ETV Bharat / state

ಚಿಕ್ಕೋಡಿಯಲ್ಲಿ ಅಭ್ಯರ್ಥಿಗಳಿಂದ ಮತ ಚಲಾವಣೆ: ಅಥಣಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಸವದಿ ವೋಟಿಂಗ್​

author img

By

Published : May 10, 2023, 3:47 PM IST

Polling by candidates in Chikkodi
ಚಿಕ್ಕೋಡಿಯಲ್ಲಿ ಅಭ್ಯರ್ಥಿಗಳಿಂದ ಮತ ಚಲಾವಣೆ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಹಾಗೂ ಅಥಣಿ ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ಮತದಾನ ಮಾಡಿದರು.

ಚಿಕ್ಕೋಡಿ: ಅಥಣಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಸವದಿ ಅವರು ಅಥಣಿ ತಾಲೂಕಿನ ನಾಗನೂರು ಪಿಕೆ ಗ್ರಾಮದ ಬೂತ್​ ನಂಬರ್​ 204ರಲ್ಲಿ ಮತ ಚಲಾವಣೆ ಮಾಡಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ರಾಜ್ಯದಲ್ಲಿ 132 ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದು ಬರುತ್ತಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಸವದಿ ವಿಶ್ವಾಸ ವ್ಯಕ್ತಪಡಿಸಿದರು.

ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ. ನಾನು ಯಾವುದೇ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಈಗಾಗಲೇ ನಾನು ಡಿಸಿಎಂ, ಸಚಿವನಾಗಿ ಕೆಲಸ ಮಾಡಿದ್ದೇನೆ. ಸಚಿವನಾಗಬೇಕೆಂಬ ಅಭಿಲಾಷೆ ಕೂಡ ನನ್ನಲ್ಲಿ ಇಲ್ಲ. ನಾವು ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಪೈಕಿ 14 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮತದಾನಕ್ಕೂ ಮೊದಲು ಮೊದಲು ಸವದಿ ಟೆಂಪಲ್ ರನ್: ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಲಕ್ಷ್ಮಣ್ ಸವದಿ ಮತ ಹಾಕುವುದಕ್ಕೂ ಮೊದಲು ತಮ್ಮ ಸ್ವಗ್ರಾಮವಾದ ನಾಗನೂರು ಪಿಕೆ ಗ್ರಾಮದ ಲಕ್ಷ್ಮೀದೇವಿಯ ದರ್ಶನ ಪಡೆದುಕೊಂಡು ಸರ್ಕಾರಿ ಶಾಲೆಯಲ್ಲಿ ಬೂತ್​ ನಂಬರ್ 204ರಲ್ಲಿ ತಮ್ಮ ಮತ ಚಲಾಯಿಸಿದರು.

ಅಥಣಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಠಳ್ಳಿ ಮತದಾನ: ಅಥಣಿ ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ಅವರು ಅಥಣಿ ಪಟ್ಟಣದ ವಿಕ್ರಮಪುರ ವಾರ್ಡ್​ನ ಬೂತ್ ನಂಬರ್ 99ರ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಸಚಿವೆ ಶಶಿಕಲಾ ಜೊಲ್ಲೆ ಮತ ಚಲಾವಣೆ: ಸಚಿವೆ ಹಾಗೂ ನಿಪ್ಪಾಣಿ ಬಿಜೆಪಿ ಅಭ್ಯರ್ಥಿ ಶಶಿಕಲಾ ಜೊಲ್ಲೆ ಯಕ್ಸಂಬಾ ಪಟ್ಟಣದಲ್ಲಿ ಕುಟುಂಬ ಸಮೇತರಾಗಿ ಮತ ಚಲಾಯಿಸಿದರು.
ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಅವರ ಪತಿಯಾಗಿರುವ ಸಂಸದ ಅಣ್ಣಾ ಸಾಹೇಸಾಬ ಜೊಲ್ಲೆ ಅವರು ಚಿಕ್ಕೋಡಿ ಕ್ಷೇತ್ರದ ಯಕ್ಸಂಬಾ ಪಟ್ಟಣದ ಮರಾಠಿ ಶಾಲೆಯಲ್ಲಿ ಮತದಾನ ಮಾಡಿದರು. ಇದಕ್ಕೂ ಮೊದಲು ಪಟ್ಟಣದ ಜ್ಯೋತಿಬಾ ದೇವರ ದರ್ಶನ ಹಾಗೂ ಆಶೀರ್ವಾದ ಪಡೆದರು.

ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಶ್ರೀಶೈಲ್ ಜಗದ್ಗುರು: ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಬೂತ್​ ನಂಬರ್​ 45ರಲ್ಲಿ ಶ್ರೀಶೈಲ್ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು ಮತದಾನ ಪ್ರಜಾಪ್ರಭುತ್ವದ ದೊಡ್ಡ ಹೆಜ್ಜೆ, ಈ ಹಿನ್ನೆಲೆಯಲ್ಲಿ ದೇಶದ ಪ್ರತಿಯೊಬ್ಬ ವ್ಯಕ್ತಿ ಮತದಾನ ಮಾಡುವುದು ಕರ್ತವ್ಯವಾಗಿದೆ. ಮತದಾನ ಮಾಡಬೇಕು ಹೊರತು, ಆಮಿಷಕ್ಕೆ ಒಳಗಾಗಿ ಮತದಾನ ಮಾಡಬಾರದು. ಪ್ರತಿಯೊಬ್ಬರೂ ಮತದಾನ ಮಾಡಿ ಉತ್ತಮ ನಾಯಕನನ್ನು ಆಯ್ಕೆ ಮಾಡಬೇಕು ‌ಎಂದು ಹೇಳಿದರು.

