ETV Bharat / state

ಕಾಂಗ್ರೆಸ್​ಗೆ ಲಿಂಗಾಯತರು ಮತ ಹಾಕಿಲ್ಲ ಎನ್ನುವವರು ಮೂರ್ಖರು: ಶಾಮನೂರು ಹೇಳಿಕೆಯನ್ನು ಸಮರ್ಥಿಸಿಕೊಂಡ ವಿನಯ್ ಕುಲಕರ್ಣಿ

author img

By ETV Bharat Karnataka Team

Published : Oct 5, 2023, 5:44 PM IST

mla vinay kulkarni
ಶಾಸಕ ವಿನಯ್ ಕುಲಕರ್ಣಿ

ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸಲಾಗುತ್ತಿದೆ ಎಂಬ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆ ರಾಜ್ಯದಲ್ಲಿ ಕೆಲ ದಿನಗಳಿಂದ ಸದ್ದು ಮಾಡುತ್ತಿದೆ. ಶಾಸಕ ವಿನಯ್ ಕುಲಕರ್ಣಿ ಕೂಡ ಈ ಕುರಿತಂತೆ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು: ಹಿರಿಯ ನಾಯಕ, ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಧಾರವಾಡ ಶಾಸಕ ವಿನಯ್ ಕುಲಕರ್ಣಿ ಅವರು, ಕಾಂಗ್ರೆಸ್​​ಗೆ ಲಿಂಗಾಯತರು ಓಟು ಹಾಕಿಲ್ಲ ಎನ್ನುವವರು ಮೂರ್ಖರು. ವೀರೇಂದ್ರ ಪಾಟೀಲ್ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಲಿಂಗಾಯತರು ಕಾಂಗ್ರೆಸ್ ಪರ ನಿಂತಿದ್ದಾರೆ ಎಂದು ಹೇಳಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಮನೂರು ಅವರ ವಿರುದ್ಧ ಯಾರು ಕೌಂಟರ್ ಕೊಡೋದು ಬೇಡ. ಅವರು ಹಿರಿಯರು, ನಮ್ಮ ಯಜಮಾನರು ಅವರು, ಅವರಿಗೆ 92 ವರ್ಷ ಆಗಿದೆ. ನಮ್ಮವರೇ ಹೋಗಿ ಮಾತನಾಡಿದರೆ ತಪ್ಪೇನಿದೆ ಅದರಲ್ಲಿ? ಎಂದು ಪ್ರಶ್ನಿಸಿದರು.

ಶಾಮನೂರು ನಮಗೆಲ್ಲ ಹಿರಿಯರು. ಅವರು ಹೇಳಿದ ವಿಷಯ ಸತ್ಯವೇ ಇರಬಹುದು. ಮಾಧ್ಯಮಗಳ ಮೂಲಕ ಇದನ್ನು ಬಹಿರಂಗವಾಗಿ ಹೇಳುವುದು ಬೇಕಿಲ್ಲ ಅನಿಸುತ್ತದೆ. ಮುಖ್ಯಮಂತ್ರಿ ಅವರಿಗೆ ಹೇಳಿ ಇದನ್ನು ಸರಿಪಡಿಸುವ ತಾಕತ್ತು ನಮಗೆ ಇದೆ. ನನ್ನ ಬಳಿಯೂ ಎರಡು ಮೂರು ಅಧಿಕಾರಿಗಳು ಬಂದಿದ್ರು, ನಾನೇ ಸಿಎಂ ಬಳಿ ಹೇಳಿ ಕೆಲಸ ಮಾಡಿಸಿಕೊಟ್ಟೆ. ಮಾತನಾಡಿ ಮಾತಾಡಿಯೇ ಇಷ್ಟು ವರ್ಷ ಲಿಂಗಾಯತರು ಕಾಂಗ್ರೆಸ್ ನಿಂದ ದೂರವಾಗ್ತಿದ್ರು, ಶಾಮನೂರು ಹೇಳಿದ್ದಾರೆ ಎಂದ ಮೇಲೆ ಸತ್ಯವೇ ಇರುತ್ತದೆ ಎಂದು ವಿನಯ್​ ಕುಲಕರ್ಣಿ ತಿಳಿಸಿದ್ರು.

