ETV Bharat / state

ಮಳೆ ಹಾನಿ: ₹1,102 ಕೋಟಿ ಪರಿಹಾರ ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಲು ನಿರ್ಧಾರ

author img

By

Published : Aug 26, 2022, 3:54 PM IST

state-government-to-appeal-center-for-rain-damage-compensation
ಮಳೆ ಹಾನಿ : 1,102 ಕೋಟಿ ಪರಿಹಾರ ಕೋರಿ ಕೇಂದ್ರಕ್ಕೆ ಮನವಿಗೆ ರಾಜ್ಯ ಸರ್ಕಾರ ನಿರ್ಧಾರ

ನಿವೇಶನ ವಂಚನೆ ತಡೆಗೆ ಸರ್ಕಾರದಿಂದ ಏಜೆನ್ಸಿ ಸ್ಥಾಪನೆ ಮಾಡಲಾಗುವುದು. ಈ ಏಜೆನ್ಸಿಗಳು ಭೂಮಿ, ನಿವೇಶನ ಮಾರುವವರು ಮತ್ತು ಕೊಳ್ಳುವವರ ನಡುವೆ ಮಧ್ಯವರ್ತಿಯಾಗಿ ಕೆಲಸ ಮಾಡಲಿವೆ. ಈ ಮೂಲಕ ನಿವೇಶನ ವಂಚನೆ ಜಾಲಕ್ಕೆ ಬ್ರೇಕ್ ಹಾಕಲಿವೆ ಕಂದಾಯ ಸಚಿವರು ತಿಳಿಸಿದರು.

ಬೆಂಗಳೂರು: ರಾಜ್ಯದಲ್ಲಿ ಮಳೆ ಹಾನಿ ಸಂಬಂಧ 1,102 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ ಸಲ್ಲಿಸಲು ನಿರ್ಧರಿಸಿದೆ. ವಿಧಾನಸೌಧದಲ್ಲಿ ಈ ಬಗ್ಗೆ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್ ಅವರು, ಕಳೆದ ನಾಲ್ಕು ತಿಂಗಳಿನಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸುರಿದ ಮಳೆಯಿಂದ ಅಪಾರ ಹಾನಿಯಾಗಿದೆ. ಪರಿಹಾರ ಕೋರುವ ಸಂಬಂಧ ಮನವಿ ಪತ್ರ ಸಿದ್ಧವಾಗಿದೆ ಎಂದರು.

ಮಳೆಯಿಂದ ಹಾನಿಗೊಳಗಾದ ಜಿಲ್ಲೆಗಳಿಂದ ಆಯಾ ಜಿಲ್ಲಾಧಿಕಾರಿಗಳು ವರದಿ ಕಳಿಸಿದ್ದಾರೆ. ಇದರ ಆಧಾರದ ಮೇಲೆ 1,102 ಕೋಟಿ ರೂ. ಪರಿಹಾರ ಕೋರಲು‌ ನಿರ್ಧರಿಸಲಾಗಿದೆ. ಮಳೆಯಿಂದ ರಸ್ತೆ, ಸೇತುವೆ, ಕಟ್ಟಡ ಸೇರಿದಂತೆ ಹಲವು ರೀತಿಯ ನಷ್ಟವಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಭೂಕಂಪನ ಸಂಭವಿಸಿದೆ. ಮಳೆಗೆ ಗುಡ್ಡ ಕುಸಿತ ಆಗಿದೆ ಎಂದ ಅವರು, ಇಂತಹ ಸಮಸ್ಯೆ ಪುನರಾವರ್ತನೆ ಆಗುವ ಬಗ್ಗೆ ಗಮನಿಸಿ, ಮುಂಜಾಗ್ರತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ನಿವೇಶನ ವಂಚನೆ ತಡೆಗೆ ಸರ್ಕಾರದಿಂದ ಏಜೆನ್ಸಿ ಸ್ಥಾಪನೆ : ನಿವೇಶನ, ಭೂಮಿ ಕೊಳ್ಳುವವರು ಮೋಸದ ಜಾಲಕ್ಕೆ ಸಿಲುಕದಂತೆ ರಕ್ಷಿಸಲು ಸರ್ಕಾರವೇ ಏಜೆನ್ಸಿಗಳನ್ನು ಸ್ಥಾಪಿಸಲು ಮುಂದಾಗಿದೆ. ಈ ಏಜೆನ್ಸಿಗಳು ಭೂಮಿ, ನಿವೇಶನ ಮಾರುವವರು ಮತ್ತು ಕೊಳ್ಳುವವರ ನಡುವೆ ಮಧ್ಯವರ್ತಿಯಾಗಿ ಕೆಲಸ ಮಾಡಲಿವೆ. ಈ ಮೂಲಕ ವಂಚನೆ ಜಾಲಕ್ಕೆ ಬ್ರೇಕ್ ಹಾಕಲಿವೆ ಎಂದು ತಿಳಿಸಿದರು.

