ETV Bharat / state

ಭಾರತ ಸ್ವಾತಂತ್ರ್ಯ ಪಡೆದ ವರ್ಷದ ಬಳಿಕ ಹೈಕಗೆ ಸಿಕ್ಕಿತ್ತು ಸ್ವಾತಂತ್ರ್ಯ: ಕಲ್ಯಾಣ ಕರ್ನಾಟಕದ ಇತಿಹಾಸ ಇಲ್ಲಿದೆ ನೋಡಿ

author img

By

Published : Sep 17, 2021, 3:46 AM IST

Updated : Sep 17, 2021, 6:21 AM IST

ಹೈದರಾಬಾದ್​ ಕರ್ನಾಟಕ
ಹೈದರಾಬಾದ್​ ಕರ್ನಾಟಕ

ಹೈದರಾಬಾದ್ ಕರ್ನಾಟಕವನ್ನ ಕಲ್ಯಾಣ ಕರ್ನಾಟಕ ಅಂತಾ ಮರು ನಾಮಕರಣ ಮಾಡಿದ್ದ ಸಿ.ಎಂ ಬಿಎಸ್‌ವೈ ಕಲಬುರಗಿಯಲ್ಲಿ ಪ್ರತ್ಯೇಕ ಸಚಿವಾಲಯ ನಿರ್ಮಿಸುವದಾಗಿ ಹೇಳಿದ್ದರು. 371 ಜೆ ಕಲಂನಲ್ಲಿರುವ ದೋಷಗಳು ಸರಿಪಡಿಸುವದಾಗಿ ಭರವಸೆ ನೀಡಿದ್ದರು. ಕಲಬುರಗಿಯಲ್ಲಿ ಆಡಳಿತಾತ್ಮಕ ಕಚೇರಿಗಳನ್ನ ಸ್ಥಾಪನೆ ಮಾಡೋದಾಗಿ ಭರವಸೆ ಕೊಟ್ಟಿದ್ದರು. ಆದ್ರೆ ಎರಡು ವರ್ಷ ಕಳೆದ್ರು ಕೂಡ ಬಿಎಸ್‌ವೈ ಕೊಟ್ಟ ಮಾತು ಯಾವುದು ಈಡೇರಿಲ್ಲ

ಕಲಬುರಗಿ: 1947 ಆಗಸ್ಟ್ 15 ರಂದು ದೇಶಕ್ಕೆ ಸ್ವತಂತ್ರ ಸಿಕ್ಕು ಇಡೀ ದೇಶದಲ್ಲಿ ಸಂಭ್ರಮ ಮೊಳಗಿತ್ತು. ಆದರೆ ಅಂದಿನ ಹೈದ್ರಾಬಾದ್-ಕರ್ನಾಟಕ‌ ಇಂದಿನ ಕಲ್ಯಾಣ ಕರ್ನಾಟಕದಲ್ಲಿ ಮಾತ್ರ ನಿಜಾಮನ ಆಳ್ವಿಕೆಯಿಂದಾಗಿ ಸಂಭ್ರಮ ಇರಲಿಲ್ಲ, ದೇಶಕ್ಕೆ ಸ್ವತಂತ್ರ ಸಿಕ್ಕು ಹದಿಮೂರು ತಿಂಗಳ ನಂತರ ಹೈದರಾಬಾದ್​- ಕರ್ನಾಟಕ ಸ್ವತಂತ್ರ ಪಡೆಯಿತು. ಇದಕ್ಕಾಗಿ ಅನೇಕರು ತಮ್ಮ‌ ಪ್ರಾಣ ಸಮರ್ಪಿಸಿದ ಇತಿಹಾಸವಿದೆ.

ಹೈದ್ರಾಬಾದ್-ಕರ್ನಾಟಕ ಈಗ ಕಲ್ಯಾಣ ಕರ್ನಾಟಕವಾಗಿದೆ. ಶರಣ ಸಾಹಿತ್ಯದ ತವರಾಗಿರುವ ಈ ನಾಡು ಇತಿಹಾಸದಲ್ಲಿ ತನ್ನದೆಯಾದ ವಿಶಿಷ್ಠ ಹೆಜ್ಜೆಗುರುತು, ಪ್ರಾಮುಖ್ಯತೆ ಹೊಂದಿದೆ. 1947ರ ಆಗಸ್ಟ್ 15ರಂದು ಇಡಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ, ಹೈದ್ರಾಬಾದ್​ ಕರ್ನಾಟಕಕ್ಕೆ ಮಾತ್ರ ಸ್ವತಂತ್ರ ಸಿಕ್ಕಿರಲಿಲ್ಲ. ಭಾರತದ ಒಕ್ಕೂಟಕ್ಕೆ ಸೋಲೊಪ್ಪದ ರಾಜಾ ಮಿರ್ ಉಸ್ಮಾನ ಅಲಿಖಾನ್ ಸ್ವತಂತ್ರ ಆಡಳಿತ ನಡೆಸಲು ಉತ್ಸುಕನಾಗಿದ್ದ. ಆದರೆ ರಾಜನ ನಿರಂಕುಶ ಪ್ರಭುತ್ವದ ವಿರುದ್ಧ ಜನ ಬಂಡೆದ್ದರು. ರಾಜನ ವಿರುದ್ಧ ಇಲ್ಲಿನ ಜನ ಚಳುವಳಿಗೆ ಮುಂದಾದರು. ಇವರ ಚಳುವಳಿ ಹತ್ತಿಕ್ಕಲು ರಾಜ ಮೀರ್ ಉಸ್ಮಾನ್ ಅಲಿಖಾನ್ ಖಾಸಗಿ ರಜಾಕ್ ಪಡೆ ಸೈನ್ಯವನ್ನು ಮುಂದೆ ಬಿಟ್ಟನು.

