ETV Bharat / state

ಲೋಕೋಪಯೋಗಿ ಇಲಾಖೆಯಲ್ಲಿ ಇಂಜಿನಿಯರ್​ಗಳ ನೇಮಕ, ಅರ್ಹತಾ ಪಟ್ಟಿ ಶೀಘ್ರ ಪ್ರಕಟ: ಸಚಿವ ಸಿ ಸಿ ಪಾಟೀಲ್

author img

By

Published : Dec 26, 2022, 7:07 PM IST

ಚಳಿಗಾಲದ ಅಧಿವೇಶನ
ಚಳಿಗಾಲದ ಅಧಿವೇಶನ

ಬೆಳಗಾವಿ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ. ಲೋಕೋಪಯೋಗಿ ಇಲಾಖೆಯಲ್ಲಿ ಕಿರಿಯ ಇಂಜಿನಿಯರ್​ಗಳ ನೇಮಕಾತಿ ಬಗ್ಗೆ ಸಚಿವ ಸಿ ಸಿ ಪಾಟೀಲ್ ಸದನದಲ್ಲಿ ಉತ್ತರ ನೀಡಿದರು.

ಬೆಳಗಾವಿ: ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ನೇಮಕಾತಿ ಪ್ರಕ್ರಿಯೆಯಲ್ಲಿರುವ ಲೋಕೋಪಯೋಗಿ ಇಲಾಖೆಯ 330 ಕಿರಿಯ ಇಂಜಿನಿಯರ್‌ಗಳ ಅರ್ಹತಾ ಪಟ್ಟಿಯನ್ನು ಶೀಘ್ರ ಪ್ರಕಟಿಸಲು ಕ್ರಮವಹಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ವಿಧಾನಸಭೆಯಲ್ಲಿ ವಿಧಾನಸಭೆಯಲ್ಲಿ ತಿಳಿಸಿದರು.

ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ವಿಧಾನಸಭೆ ಕಲಾಪದ ಶೂನ್ಯವೇಳೆಯಲ್ಲಿ ಶಾಸಕ ಎಸ್.ಸುರೇಶಕುಮಾರ್ ಅವರು ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿದ ಸಚಿವರು, ಲೋಕೋಪಯೋಗಿ ಇಲಾಖೆಯ ಕಿರಿಯ ಇಂಜಿನಿಯರುಗಳ ನೇಮಕಾತಿ ಪ್ರಕ್ರಿಯೆ ಕುರಿತು ಕಾನೂನು ಸಚಿವರೊಂದಿಗೆ ಸಮಾಲೋಚನೆ ನಡೆಸಿ, ಯಾವುದೇ ಹಗರಣಗಳಿಗೆ ಅವಕಾಶವಾಗದಂತೆ ಎಚ್ಚರವಹಿಸಲಾಗಿದೆ. ಅರ್ಹತಾ ಪಟ್ಟಿಯನ್ನು ಆದಷ್ಟು ಬೇಗ ಪ್ರಕಟಿಸಿ, ಅರ್ಹರಿಗೆ ಉದ್ಯೋಗ ಒದಗಿಸಲಾಗುವುದು ಎಂದು ಸದನಕ್ಕೆ ವಿವರಿಸಿದರು.

ಶಾಸಕ ಎಸ್.ಸುರೇಶಕುಮಾರ್ ಮಾತನಾಡಿ, 2019 ರಲ್ಲಿ ಲೋಕೋಪಯೋಗಿ ಕಿರಿಯ ಇಂಜಿನಿಯರುಗಳ ನೇಮಕಾತಿ ಅಧಿಸೂಚನೆ ಪ್ರಕಟವಾಗಿತ್ತು. 2019ರ ಜೂನ್ ತಿಂಗಳಲ್ಲಿ ಸಚಿವ ಸಂಪುಟವು ಅಧಿಸೂಚನೆ ರದ್ದುಪಡಿಸಿತು. ನಂತರ ಪ್ರಕಟಿಸಿದ ಅಧಿಸೂಚನೆ ಪ್ರಕಾರ 2021ರ ಜುಲೈ 30 ರಂದು ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ನಡೆದು, 1:3 ರ ಅರ್ಹತೆಯ ಆಧಾರದಲ್ಲಿ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ಕೂಡ ಮುಗಿದಿದೆ.

ಆಯೋಗದ ಸದಸ್ಯರು ರೊಟೇಷನ್ ಆಧಾರದಲ್ಲಿ ಸಹಿ ಹಾಕಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿರುವುದೇ ವಿಳಂಬಕ್ಕೆ ಕಾರಣವಾಗಿದೆ. ಆಯೋಗದ ನಿಧಾನಗತಿಯಿಂದಾಗಿ ಯುವ ಅಭ್ಯರ್ಥಿಗಳು ವ್ಯವಸ್ಥೆಗೆ ಪ್ರವೇಶಿಸುವ ಮುನ್ನವೇ ಸಿನಿಕರಾಗುತ್ತಿದ್ದಾರೆ. ಹೀಗಾಗಲು ಅವಕಾಶ ನೀಡಬಾರದು ಎಂದರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಧ್ಯಪ್ರವೇಶಿಸಿ, ಸ್ವಾಯತ್ತ ಸಂಸ್ಥೆಯಾಗಿರುವ ಕರ್ನಾಟಕ ಲೋಕಸೇವಾ ಆಯೋಗದ ವಿಶ್ವಾಸರ್ಹತೆ ಹೆಚ್ಚಿಸುವ ಕಾರ್ಯಗಳಾಗಬೇಕು ಎಂದು ಸಲಹೆ ನೀಡಿದರು.

(ಓದಿ: ರಾಜ್ಯಾದ್ಯಂತ ಇಂದಿನಿಂದ ಮಾಸ್ಕ್ ಕಡ್ಡಾಯ: ರಾಜ್ಯ ಸರ್ಕಾರದಿಂದ ಹೊಸ ಗೈಡ್​ಲೈನ್​ ಬಿಡುಗಡೆ!)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.