ETV Bharat / state

ಕಬ್ಬು ಬೆಳೆಗಾರರಿಂದ ನಡೆಯುತ್ತಿರುವ ಧರಣಿ 10ನೇ ದಿನಕ್ಕೆ: ಭಿಕ್ಷಾ ತಟ್ಟೆ ಹಿಡಿದು ಪ್ರತಿಭಟನೆ..

author img

By

Published : Dec 1, 2022, 6:16 PM IST

KN_BNG
ಕಬ್ಬು ಬೆಳೆಗಾರರ ಪ್ರತಿಭಟನೆ

ಕಬ್ಬು ಬೆಳೆಗಾರರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆ ನಡೆಸುತ್ತಿದ್ದು ಇಂದು ಪ್ರತಿಭಟನೆ ಹತ್ತನೆ ದಿನಕ್ಕೆ ಕಾಲಿಟ್ಟಿದ್ದು, ಪ್ರತಿಭಟನಾಕಾರರು ಅನ್ನದಾತರು ಭಿಕ್ಷುಕರಲ್ಲ ಎಂದು ಭಿಕ್ಷಾ ತಟ್ಟೆ ಹಿಡಿದು ಅಣಕು ಪ್ರದರ್ಶನ ಮಾಡಿದರು.

ಬೆಂಗಳೂರು: ರಾಜ್ಯ ಕಬ್ಬು ಬೆಳೆಗಾರ ಸಂಘದ ರೈತರಿಂದ ನಗರದಲ್ಲಿ ನಡೆಯುತ್ತಿರುವ ಪ್ರತಿಭಟನೆ 10ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಆಹೋ ರಾತ್ರಿ ಧರಣಿ ನಿರತರು ನಾವು ಅನ್ನದಾತರು ಭಿಕ್ಷುಕರಲ್ಲ ಎಂದು ಭಿಕ್ಷಾ ತಟ್ಟೆ ಹಿಡಿದು ಅಣಕು ಚಳವಳಿ ನಡೆಸಿದರು.

ಕಬ್ಬು ಎಫ್​ಆರ್​ಪಿ ದರ ಎರಿಕೆ, ಕಬ್ಬಿನಿಂದ ಬರುವ ಉಪ ಉತ್ಪನ್ನಗಳ ಲಾಭ ಹಂಚಿಕೆ ಮಾಡಬೇಕು. ಹೆಚ್ಚುವರಿ ದರ ನಿಗದಿ ಬಗ್ಗೆ ರಾಜ್ಯ ಸರ್ಕಾರ ನಾಲ್ಕಾರು ಸಭೆಗಳನ್ನು ನಡೆಸಿ, ತಜ್ಞರ ಸಮಿತಿ ರಚಿಸಿ 5 ದಿನದಲ್ಲಿ ವರದಿ ಪಡೆದು ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ರೈತರಿಗೆ ನ್ಯಾಯ ನೀಡುವುದಾಗಿ ಭರವಸೆ ನೀಡಿ ವಿಳಂಬ ನೀತಿ ಅನುಸರಿಸುತ್ತಿರುವುದು ಸರಿಯಲ್ಲ ಎಂದು ಹೋರಾಟ ಹಮ್ಮಿಕೊಳ್ಳಲಾಗಿದೆ.

ರೈತರ ಬದುಕು ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಎನ್ನುವಂತಾಗಿದೆ ಎಂದು ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಪ್ರತಿಭಟನೆ ವೇಳೆ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ 30 ಲಕ್ಷ ಕಬ್ಬು ಬೆಳೆಗಾರರು 7.50 ಕೋಟಿ ಟನ್ ಕಬ್ಬು ಬೆಳೆದು 78 ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ನೀಡಿದ್ದಾರೆ. ಕಬ್ಬು ಬೆಳೆದ ರೈತರು ಭಿಕ್ಷುಕರಾಗುತ್ತಿದ್ದಾರೆ. ರೈತರ ಮತ ಭಿಕ್ಷೆ ಬೇಡುವ ಸರ್ಕಾರ, ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ವರ್ಷದಲ್ಲಿ 30,000 ಕೋಟಿ ವಹಿವಾಟಿನಲ್ಲಿ ರಾಜ್ಯ ಸರ್ಕಾರಕ್ಕೆ 5000 ಕೋಟಿ ತೆರಿಗೆ ಬರುತ್ತಿದೆ. ಆದರೂ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂದರು.

ಕಬ್ಬು ಬೆಳೆಗಾರರಿಂದ ನಿರಂತರ ಹೋರಾಟ: ಕಬ್ಬು ಬೆಳೆಗಾರರು ನಿರಂತರ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಯಾವುದೇ ಸ್ಪಷ್ಟ ತೀರ್ಮಾನ ಕೈಗೊಳ್ಳದೇ ಪೊಲೀಸರ ಬಲದಿಂದ ಭಂಡತನ ತೋರುತ್ತಿದೆ. ಕರ್ನಾಟಕ ರಾಜ್ಯಕ್ಕಿಂತ ಕಡಿಮೆ ಸಕ್ಕರೆ ಇಳುವರಿ ಬರುವ ಪಂಜಾಬ್ ರಾಜ್ಯದಲ್ಲಿ, ಉತ್ತರ ಪ್ರದೇಶದಲ್ಲಿ 3,800 ರೂಪಾಯಿ, ಮಹಾರಾಷ್ಟ್ರದಲ್ಲಿ 3,500 ರೂಪಾಯಿ, ಗುಜರಾತ್ ನಲ್ಲಿ 3,200 ರೂಪಾಯಿ ಮತ್ತು ತಮಿಳುನಾಡಿನಲ್ಲಿ 4,400 ರೂಪಾಯಿ ಕಬ್ಬು ಸಾಗಣೆ ವೆಚ್ಚವನ್ನು ಕಾರ್ಖಾನೆಗಳೇ ಭರಿಸುವ ನಿಯಮ ಜಾರಿಯಲ್ಲಿದೆ.

