ETV Bharat / state

ಬೆಳಗಾವಿ 2 ಪ್ರತ್ಯೇಕ ಪ್ರಕರಣ: ಓರ್ವನ ಕೊಲೆ, ನೀರಿನಲ್ಲಿ ಮುಳುಗಿ ಬಾಲಕ ಸಾವು

author img

By

Published : May 29, 2023, 9:29 AM IST

Belgaum 2 is a separate case
ಬೆಳಗಾವಿ 2 ಪ್ರತ್ಯೇಕ ಪ್ರಕರಣ

ಬೆಳಗಾವಿ ಜಿಲ್ಲೆಯಲ್ಲಿ ಭಾನುವಾರ 2 ಸಾವು ಪ್ರಕರಣ ದಾಖಲಾಗಿದೆ.

ಬೆಳಗಾವಿ: ಇಲ್ಲಿನ ಹೊಸೂರ ಬಸವನ ಗಲ್ಲಿಯಲ್ಲಿ ಭಾನುವಾರ ಯುವಕನನ್ನು ಹತ್ಯೆ ಮಾಡಲಾಗಿದೆ. ಮಿಲಿಂದ ಚಂದ್ರಕಾಂತ ಜಾಧವ (28) ಕೊಲೆಯಾದ ಯುವಕ. ಈತ ಕೂಲಿ ಕೆಲಸ ಮಾಡುತ್ತಿದ್ದ. ಆಸ್ತಿ ವಿಚಾರವಾಗಿ ಸಂಬಂಧಿಯೋರ್ವ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಅಭಿಜಿತ್ ಜಾಧವ ಆರೋಪಿಯಾಗಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ನೀರಿನಲ್ಲಿ ಮುಳುಗಿ ಬಾಲಕ ಸಾವು: ಈಜಲು ಹೋದ ಬಾಲಕನ ತಲೆಗೆ ಕಲ್ಲು ಬಡಿದು ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ಬೈಲಹೊಂಗಲ ತಾಲೂಕಿನ ಸಿದ್ದನಭಾವಿ ಕೊಳ್ಳದಲ್ಲಿ ಸಂಭವಿಸಿದೆ. ಬೆಳಗಾವಿ ತಾಲೂಕಿನ ಮಾಸ್ತಮರ್ಡಿ ಗ್ರಾಮದ ಬಾಲಕ ಕೃಷ್ಣ ಬಸವರಾಜ ಹಣಬರ (16) ಮೃತ ದುರ್ದೈವಿ. ಭಾನುವಾರ ಮಧ್ಯಾಹ್ನ 3.30 ರ ಸುಮಾರಿಗೆ ಮರಕಟ್ಟಿ ಕ್ರಾಸ್ ಹತ್ತಿರದ ಸಿದ್ದನಭಾವಿ ಕೊಳ್ಳದಲ್ಲಿ ಈಜಲು ಹೋಗಿದ್ದಾನೆ. ಈ ವೇಳೆ ತಲೆಗೆ ಕಲ್ಲು ಬಡಿದು ತೀವ್ರವಾಗಿ ಗಾಯಗೊಂಡಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಬೈಲಹೊಂಗಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಹಾಲಕ್ಷ್ಮೀ ಲೇಔಟ್​ನಲ್ಲಿ ವೃದ್ದೆ ಕೊಲೆ‌‌ ಪ್ರಕರಣ: ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನ ನಾಗಪುರದಲ್ಲಿ ನಡೆದಿದ್ದ ವೃದ್ಧೆ ಕೊಲೆ ಪ್ರಕರಣದ ಸಂಬಂಧ ಆರೋಪಿಗಳ ಪತ್ತೆಗಾಗಿ ಐದು ವಿಶೇಷ ತಂಡಗಳನ್ನು ರಚಿಸಲಾಗಿದೆ. ಕಮಲಮ್ಮ ಎಂಬುವರನ್ನು ಆರೋಪಿಗಳು ಶನಿವಾರ ರಾತ್ರಿ ಕೈ, ಕಾಲು ಕಟ್ಟಿ ಹಾಕಿ ಹತ್ಯೆಗೈದು ಮೈಮೇಲಿದ್ದ ಹಾಗು ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.

