ETV Bharat / state

'ನಮ್ಮ ಕೈ ಹಿಡಿಯೋದು ಸಿಂದಗಿ ಮಾತ್ರ': ಕಾಂಗ್ರೆಸ್ಸಿಗರ ಬಲವಾದ ನಂಬಿಕೆಗೆ ಕಾರಣವೇನು?

author img

By

Published : Oct 25, 2021, 6:42 AM IST

Sindagi byelection
ಸಿಂದಗಿ ಬೈ ಎಲೆಕ್ಷನ್

ಅಕ್ಟೋಬರ್ 30 ರಂದು ನಡೆಯಲಿರುವ ಹಾನಗಲ್ ಹಾಗೂ ಸಿಂದಗಿ ಬೈ ಎಲೆಕ್ಷನ್​ನಲ್ಲಿ ಕಾಂಗ್ರೆಸ್​ ಪಕ್ಷ ಸಿಂದಗಿಯಲ್ಲಿ ಮಾತ್ರ ಗೆಲ್ಲುವ ನಿರೀಕ್ಷೆ ಹೊಂದಿದೆ.

ಬೆಂಗಳೂರು: ಸಿಂದಗಿ ಹಾಗೂ ಹಾನಗಲ್​ ಉಪ ಚುನಾವಣೆಯಲ್ಲಿ ಕಾಂಗ್ರೆಸ್​​ ಪಕ್ಷ ಸಿಂದಗಿಯಲ್ಲಿ ಮಾತ್ರ ಗೆಲುವಿನ ನಿರೀಕ್ಷೆ ಹೊಂದಿದೆ. ಹಾನಗಲ್​ ತಮ್ಮ ಪಾಲಿಗೆ ಒಲಿಯುವುದು ಕಷ್ಟ ಎನ್ನುವ ತೀರ್ಮಾನಕ್ಕೆ ನಾಯಕರು ಬಂದಿದ್ದಾರೆ ಎನ್ನಲಾಗುತ್ತಿದೆ.

ಒಂದೆಡೆ ಜೆಡಿಎಸ್ ಪಕ್ಷ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಇನ್ನೊಂದೆಡೆ, ಬಿಜೆಪಿ ಅಧಿಕಾರ ಬಲ ಪ್ರದರ್ಶಿಸುತ್ತಿದೆ. ಈ ನಡುವೆ ಕಾಂಗ್ರೆಸ್​​ಗೆ ಹಾನಗಲ್​ನಲ್ಲಿ ಕೊಂಚ ಅಸಮಾಧಾನವೂ ತೊಡಕಾಗಿದೆ ಎನ್ನಲಾಗುತ್ತಿದ್ದು, ಸಿಂದಗಿಯಲ್ಲಿ ಮಾತ್ರ ಹೆಚ್ಚಿನ ಒಲವು ವ್ಯಕ್ತವಾಗುತ್ತಿದೆ. ತಂದೆ ಎಂ.ಸಿ. ಮನಗೂಳಿ ಹೆಸರು ಮುಂದಿಟ್ಟುಕೊಂಡು ಅವರ ಪುತ್ರ ಅಶೋಕ್ ಮನಗೂಳಿ ಕಳೆದ ಕೆಲ ವರ್ಷಗಳಿಂದ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಾ ಬಂದಿದ್ದಾರೆ. ಇದೀಗ ಎಲ್ಲಾ ಕಡೆ ಇವರಿಗೆ ಅನುಕೂಲಕರವಾದ ವಾತಾವರಣ ಗೋಚರಿಸುತ್ತಿದ್ದು, ಅವರೇ ಗೆದ್ದರೂ ಗೆಲ್ಲಬಹುದು ಎನ್ನುವ ಮಾತು ಕೇಳಿಬರುತ್ತಿದೆ.

ಜೆಡಿಎಸ್ ಸದಸ್ಯರಾಗಿದ್ದ ಮಾಜಿ ಸಚಿವ ಎಂ.ಸಿ.ಮನಗೂಳಿ ನಿಧನದಿಂದ ತೆರವಾಗಿರುವ ಸಿಂದಗಿ ಕ್ಷೇತ್ರಕ್ಕೆ ಕಾಂಗ್ರೆಸ್​​ನಿಂದ ಅವರ ಪುತ್ರ ಅಶೋಕ್ ಮನಗೂಳಿ ಕಣಕ್ಕಿಳಿದಿದ್ದಾರೆ. ತಿಂಗಳುಗಳ ಹಿಂದೆಯೇ ಇವರೇ ಅಭ್ಯರ್ಥಿ ಎಂದು ಕಾಂಗ್ರೆಸ್ ಘೋಷಿಸಿತ್ತು. ಇದರಿಂದಾಗಿ ಕ್ಷೇತ್ರದಲ್ಲಿ ಪೂರಕ ವಾತಾವರಣ ಕಲ್ಪಿಸಿಕೊಳ್ಳಲು ಅವಕಾಶವಿತ್ತು.