ಹುಕ್ಕೇರಿ ಶ್ರೀಗಳಿಂದ ಮತದಾನ: ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹುಕ್ಕೇರಿ ಪಟ್ಟಣದ ಸರ್ಕಾರಿ ಶಾಲೆಗೆ ತೆರಳಿ ಮತದಾನ ಮಾಡಿದರು. ಇದೇ ಸಂದರ್ಭದಲ್ಲಿ ಮಾಧ್ಯಮದ ಜೊತೆ ಮಾತನಾಡಿ, ಮತದಾನ‌ ಪವಿತ್ರವಾಗಿದೆ. ಎಲ್ಲರೂ ಮತದಾನ ಮಾಡಿ. ಯಾವುದೇ ಆಮಿಷಗಳಿಗೆ ಬಲಿಯಾಗದೆ ಒಳ್ಳೆಯ ವ್ಯಕ್ತಿಯನ್ನು ಆಯ್ಕೆ ಮಾಡುವಂತೆ ಕರೆ ನೀಡಿದರು.

ನಿಡಸೋಸಿಯ ಜಗದ್ಗುರುಗಳಿಂದ ಮತ ಚಲಾವಣೆ: ನಿಡಸೋಸಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹಾಗೂ ಉತ್ತರಾಧಿಕಾರಿಗಳಾದ ನಿಜಲಿಂಗೇಶ್ವರ ದೇವರು ನಿಡಸೋಸಿಯ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿ, ಇತರರಿಗೂ ಮತದಾನ ಮಾಡುವಂತೆ ಕರೆ ನೀಡಿದರು.

ಬೆಳಗಾವಿ ಜಿಲ್ಲೆ ವಿವಿಧ ಅಭ್ಯರ್ಥಿಗಳಿಂದ ಮತದಾನ: ಬೆಳಗಾವಿ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಹುಕ್ಕೇರಿ ತಾಲೂಕಿನ ಯಮಕನಮರಡಿ ಮತಕ್ಷೇತ್ರದ ಹಳೆ ವಂಟಮೂರಿಯಲ್ಲಿ ಸ್ಥಾಪಿಸಿದ ಮತಗಟ್ಟೆ ಕೇಂದ್ರ 95ರಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಮತ ಚಲಾಯಿಸಿದರು. ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ಮತ ಚಲಾಯಿಸಿ ಮಾತನಾಡಿ, ಮತದಾನ ನಮ್ಮ ಬಹುದೊಡ್ಡ ಜವಾಬ್ದಾರಿ, ಎಲ್ಲರೂ ತಪ್ಪದೇ ಮತದಾನ ಮಾಡುವ ಮೂಲಕ ಸಂವಿಧಾನದ ಆಶಯಗಳನ್ನು ಈಡೇರಿಸಬೇಕೆಂದು ಮನವಿ ಮಾಡಿದರು.

ಬೆಳಗಾವಿ ಶಿವಬಸವ ನಗರದ ಜಿ.ಜಿ.ಯಳ್ಳೂರ ಸರ್ಕಾರಿ‌ ಶಾಲೆಯ ಮತಗಟ್ಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಸೀಫ್(ರಾಜು) ಸೇಠ್ ಮತದಾನ ಮಾಡಿದರು. ಬೆಳಗಾವಿ ಸದಾಶಿವ ನಗರದ ಮತಗಟ್ಟೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ರವಿ ಪಾಟೀಲ ತಮ್ಮ ಹಕ್ಕು ಚಲಾಯಿಸಿದರು. ಬೈಲಹೊಂಗಲ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಡಾ. ವಿಶ್ವನಾಥ ಪಾಟೀಲ ಸ್ವಗ್ರಾಮ ಲಿಂಗದಳ್ಳಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ತಮ್ಮ ಕುಟುಂಬಸ್ಥರೊಂದಿಗೆ ಮತದಾನ ಮಾಡಿದರು. ಸವದತ್ತಿ ಯಲ್ಲಮ್ಮ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಶ್ವಾಸ ವೈದ್ಯ ಸವದತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ 4ರ ಬೂತ್ ನಂ 158ರಲ್ಲಿ ತಮ್ಮ ಪತ್ನಿ ಜೊತೆಗೆ ಆಗಮಿಸಿ ಮತ ಹಾಕಿದರು.

ಇದನ್ನೂ ಓದಿ: ನಿನ್ನೆ ಮಧ್ಯರಾತ್ರಿವರೆಗೂ ಸಿಡಿ ಬಿಡ್ತಿನಿ ಅಂತಾ ಡಿಕೆಶಿ ಬ್ಲ್ಯಾಕ್​ಮೇಲ್ ಮಾಡ್ತಿದ್ರು: ರಮೇಶ ಜಾರಕಿಹೊಳಿ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.