ETV Bharat / state

ಗೋಕಾಕ್​ನಲ್ಲಿ ಪಂಚಮಸಾಲಿ ಸಮಾವೇಶ ಮಾಡಲು ಎಂಟೆದೆ ಬೇಕು: 2ಎ ಮೀಸಲಾತಿಗೆ ಕೂಡಲಸಂಗಮ ಶ್ರೀ ಒತ್ತಾಯ

author img

By

Published : Nov 13, 2022, 8:08 PM IST

Jayamrityunjaya Swamiji
ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಸಮಾವೇಶ

ಗೋಕಾಕ್‌ನಲ್ಲಿ ಪಂಚಮಸಾಲಿ ಸಮಾವೇಶ ಮಾಡಲು ಎಂಟೆದೆ ಬೇಕು. ಡಿಸೆಂಬರ್ 12ರಂದು 25 ಲಕ್ಷ ಜನರಿಂದ ಬೆಂಗಳೂರಿನ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಕೂಡಲಸಂಗಮ ಸಂಗಮ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಬೆಳಗಾವಿ: ಜಿಲ್ಲೆಯ ಗೋಕಾಕ್​ ನಗರದ ನ್ಯೂ ಇಂಗ್ಲಿಷ್ ಶಾಲಾ ಆವರಣದಲ್ಲಿ ಅಖಿಲ ಭಾರತ ಪಂಚಮಸಾಲಿ ಮಹಾಸಭಾದ ಆಶ್ರಯದಲ್ಲಿ ಮತ್ತು ಕೂಡಲಸಂಗಮ ಸಂಗಮ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಸಮಾವೇಶ ನಡೆಯಿತು. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ನಡೆಯುತ್ತಿರುವ ಸಮಾವೇಶವನ್ನು ರೈತಗೀತೆ ಮೂಲಕ ಚಾಲನೆ ನೀಡಲಾಯಿತು.

ಬಳಿಕ ಕೂಡಲಸಂಗಮ ಸಂಗಮ ಪೀಠದ ಜಗದ್ಗುರು ಬಸವ ಜಯಮೃತ್ಯುಂಜ ಸ್ವಾಮೀಜಿ ಮಾತನಾಡಿ, ನಮ್ಮ ಪಂಚಮಸಾಲಿ ಸಮುದಾಯದ ಮಕ್ಕಳಿಗೆ 2ಎ ಮೀಸಲಾತಿ, ಉಳಿದ ಎಲ್ಲಾ ಸಮಾಜದ ಮಕ್ಕಳಿಗೆ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ಸಿಗಬೇಕೆಂದು ಹೋರಾಟ ಮಾಡಲಾಗಿದೆ. ಈಗಾಗಲೇ ಸಾವಿರಾರು ಕಿಮೀ ಪಾದಯಾತ್ರೆ ಮಾಡಿ ಹಕ್ಕೊತ್ತಾಯ ಮಾಡಿದರೂ ಸರ್ಕಾರ ಸ್ಪಂದಿಸಲಿಲ್ಲ ಎಂದು ಆರೋಪಿಸಿದರು.

ಮೀಸಲಾತಿ ನೀಡೋದಾಗಿ ಹೇಳಿದ್ದ ಬಿಎಸ್​ವೈ: ಹತ್ತು ಲಕ್ಷ ಜನ ಸೇರಿಸಿ ಬೆಂಗಳೂರಲ್ಲಿ ಸಮಾವೇಶ ಮಾಡಿದರೂ ಸರ್ಕಾರಕ್ಕೆ ನಮ್ಮ ಕೂಗು ಕೇಳಲಿಲ್ಲ. ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಧಾನಸೌಧದೊಳಗೆ ಗುಡುಗಿದರು, ನಾವು ಹೊರಗಡೆ ಹೋರಾಟ ಮಾಡಿದೆವು. ಅಂದಿನ ಸಿಎಂ ಬಿಎಸ್‌ವೈ ಆರು ತಿಂಗಳಲ್ಲಿ ಮೀಸಲಾತಿ ಕೊಡೋದಾಗಿ ಹೇಳಿದ್ದರು. ಬಳಿಕ ಅವರೇ ಸಿಎಂ ಸ್ಥಾನದಿಂದ ಹೊರಟು ಹೋದರು ಎಂದರು.