ರಜಾಕ್‌ ಪಡೆ ವಿರುದ್ಧ ಸಿಡಿದದ್ದ ವೀರರು:

ರಜಾಕ್ ಪಡೆಗೂ ಬಗ್ಗದ ಇಲ್ಲಿನ ಹೋರಾಟಗಾರರು, ಸ್ವಾಮಿ ರಮಾನಂದ ತೀರ್ಥರ ನೇತೃತ್ವದಲ್ಲಿ ಚಳವಳಿ ಆರಂಭಿಸಿದರು. ಆಗ ಸಾವಿರಾರು ಜನರನ್ನು ರಜಾಕ್ ಪಡೆ ಬಂಧಿಸಿತು. ಈ ವೇಳೆ ಅನೇಕರು ತಮ್ಮ ಪ್ರಾಣ ಬಲಿ ಕೊಟ್ಟರು. ಹಲವು ದೌರ್ಜ್ಯಗಳು ನಡೆದವು. ಇಷ್ಟಾದರೂ ಗಟ್ಟಿ ಧೈರ್ಯದ ಇಲ್ಲಿನ ಜನ ಹೋರಾಟ ಕೈಬಿಡಲಿಲ್ಲ. ಕೊನೆಗೆ ಭಾರತದ ಏಕತೆಗೆ ಹೊಣೆ ಹೊತ್ತಿದ್ದ ಅಂದಿನ ದೇಶದ ಗೃಹ ಮಂತ್ರಿ ಉಕ್ಕಿನ ಮನುಷ್ಯ ಸರದಾರ ವಲ್ಲಭಭಾಯಿ ಪಟೇಲರು ಭಾರತ ಸರ್ಕಾರದಿಂದ ಮಿಲಿಟರಿ ಪಡೆ ಕರೆಸಿ ರಾಜ ಮೀರ್ ಉಸ್ಮಾನ ಅಲಿಖಾನ್‌‌ನನ್ನು ಮಣಿಸಿದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ವಿರುದ್ಧ ನಿಲ್ಲಲು ಆಗದ ರಾಜ ಉಸ್ಮಾನ ಅಲಿಖಾನ್ ಸೋಲೋಪಿಕೊಂಡು ಶರಣಾದ. ಕಡೆಗೂ ಉಕ್ಕಿನ ಮನುಷ್ಯ ಸರ್ಧಾರ ಪಟೇಲ‌್ ಅವರ ಸಹಾಯದೊಂದಿಗೆ 1948 ಸೆ.18 ರಂದು ಹೈದರಾಬಾದ್-ಕರ್ನಾಟಕಕ್ಕೆ ಸ್ವತಂತ್ರ ಸಿಕ್ಕಿತು.

1956ರಲ್ಲಿ ಕರ್ನಾಟಕಕ್ಕೆ ಸೇರಿದ ಹೈದರಾಬಾದ್ ಕರ್ನಾಟಕ:

ಹೈದರಾಬಾದ್ ಕರ್ನಾಟಕದ ಎಲ್ಲಾ ಜಿಲ್ಲೆಗಳು 1956ರವರೆಗೆ ಪ್ರತ್ಯೇಕ ಹೈದರಾಬಾದ್ ರಾಜ್ಯಕ್ಕೆ ಸೇರಿದ್ದವು. ಆದರೆ ಭಾಷಾವಾರು ಪ್ರಾಂತ್ಯ ರಚನೆ ವೇಳೆ ಹೈದ್ರಾಬಾದ್ ಕರ್ನಾಟಕದ ಜಿಲ್ಲೆಗಳು ಮೈಸೂರು ರಾಜ್ಯಕ್ಕೆ ಸೇರಿದವು. ನಂತರದ ದಿನಗಳಲ್ಲಿ ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿ ಹಿನ್ನಡೆ ಹೊಂದಿದ ಈ ಭಾಗದ ಅಸಮತೋಲನ ಸರಿಪಡಿಸಲು ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಹೈದರಾಬಾದ್-ಕರ್ನಾಟಕಕ್ಕೆ 371 ಜೆ ವಿಧೇಯಕದ ಅನ್ವಯ ವಿಶೇಷ ಸ್ಥಾನ ಕಲ್ಪಿಸಿತು. ನಂತರದಲ್ಲಿ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರಕಾರ ಹೈದರಾಬಾದ್-ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಅಂತ ಮರುನಾಮಕರಣ ಮಾಡಿದೆ.