ಘಟನಾ ಸ್ಥಳದ ಸಮೀಪದಲ್ಲಿರುವ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ಕೆಲವು ಮಾಹಿತಿ ಸಿಕ್ಕಿದೆ. ಈ ಆಧಾರದಡಿ ವಿಶೇಷ ತಂಡಗಳನ್ನು ರಚಿಸಲಾಗಿದೆ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಕಮಲಮ್ಮ ಅವರಿಗೆ ಮೂವರು ಮಕ್ಕಳು. ಈ ಪೈಕಿ ಮಗ ಗುರುಪ್ರಸಾದ್ ಅವರು ವಿವಾಹವಾಗಿ ಪತ್ನಿ ಮತ್ತು ಮಕ್ಕಳೊಂದಿಗೆ ವೈಟ್‌ ಫೀಲ್ಡ್‌ನಲ್ಲಿ ನೆಲೆಸಿದ್ದಾರೆ. ಇಬ್ಬರು ಪುತ್ರಿಯರು ಮದುವೆಯಾಗಿ ಬೇರೆಡೆ ವಾಸವಾಗಿದ್ದಾರೆ. ಕಮಲಮ್ಮ ಅವರ ಪತಿ 2022 ರ ಅಕ್ಟೋಬರ್‌ನಲ್ಲಿ ಮೃತಪಟ್ಟಿದ್ದರು. ನಂತರ ಒಬ್ಬರೇ ನಾಗಪುರದ ಸ್ವಂತ ಮನೆಯಲ್ಲಿ ವಾಸವಾಗಿದ್ದರು.

ಉಸಿರುಗಟ್ಟಿಸಿ ಕೊಲೆ: ಶನಿವಾರ ಸಂಜೆ 4 ಗಂಟೆ ಸುಮಾರಿಗೆ ಕೊನೆಯ ಬಾರಿಗೆ ಕಮಲಮ್ಮ ಅವರನ್ನು ನೆರೆಹೊರೆಯವರು ನೋಡಿದ್ದರು. ರಾತ್ರಿ 7 ಗಂಟೆಯಾದರೂ ಕಮಲಮ್ಮರ ಮನೆಯಲ್ಲಿ ಲೈಟ್ ಹಾಕದೆ ಕತ್ತಲಿನಲ್ಲಿ ಇರುವುದನ್ನು ಗಮನಿಸಿ ಅನುಮಾನಗೊಂಡ ನೆರೆಹೊರೆಯವರು ಮನೆಗೆ ಹೋಗಿ ನೋಡಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ಹಂತಕರು ಬಲ ಪ್ರಯೋಗಿಸಿ ಮನೆಯೊಳಗೆ ಹೋಗಿಲ್ಲ. ಬದಲಿಗೆ ಕಮಲಮ್ಮ ಅವರಿಂದಲೇ ಬಾಗಿಲು ತೆಗೆಸಿಕೊಂಡು ಒಳ ಹೋಗಿ ಕೃತ್ಯ ಎಸಗಿರುವ ಶಂಕೆಯಿದೆ. ಮನೆಯ ಸುತ್ತಮುತ್ತಲಿನ ಸಿ.ಸಿ ಕ್ಯಾಮರಾಗಳಲ್ಲಿ ಸೆರೆಯಾಗಿರುವ ದೃಶ್ಯಾವಳಿ ಆಧರಿಸಿ ತನಿಖೆ ಮುಂದುವರಿಸಿದ್ದೇವೆ. ಮೃತರ ಮೊಬೈಲ್ ಕರೆಗಳ ಬಗ್ಗೆಯೂ ಮಾಹಿತಿ ಕಲೆ ಹಾಕಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಕರಾಳ ಭಾನುವಾರ! ಪ್ರತ್ಯೇಕ ಘಟನೆಗಳಲ್ಲಿ ರಾಜ್ಯದಲ್ಲಿ 17 ಜನ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.