1957 ರಿಂದ ಇದುವರೆಗೂ ನಡೆದ ಚುನಾವಣೆಗಳ ಪೈಕಿ ಸಿಂದಗಿ ಕ್ಷೇತ್ರವನ್ನು ಗಮನಿಸಿದರೆ ಇಲ್ಲಿ ಅತಿ ಹೆಚ್ಚು ಅಂದರೆ 8 ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿದೆ. 1957, 1962, 1967, 1972, 1978, 1985, 1989 ಮತ್ತು 1999 ರಲ್ಲಿ ಗೆಲುವು ದಾಖಲಿಸಿದೆ.

ಇದನ್ನೂ ಓದಿ: 'ಇದು ಉಪಚುನಾವಣೆ ಹೆಸರಿನಲ್ಲಿ ಜನರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ'

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಾಲಿ ಮಲ್ಲಣ್ಣ ನಿಂಗಪ್ಪ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ 3 ನೇ ಸ್ಥಾನ ಪಡೆದಿದ್ದರು. ಇವರು ಶೇ.18 ರಷ್ಟು ಅಂದರೆ 22,818 ಮತ ಪಡೆದಿದ್ದರು. 2013ರಲ್ಲಿ ಸುನಗಾರ್ ಶರಣಪ್ಪ ತಿಪ್ಪಣ್ಣ ಕಾಂಗ್ರೆಸ್ ಅಭ್ಯರ್ಥಿಯಾಗಿ ಶೇ.21.5 ರಷ್ಟು ಅಂದರೆ 27,595 ಮತ ಗಳಿಸಿದ್ದರು. 2008 ರಲ್ಲಿ ಶರಣಪ್ಪ ಅವರೇ ಅಭ್ಯರ್ಥಿಯಾಗಿ ಶೇ. 19.36 ರಷ್ಟು ಅಂದರೆ 20,099 ಮತ ಗಳಿಸಿದ್ದರು.

ಹಿಂದೆಲ್ಲಾ ಉತ್ತಮ ಮತಬ್ಯಾಂಕ್ ಹೊಂದಿದ್ದ ಕಾಂಗ್ರೆಸ್​ಗೆ ಇತ್ತೀಚಿನ ವರ್ಷಗಳಲ್ಲಿ ಮತಗಳ ಪ್ರಮಾಣ ಕಡಿಮೆಯಾಗಿದೆ. ಆದರೆ ಶೇ.20ರಷ್ಟು ಮತಗಳಿಗೆ ತೊಂದರೆ ಇಲ್ಲ. ಮನಗೂಳಿ ಪುತ್ರನ ಆಗಮನ ಹಿನ್ನೆಲೆಯಲ್ಲಿ ಉಳಿದ ಶೇ.20ರಷ್ಟು ಮತಗಳು ಕಾಂಗ್ರೆಸ್​ನತ್ತ ಬರುವ ನಿರೀಕ್ಷೆಯಿದೆ. ಹಾನಗಲ್ ಕ್ಷೇತ್ರವನ್ನು ಬಿಜೆಪಿ ಭದ್ರಕೋಟೆಯಾಗಿ ಗುರುತಿಸಿಕೊಂಡಿದೆ. ಕಾಂಗ್ರೆಸ್ ನಾಯಕರ ಅಸಮಾಧಾನವೂ ಅಲ್ಲಿ ಕೆಲಸ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಅಲ್ಲಿ ಗೆಲ್ಲುವ ನಿರೀಕ್ಷೆ ಗೌಣವಾಗಿಸಿಕೊಂಡಿರುವ ಕಾಂಗ್ರೆಸ್ ನಾಯಕರು ಸಿಂದಗಿ ಜನ ತಮ್ಮ ಕೈ ಹಿಡಿಯಲಿದ್ದಾರೆ ಎಂಬ ಬಲವಾದ ವಿಶ್ವಾಸದಲ್ಲಿದ್ದಾರೆ.

ಇದನ್ನೂ ಓದಿ: ಉದ್ಯೋಗ ಕಳೆದುಕೊಂಡವರಿಗೆ, ನೊಂದ ಜನರಿಗೆ ಸಹಾಯ ಮಾಡಿ ಸಂಭ್ರಮಿಸಿ: ಬಿಜೆಪಿಗೆ ಡಿಕೆಶಿ ಟಾಂಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.