ETV Bharat / state

ದೇಶದ ಅಭಿವೃದ್ಧಿಗೆ ಮಾನವೀಯ ಮೌಲ್ಯಗಳ ಅಳವಡಿಕೆ ಮುಖ್ಯ: ರಾಜ್ಯಪಾಲ ಗೆಹ್ಲೋಟ್

author img

By

Published : Jul 11, 2023, 9:07 AM IST

Thawar Chand Gehlot attended City University 2nd Convocation
ನಗರ ವಿಶ್ವವಿದ್ಯಾಲಯದ 2ನೇ ಘಟಿಕೋತ್ಸವ

ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ 2ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರು ಭಾಗವಹಿಸಿ ಪದವಿ ಪ್ರದಾನ ಮಾಡಿದರು.

ಬೆಂಗಳೂರು: ದೇಶದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ತಾಂತ್ರಿಕ ಅಭಿವೃದ್ಧಿಗೆ ಶಿಕ್ಷಣದಲ್ಲಿ ಸಾಂಸ್ಕೃತಿಕ ಮತ್ತು ಮಾನವೀಯ ಮೌಲ್ಯಗಳನ್ನು ಸೇರಿಸುವುದನ್ನು ಖಚಿತಪಡಿಸಿಕೊಳ್ಳುವುದು ಶಿಕ್ಷಣ ತಜ್ಞರು, ಅನುದಾನ ಸಂಸ್ಥೆಗಳು, ನೀತಿ ನಿರೂಪಕರು, ಮಾನವತಾವಾದಿಗಳು ಮತ್ತು ಸಮಾಜದ ಜವಾಬ್ದಾರಿ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟರು. ನಗರದ ಸೆಂಟ್ರಲ್ ಕಾಲೇಜಿನಲ್ಲಿ ಶನಿವಾರ ನಡೆದ ಬೆಂಗಳೂರು ನಗರ ವಿಶ್ವವಿದ್ಯಾಲಯದ 2ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿಶ್ವವಿದ್ಯಾನಿಲಯಗಳು ಸಾಮಾಜಿಕ ಸಂಪ್ರದಾಯದ ಸಂಶೋಧನೆಯನ್ನು ಉತ್ತೇಜಿಸುತ್ತವೆ. ಸಮಾಜಕ್ಕೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಮಾನವಕುಲಕ್ಕೆ ಹವಾಮಾನ ಬದಲಾವಣೆಯಿಂದ ತಲೆದೋರುವ ಆರೋಗ್ಯ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುತ್ತವೆ. ಹಾಗೆಯೇ ಸುಲಭವಾಗಿ ಪ್ರವೇಶಿಸಬಹುದಾದ ಜೀವನಶೈಲಿಯ ಮಾದರಿಗಳ ಬಗ್ಗೆ ಯೋಚಿಸುವ ಅವಶ್ಯಕತೆಯಿದೆ. ವಿಶೇಷವಾಗಿ ಬಡವರ, ಅತ್ಯಂತ ದುರ್ಬಲರ ಹಾಗೂ ಪರಿಸರದ ಕಾಳಜಿಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.

Thawar Chand Gehlot attended City University 2nd Convocation
ಬೆಂಗಳೂರು ನಗರ ವಿಶ್ವವಿದ್ಯಾಲಯದ 2ನೇ ಘಟಿಕೋತ್ಸವ

ಪ್ರಸ್ತುತ, ಸ್ವಾವಲಂಬಿ ಮತ್ತು ಬಲಿಷ್ಠ ಭಾರತದ ಬಗ್ಗೆ ಮಾತನಾಡಲಾಗುತ್ತಿದೆ. ಇಂತಹ ಸಮಯದಲ್ಲಿ ಡಿಜಿಟಲ್ ಚಟುವಟಿಕೆಗಳನ್ನು ಹೆಚ್ಚು ಹರಡಲು ಬಳಕೆದಾರರಿಗೆ ತಂತ್ರಜ್ಞಾನವನ್ನು ಸರಳ ಮತ್ತು ವೈಶಿಷ್ಟ್ಯಗಳಿಂದ ಸಮೃದ್ಧಗೊಳಿಸುವುದು ಅವಶ್ಯಕ. ಪ್ರತಿಭಾವಂತ ವಿದ್ಯಾರ್ಥಿಗಳು ಆದರ್ಶ ಸಮಾಜದ ರಚನೆಯ ಆಧಾರ ಸ್ತಂಭಗಳು. ವಿದ್ಯಾರ್ಥಿಗಳ ಕೆಲಸ, ನಡವಳಿಕೆ ಮತ್ತು ಆಲೋಚನೆಯನ್ನು ಸಮಾಜದ ಸಿದ್ಧಾಂತ, ಸಂಸ್ಕೃತಿ ಮತ್ತು ನಾಗರಿಕತೆಯೊಂದಿಗೆ ಜೋಡಿಸಬೇಕು. ಹೊಸ ಆಲೋಚನೆಗಳು, ಹೊಸ ಪ್ರಯೋಗಗಳಿಗೆ ಸ್ಪೂರ್ತಿದಾಯಕ ಮತ್ತು ಪ್ರಭಾವಶಾಲಿ ವಾತಾವರಣವನ್ನು ಸೃಷ್ಟಿಸುವುದು ಉನ್ನತ ಶಿಕ್ಷಣ ಸಂಸ್ಥೆಗಳ ಜೊತೆಗೆ ಪ್ರತಿಭಾವಂತ ಯುವ ಪೀಳಿಗೆಯ ಜವಾಬ್ದಾರಿ. ವಿದ್ಯಾರ್ಥಿಗಳು ಸಮಾಜದ ಮತ್ತು ದೇಶದ ಭರವಸೆಯ ಕೇಂದ್ರಬಿಂದು ಎಂದು ಹೇಳಿದರು.

