ETV Bharat / state

ಪೂರಕ ಅಂದಾಜುಗಳ ಮೇಲೆ ಚರ್ಚೆ: ಆಡಳಿತ ಪ್ರತಿಪಕ್ಷ ಸದಸ್ಯರ ಮಧ್ಯೆ ಏಟು - ತಿರುಗೇಟು, ಸ್ಪೀಕರ್ ಗರಂ

author img

By

Published : Dec 29, 2022, 7:23 PM IST

Legislative Assembly
ವಿಧಾನಸಭೆ ಕಲಾಪ

ವಿಧಾನಸಭೆ ಕಲಾಪದಲ್ಲಿ ಪೂರಕ ಅಂದಾಜು ಚರ್ಚೆ- ಆಡಳಿತ - ಪ್ರತಿಪಕ್ಷಗಳ ಸದಸ್ಯರ ನಡುವೆ ವಾಕ್ಸಮರ - ಸ್ಪೀಕರ್ ಗರಂ - ಪ್ರತಿಪಕ್ಷದ ಕೃಷ್ಣಬೈರೇಗೌಡಗೆ ಪುಲ್ ಬ್ಯಾಂಟಿಂಗ್​​​ಗೆ ಅವಕಾಶ ಕೊಟ್ಟಿದ್ದೀರಿ, ಕ್ರಿಕೆಟ್ ನಲ್ಲಿ ಒಂದು ಕಡೆ ಬ್ಯಾಟಿಂಗ್ ಮಾಡಿದರೆ ಮ್ಯಾಚ್ ಮುಗಿಯುವುದಿಲ್ಲ. ಎರಡೂ ಕಡೆ ಆಡಬೇಕು ಎಂದು ಸಿಎಂ ಮನವಿ

ಬೆಳಗಾವಿ: ಪೂರಕ ಅಂದಾಜುಗಳ ಕುರಿತು ಸುದೀರ್ಘ ಚರ್ಚೆ ವೇಳೆ ಆಡಳಿತ -ಪ್ರತಿಪಕ್ಷಗಳ ಸದಸ್ಯರ ನಡುವೆ ಏಟು - ಪ್ರತಿ ಏಟು ನಡೆಯುತ್ತಿದ್ದ ಮಧ್ಯೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಗರಂ ಆದ ಪ್ರಸಂಗವೂ ವಿಧಾನಸಭೆಯಲ್ಲಿ ನಡೆಯಿತು. ಪೂರಕ ಅಂದಾಜುಗಳ ಕುರಿತು ಸುದೀರ್ಘ ಚರ್ಚೆ ನಡೆಯುತ್ತಿರುವಾಗಲೇ ಇದನ್ನು ಗಮನಿಸಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಆದಷ್ಟು ಬೇಗ ಚರ್ಚೆ ಮುಗಿಸಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಮಾತನಾಡಲು ಅವಕಾಶ ಕಲ್ಪಿಸಬೇಕು ಎಂದು ಸ್ಪೀಕರ್ ಅವರನ್ನು ಒತ್ತಾಯಿಸಿದರು.


4 ಲಕ್ಷ ಕೋಟಿ ಅಧಿಕ ಮೊತ್ತದ ಸಾಲದ ಹೊರೆ: ಪೂರಕ ಅಂದಾಜುಗಳು ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕ ಕೃಷ್ಣ ಬೈರೇಗೌಡ ಅವರ ನಡುವಿನ ಚರ್ಚೆ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಯತ್ನಾಳ್, ಇಷ್ಟೆಲ್ಲ ಬುದ್ಧಿವಂತರಿದ್ದರೂ 4 ಲಕ್ಷ ಕೋಟಿ ರೂಪಾಯಿ ಅಧಿಕ ಮೊತ್ತದ ಸಾಲದ ಹೊರೆ ರಾಜ್ಯದ ಮೇಲೆ ಹೇಗೆ ಬಿತ್ತು ಎಂದು ಪ್ರಶ್ನಿಸಿದರು. ಆದಷ್ಟು ಬೇಗ ಈ ಚರ್ಚೆ ಪೂರ್ಣಗೊಳಿಸಿ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲು ಅವಕಾಶ ಮಾಡಿಕೊಡಿ ಎಂದು ಆಗ್ರಹಿಸಿದರು.

ಆಗ ಕೃಷ್ಣಬೈರೇಗೌಡ ಅವರು ನಾನು ಒಬ್ಬ ಶಾಸಕನಾಗಿ ರಾಜ್ಯ ಹಣಕಾಸಿನ ಪರಿಸ್ಥಿತಿ ಕುರಿತು ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದೇನೆ. ಇದು ನನ್ನ ಹಕ್ಕು ಎಂದು ತಿರುಗೇಟು ನೀಡಿದರು. ಪ್ರತಿಪಕ್ಷದಲ್ಲಿ ಕುಳಿತು ನಾನು ಸರ್ಕಾರವನ್ನು ಹೊಗಳಲು ಬಂದಿಲ್ಲ. ಅಂಕು - ಡೊಂಕುಗಳನ್ನು ಹೇಳುವುದು ನನ್ನ ಕೆಲಸ. ಆಗ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ, ಕೃಷ್ಣಬೈರೇಗೌಡರು ಬಹಳಷ್ಟು ಮಾಹಿತಿ ನೀಡಿದ್ದಾರೆ, ಮಾತು ಕಲಿಸಿದ್ದಾರೆ. ಕೆಲವನ್ನು ತಿರುಚಿ ಹೇಳುವುದಲ್ಲ. ನೀವು ಹೊಗಳಿ ಎಂದು ಹೇಳುವುದಿಲ್ಲ. ನೀವು ಟೀಕೆ ಮಾಡಿದಷ್ಟು ನಮಗೆ ಸತ್ಯ ಹೇಳಲು ಅನುಕೂಲ ಆಗುತ್ತದೆ ಎಂದು ತಿರುಗೇಟು ನೀಡಿದರು.