ಆಯಾ ರಾಜ್ಯ ಸರ್ಕಾರಗಳೇ ಹೆಚ್ಚುವರಿ ದರ ನಿಗದಿ ಮಾಡಿದ್ದಾರೆ, ಕರ್ನಾಟಕದಲ್ಲಿ ಮಾತಿನ ಮೂಲಕ ರೈತರಿಗೆ ಸಿಹಿ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೆಚ್ಚು ಲಗಾಣಿ ವಸೂಲಿ: ಕಬ್ಬಿನ ಕಟಾವು ಸಾಗಣೆ ವೆಚ್ಚದಲ್ಲಿ ಕಾರ್ಖಾನೆಯವರು ರೈತರಿಂದ ಲಗಾಣಿ ಹೆಚ್ಚು ಪಡೆಯುತ್ತಿದ್ದಾರೆ. ಕಬ್ಬು ಕಟಾವು 16 ತಿಂಗಳಾಗುತ್ತಿದೆ, ಸಕ್ಕರೆ ಕಾರ್ಖಾನೆಗಳು ಮನಬಂದಂತೆ ಕಟಾವು ಸಾಗಾಣಿಕೆ ವೆಚ್ಚ ಏರಿಕೆ ಮಾಡಿದ್ದಾರೆ, ಈ ಬಗ್ಗೆ ಆಯಾ ಜಿಲ್ಲಾಧಿಕಾರಿಗಳು ಕಾರ್ಖಾನೆಗಳ ಮೇಲೆ ಚೀಟಿಂಗ್ ಕೇಸ್ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು, ಸುಲಿಗೆ ತಪ್ಪಿಸಬೇಕು ಎಂದು ಆಗ್ರಹಿಸಿದರು.

ಕಬ್ಬು ಕಟಾವು ವಿಳಂಬ: ಕಬ್ಬು ಕಟಾವು16-18 ತಿಂಗಳು ವಿಳಂಬವಾಗುತ್ತಿದೆ. ಈ ರೀತಿ, ಕಟಾವು ಮಾಡಿದ ಕಬ್ಬಿಗೆ ವಿಳಂಬದ ಅವಧಿ ಹಣಕ್ಕೆ ಬಡ್ಡಿ ಸೇರಿಸಿ ಹೆಚ್ಚುವರಿ ದರ ಕೊಡಬೇಕು

ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ: ಬಗರ್ ಹುಕುಂ ಸಾಗುವಳಿಗಾಗಿ ಹತ್ತಾರು ವರ್ಷಗಳಿಂದ ಕೃಷಿ ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರ, ಅರಣ್ಯ ಭೂಮಿಯ ವ್ಯವಸಾಯ ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರವನ್ನು ನೀಡಬೇಕು. ಕಾಡಂಚಿನಲ್ಲಿ ಪ್ರಾಣಿಗಳ ಹಾವಳಿ ತಪ್ಪಿಸಿ, ಕಾಡು ಪ್ರಾಣಿಗಳಿಂದ ಆಗುವ ಬೆಳೆ ಹಾನಿ ಪರಿಹಾರ ವೈಜ್ಞಾನಿಕವಾಗಿ ನಷ್ಟ ಭರಿಸಬೇಕು ಎಂದು ಕೇಳಿಕೊಂಡರು.

10 ದಿನಗಳಿಂದ ನಿರಂತರ ಧರಣಿ: ಈ ಒತ್ತಾಯಗಳ ಬಗ್ಗೆ ನಿರಂತರ ಆಹೋ ರಾತ್ರಿ ಹೋರಾಟ 10 ದಿನದಿಂದ ಮುಂದುವರೆಯುತ್ತಿದೆ. ಇಂದು ರೈತರು ಅನ್ನದಾತರು ಭಿಕ್ಷುಕರಲ್ಲ ಎನ್ನುವ ಅಣಕು ಪ್ರದರ್ಶನ ಮಾಡಲಾಯಿತು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಅತ್ತಹಳ್ಳಿ ದೇವರಾಜ್, ಆಶೂಕಮೇಟಿ, ಗಜೇಂದ್ರ ಸಿಂಗ್, ದೇವರಾಜ್, ಬರಡನಪುರ ನಾಗರಾಜ್, ವೆಂಕಟಲಕ್ಷ್ಮಿ, ದೇವಮಣ್ಣಿ, ಕೆಂಡಗಣಸ್ವಾಮಿ ಮತ್ತಿತರರು ಇದ್ದರು.

ಇದನ್ನೂ ಓದಿ: ಪಂಚಮಸಾಲಿಗರಿಗೆ 2ಎ ಮೀಸಲು ಹಕ್ಕೊತ್ತಾಯ.. ಡಿ.19ವರೆಗೆ ಸರಕಾರಕ್ಕೆ ಗಡುವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.