ಸಿಎಂ ಹೊರಗಿನವರಲ್ಲ, ಅವರು ನಮ್ಮದೇ ಕುಟುಂಬದವರು. ಒಂದು ಸಮಾಜದಿಂದ ಯಾರೂ ಸಿಎಂ ಆಗುವುದಿಲ್ಲ. ಒಂದು ಸಮಾಜದಿಂದ ಯಾರೂ ಶಾಸಕರು ಆಗುವುದಿಲ್ಲ. ಅಧಿಕಾರಿಗಳು ಅಥವಾ ರಾಜಕಾರಣಿಗಳಿಗೆ ಸಮಸ್ಯೆ ಆಗುತ್ತಿದ್ದರೆ ಅಂತವರು ನಮ್ಮ ಗಮನಕ್ಕೆ ತರಲಿ. ಅಧಿಕಾರಿಗಳು ನಮ್ಮ ಬಳಿ ಬರಲಿ, ನಾವೇ ಸಿಎಂ ಬಳಿ ಮಾತಾಡ್ತೇವೆ. ಸಿಎಂ ಬಳಿ ಮಾತಾಡೋದಕ್ಕೆ ನಮಗೇನಾಗಿದೆ?. ನಮ್ಮ ನಮ್ಮ ಒಳಗಡೆ ಇದೆಲ್ಲ ಸರಿಪಡಿಸಿಕೊಳ್ಳುತ್ತೇವೆ ಎಂದರು.

ಎಲ್ಲರ ವಿಚಾರಗಳೂ ಒಂದೇ ತರಹ ಇರಲ್ಲ. ಶಾಮನೂರು ಅವರನ್ನು ಸಚಿವರೇ ಭೇಟಿ ಮಾಡಿದರೆ ತಪ್ಪೇನಿದೆ?. ಯಾರಾದರೂ ನಾಲ್ಕು ಜನ ಸಚಿವರನ್ನು ಶಾಮನೂರು ಬಳಿ ಕಳಿಸಿ ಮಾತನಾಡಿದರೆ ತಪ್ಪೇನಿದೆ? ಎಂದು ಪ್ರಶ್ನಿಸಿದರು.

ಸಚಿವ ಎಸ್​ ಎಸ್​ ಮಲ್ಲಿಕಾರ್ಜುನ ಮಾತನಾಡಿ, ಲಿಂಗಾಯತ ಅಧಿಕಾರಿಗಳಿಗೆ ಸಮಸ್ಯೆ ಆಗಿಲ್ಲ. ಶಾಮನೂರು ಶಿವಶಂಕರಪ್ಪ ಅವರು ಹೇಳಿದ್ದನ್ನು ಅವರಿಗೆ ಕೇಳಿ. ಮುಖ್ಯಮಂತ್ರಿಗಳು ಮಾತನಾಡುತ್ತೇನೆ ಎಂದಿದ್ದಾರೆ. ಅವರವರೇ ಮಾತಾಡ್ತಾರೆ. ಅವರ ವೈಯಕ್ತಿಕ ವಿಚಾರ ಏನೂ ಅಂತ ಗೊತ್ತಿಲ್ಲ. ನಮ್ಮ ತಂದೆಯವರ ಜೊತೆಗೆ ನಾನು ಮಾತನಾಡಿಲ್ಲ ಎಂದು ತಿಳಿಸಿದರು.

ದಾವಣಗೆರೆ ಡಿಸಿ ಎಲ್ಲರನ್ನೂ ಸಹ ಚೇಂಜ್ ಮಾಡಿದಂತೆ ಮಾಡಿದ್ದಾರೆ. ಸಿಎಂ ಹಾಗೂ ನಮ್ಮ ತಂದೆ ಹಿರಿಯರು, ಅವರೇ ಮಾತನಾಡಿಕೊಳ್ಳುತ್ತಾರೆ. ಇದು ಮುಗಿದು ಹೋದ ಕಥೆ. ಯಾವುದಪ್ಪ ಡಿಸಿ ವಿಷಯ, ನನಗಂತೂ ಗೊತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಪ್ರತಿಕ್ರಿಯಿಸಿದರು.

ಇದನ್ನೂಓದಿ:ನಮ್ಮ ರಾಜ್ಯದ ರೈತರ ಹಾಲಿ ಬೆಳೆಗಳನ್ನು ರಕ್ಷಿಸಿದ್ದೇವೆ: ಡಿಸಿಎಂ ಡಿ.ಕೆ.ಶಿವಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.