಅತ್ಯಂತ ಮಹತ್ವದ ಪಾತ್ರ ಹೊಂದಿದೆ. ಈ ಕ್ಷೇತ್ರದಲ್ಲಿ ಡಿಜಿಟಲ್ ತಂತ್ರಜ್ಞಾನ ಹೊಸ ಕ್ರಾಂತಿಯನ್ನೇ ಮಾಡಿದೆ. ಸಾಕಷ್ಟು ಸುಧಾರಣೆಗಳನ್ನು ಈಗಾಗಲೇ ಮಾಡಿದ್ದು, ಅವುಗಳು ಇನ್ನೂ ಮುಂದುವರಿಯತ್ತಿವೆ. ಉನ್ನತ ಶಿಕ್ಷಣದಲ್ಲಿ ದಕ್ಷತೆ ಹೆಚ್ಚಿಸಿಕೊಂಡು ಸ್ಪರ್ಧಾತ್ಮಕ ಶಕ್ತಿಯನ್ನು ವೃದ್ಧಿಸಲು ಡಿಜಿಟಲ್ ತಂತ್ರಜ್ಞಾನದ ಪರಿವರ್ತನೆಯ ಅಗತ್ಯತೆಯಿದೆ. ಬಡಜನತೆಗೆ ಡಿಜಿಟಲ್ ಶಿಕ್ಷಣದ ಸೌಲಭ್ಯಗಳು ಕೈಗೆಟುಕುವಂತಾಗಬೇಕು. ಭಾರತದ ಆರ್ಥಿಕ ಸ್ಥಿತಿ ಹೆಚ್ಚಿಸಿ ಚೈತನ್ಯ ತಂದಿದೆ. ಇಂದಿನ ಆರ್ಥಿಕ ಶಕ್ತಿ 5ನೇ ಸ್ಥಾನದಲ್ಲಿದೆ. ಶೀಘ್ರವೇ 3ನೇ ಸ್ಥಾನದಲ್ಲಿ ಬರಲು. ಇಂದಿನ‌ ಯುವಕರು ಸ್ವಯಂ ಉದ್ಯೋಗ ಮಾಡಬೇಕು.‌ ಇನ್ನು ಡಿಜಿಟಲ್ ಇಂಡಿಯಾ ಪರಿಕಲ್ಪನೆ‌ಯ ಸಾಕಾರಗೊಳಿಸುವ ಮೂಲಕ ಸಶಕ್ತ ಭಾರತ ನಿರ್ಮಿಸಲು ಕೈಜೋಡಿಸಬೇಕು. ಪ್ರಕೃತಿ ಮತ್ತು ಸಂಸ್ಕೃತಿ ಸಂರಕ್ಷಣೆಯೂ ಆಗಬೇಕಿದೆ'' ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.

ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಅಧ್ಯಕ್ಷ ಜಿ.ಡಿ.ಶರ್ಮಾ ಮಾತನಾಡಿ, ''ಉನ್ನತ ಶಿಕ್ಷಣ ಪಡೆಯುತ್ತಿರುವವರಲ್ಲಿ ಭಾರತೀಯರ ಸಂಖ್ಯೆಯೇ ಹೆಚ್ಚಿದೆ. ಇದಕ್ಕೆ ಆರ್ಥಿಕ‌ ಅಭಿವೃದ್ಧಿ ಹಾಗೂ ಸಾಮಾಜಿಕ ಪರಿಣಾಮವೇ ಕಾರಣ. ಇಂದಿನ‌ ಜಗತ್ತು ಸಣ್ಣ ಪುಟ್ಟ ವಿಷಯಗಳಿಗೂ ಯುದ್ಧ ನಡೆಸುವಂತಾಗಿದೆ. ಆದರೆ, ಭಾರತವು ವಿವಿಧತೆಯಲ್ಲಿ ಏಕತೆ ಕಾಪಾಡಿಕೊಂಡು ಬರುತ್ತಿದೆ. ಪ್ರಸ್ತುತ ಒಂದು ಲಕ್ಷಕ್ಕೂ ಅಧಿಕ ಸ್ಟಾರ್ಟಪ್​ಗಳು ಆರಂಭವಾಗಿವೆ'' ಎಂದು ಮಾಹಿತಿ ನೀಡಿದರು.

ಸಂಘದ ಕಾರ್ಯದರ್ಶಿ ಡಾ. ಪಂಕಜ ಮಿತ್ತಲ್, ಮರಾಠಾ ವಿದ್ಯಾ‌ ಮಂಡಳಿಯ ಪ್ರಾಚಾರ್ಯ ಡಿ.ಜಿ. ಕುಲಕರ್ಣಿ ಮಾತನಾಡಿದರು. ಕುಲಸಚಿವ ಪ್ರೊ.ಬಿ.ಇ.ರಂಗಸ್ವಾಮಿ ಹಾಗೂ ದಕ್ಷಿಣ ಭಾರತದ ವಿವಿಧ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳು, ಉಪನ್ಯಾಸಕರು ಇದ್ದರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಪ್ರೊ. ವಿದ್ಯಾಶಂಕರ ಎಸ್. ಸ್ವಾಗತಿಸಿದರು. ಐಶ್ವರ್ಯ ಪ್ರಾರ್ಥಿಸಿದರು. ಡಾ.ರಮಾದೇವಿ ವಂದಿಸಿದರು.‌ ಪ್ರೊ.ಎಂ.ಎಂ.ಮುನ್ಷಿ ನಿರೂಪಿಸಿದರು.

ಇದನ್ನೂ ಓದಿ: KIOCL ನೇಮಕಾತಿ: ಇಂಜಿನಿಯರ್​ ಸೇರಿದಂತೆ ಹಲವು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.