ETV Bharat / state

ಕುಂದಾನಗರಿಯಲ್ಲಿ ಬೆಳಕಿನ ಹಬ್ಬದ ಸಂಭ್ರಮ: ಹಸಿರು ಪಟಾಕಿ ಬಳಸುವಂತೆ ಡಿಸಿ ಖಡಕ್ ಎಚ್ಚರಿಕೆ

author img

By ETV Bharat Karnataka Team

Published : Nov 11, 2023, 1:57 PM IST

Updated : Nov 11, 2023, 2:36 PM IST

ಹಸಿರು ಪಟಾಕಿ ಬಳಸುವಂತೆ ಡಿಸಿ ಖಡಕ್ ಎಚ್ಚರಿಕೆ
ಹಸಿರು ಪಟಾಕಿ ಬಳಸುವಂತೆ ಡಿಸಿ ಖಡಕ್ ಎಚ್ಚರಿಕೆ

ಶಬ್ದ ಹಾಗೂ ವಾಯು ಮಾಲಿನ್ಯವನ್ನು ನಿಯಂತ್ರಣದಲ್ಲಿಡಲು ಹಸಿರು ಪಟಾಕಿಯ ಹೊರತು ಬೇರೆ ಪಟಾಕಿ ಬಳಕೆ ಮಾಡದಂತೆ ಬೆಳಗಾವಿ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ.

ಹಸಿರು ಪಟಾಕಿ ಬಳಸುವಂತೆ ಡಿಸಿ ಮನವಿ

ಬೆಳಗಾವಿ: ಬೆಳಕಿನ ಹಬ್ಬ ದೀಪಾವಳಿಯನ್ನು ರಾಜ್ಯಾಧ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ದೀಪಾವಳಿ ವಿಶೇಷ ಎಂದರೆ ದೀಪ ಬೆಳಗಿಸುವುದು, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ಪಡುವ ಹಬ್ಬ. ಆದರೆ ಈ ಸಡಗರ ಮಧ್ಯೆ ಪಟಾಕಿ ಸಿಡಿಸಲು ಹೋಗಿ ಅದೆಷ್ಟೋ ಅವಘಡಗಳು ಸಂಭವಿಸಿ ಯುವಕರು, ಮಕ್ಕಳು ಕಣ್ಣು ಕಳೆದುಕೊಂಡಿದ್ದಾರೆ. ಇಂತಹ ಘಟನೆಗಳು ಪ್ರತಿವರ್ಷವೂ ನಡೆಯುತ್ತಲೇ ಇವೆ. ಜತೆಗೆ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಇದನ್ನು ಮನಗಂಡ ಬೆಳಗಾವಿ ಜಿಲ್ಲಾಡಳಿತ ಪರಿಸರಕ್ಕೆ ಮಾರಕವಾಗಿರುವ ಪಟಾಕಿಗಳನ್ನು ಬ್ಯಾನ್ ಮಾಡಿ ಹಸಿರು ಪಟಾಕಿಗಳನ್ನೇ ಬಳಸುವಂತೆ ಆದೇಶ ಹೊರಡಿಸಿದೆ.

ವಿವಿಧ ರೀತಿಯ ಪಟಾಕಿಗಳ ಸಿಡಿತದಿಂದ ಉಂಟಾಗುವ ಶಬ್ದ ಹಾಗೂ ವಾಯು ಮಾಲಿನ್ಯವನ್ನು ನಿಯಂತ್ರಣದಲ್ಲಿಡಲು, ಸಾರ್ವಜನಿಕ ಆಸ್ತಿ ಹಾಗೂ ಆರೋಗ್ಯ ಸಂರಕ್ಷಣೆಯ ಹಿತದೃಷ್ಠಿಯಿಂದ ಭಾರತ ಸರ್ಕಾರದ ಪರಿಸರ (ಸಂರಕ್ಷಣಾ) ನಿಯಮಾವಳಿ 1986 ತಿದ್ದುಪಡಿ 1999 ಮತ್ತು 2000 ಅಡಿಯಲ್ಲಿ ನಿಗದಿಪಡಿಸಿರುವ ಮಾನಕಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ 12-11-2020 ರಲ್ಲಿ ಕರ್ನಾಟಕ ಸರಕಾರವು ಸುತ್ತೋಲೆ ಹೊರಡಿಸಿರುತ್ತದೆ. ಅದರಂತೆ ಹಸಿರು ಪಟಾಕಿಗಳನ್ನು ಬಿಟ್ಟು ಉಳಿದ ಯಾವುದೆ ಇತರ ಪಟಾಕಿಗಳ ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್​ ಪಾಟೀಲ ಆದೇಶ ಹೊರಡಿಸಿದ್ದಾರೆ.

