ETV Bharat / state

ಬೇಕರಿಗೆ ನುಗ್ಗಿ ದಾಂಧಲೆ ನಡೆಸಿದ್ದ ಇಬ್ಬರು ಆರೋಪಿಗಳ ಬಂಧನ

author img

By

Published : Aug 20, 2023, 11:03 PM IST

ಬಸವರಾಜ್ (33) ಮತ್ತು ಭರತ್ (25)
ಬಸವರಾಜ್ (33) ಮತ್ತು ಭರತ್ (25)

ಬೇಕರಿಗೆ ನುಗ್ಗಿ ದಾಂಧಲೆ ನಡೆಸಿದ್ದ ಇಬ್ಬರು ಆರೋಪಿಗಳನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ತುಂಗಾನಗರ ಮುಖ್ಯರಸ್ತೆಯ ಮಂಜುನಾಥ ಕೇಕ್ ಕಾರ್ನರ್ ಆ್ಯಂಡ್ ಸ್ವೀಟ್ಸ್ ಬೇಕರಿಗೆ ನುಗ್ಗಿ ದಾಂಧಲೆ ನಡೆಸಿದ್ದ ಇಬ್ಬರು ಆರೋಪಿಗಳನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಆಟೋ ಚಾಲಕರಾದ ಬಸವರಾಜ್ (33) ಮತ್ತು ಭರತ್ (25) ಬಂಧಿತರು ಎಂದು ತಿಳಿದುಬಂದಿದೆ. ಮತ್ತಿಬ್ಬರು ಅರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಪ್ರಮುಖ ಆರೋಪಿ ಬಸವರಾಜ್ ಮತ್ತು ಬೇಕರಿ ಮಾಲೀಕ ಚಂದ್ರಶೇಖರ್ ಅವರಿಗೂ ಕೆಲ ದಿನಗಳ ಹಿಂದೆ ಪಪ್ಸ್‌ನ ವಿಚಾರಕ್ಕೆ ಜಗಳವಾಗಿತ್ತು. ಇದರಿಂದ ಕೋಪಗೊಂಡಿದ್ದ ಬಸವರಾಜ್ ಆ.16 ರ ಸಂಜೆ 5 ಗಂಟೆಗೆ ಇತರೆ ಆರೋಪಿಗಳೊಂದಿಗೆ ಬೇಕರಿಗೆ ನುಗ್ಗಿ ದಾಂಧಲೆ ನಡೆಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಸವರಾಜ್ ಮತ್ತು ಸಹಚರರು ಬೇಕರಿಗೆ ನುಗ್ಗಿ ಕಬ್ಬಿಣದ ಸಲಾಕೆ ಹಾಗೂ ಕಲ್ಲಿನಿಂದ ಬೇಕರಿ ಶೋ ಕೇಸ್​ ಧ್ವಂಸಗೊಳಿಸಿದ್ದರು. ಅಲ್ಲದೆ, ತಿಂಡಿ-ತಿನಿಸುಗಳನ್ನು ಹೊರಗೆಸೆದು ಅಟ್ಟಹಾಸ ಮೆರೆದಿದ್ದರು. ಜತೆಗೆ, ಬೇಕರಿ ಕೆಲಸಗಾರರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ರಾಡ್‌ನಿಂದ ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದರು. ಬೇಕರಿ ಮಾಲೀಕರಿಗೆ ಸುಮಾರು 35 ಸಾವಿರ ನಷ್ಟ ಉಂಟು ಮಾಡಿದ್ದರು.

