ETV Bharat / state

ವಿಧಾನಸಭಾ ಚುನಾವಣೆ: ಬೆಂಗಳೂರಲ್ಲಿ ದಾಖಲೆಯಿಲ್ಲದ ₹ 18 ಲಕ್ಷ ರೂ ಜಪ್ತಿ

author img

By

Published : Apr 14, 2023, 9:42 AM IST

Updated : Apr 14, 2023, 10:23 AM IST

money seized in Bengaluru
ಜಪ್ತಿ ಮಾಡಲಾದ ಹಣ

ಮುಂದುವರೆದ ಚುನಾವಣಾ ತಪಾಸಣೆ- ಬಸವನಗುಡಿ ಪೊಲೀಸರಿಂದ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 18 ಲಕ್ಷ ರೂ.ಜಪ್ತಿ.

ಬೆಂಗಳೂರು: ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಚಾಣದ ಸದ್ದು‌ ಜೋರಾಗಿದೆ. ತಡರಾತ್ರಿ ಬಸವನಗುಡಿ ಪೊಲೀಸರು ದಾಖಲೆ ಇಲ್ಲದೆ ಸಾಗಿಸುತ್ತಿದ್ದ 18 ಲಕ್ಷ ಹಣವನ್ನ ಜಪ್ತಿ ಮಾಡಿದ್ದಾರೆ‌. ರಿಷಭ್ ಎಂಬಾತನಿಂದ ಹಣ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ತಡರಾತ್ರಿ 11 ಗಂಟೆ ಸುಮಾರಿಗೆ ಪಟಾಲಮ್ಮ‌ ಚೆಕ್ ಪಾಯಿಂಟ್ ಬಳಿ ಹ್ಯುಂಡೈ ಕ್ರೆಟಾ ಕಾರಿನಲ್ಲಿ ಹೋಗುತ್ತಿದ್ದ ರಿಷಭ್ ಎಂಬಾತನನ್ನ ಪೊಲೀಸರು ತಡೆದು ಪರಿಶೀಲನೆ ನಡೆಸಿದ್ದರು. ಈ ವೇಳೆ 2 ಸಾವಿರ, 500 ಹಾಗೂ‌ 200 ರೂ. ಮುಖಬೆಲೆಯ ಒಟ್ಟು 18 ಲಕ್ಷ ರೂ‌ ನಗದು ಪತ್ತೆಯಾಗಿದೆ. ಸದ್ಯ ಹಣವನ್ನ ವಶಕ್ಕೆ ಪಡೆಯಲಾಗಿದ್ದು, ರಿಷಭ್​ನನ್ನ ವಿಚಾರಣೆ ನಡೆಸಲಾಗುತ್ತಿದೆ.

