ETV Bharat / state

ಬೆಲೆ ಏರಿಕೆಗೆ ಮಿಸ್ಟರ್ ಮೋದಿ ಕಾರಣ, ದೇಶವನ್ನು ದಿವಾಳಿಯತ್ತ ತಂದಿದ್ದೇ ವಿಶ್ವಗುರು: ಸಿದ್ದರಾಮಯ್ಯ

author img

By

Published : Jul 21, 2023, 2:10 PM IST

CM Siddaramaiah
ಮುಖ್ಯಮಂತ್ರಿ ಸಿದ್ದರಾಮಯ್ಯ

ಬಿಜೆಪಿ ಮತ್ತು ಜೆಡಿಎಸ್​ನವರು ಎರಡು ಕಲಾಪಗಳಿಗೂ ಇಂದು ಗೈರು ಹಾಜರಾಗಿದ್ದಾರೆ.

ಬೆಂಗಳೂರು: ದೇಶದಲ್ಲಿನ ಬೆಲೆ ಏರಿಕೆಗೆ ಮಿಸ್ಟರ್ ನರೇಂದ್ರ ಮೋದಿ ಕಾರಣ. ದೇಶವನ್ನು ದಿವಾಳಿಯತ್ತ ತಂದಿದ್ದು ಮೋದಿ ಸಾಧನೆ. ಇಂತಹ ಮೋದಿಯನ್ನು ಬಿಜೆಪಿಯವರು ವಿಶ್ವಗುರು ಎನ್ನುತ್ತಾರೆ. ಇವರ ಯೋಗ್ಯತೆಗೆ ಪ್ರತಿಪಕ್ಷ ನಾಯಕನ ಆಯ್ಕೆ ಮಾಡಿಕೊಳ್ಳಲೂ ಆಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ವಿಧಾನ ಪರಿಷತ್​ನಲ್ಲಿ ಇಂದು ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿದ ಸಿದ್ದರಾಮಯ್ಯ, ತಮ್ಮ ಇಡೀ ಭಾಷಣದುದ್ದಕ್ಕೂ ಪ್ರಧಾನಿ ಮೋದಿಯನ್ನು ಟೀಕಿಸಿದರು. ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಕೇಂದ್ರ ರಾಜ್ಯದ ವಿರುದ್ಧ ಅನುಸರಿಸಿದ ತಾರತಮ್ಯದ ಕುರಿತು ಪ್ರಸ್ತಾಪಿಸಿ ತಮ್ಮ ಬಜೆಟ್ ವಿವರಣೆಗಿಂತಲೂ ಹೆಚ್ಚಾಗಿ ಬಿಜೆಪಿ ವಿರುದ್ಧ ಟೀಕಿಸಿಸಲು ಸಿಎಂ ಸಮಯ ಬಳಸಿಕೊಂಡರು.

