ETV Bharat / state

ಚನ್ನಮ್ಮಾಜಿ ದಿಟ್ಟತನ, ಸ್ವಾಭಿಮಾನ, ಛಲವನ್ನು ಮೈಗೂಡಿಸಿಕೊಳ್ಳಿ: ನಟ ರಮೇಶ್ ಅರವಿಂದ ಕರೆ

author img

By ETV Bharat Karnataka Team

Published : Oct 26, 2023, 7:52 AM IST

Ramesh Aravind was felicitated at Kittur Utsav
ಕಿತ್ತೂರು ಉತ್ಸವದಲ್ಲಿ ರಮೇಶ್ ಅರವಿಂದ್​ ಅವರನ್ನು ಸನ್ಮಾನಿಸಲಾಯಿತು

ಮೂರು ದಿನಗಳ ಕಾಲ ನಡೆದ ಕಿತ್ತೂರು ಉತ್ಸವ ಸಮಾರೋಪ ಸಮಾರಂಭದಲ್ಲಿ ನಟ ರಮೇಶ್​ ಅರವಿಂದ್​ ಭಾಗವಹಿಸಿ ಸಮಾರೋಪ ಭಾಷಣ ಮಾಡಿದರು.

ಬೆಳಗಾವಿ: "200 ವರ್ಷಗಳ ಹಿಂದೆ ಆಂಗ್ಲರು‌ ಮಂಡಿಯೂರುವಂತೆ ಮಾಡಿದ ವೀರಮಹಿಳೆ ಕಿತ್ತೂರು ಚನ್ನಮ್ಮ. ಕಿತ್ತೂರಿನ ಈ ವೀರಭೂಮಿಯಲ್ಲಿ ಸಹಸ್ರಾರು ವೀರಮಹಿಳೆಯರು ಹುಟ್ಟಿ ಬರಬೇಕು. ಕಿತ್ತೂರು ನೆಲದ ಜನರು ಚನ್ನಮ್ಮನ ದಿಟ್ಟತನ, ಸ್ವಾಭಿಮಾನ, ಹೋರಾಟದ ಛಲವನ್ನು ರೂಢಿಸಿಕೊಳ್ಳಬೇಕು" ಎಂದು ನಟ ರಮೇಶ್ ಅರವಿಂದ್​ ಕರೆ ನೀಡಿದ್ದಾರೆ.

Music Director Hamsalekha Felicitated in Kittur Utsav
ಸಂಗೀತ ನಿರ್ದೇಶಕ ಹಂಸಲೇಖ ಅವರನ್ನು ಸನ್ಮಾನಿಸಲಾಯಿತು

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಚನ್ಮಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಮೂರು ದಿನಗಳ ರಾಜ್ಯಮಟ್ಟದ ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪದ ನುಡಿಗಳನ್ನಾಡಿದರು. "ನಮ್ಮೂರಲ್ಲಿ ಕಥೆಗಳು ಒಂದೂರಲ್ಲಿ ರಾಜ ಇದ್ದ ಎನ್ನುವುದರಿಂದ ಆರಂಭವಾಗುತ್ತದೆ. ಆದರೆ, ಈ ಭಾಗದಲ್ಲಿ ಒಂದೂರಲ್ಲಿ ರಾಣಿ ಇದ್ದಳು ಅಂತಾ ಆರಂಭ ಆಗುತ್ತೆ ಎಂದು ಚನ್ನಮ್ಮಾಜಿ ಇತಿಹಾಸವನ್ನ ಮೆಲುಕು ಹಾಕಿದರು. ಕಿತ್ತೂರು ಉತ್ಸವ ಮನರಂಜನೆಗೆ ಸೀಮಿತವಾಗಬಾರದು. ಉತ್ಸವವು ದೇಶಪ್ರೇಮಕ್ಕೆ ಸ್ಫೂರ್ತಿಯಾಗಬೇಕು. ಇಸ್ರೇಲ್ ಮತ್ತು ಪ್ಯಾಲೆಸ್ಟೀನ್​ ಮಧ್ಯೆ ಯುದ್ಧ ನಡೆಯುತ್ತಿದೆ. ಇಸ್ರೇಲ್ ಅವರ ರಕ್ಷಣೆಗೆ ಕಬ್ಬಿಣದ ಕವಚ ಇದೆ. ಆದರೆ, ಇನ್ನೂರು ವರ್ಷದ ಹಿಂದೆ ಬ್ರಿಟಿಷರ ವಿರುದ್ಧ ರಕ್ಷಣೆಗೆ ಇದ್ದಿದ್ದು ಚನ್ನಮ್ಮಾಜಿ ಆಲೋಚನೆಗಳು. ಚನ್ನಮ್ಮ ಅವರ ಹಾಗೇ ನೀವು ಆಗಬೇಕು" ಎಂದರು.