ವಿಮೋಚನಾ ಬದಲಾಗಿ ಉತ್ಸವ:

ಹೈದರಾಬಾದ್-ಕರ್ನಾಟಕಕ್ಕೆ ಸ್ವತಂತ್ರ ಸಿಕ್ಕು ಆರು ದಶಕ ಕಳೆದರೂ ಅಭಿವೃದ್ಧಿ ಮಾತ್ರ ನಿರೀಕ್ಷೆಗೆ ತಕ್ಕಂತೆ ನಡೆದಿಲ್ಲ. ಈ ಮುಂಚೆ ಪ್ರತಿವರ್ಷ ಸೆ.17 ರಂದು ಹೈದರಾಬಾದ್-ಕರ್ನಾಟಕ ವಿಮೋಚನ ದಿನಾಚರಣೆ ಮಾಡಲಾಗುತ್ತಿತ್ತು. ಆದರೆ ಎರಡು ವರಷದ ಹಿಂದೆ ಯಡಿಯೂರಪ್ಪ ಸರಕಾರ ಹೈದ್ರಾಬಾದ್ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಅಂತ ಮರುನಾಮಕರಣ ಮಾಡಿ ವಿಮೋಚನಾ ದಿನ ಬದಲಾಗಿ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆಗೆ ಹೆಜ್ಜೆ ಇಟ್ಟು ಅಭಿವೃದ್ಧಿಯ ಭರವಸೆ ನೀಡಿತ್ತು. ಸರ್ಕಾರದ ಈ ಹಜ್ಜೆ ಜನರಲ್ಲಿ ಹೊಸ‌ ಆಸೆ ಚಿಗುರೊಡೆಸಿತು.

ಈಡೇರದ ಭರವಸೆಗಳು:

ಹೈದರಾಬಾದ್ ಕರ್ನಾಟಕವನ್ನ ಕಲ್ಯಾಣ ಕರ್ನಾಟಕ ಅಂತಾ ಮರು ನಾಮಕರಣ ಮಾಡಿದ್ದ ಸಿ.ಎಂ ಬಿಎಸ್‌ವೈ ಕಲಬುರಗಿಯಲ್ಲಿ ಪ್ರತ್ಯೇಕ ಸಚಿವಾಲಯ ನಿರ್ಮಿಸುವದಾಗಿ ಹೇಳಿದ್ದರು. 371 ಜೆ ಕಲಂನಲ್ಲಿರುವ ದೋಷಗಳು ಸರಿಪಡಿಸುವದಾಗಿ ಭರವಸೆ ನೀಡಿದ್ದರು. ಕಲಬುರಗಿಯಲ್ಲಿ ಆಡಳಿತಾತ್ಮಕ ಕಚೇರಿಗಳನ್ನ ಸ್ಥಾಪನೆ ಮಾಡೋದಾಗಿ ಭರವಸೆ ಕೊಟ್ಟಿದ್ದರು. ಆದ್ರೆ ಎರಡು ವರ್ಷ ಕಳೆದ್ರು ಕೂಡ ಬಿಎಸ್‌ವೈ ಕೊಟ್ಟ ಮಾತು ಯಾವುದು ಈಡೇರಲಿಲ್ಲ. ನೀಡಿದ ಭರವಸೆಗಳನ್ನು ಈಡೇರಿಸಿದ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ ಮಾಡಬೇಕು ಅನ್ನೋದು ಈ ಭಾಗದ ಜನರ ಒತ್ತಾಸೆಯಾಗಿದೆ. ಈಗಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಾಜಿ ಸಿಎಂ ಬಿ ಎಸ್ ವೈ ಕೊಟ್ಟಂತಹ ಭರವಸೆಯನ್ನ ಈಡೆರಿಸುತ್ತಾರ ಅನ್ನೋ ನೀರಿಕ್ಷೆಯಲ್ಲಿ ಕಲ್ಯಾಣ ಕರ್ನಾಟಕದ ಜನರಿದ್ದಾರೆ.

ಇದನ್ನು ಓದಿ:ಸ್ವಾತಂತ್ರ್ಯ ಬಂದು 75 ವರ್ಷಗಳಾದ್ರೂ ಬಡವರಿಗೆ ಒಪ್ಪೊತ್ತಿನ ಊಟ ಕೊಡಲು ಸಾಧ್ಯವಾಗ್ತಿಲ್ಲ: ಹೆಚ್‌ಡಿಕೆ

Last Updated :Sep 17, 2021, 6:21 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.