ಪ್ರಜಾಪ್ರಭುತ್ವದ ಯಶಸ್ಸಿಗೆ ಪ್ರಬಲ ವಿಪಕ್ಷ ಇರಬೇಕು, ಸರ್ಕಾರದ ತಪ್ಪನ್ನು ಹೇಳುವ ಕೆಲಸ ಮಾಡಬೇಕು. ಆದರೆ ಬಿಜೆಪಿ- ಜೆಡಿಎಸ್ ಸದನ ಬಾಯ್ಕಾಟ್ ಮಾಡಿದ್ದಾರೆ. ರಾಜಕೀಯ ಜೀವನದಲ್ಲಿ ಇದೇ ಮೊದಲು, ವಿಪಕ್ಷ ಗೈರಾಗಿರುವ ಸದನಕ್ಕೆ ಉತ್ತರ ಕೊಡುತ್ತಿದ್ದೇನೆ. ವಿಧಾನಸಭೆಯಲ್ಲಿ ಅನಾಗರಿಕವಾಗಿ ನಡೆದುಕೊಂಡ ಸದಸ್ಯರನ್ನು ಅಮಾನತು ಮಾಡಿದ್ದಾರೆ. ಪೇಪರ್ ಹರಿದು ಉಪಸಭಾಧ್ಯಕ್ಷರ ಮುಖಕ್ಕೆ ಎಸೆದರು. ಮಾರ್ಷಲ್ ಇಲ್ಲದಿದ್ದರೆ ಏನು ಮಾಡುತ್ತಿದ್ದರೋ ಗೊತ್ತಿಲ್ಲ. ಅದಕ್ಕಾಗಿ 10 ಸದಸ್ಯರ ಅಮಾನತು ಮಾಡಿದ್ದಾರೆ. ಉಳಿದವರು ಬಂದಿಲ್ಲ, ಪರಿಷತ್​ಗೂ ಬಂದಿಲ್ಲ. ಗಾಂಧಿ ಪ್ರತಿಮೆ ಎದುರು ಪ್ರತಿಭಟಿಸುವುದಲ್ಲ, ಗೋಡ್ಸೆ ಪ್ರತಿಮೆ ಎದುರು ಪ್ರತಿಭಟಿಸಬೇಕಿತ್ತು ಬಿಜೆಪಿಯವರು, ಗಾಂಧಿ ಕೊಂದವರು ಗಾಂಧಿ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಎಷ್ಟು ಹಣ ರಾಜ್ಯಕ್ಕೆ ಖರ್ಚು ಮಾಡುತ್ತಿದ್ದೇವೆ. ಯಾವುದಕ್ಕೆಲ್ಲ ಖರ್ಚು ಮಾಡುತ್ತಿದ್ದೇವೆ. ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದೇವಾ ಎಂದು ನೋಡಬೇಕಿತ್ತು. ಅದಕ್ಕೆ ಹೇಗೆ ಹಣ ಹೊಂದಿಸಿದ್ದೇವೆ ಎಂದು ನೋಡಬೇಕಿತ್ತು. ಆದರೆ ಅದ್ಯಾವುದನ್ನೂ ನೋಡದೆ ಮಾತಾಡದೆ ವಿಪಕ್ಷ ಸದಸ್ಯರು ಹೊರಗಿದ್ದಾರೆ. ಕಾರಣ ಇಲ್ಲದೆ ಗೈರಾಗಿದ್ದಾರೆ. ಇವರು ಬೇಜವಾಬ್ದಾರಿ ಹಾಗೂ ಜನ ವಿರೋಧಿಗಳು, ಕೇವಲ ಬಿಜೆಪಿಯ ಇಬ್ಬರು ಹಾಗೂ ಜೆಡಿಎಸ್​ನ ಮೂವರು ಸದಸ್ಯರು ಮಾತ್ರ ಬಜೆಟ್ ಮೇಲೆ ಮಾತನಾಡಿದ್ದಾರೆ. ಎಪಿಎಂಸಿ ಬಿಲ್ ವಿರುದ್ಧ ಎರಡು ಪಕ್ಷಗಳು ಜೊತೆಯಾಗಿವೆ ಎಂದು ಟೀಕಿಸಿದರು.