ಒಂದೇ ನಿವೇಶನವನ್ನು ಹಲವರಿಗೆ ನೋಂದಣಿ ಮಾಡಿಕೊಡುವ, ತಮ್ಮದಲ್ಲದ ನಿವೇಶನವನ್ನು ಮಾರುವ, ನಿವೇಶನದ ಹೆಸರಿನಲ್ಲಿ ವಂಚಿಸುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಅದೇ ರೀತಿ ಜಮೀನನ್ನು ವರ್ಗಾವಣೆ ಮಾಡಿಸಿಕೊಳ್ಳುವಾಗ ಸಹೋದರರನ್ನು ವಂಚಿಸಿ ತಮ್ಮ ಹೆಸರಿಗೆ ಮಾಡಿಸಿಕೊಳ್ಳುವ ಪ್ರಕರಣಗಳೂ ಕಂಡುಬರುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸರ್ಕಾರವೇ ಏಜೆನ್ಸಿಗಳನ್ನು ತೆರೆದು ಭೂಮಿ, ನಿವೇಶನ ಖರೀದಿಸುವವರು ಮೋಸದ ಜಾಲಕ್ಕೆ ಸಿಲುಕದಂತೆ ನೋಡಿಕೊಳ್ಳಲಿದೆ.

ಈ ಏಜೆನ್ಸಿಗಳು ಮಾರಾಟ ಮಾಡುವವರು ಮತ್ತು ಕೊಳ್ಳುವವರ ಬಳಿ ದಾಖಲೆ ಪಡೆದು ಅದರ ಅಸಲಿಯತ್ತನ್ನು ಪರೀಕ್ಷಿಸಿ ಸಂಬಂಧಪಟ್ಟ ಕಚೇರಿಗಳಿಂದ ಅಧಿಕೃತ ದಾಖಲೆ ಗಮನಿಸಿ ಭೂಮಿ ಅಥವಾ ನಿವೇಶನದ ಒಡೆತನ ಯಾರದು ಎಂದು ಸ್ಪಷ್ಟಪಡಿಸಿಕೊಳ್ಳುತ್ತದೆ. ನಂತರ ಕೊಳ್ಳುವವರಿಗೆ ಇದರಿಂದ ಯಾವ ತಕರಾರು ಇಲ್ಲ ಎಂದು ಸಾಬೀತಾದರೆ ಅಂತಹ ವ್ಯವಹಾರ ಪತ್ರಕ್ಕೆ ಗ್ರೀನ್ ಸಿಗ್ನಲ್ ನೀಡುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಸಿದ್ದರಾಮೋತ್ಸವ ನಡೆಸಿದರೂ ಸಿದ್ದು ರಾಜಕೀಯ ಅಲೆಮಾರಿ: ವಿ ಶ್ರೀನಿವಾಸ್ ಪ್ರಸಾದ್ ವ್ಯಂಗ್ಯ

ಭೂಮಿ, ನಿವೇಶನಗಳನ್ನು ಖರೀದಿಸುವವರು, ಮಾರುವವರಿಗೆ ಸ್ಪಷ್ಟತೆ ಒದಗಿಸಿಕೊಡುವ ಏಜೆನ್ಸಿ ತನ್ನ ಕೆಲಸಕ್ಕಾಗಿ ನಿಗದಿತ ಶುಲ್ಕ ವಿಧಿಸಲಿದೆ. ಮಾರಾಟಗಾರರು, ಖರೀದಿದಾರರು ದಾಖಲೆ ಪತ್ರಗಳಿಗಾಗಿ ಕಚೇರಿ, ಬ್ಯಾಂಕ್​ ಅಲೆಯುವುದನ್ನು ಏಜೆನ್ಸಿಗಳು ತಪ್ಪಿಸುವುದರಿಂದ ಮೋಸದ ಜಾಲಕ್ಕೆ ಬ್ರೇಕ್ ಬೀಳುತ್ತದೆ ಎಂದರು.

ಭೂಮಿ, ನಿವೇಶನಗಳ ಮಾರಾಟಗಾರರು ಮತ್ತು ಖರೀದಿದಾರರಿಗೆ ಅನುಕೂಲ ಕಲ್ಪಿಸಿಕೊಡುವ ಯೋಚನೆಯು ಇತ್ತೀಚೆಗೆ ಕಲಬುರಗಿ ಜಿಲ್ಲೆಯಲ್ಲಿ ನಡೆಸಿದ ಗ್ರಾಮ ವಾಸ್ತವ್ಯದ ವೇಳೆ ಮೊಳಕೆಯೊಡೆಯಿತು. ಯಾರದೋ ಭೂಮಿಯ ಪಹಣಿಯಲ್ಲಿ ಇನ್ಯಾರದೋ ಹೆಸರು ಸೇರುವುದು, ಒಂದೇ ನಿವೇಶನ ಹಲವರ ಹೆಸರಲ್ಲಿ ನೋಂದಣಿಯಾಗುವುದು ಸೇರಿದಂತೆ ಹಲವು ಬಗೆಯ ಮೋಸದ ಬಗ್ಗೆ ಅಲ್ಲಿ ದೂರುಗಳು ಕೇಳಿ ಬಂದಿದ್ದವು ಎಂದು ಹೇಳಿದರು.

ಇದನ್ನೂ ಓದಿ: ಕಾರು ಹೊಂದಿರುವವರ ಬಿಪಿಎಲ್ ಕಾರ್ಡ್ ರದ್ದು ಆದೇಶಕ್ಕೆ ಸರ್ಕಾರ ಬ್ರೇಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.