ಹಸಿರು ಪಟಾಕಿ ಹೇಗಿರುತ್ತವೆ..? ಹಸಿರು ಪಟಾಕಿಗಳ ಮೇಲೆ ಹಾಗೂ ಅವುಗಳ ಪ್ಯಾಕೇಟ್ ಮೇಲೆ ಹಸಿರು ಪಟಾಕಿಯ ಚಿಹ್ನೆ ಇರುತ್ತದೆ ಹಾಗೂ ಕ್ಯೂಆರ್​ಕೋಡ್​ ಸಹ ಇರುತ್ತದೆ. ಸದರಿ ಚಿಹ್ನೆ ಇಲ್ಲದ ಯಾವುದೇ ಪಟಾಕಿ ಹಸಿರು ಪಟಾಕಿ ಎನಿಸುವುದಿಲ್ಲ. ಅದೇ ರೀತಿ ಪಟಾಕಿಗಳು ಸಿಡಿಯುವ ಜಾಗದಿಂದ 4 ಮೀಟರ ದೂರದಲ್ಲಿ 125 ಡೆಸಿಬಲ್‌ಗಳಿಗಿಂತ (AI) ಅಥವಾ 145 ಡೆಸಿಬಲ್ (C) PK ಗಿಂತ ಅಧಿಕ ಶಬ್ದ ಉಂಟು ಮಾಡುವ ಪಟಾಕಿಗಳ ತಯಾರಿಕೆ ಮಾರಾಟ ಹಾಗೂ ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ.

ಹಸಿರು ಪಟಾಕಿ ಬಿಟ್ಟು ಬೇರೆ ಯಾವುದೇ ಪಟಾಕಿಗಳನ್ನು ಮಾರಾಟ ಮಾಡಿದರೆ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಸಂಜೆ8 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಪಟಾಕಿಗಳನ್ನು ಸಿಡಿಸಲು ಅವಕಾಶ ನೀಡಿದೆ. ಉಳಿದ ಸಮಯದಲ್ಲಿ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ದಿನದ ಯಾವುದೇ ಸಮಯದಲ್ಲಿ ನಿಶ್ಯಬ್ದ ವಲಯಗಳೆಂದು ಘೋಷಿಸಲ್ಪಟ್ಟ ಸ್ಥಳಗಳಾದ ಆಸ್ಪತ್ರೆ, ಶಾಲೆ, ಪ್ರಾರ್ಥನಾ ಮಂದಿರ ಸೇರಿ ಇನ್ನಿತರ ಕಡೆಗಳಲ್ಲಿ ಸುತ್ತಮುತ್ತ ಯಾವುದೇ ರೀತಿಯ ಶಬ್ದ ಉಂಟುಮಾಡುವ ಪಟಾಕಿ ಹಾಗೂ ಸಿಡಿಮದ್ದುಗಳ ಬಳಕೆಯನ್ನೂ ನಿಷೇಧಿಸಲಾಗಿದೆ. ಈ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಜಿಲ್ಲೆಯ ವಿವಿಧೆಡೆ ಪಟಾಕಿ ಸಂಗ್ರಹಣಾ ಗೋದಾಮುಗಳಿಗೆ ಪೊಲೀಸ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಅಂದಾಜು 5 ಟನ್ ಪಟಾಕಿ ಸೀಜ್ ಮಾಡಿದ್ದಾರೆ. ಹಾಗಾಗಿ, ಹಸಿರು ಪಟಾಕಿ ಬಳಸಿದರೆ ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯವನ್ನು ತಡೆಗಟ್ಟುವ ಜೊತೆಗೆ ಅವಘಡಗಳನ್ನು ತಪ್ಪಿಸಬಹುದು‌‌ ಎಂದು ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.

ವ್ಯಾಪಾರಿ ವಿಜಯ್ ಮಾತನಾಡಿ, ಮದ್ದಿನ ಕುಡಿಕಿ, ಚಕ್ರ, ಸುರಸುರಿ, ಬಟರ್ ಫ್ಲೈ, ಫ್ಯಾನ್ಸಿ ಐಟ್ಸಂ ಸೇರಿ ನಾನಾ ತರಹದ ಹಸಿರು ಪಟಾಕಿಗಳನ್ನೆ ನಾವು ಮಾರಾಟ ಮಾಡುತ್ತಿದ್ದೇವೆ. ವ್ಯಾಪಾರ ಸ್ವಲ್ಪ ಡಲ್ ಇದ್ದರೂ ಕೂಡ, ಪರಿಸರಕ್ಕೆ ಹಾನಿಯಾಗದ ಹಸಿರು ಪಟಾಕಿಗಳನ್ನೆ ಜನ ಖರೀದಿಸುತ್ತಿದ್ದಾರೆ ಎಂದರು.

ಆಕಾಶ ಬುಟ್ಟಿ, ಮಣ್ಣಿನ ಪಣತಿಗಳ ಭರ್ಜರಿ ವ್ಯಾಪಾರಿ: ಬೆಳಗಾವಿಯ ಮಾರುಕಟ್ಟೆಯಲ್ಲಿ ತರಹೇವಾರಿ ಆಕಾಶ ಬುಟ್ಟಿಗಳು, ದೀಪ ಬೆಳಗಿಸಲು ಮಣ್ಣಿನ ಪಣತೆಗಳು, ಲೈಟ್ ಸರಗಳು, ಹೂವು, ಹಣ್ಣು, ರಂಗೋಲಿ, ಅಲಂಕಾರಿಕ ವಸ್ತುಗಳು ಹಾಗೂ ಪೂಜಾ ಸಾಮಗ್ರಿಗಳ ವ್ಯಾಪಾರ ಜೋರಾಗಿ ನಡೆಯುತ್ತಿದೆ.

ಇದನ್ನೂ ಓದಿ: ಸಾಂಸ್ಕೃತಿಕ ನಗರಿಯಲ್ಲಿ ದೀಪಾವಳಿ ಸಂಭ್ರಮ: ಪಟಾಕಿ ಖರೀದಿ ಜೋರು

Last Updated :Nov 11, 2023, 2:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.