ಎರಡು ಬೈಕ್‌ಗಳಲ್ಲಿ ಬಂದಿದ್ದ ಆರೋಪಿಗಳು ತಮ್ಮ ಬಗ್ಗೆ ಯಾವುದೇ ಸುಳಿವು ಸಿಗದಂತೆ ಬೈಕ್‌ಗಳ ನೋಂದಣಿ ಫಲಕಗಳಿಗೆ ಸಗಣಿ ಬಳಿದುಕೊಂಡಿದ್ದರು. ಜತೆಗೆ, ಮಾಸ್ಕ್ ಮತ್ತು ಹೆಲ್ಮೆಟ್ ಧರಿಸಿಕೊಂಡು ಬಂದು ದುಷ್ಕೃತ್ಯ ಎಸಗಿದ್ದರು. ಈ ದೃಶ್ಯಾವಳಿ ಬೇಕರಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಸುಳಿವು ಆಧರಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಪೆಟ್ರೋಲಿಗೆ ಕಾಸು ಕೊಟ್ಟಿಲ್ಲವೆಂದು ಗ್ರಾಹಕನ ಉದ್ಧಟತನ: ಪೆಟ್ರೋಲ್ ಹಾಕಿಸಲು ಹಣ ಕೊಡಲಿಲ್ಲವೆಂದು ಗ್ರಾಹಕನೊಬ್ಬ ಬೇಕರಿ ಮಾಲೀಕನ ಮೇಲಿನ ಸಿಟ್ಟಿಗೆ ಬೇಕರಿಯ ಗಾಜುಗಳನ್ನು ಒಡೆದು ದಾಂಧಲೆ ನಡೆಸಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯ ಮಾಳಗಾಳದಲ್ಲಿ (ಮಾರ್ಚ್​ 1-2023) ಬೆಳಗ್ಗೆ ನಡೆದಿತ್ತು. ಬೇಕರಿ ಮಾಲೀಕನ ಮೇಲಿನ ಕೋಪಕ್ಕೆ ಅಂಗಡಿಯ ಗಾಜುಗಳನ್ನ ಪುಡಿ ಮಾಡಿರುವ ಆರೋಪ ಪ್ರಕಾಶ್ ಎಂಬಾತನ ವಿರುದ್ಧ ಕೇಳಿಬಂದಿತ್ತು.

ಮಾಳಗಾಳ ಬಳಿ ಇರುವ ಬೇಕರಿಯೊಂದರ ದೈನಂದಿನ ಗ್ರಾಹಕನಾಗಿದ್ದ ಪ್ರಕಾಶ್, ಘಟನೆಯ ಹಿಂದಿನ ದಿನ ಮಧ್ಯಾಹ್ನ ಬೇಕರಿ ಮಾಲೀಕನ ಬಳಿ ಪೆಟ್ರೋಲ್ ಹಾಕಿಸಲು ಹಣ ಬೇಕಿದೆ ಎಂದು ಕೇಳಿದ್ದ. ಸಾಲ ನೀಡಲು ಹಣವಿಲ್ಲ ಎಂದು ಪ್ರಕಾಶನಿಗೆ ಬೇಕರಿ ಮಾಲೀಕ ರಘುನಾಥ್ ತಿಳಿಸಿದ್ದರು. ಇದಾದ ನಂತರ ತಡರಾತ್ರಿ ರಘುನಾಥ್ ವಾಸವಿರುವ ಮನೆ ಬಳಿ ಚಾಕು ಸಮೇತ ಬಂದಿದ್ದ ಆರೋಪಿ ಇದೇ ವಿಚಾರವಾಗಿ ಗಲಾಟೆ ಆರಂಭಿಸಿದ್ದ.

ತಕ್ಷಣ ಒಟ್ಟಾದ ಅಕ್ಕಪಕ್ಕದವರು ಆರೋಪಿಗೆ ಬೈದು ಸ್ಥಳದಿಂದ ಕಳುಹಿಸಿದ್ದರು. ಆದರೆ, ಮರುದಿನ ಬೆಳಗ್ಗೆ 7 ಗಂಟೆಗೆ ಪುನಃ ಬೇಕರಿ ಬಳಿ ಬಂದಿದ್ದ ಆರೋಪಿ, ಬೇರೆಯವರಿಗಾದರೆ ಹಣ ಕೊಡುತ್ತೀಯಾ, ನನಗೆ ಕೊಡುವುದಿಲ್ಲವೇ? ಎಂದು ಮರದ ತುಂಡಿನಿಂದ ಬೇಕರಿ ಗಾಜುಗಳನ್ನು ಜಖಂಗೊಳಿಸಿ ಆವಾಜ್ ಹಾಕಿದ್ದ. ಪುಂಡನ ಉಪಟಳದಿಂದ ಬೇಸತ್ತ ಬೇಕರಿ ಮಾಲೀಕ ರಘುನಾಥ್ ಶೆಟ್ಟಿ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ದೂರು ನೀಡಿದ್ದರು.

ಇದನ್ನೂ ಓದಿ: ಬೇಕರಿ ಮಾಲೀಕ ಪೆಟ್ರೋಲಿಗೆ ಕಾಸು ಕೊಟ್ಟಿಲ್ಲವೆಂದು ಗ್ರಾಹಕನ ಉದ್ಧಟತನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.