ನಮ್ಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯ ಬಹಳ ಪುರಾತನವಾಗಿದೆ. ಪ್ರಾಚೀನ ಕಾಲದಿಂದಲೂ "ಸರ್ವೇ ಭವಂತು ಸುಖಿನೋ, ಸರ್ವೇ ಸಂತು ನಿರಾಮಯ" ಎಂಬ ಮನೋಭಾವದಿಂದ ಪ್ರೇರಿತವಾದ "ವಸುಧೈವ ಕುಟುಂಬಕಂ" ತತ್ವಶಾಸ್ತ್ರ ಮತ್ತು ಧ್ಯಾನವನ್ನು ಕೇಂದ್ರೀಕರಿಸಿ, ಸಾರ್ವತ್ರಿಕ ಸಹೋದರತ್ವ ಮತ್ತು ವಿಶ್ವಶಾಂತಿ, ಸಮಾನತೆ, ಸಾಮರಸ್ಯವನ್ನು ಶಿಕ್ಷಣ ಕಲಿಸುತ್ತದೆ ಎಂದರು.

Thawar Chand Gehlot attended City University 2nd Convocation
ವಿದ್ಯಾರ್ಥಿನಿಗೆ ಪದವಿ ಪ್ರದಾನ ಮಾಡುತ್ತಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ನಮ್ಮ ಪ್ರಾಚೀನ ಶಿಕ್ಷಣ ಪದ್ಧತಿಯು ವ್ಯಕ್ತಿತ್ವ ನಿರ್ಮಾಣ, ಆಧ್ಯಾತ್ಮಿಕ ಜ್ಞಾನದ ಜೊತೆಗೆ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಯ ಮೇಲೆ ಕೇಂದ್ರೀಕೃತವಾಗಿತ್ತು. ಇದರಿಂದಾಗಿ ನಾವು ವಿಶ್ವಗುರು ಎಂದು ಪರಿಗಣಿಸಲ್ಪಟ್ಟಿದ್ದೆವು. ಸ್ವಾತಂತ್ರ್ಯದ 75 ವರ್ಷಗಳಲ್ಲಿ ದೇಶವು ಎಲ್ಲ ಕ್ಷೇತ್ರಗಳಲ್ಲಿ ಅಭೂತಪೂರ್ವ ಪ್ರಗತಿಯನ್ನು ಸಾಧಿಸಿದೆ. ದೇಶದ ಆರ್ಥಿಕತೆ ಹೆಚ್ಚು ಬಲಗೊಂಡಿದೆ. ಭವ್ಯ ಮತ್ತು ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸಲು ಮುಂದಿನ 25 ವರ್ಷಗಳು ಅಮೃತ ಕಾಲ. ನಮ್ಮ ದೇಶವನ್ನು ವಿಶ್ವದ ಅತ್ಯುತ್ತಮ ದೇಶಗಳ ವರ್ಗಕ್ಕೆ ತರುವ ಕರ್ತವ್ಯದ ಅವಧಿ. ಈ ಕರ್ತವ್ಯದ ಅವಧಿಯನ್ನು ಅವಕಾಶವನ್ನಾಗಿ ಪರಿವರ್ತಿಸುವಲ್ಲಿ ನಾವು ಪಾಲುದಾರರಾಗಿರಬೇಕು ಎಂದು ರಾಜ್ಯಪಾಲರು ಕರೆ ಕೊಟ್ಟರು.

ಶಿಕ್ಷಣ, ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಅತ್ಯುತ್ತಮ ಕೆಲಸ ಮಾಡಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಸಾಧಕ ನಿಸ್ಸಾರ್ ಅಹಮದ್, ಡಾ.ವೂಡೆ ಪಿ. ಕೃಷ್ಣ, ತಾರಿಣಿ ಚಿದಾನಂದ ಅವರನ್ನು ಅಭಿನಂದಿಸಿದ ರಾಜ್ಯಪಾಲರು, ಸಮಾಜ ಕಾರ್ಯ ನಿರಂತರವಾಗಿರಲಿ ಎಂದು ಆಶಿಸಿದರು. ಪದವಿ ಪಡೆದ ಎಲ್ಲ ವಿದ್ಯಾರ್ಥಿಗಳಿಗೆ ಶುಭಕೋರಿದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಸಿ.ಎನ್. ಮಂಜುನಾಥ್, ಕುಲಪತಿ ಲಿಂಗರಾಜು ಗಾಂಧಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ: ಸಾರ್ವಜನಿಕರ ಕುಂದು ಕೊರತೆ ಪರಿಹಾರ ಸಂಬಂಧ ಹೊಸ ಟ್ವಿಟರ್​ ಖಾತೆ ತೆರೆದ ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.