ವಿರಾಟ ಶಕ್ತಿ ಪ್ರದರ್ಶನ: ಬಳಿಕ ಬಂದ ಸಿಎಂ ಬಸವರಾಜ ಬೊಮ್ಮಾಯಿ 3 ತಿಂಗಳ ಕಾಲಾವಕಾಶ ಕೇಳಿ ಮಾತು ತಪ್ಪಿದರು. ಇದಾದ ಬಳಿಕ ಬಸವರಾಜ ಬೊಮ್ಮಾಯಿ ನಿವಾಸದ ಎದುರು ಹೋರಾಟ ಮಾಡಿದ್ದೇವೆ. ಸರ್ಕಾರದ ವಿಳಂಬ ನೀತಿಯಿಂದ ನಮಗೆಲ್ಲ ನೋವಾಗಿದೆ. ಬೆಂಗಳೂರಲ್ಲಿ 25 ಲಕ್ಷ ಜನರನ್ನು ಸೇರಿಸಿ ಪಂಚಮಸಾಲಿ ವಿರಾಟ ಶಕ್ತಿ ಪ್ರದರ್ಶನ ಮಾಡಲಾಗುತ್ತದೆ. ಡಿಸೆಂಬರ್ 12ರಂದು 25 ಲಕ್ಷ ಜನರಿಂದ ಬೆಂಗಳೂರಿನ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ಈ ಹೋರಾಟಕ್ಕೆ ಸೆಮಿಫೈನಲ್ ಅಂದ್ರೆ ಅದು ಗೋಕಾಕ್​ ಪಂಚಮಸಾಲಿ ಸಮಾವೇಶವಾಗಿದೆ.

ಗೋಕಾಕ್​ನಲ್ಲಿ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಸಮಾವೇಶ

ಇದನ್ನೂ ಓದಿ: ಹುಲಿ ಯಾವತ್ತಿದ್ದರೂ ಹುಲಿಯೇ ಹೊರತು ಇಲಿಯಾಗಲು ಸಾಧ್ಯವಿಲ್ಲ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಬೇರೆ ಕಡೆ ಪಂಚಮಸಾಲಿ ಸಮಾವೇಶ ಮಾಡೋದು ಸುಲಭವಾಗಿದೆ. ಗೋಕಾಕ್‌ನಲ್ಲಿ ಪಂಚಮಸಾಲಿ ಸಮಾವೇಶ ಮಾಡಲು ಎಂಟೆದೆ ಬೇಕು. ಈ ಮೊದಲು ಗೋಕಾಕ್​ ರಾಜಕಾರಣಕ್ಕೆ ಮಾತ್ರ ಬ್ರೇಕಿಂಗ್ ನ್ಯೂಸ್ ಆಗ್ತಿತ್ತು. ಆದ್ರೆ ಪ್ರಥಮ ಬಾರಿಗೆ ಪಂಚಮಸಾಲಿ ಶಕ್ತಿ ಪ್ರದರ್ಶನಕ್ಕೆ ಬ್ರೇಕಿಂಗ್ ನ್ಯೂಸ್ ಆಗುತ್ತಿದೆ. ಪಂಚಮಸಾಲಿ ಅಂದ್ರೆ ಮುಗ್ಧರು ಅಂತಾ ತಿಳಿದುಕೊಂಡಿದ್ದರು. ನಾವು ಈವರೆಗೆ ಗವಿಯಲ್ಲಿ ಮಲಗಿದ ಸಿಂಹಗಳಂತೆ ಇದ್ವಿ. ಆದರೆ ಪಾದಯಾತ್ರೆ ಬಳಿಕ ಗವಿಯಲ್ಲಿನ ಸಿಂಹಗಳು ಘರ್ಜಿಸುತ್ತಿವೆ ಎಂದು ಗುಡುಗಿದರು.