ಕೆಟ್ಟು ನಿಂತ ಆಟೋದಲ್ಲಿ 1 ಕೋಟಿ‌ ನಗದು ಪತ್ತೆ: ನಿನ್ನೆ(ಗುರುವಾರ) ಎಸ್​​ಜೆ ಪಾರ್ಕ್ ಪೊಲೀಸರು ಪರಿಶೀಲನೆ ನಡೆಸುವಾಗ ಕೆಟ್ಟು ನಿಂತ ಆಟೋದಲ್ಲಿ ದಾಖಲೆ ಇಲ್ಲದ ಒಂದು ಕೋಟಿ‌ ರೂಪಾಯಿ ನಗದು ಪತ್ತೆಯಾಗಿತ್ತು. 500 ರೂಪಾಯಿ ಮುಖಬೆಲೆಯ 1 ಕೋಟಿ‌ ರೂಪಾಯಿ ನಗದು ದೊರೆತಿದ್ದು, ಆಟೋದಲ್ಲಿ ಹಣ ಸಾಗಿಸುತ್ತಿದ್ದ ಪ್ರವೀಣ್ ಹಾಗೂ ಸುರೇಶ್ ಎಂಬುವರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇಬ್ಬರು ವ್ಯಕ್ತಿಗಳು ಆಟೋದಲ್ಲಿ ಎಸ್​​ಜೆ ಪಾರ್ಕ್​ನ ಕಾಳಿಂಗರಾವ್ ಬಸ್ ನಿಲ್ದಾಣದ ಬಳಿ ಬರುವಾಗ ಆಟೋ ಕೆಟ್ಟು ನಿಂತಿದೆ. ಅದೇ ಸ್ಥಳದಲ್ಲಿ ಹಾಕಲಾಗಿದ್ದ ಚೆಕ್‌ ಪೋಸ್ಟ್​​​ನಲ್ಲಿದ್ದ ಪೊಲೀಸ್ ಸಿಬ್ಬಂದಿ ಅನುಮಾನಗೊಂಡು ಪರಿಶೀಲಿಸಿದಾಗ ಕೋಟ್ಯಂತರ ರೂಪಾಯಿ ಹಣ ಸಿಕ್ಕಿದೆ. ಯಾವುದೇ ದಾಖಲಾತಿಯಿಲ್ಲದೇ ಹಣ ಸಾಗಿಸುವುದನ್ನು ಗಮನಿಸಿ ಹಣ ಹಾಗೂ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಐಟಿ ಇಲಾಖೆಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. ಈ ಹಣ ರಾಜೇಶ್ ಎಂಟರ್​ಪ್ರೈಸಸ್​ಗೆ ಸೇರಿದ್ದು ಜಯನಗರದಿಂದ ವಿಜಯನಗರಕ್ಕೆ ಹಣ ಕೊಂಡ್ಯೊಯುತ್ತಿರುವುದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ.‌ ಇದರ‌ ಸತ್ಯಾಸತ್ಯತೆ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಚೆಕ್‌ಪೋಸ್ಟ್‌ ಬಳಿಯೇ ಕೆಟ್ಟು ನಿಂತ ಆಟೋದಲ್ಲಿತ್ತು 1 ಕೋಟಿ‌ ರೂಪಾಯಿ: ಬೆಂಗಳೂರಿನಲ್ಲಿ ಇಬ್ಬರು ವಶಕ್ಕೆ

ಕಂತೆ ಕಂತೆ ನೋಟು: ಚುನಾವಣೆ ನೀತಿಸಂಹಿತೆ ಜಾರಿಯಾದ ಬೆನ್ನಲ್ಲೇ ರಾಜ್ಯಾದ್ಯಂತ ಪ್ರಮುಖ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಅದರಂತೆ ಕರ್ನಾಟಕ ಗೋವಾ ಗಡಿಭಾಗವಾದ ಕಾರವಾರದ ಮಾಜಾಳಿ ಚೆಕ್​ ಪೋಸ್ಟ್ ನಲ್ಲಿಯೂ ಜಿಲ್ಲಾಡಳಿತ ತಪಾಸಣೆ ಬಿಗಿಗೊಳಿಸಿದ ಪರಿಣಾಮ ಲಾರಿಗಟ್ಟಲೆ ಅಕ್ರಮ ಮದ್ಯದ ಜೊತೆಗೆ ದಾಖಲೆಗಳೇ ಇಲ್ಲದ ಕಂತೆ ಕಂತೆ ನೋಟುಗಳು ರಾಜ್ಯಕ್ಕೆ ಸಾಗಾಟ ಮಾಡುತ್ತಿರುವುದು ಇತ್ತೀಚೆಗೆ ಪತ್ತೆಯಾಗುತ್ತಿದೆ.

ಪೊಲೀಸರು ಈಗಾಗಲೇ ಕಾರವಾರದ ಮಾಜಾಳಿ, ಅನಮೋಡ ಚೆಕ್​​ ಪೋಸ್ಟ್‌ಗಳಲ್ಲಿ 24/7 ಅಲರ್ಟ್​ ಆಗಿ ಹೆಚ್ಚಿನ ಸಿಬ್ಬಂದಿಗಳಿಂದ ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ‌‌ ಅಕ್ರಮ ಮದ್ಯ ಸಾಗಣೆ ಸಂಬಂಧ ಸುಮಾರು 127 ಪ್ರಕರಣಗಳು ದಾಖಲು ಮಾಡಿ 17 ಜನ ಆರೋಪಿಗಳನ್ನು ಕೂಡ ಬಂಧಿಸಲಾಗಿದೆ. ಜತೆಗೆ 5 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಚುನಾವಣೆ ಬೆನ್ನಲ್ಲೇ ಗೋವಾದಿಂದ ಹರಿದು ಬರುತ್ತಿದೆ ಅಗ್ಗದ ಮದ್ಯ, ಕಂತೆ ಕಂತೆ ನೋಟು!!

Last Updated :Apr 14, 2023, 10:23 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.