Ramesh Aravind at Kittur Utsav
ಕಿತ್ತೂರು ಉತ್ಸವದಲ್ಲಿ ರಮೇಶ್​ ಅರವಿಂದ್​

ಇದೇ ವೇಳೆ, ಮಾತನಾಡಿದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ, "ಸಂಗೀತ ಸಮರಗಳನ್ನು ವಿರೋಧಿಸುತ್ತದೆ; ಸಮರದಿಂದಾದ ಗಾಯಗಳನ್ನು ನಿವಾರಿಸುತ್ತದೆ. ಹಾಗಾಗಿ, ಇದು ಕತ್ತಿ-ಗುರಾಣಿ ಹಿಡಿದು ಹೋರಾಡುವ ಕಾಲವಲ್ಲ; ಅಣ್ವಸ್ತ್ರ-ಡ್ರೋನ್​ಗಳ ಕಾಲ. ಒಂದು ಅಣ್ವಸ್ತ್ರ ಒಂದು ಜನಸಮೂಹವನ್ನೇ ನಿರ್ಮೂಲನ ಮಾಡುತ್ತದೆ. ಕನ್ನಡ ಮತ್ತು ಸಂಗೀತವು ಸಾಮರಸ್ಯದ ಅಸ್ತ್ರಗಳಾಗಬೇಕು" ಎಂದು ಆಶಯ ವ್ಯಕ್ತಪಡಿಸಿದರು.

Ramesh Aravind at Kittur Utsav
ಕಿತ್ತೂರು ಉತ್ಸವದಲ್ಲಿ ರಮೇಶ್​ ಅರವಿಂದ್​

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಬಾಬಾಸಾಹೇಬ ಪಾಟೀಲ, "ಕಿತ್ತೂರು ಉತ್ಸವ ಬರೀ ಉತ್ಸವ ಆಗಿ ಉಳಿದಿಲ್ಲ, ಜನರ ಉತ್ಸವ ಆಗಿದೆ. ಮುಂದಿನ ವರ್ಷ ವಿಜಯೋತ್ಸವಕ್ಕೆ 200 ವರ್ಷ ಆಗಲಿದೆ. ಅದನ್ನು ಅತೀ ವಿಜೃಂಭಣೆಯಿಂದ ಆಚರಿಸೋಣ. ಕಿತ್ತೂರು ಸುತ್ತಮುತ್ತ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳನ್ನ ಅಭಿವೃದ್ಧಿ ಮಾಡುತ್ತೇವೆ. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಮೂಲಕ ಅಭಿವೃದ್ಧಿಗೆ ಒತ್ತು ನೀಡಲಾಗುವುದು.‌ ಕಿತ್ತೂರು ಕೋಟೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಮೂರು ದಿನಗಳ ರಾಜ್ಯಮಟ್ಟದ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ" ಎಂದರು.