ಮೀಸಲಾತಿ ಕೊಡದಿದ್ದಕ್ಕೆ ಅಸಮಾಧಾನ: ಯಡಿಯೂರಪ್ಪ ಸಿಎಂ ಆಗಿದ್ದಾಗಲೇ ಪಂಚಮಸಾಲಿ ಮೀಸಲಾತಿ ಪಡೆಯಬೇಕೆಂದಿತ್ತು. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡ್ತೇವೆ ಅಂತಾ ಯಡಿಯೂರಪ್ಪ ಹೇಳಿದ್ರು. ಯಡಿಯೂರಪ್ಪ ನಮಗೆ ಮೀಸಲಾತಿ ಕೊಡದಿದ್ದಕ್ಕೆ ಅಸಮಾಧಾನವಿದೆ. ಉಳಿದ ಸಮುದಾಯಕ್ಕೆ ಕೊಟ್ಟು ನಮಗೆ ಮೀಸಲಾತಿ ಕೊಡಲಿಲ್ಲ, ಅದರಿಂದ ನಮಗೆ ನೋವಾಗಿದೆ. ಅದೇ ರೀತಿ ಸಿಎಂ ಬಸವರಾಜ ಬೊಮ್ಮಾಯಿ ನಮಗೆ ಮೀಸಲಾತಿ ಕೊಡ್ತೀವಿ ಅಂದುಕೊಂಡಿದ್ದೇವೆ. ಬೊಮ್ಮಾಯಿ ಶಿಗ್ಗಾಂವನಲ್ಲಿ ಮೂರು ಬಾರಿ ಶಾಸಕರಾಗಲು ಪಂಚಮಸಾಲಿ ಸಮುದಾಯದವರು ಕಾರಣರಾಗಿದ್ದಾರೆ. ನಮ್ಮ ಸಮಾಜದ ಋಣ ನಿಮ್ಮ ಮೇಲೆ ಇದ್ದಿದ್ದು ಸತ್ಯವಾಗಿದ್ರೆ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.

ಡಿ.12ರಂದು ಬೆಂಗಳೂರಿಗೆ ಬರಲು ತಯಾರಿ: ನಾವೆಲ್ಲಾ ಕೂಡಿ ಕಟ್ಟಿದ ಮೀಸಲಾತಿ ರಥವನ್ನು ಹಿಂದಕ್ಕೆ ತಳ್ಳುವ ಪ್ರಯತ್ನವನ್ನು ನಮ್ಮ ಸಮಾಜದ ನಾಯಕರು ಮಾಡಬೇಡಿ. ಇದು ಕೋರ್ಟ್‌ನಲ್ಲಿ ಇರುವ ವಿಚಾರವಾಗಿದೆ‌. ನಾವು 3ಬಿಯಲ್ಲಿದ್ದು, 2ಎನಲ್ಲಿ ಸೇರಿಸಿ ಎಂಬುದು ನಮ್ಮ ಹಕ್ಕೊತ್ತಾಯವಾಗಿದೆ. ಎಲ್ಲರೂ ಡಿಸೆಂಬರ್ 12ರಂದು ಬೆಂಗಳೂರಿಗೆ ಬರಲು ತಯಾರಿ ಮಾಡಿಕೊಳ್ಳಬೇಕು. ಅಷ್ಟರಲ್ಲೇ ಮೀಸಲಾತಿ ಕೊಟ್ರೆ ಗೋಕಾಕ್​ ಕರದಂಟು ತಿನಿಸಿ ಕಲ್ಲು ಸಕ್ಕರೆ ತುಲಾಭಾರ ಮಾಡಿ ಸನ್ಮಾನ ಮಾಡುತ್ತೇವೆ. ಮೀಸಲಾತಿ ನೀಡದಿದ್ರೆ ನಮ್ಮ ನಿರ್ಧಾರವನ್ನು ಡಿ.12ರಂದು ಪ್ರಕಟ ಮಾಡುತ್ತೇವೆ ಎಂದು ರವಾನಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.