ಮಹಾಭಾರತ ಪ್ರಸ್ಥಾಪಿಸಿದ ಸಿಎಂ: ಮಹಾಭಾರತದ ಕಥೆಯನ್ನು ಪ್ರಸ್ತಾಪಿಸಿದ ಸಿಎಂ, ಅರ್ಜುನನಿಗೆ ಹೊಗಳಿಕೆ ಬೇಕು. ಆದರೆ, ಕರ್ಣ ತೆಗಳಿಕೆಯನ್ನ ಸವಾಲಾಗಿ ಸ್ವೀಕರಿಸುತ್ತಿದ್ದ. ನಾವು ಕರ್ಣನಂತೆ ನಿಮ್ಮ ಟೀಕೆಗಳನ್ನು ಅಸ್ತ್ರವಾಗಿ ಮಾಡಿಕೊಂಡು ಹೋಗುತ್ತೇವೆ ಎಂದು ತಿರುಗೇಟು ನೀಡಿದರು.

ಗರಂ ಆದ ಸ್ಪೀಕರ್ : ಇದೇ ವೇಳೆ ನಮಗೂ ಅವಕಾಶ ಕೊಡಿ ಎಂದು ಬಿಜೆಪಿ ಸದಸ್ಯರು ಕೇಳಿದಾಗ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಸಮಯ ಆಗಿದೆ. ಎಲ್ಲರಿಗೂ ಅವಕಾಶ ಕೊಡಲು ಸಾಧ್ಯವಿಲ್ಲ ಎಂದರು. ಆಗ ಕಂದಾಯ ಸಚಿವ ಆರ್. ಅಶೋಕ್ ಎದ್ದು ನಿಂತು, ಪ್ರತಿಪಕ್ಷದವರಿಗೆ ಮಾತನಾಡಲು ಅವಕಾಶ ಕೊಟ್ಟಿದ್ದೀರಿ, ಆಡಳಿತ ಪಕ್ಷದವರಿಗೆ ಅವಕಾಶ ಕೊಡಿ ಎಂದು ಏರುಧ್ವನಿಯಲ್ಲಿ ಮಾತನಾಡಿದರು. ಇದರಿಂದ ಗರಂ ಆದ ಸ್ಪೀಕರ್, ನನ್ನನ್ನು ತಪ್ಪು ಸ್ಥಾನದಲ್ಲಿ ಕೂರಿಸಬೇಡಿ. ನೀವು ಸದಸ್ಯರ ಮಧ್ಯೆ ಕಚ್ಚಾಡಬೇಡಿ. ಅದನ್ನೇ ಡಿಬೇಟ್ ಮಾಡಬೇಡಿ. ಬೀ ಕೇರ್ ಪುಲ್ ಎಂದು ಗರಂ ಆದರು.

ಸ್ಪೀಕರ್​ಗೆ ಸಿಎಂ ಕೋರಿಕೆ: ಆಗ ಸಮಾಧಾನಪಡಿಸಿದ ಮುಖ್ಯಮಂತ್ರಿಗಳು, ಎಲ್ಲರಿಗೂ ಅವಕಾಶ ಕೊಟ್ಟಿದ್ದೀರಿ, ನಿಮ್ಮ ಸ್ಥಾನಕ್ಕೆ ಅಗೌರವ ತೋರುವ ಉದ್ದೇಶವಲ್ಲ. ಪ್ರತಿಪಕ್ಷದ ಸದಸ್ಯರು ಮಾತನಾಡಬೇಕೆಂದುಕೊಂಡಿದ್ದಾರೆ. ಕೃಷ್ಣಬೈರೇಗೌಡ ಅವರಿಗೆ ಪುಲ್ ಬ್ಯಾಟಿಂಗ್​​ಗೆ ಅವಕಾಶ ಕೊಟ್ಟಿದ್ದೀರಿ, ಈ ಕಡೆಯಲ್ಲೂ ಕೊಡಿ. ಕ್ರಿಕೆಟ್ ನಲ್ಲಿ ಒಂದು ಕಡೆ ಬ್ಯಾಟಿಂಗ್ ಮಾಡಿದರೆ ಮ್ಯಾಚ್ ಮುಗಿಯುವುದಿಲ್ಲ. ಎರಡೂ ಕಡೆ ಆಡಬೇಕು ಎಂದು ಮನವಿ ಮಾಡಿಕೊಂಡರು.

ಇದನ್ನೂಓದಿ:ಬೆಳಗಾವಿ ಅಧಿವೇಶನ ವೇಳೆ ಕಳಸಾ ಬಂಡೂರಿ ಯೋಜನೆಗೆ ಅನುಮೋದನೆ ಸಿಕ್ಕಿದ್ದು ಹಂಡೆ ಹಾಲು ಕುಡಿದಂತಾಗಿದೆ: ಕಾರಜೋಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.