ಮಣಿಪುರ ವಿಷಯ ಪ್ರಸ್ತಾಪಿಸಿದ ಸಿದ್ದರಾಮಯ್ಯ ಬಿಜೆಪಿಯವರಿಗೆ ಬೆಂಕಿ ಹಚ್ಚುವುದೇ ಕೆಲಸ, ನಾವು ಜನರ ಜೇಬಿಗೆ ಹಣ ಹಾಕುತ್ತೇವೆ, ಖರ್ಚು ಮಾಡಿ ಎನ್ನುತ್ತೇವೆ. ಇದರಿಂದ ಹಣ ಚಲಾವಣೆಯಾಗಿ ಉದ್ಯೋಗ ಸೃಷ್ಟಿಯಾಗಿ ಜಿಡಿಪಿ ಬೆಳವಣಿಗೆಯಾಗಲಿದೆ ಎಂದರೆ, ಇವರು ಜನರ ಜೇಬಿಗೆ ಕೈಹಾಕಿ ಹಣ ತೆಗೆದುಕೊಳ್ಳುತ್ತಾರೆ. ಹಾಲು, ಮೊಸರಿಗೂ ಜಿಎಸ್ಟಿ ಹಾಕಿದ್ದಾರೆ. ಇವರಿಗೆ ಕಿತ್ತುಕೊಳ್ಳುವುದೇ ಕೆಲಸ. ಅದನ್ನು ಬಡವರಿಗೂ ಕೊಡದೆ ಶ್ರೀಮಂತರಿಗೆ ಕೊಡುತ್ತಾರೆ. ಕಾರ್ಪೊರೇಟ್ ತೆರಿಗೆ ಕಡಿತದಿಂದ ಪ್ರತಿ ವರ್ಷ ಕೇಂದ್ರಕ್ಕೆ 2 ಲಕ್ಷ ಕೋಟಿ ತೆರಿಗೆ ನಷ್ಟವಾಗುತ್ತಿದೆ. ಇದರ ಜೊತೆ ಕಾರ್ಪೊರೇಟ್ ಮತ್ತು ಕೈಗಾರಿಕೆಯವರ 12 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಇವರು ರೈತರ ಸಾಲ ಮನ್ನಾ ಮಾಡಿ ಎಂದರೆ ಮಾಡಲ್ಲ, ಕೈಗಾರಿಕೋದ್ಯಮಿ, ಉದ್ಯಮಿಗಳ ಸಾಲ ಮನ್ನಾ ಮಾಡಿದ್ದಾರೆ. ಬಿಜೆಪಿಯವರು ಯಾರ ಪರವಿದ್ದಾರೆ ಎಂದು ಪ್ರಶ್ನಿಸಿದರು.

ನಾವು ಐದು ಗ್ಯಾರಂಟಿ ಜಾರಿ ಮಾಡಿದರೆ ರಾಜ್ಯ ದಿವಾಳಿಯಾಗಲಿದೆ ಎಂದು ಮೋದಿ ಹೇಳಿದ್ದರು. ಆದರೆ ದೇಶ ದಿವಾಳಿಯಾಗಿರುವಿದೇ ಮೋದಿ ಅವರಿಂದ. ಸ್ವಾತಂತ್ರ್ಯ ಬಂದ ನಂತರ 2014-15 ರಲ್ಲಿ 531000 ಕೋಟಿ ರೂ. ಒಟ್ಟಾರೆ ದೇಶದ ಸಾಲ ಇತ್ತು. ಈಗ 170 ಲಕ್ಷ ಕೋಟಿ ಸಾಲ ಆಗಿದೆ. 118 ಲಕ್ಷ ಕೋಟಿ ಸಾಲವನ್ನು ಇವರು 10 ವರ್ಷದಲ್ಲಿ ಮಾಡಿದ್ದಾರೆ, ಇದು ಮೋದಿ ಸಾಧನೆ. ಇದು ದೇಶಕ್ಕೆ ಮೋದಿ ಕೊಡುಗೆ ಎಂದು ಟೀಕಿಸಿದರು.

ಕರ್ನಾಟಕದಲ್ಲಿ 2018 ರವರೆಗೆ 2,45,000 ಕೋಟಿ ಸಾಲ ಇತ್ತು ಈಗ 5,71,000 ಕೋಟಿ ಆಗಿದೆ. ಯಾರು ಸಾಲ ಹೆಚ್ಚು ಮಾಡಿದ್ದು? ನಾನು ಐದು ವರ್ಷದಲ್ಲಿ 1,16,000 ಕೋಟಿ ಸಾಲ ಮಾಡಿದ್ದೆ. ಬಿಜೆಪಿಯವರು ಐದು ವರ್ಷದಲ್ಲಿ 2,30,000 ಕೋಟಿ ಸಾಲ ಮಾಡಿದ್ದಾರೆ. ದೇಶವನ್ನು ಸಾಲದಲ್ಲಿ ಮುಳುಗಿಸಿದ್ದು ಮೋದಿ, ಅಗತ್ಯ ವಸ್ತು ಬೆಲೆ ಏರಿಕೆಗೂ ತೈಲ ಬೆಲೆ ಎರಿಕೆಗೂ ಸಂಬಂಧ ಇದೆ. ಹಣದುಬ್ಬರಕ್ಕೆ ಯಾರು ಕಾರಣ ಎಂದು ಹೇಳಬೇಕಲ್ಲ. ಆದರೆ ಮೋದಿ ಒಂದೇ ಒಂದು ಸುದ್ದಿಗೋಷ್ಠಿ ಕೂಡ ಮಾಡಿಲ್ಲ. ಪ್ರಶ್ನೆ ಕೇಳುತ್ತಾರೆ ಎನ್ನುವ ಭಯ ಇದೆ ಅವರಿಗೆ ಎಂದು ವ್ಯಂಗ್ಯವಾಡಿದರು.