ರಾಣಿ ಲಕ್ಷ್ಮಿಭಾಯಿಗಿಂತ ಮೊದಲೇ ಚನ್ನಮ್ಮಳ ಸ್ವಾತಂತ್ರ್ಯ ಕಹಳೆ: ಬೈಲೂರ ನಿಷ್ಕಲ ಮಂಟಪದ ನಿಜಗುಣ ತೋಂಟದಾರ್ಯ ಸ್ವಾಮೀಜಿ ಮಾತನಾಡಿ, "ಝಾನ್ಸಿ ರಾಣಿ ಲಕ್ಷ್ಮೀಬಾಯಿಗಿಂತ ಮುಂಚೆಯೇ ರಾಣಿ ಚೆನ್ನಮ್ಮ ಸ್ವಾತಂತ್ರ್ಯ ಕಹಳೆ ಊದಿದ್ದಾರೆ. ಸರ್ಕಾರ ಇದನ್ನು ಗಮನಿಸಬೇಕು, ಸ್ಥಳೀಯ ಶಾಸಕರು ಮತ್ತು ಜಿಲ್ಲಾಡಳಿತ ಸರ್ಕಾರಕ್ಕೆ ಮನವರಿಕೆ ‌ಮಾಡಿಕೊಡಬೇಕು. ಚನ್ನಮ್ಮ ಶರಣ ಸಂಸ್ಕ್ರತಿ ಧರ್ಮದಲ್ಲಿ ಅತ್ಯುತ್ತಮ ‌ಜೀವನ ಮಾಡಿದ್ದಾರೆ. ಜೈಲಿನಲ್ಲಿ ಲಿಂಗವಿಲ್ಲದಿದ್ದರೂ ಶರಣ ಸಂಸ್ಕೃತಿಯನ್ನು ಚೆನ್ನಮ್ಮ ಉಳಿಸಿದ್ದಾರೆ. ಶರಣ ಸಂಸ್ಕೃತಿ ಎತ್ತಿಹಿಡಿದ ಬಸವಣ್ಣನವರ ಮೂರ್ತಿ ಕಿತ್ತೂರಿನಲ್ಲಿ ಇಲ್ಲ. ಹಾಗಾಗಿ ಚನ್ನಮ್ಮನ ನೆನಪಿಗಾಗಿ ಬಸವಣ್ಣವರ ಮೂರ್ತಿ, ಅಂಬೇಡ್ಕರ್ ಮೂರ್ತಿ ಸ್ಥಾಪಿಸಬೇಕು. ಕಿತ್ತೂರು ಮಿನಿವಿಧಾನಸೌಧದ ಮುಂದೆ ಎರಡು ಮೂರ್ತಿ ಜತೆಗೆ ಗಾರ್ಡನ್ ನಿರ್ಮಿಸಬೇಕು. ಕಿತ್ತೂರು ಅಭಿವೃದ್ಧಿ ಆಗಬೇಕು, ಗ್ರಾಮೀಣ ಪ್ರದೇಶಕ್ಕೆ ಕೈಗಾರಿಕೆ, ಶಿಕ್ಷಣಕ್ಕೆ ಒತ್ತು‌ ನೀಡಬೇಕು. ಚೆನ್ನಮ್ಮನ ‌ಹೆಸರಿನಲ್ಲಿ ಶೌರ್ಯ ಪ್ರಶಸ್ತಿ ನೀಡಬೇಕು. ಕಿತ್ತೂರು ಸಾಂಸ್ಕೃತಿಕ ಪ್ರವಾಸೋದ್ಯಮ ಆಗಬೇಕು. ಬಸವಣ್ಣನವರನ್ನ ಕರ್ನಾಟಕದ ಸಾಂಸ್ಕೃತಿಕ ನಾಯಕ‌ನೆಂದು ಘೋಷಣೆ ಮಾಡಬೇಕು" ಎಂದು ಸ್ವಾಮೀಜಿ ಒತ್ತಾಯಿಸಿದರು.

ಚನ್ನಮ್ಮ- ರಾಯಣ್ಣ ಪ್ರತಿಮೆ ಸ್ಥಾಪನೆ ಆಗಲಿ: ನಿಚ್ಚಣಿಕಿಯ ಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ ಮಾತನಾಡಿ, "ಕಿತ್ತೂರಿನ ನೂತನ ತಾಲ್ಲೂಕು ಸೌಧದ ಎದುರು ಬಸವಣ್ಣ, ಡಾ.ಬಾಬಾಸಾಹೇಬ್ ಅಂಬೇಡ್ಕರ್ ಜತೆಗೆ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನವರ ಪುತ್ಥಳಿಯನ್ನೂ ಸ್ಥಾಪಿಸಬೇಕು ಎಂದು ಆಗ್ರಹಿಸಿದರು. ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, 200ನೇ ವಿಜಯೋತ್ಸವ ದೇಶದ ಗಮನ ಸೆಳೆಯುವಂತಾಗಬೇಕು. ರಾಣಿ ಚನ್ನಮ್ಮ ಪ್ರಶಸ್ತಿಯನ್ನು ಉತ್ಸವದ ಸಂದರ್ಭದಲ್ಲೆ ಪ್ರದಾನ ಮಾಡುವ ಕೆಲಸ ಆಗಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

ಕಾದರವಳ್ಳಿ ಸೀಮಿಮಠದ ಡಾ. ಫಾಲಾಕ್ಷ ಶಿವಯೋಗೀಶ್ವರರು ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ರಾಣಿ ಚನ್ನಮ್ಮ ವಂಶಜರಾದ ಸುರೇಖಾ ರುದ್ರಗೌಡ ದೇಸಾಯಿ ಅವರನ್ನು ಗಣ್ಯರು ಸತ್ಕರಿಸಿ ಗೌರವಿಸಿದರು‌. ವಿಧಾನಪರಿಷತ್ ಸದಸ್ಯ ಹಣಮಂತ ನಿರಾಣಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಸ್ವಾಗತಿಸಿದರು. ಬಸವರಾಜ ಕುಪ್ಪಸಗೌಡರ ನಿರೂಪಿಸಿದರು.

ಇದನ್ನೂ ಓದಿ: ಕಿತ್ತೂರು ಉತ್ಸವದಲ್ಲಿ ಕುಸ್ತಿ ಪಂದ್ಯಾಟ: ವಿದೇಶದ ಪೈಲ್ವಾನರೂ ಭಾಗಿ, ಪ್ರೇಕ್ಷಕರು ಫುಲ್ ಖುಷ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.