ತೈಲ ಬೆಲೆ ಹೆಚ್ಚಳಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆ ದರ ಹೆಚ್ಚಳ ಕಾರಣ ಎಂದು ಬರೀ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಹಣದುಬ್ಬರ, ಬೆಲೆ ಏರಿಕೆಗೆ ಮಿಸ್ಟರ್ ನರೇಂದ್ರ ಮೋದಿ ಕಾರಣ. ಬೆಲೆ ಎರಿಕೆಯಿಂದ ಬಡವರ ಜೀವನ ದುಸ್ತರವಾಗಿದೆ. ಮಾತೆತ್ತಿದರೆ ರಾಜ್ಯ ಬಿಜೆಪಿಯವರು ಮೋದಿಯನ್ನು ವಿಶ್ವಗುರು ಎನ್ನುತ್ತಾರೆ. ಇವರ ಯೋಗ್ಯತೆಗೆ ಪ್ರತಿಪಕ್ಷ ನಾಯಕನ ಆಯ್ಕೆ ಮಾಡಿಕೊಳ್ಳಲು ಆಗಿಲ್ಲ. ರಾಜ್ಯದ ಇತಿಹಾಸದಲ್ಲಿ ಪ್ರತಿಪಕ್ಷಕ್ಕೆ ಇಂತಹ ಕೆಟ್ಟ ಪರಿಸ್ಥಿತಿ ಬಂದಿರಲಿಲ್ಲ. ರಾಜ್ಯಪಾಲರ ಭಾಷಣ, ಬಜೆಟ್ ಮೇಲಿನ ಚರ್ಚೆ ಪ್ರತಿಪಕ್ಷ ನಾಯಕರಿಲ್ಲದೆ ನಡೆಯಿತು. ಇದನ್ನು ಪ್ರಜಾಪ್ರಭುತ್ವ ವ್ಯವಸ್ಥೆ ಎನ್ನಬೇಕಾ? ಎಂದು ಕಿಡಿಕಾರಿದರು.

ಜಿಎಸ್ಟಿ ಪಾವತಿಯಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿರುವ ಕರ್ನಾಟಕಕ್ಕೆ 15ನೇ ಹಣಕಾಸು ಆಯೋಗದಲ್ಲಿ ಅನ್ಯಾಯವಾದ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಇದು ಬಿಜೆಪಿ ನಮ್ಮ ರಾಜ್ಯಕ್ಕೆ ನೀಡಿರುವ ಕೊಡುಗೆ, ಮಧ್ಯಂತರ ವರದಿಯಲ್ಲಿ 5,495 ಕೋಟಿ ಶಿಫಾರಸು ಇದ್ದರೂ, ಅಂತಿಮ ವರದಿಯಲ್ಲಿ ಕೈತಪ್ಪಿತು. ಇದನ್ನು ಒಬ್ಬರೇ ಒಬ್ಬ ಬಿಜೆಪಿ ಸಂಸದ ಪ್ರಶ್ನಿಸಲಿಲ್ಲ. ಮೋದಿ ಕಂಡರೆ ರಾಜ್ಯದ ನಾಯಕರು ಗಡಗಡ ನಡುಗುತ್ತಾರೆ. ಹಿಂದೆ ಇದ್ದಿದ್ದು, ಡಬಲ್ ಇಂಜಿನ್ ಸರ್ಕಾರ ಅಲ್ಲ ಟ್ರಬಲ್ ಇಂಜಿನ್, ಡಬ್ಬಾ ಇಂಜಿನ್ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ವಿಧಾನಸಭೆಯಲ್ಲಿ 2023-24ನೇ ಸಾಲಿನ ಬಜೆಟ್, ಪಿಟಿಸಿಎಲ್ ತಿದ್ದುಪಡಿ ಮಸೂದೆ ಅಂಗೀಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.