ETV Bharat / state

ಮೂಲಸೌಕರ್ಯ ಸುಧಾರಿಸದಿದ್ದಲ್ಲಿ ಬೆಂಗಳೂರು ಬಿಡುತ್ತೇವೆ: ಸಿಎಂಗೆ ಐಟಿ ಕಂಪನಿಗಳಿಂದ ಪತ್ರ

author img

By

Published : Sep 3, 2022, 8:48 PM IST

ಸಿಎಂಗೆ ಐಟಿ ಕಂಪನಿಗಳಿಂದ ಪತ್ರ
ಸಿಎಂಗೆ ಐಟಿ ಕಂಪನಿಗಳಿಂದ ಪತ್ರ

ಬೆಂಗಳೂರು ತೊರೆಯುವ ಬಗ್ಗೆ ಐಟಿ ಕಂಪನಿಗಳು ಪತ್ರ. ಮೂಲಸೌಕರ್ಯ ಸುಧಾರಿಸದಿದ್ದರೆ ಬೆಂಗಳೂರು ಬಿಡುವುದಾಗಿ ಸಿಎಂಗೆ ಐಟಿ ಸಂಸ್ಥೆಗಳು ಪತ್ರ ಬರೆದಿವೆ.

ಬೆಂಗಳೂರು: ನಗರದಲ್ಲಿ ಮೂಲಸೌಕರ್ಯ ಸುಧಾರಣೆಯಾಗದೇ ಇದ್ದರೆ ಬೆಂಗಳೂರು ಬಿಟ್ಟು ಹೊರ ಹೋಗುವುದು ಅನಿವಾರ್ಯವಾಗಲಿದೆ ಎಂದು ಸಿಎಂ ಬೊಮ್ಮಾಯಿ‌ಗೆ ಐಟಿ ಕಂಪನಿಗಳು ಪತ್ರ ಬರೆದಿವೆ. ಈಗಾಗಲೇ ಬೆಂಗಳೂರಿನ ಹದಗೆಟ್ಟ ಮೂಲಸೌಕರ್ಯ, ಪ್ರವಾಹ ಪರಿಸ್ಥಿತಿ, ರಸ್ತೆ ಗುಂಡಿ ಬಗ್ಗೆ ಉದ್ಯಮಿಗಳಾದ ಕಿರಣ್ ಮಜುಂದಾರ್, ಮೋಹನ್ ದಾಸ್ ಪೈ ಬಹಿರಂಗವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದೀಗ ಹೊರ ವರ್ತುಲ ರಸ್ತೆ ಕಂಪನಿಗಳ ಒಕ್ಕೂಟ ಸಿಎಂಗೆ ಪತ್ರ ಬರೆದು, ಹದಗೆಟ್ಟ ಮೂಲಸೌಕರ್ಯಗಳ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದೆ. ನಗರದ ಮೂಲ ಸೌಕರ್ಯವನ್ನು ಶೀಘ್ರದಲ್ಲಿ ಅಭಿವೃದ್ಧಿ ಪಡಿಸದೇ ಹೋದಲ್ಲಿ ಐಟಿ ಸಂಸ್ಥೆಗಳು ಬೆಂಗಳೂರು ಬಿಟ್ಟು ಹೊರ ಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿವೆ.

ಬೆಂಗಳೂರು ತೊರೆಯುವ ಬಗ್ಗೆ ಐಟಿ ಕಂಪನಿಗಳು ಪತ್ರ: ಬೆಂಗಳೂರು ಹೊರ ವರ್ತುಲ ರಸ್ತೆಯಲ್ಲಿ ಅನೇಕ ಐಟಿ ಸಂಸ್ಥೆಗಳು, ಬ್ಯಾಂಕಿಂಗ್ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಸುಮಾರು ಒಂದು ದಶಲಕ್ಷ ಮಂದಿಗೆ ಉದ್ಯೋಗ ಅವಕಾಶ ‌ನೀಡುತ್ತಿವೆ. ಸುಮಾರು ಶೇ.32 ಬೆಂಗಳೂರಿನ ಆದಾಯ ಇಲ್ಲಿಂದಲೇ ಬರುತ್ತಿದೆ. ಆದರೆ, ಈ ಕಾರಿಡಾರ್​​ನಲ್ಲಿ ಮೂಲಸೌಕರ್ಯಗಳ ಮೇಲೆ ಸರ್ಕಾರ ಯಾವುದೇ ಗಮನ ಕೊಡುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದೆ.

ಆಗಸ್ಟ್ 30ರಂದು ಸುರಿದ ಮಳೆಗೆ ನೆರೆ ಉಂಟಾಗಿ ಸುಮಾರು 225 ಕೋಟಿ ರೂ. ನಷ್ಟವಾಗಿದೆ. ಈ ಅವ್ಯವಸ್ಥೆಯಿಂದ ಸಂಸ್ಥೆಗಳ ಉತ್ಪಾದಕತೆ ಕಡಿಮೆಯಾಗುತ್ತಿದೆ. ಜೊತೆಗೆ ಉದ್ಯೋಗಿಗಳ ಸುರಕ್ಷತೆಯೂ ಅಪಾಯದಲ್ಲಿದೆ. ಅಸಮರ್ಪಕ ಮೂಲಸೌಕರ್ಯ ಇದೀಗ ಬಿಕ್ಕಟ್ಟು ಸ್ಥಿತಿಗೆ ತಲುಪಿದೆ. ಇದರಿಂದ ಹಲವು ಕಂಪನಿಗಳು ತಮ್ಮ ಪ್ರಮುಖ ಕೆಲಸಗಳನ್ನು ಬೆಂಗಳೂರು ಹಾಗೂ ಕರ್ನಾಟಕದಿಂದ ಸ್ಥಳಾಂತರಿಸುತ್ತಿವೆ. ಇದು ನಗರದ ಗೌರವಕ್ಕೆ ಧಕ್ಕೆಯಾಗಿದೆ ಎಂದು ಆಕ್ರೋಶ ಹೊರಹಾಕಿದೆ.

ಬೆಂಗಳೂರಲ್ಲಿ ಮೂಲಸೌಕರ್ಯ ಕೊರತೆ: ಹಲವು ರಸ್ತೆ ಕಾಮಗಾರಿಗಳು ಸ್ಥಗಿತವಾಗಿವೆ. ಸಿಎಂ ಹೊರ ವರ್ತುಲ ರಸ್ತೆಗೆ ಭೇಟಿ ನೀಡಿ ಹಲವು ಯೋಜನೆಗಳನ್ನು ಘೋಷಿಸಿದರು. ಆದರೆ, ಕಾಮಗಾರಿ ಮಾತ್ರ ಆಮೆಗತಿಯಲ್ಲಿ ನಡೆಯುತ್ತಿದೆ. ಹೀಗಾಗಿ ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ತುರ್ತು ಗಮನ ಹರಿಸಬೇಕಾಗಿದೆ. ದೀರ್ಘಕಾಲಿನ ಪರಿಹಾರದ ಅಗತ್ಯ ಇದೆ.

ಒಂದು ವೇಳೆ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣದಿದ್ದರೆ ಹಲವು ಸಂಸ್ಥೆಗಳು ಬೆಂಗಳೂರು ಬಿಟ್ಟು ಹೊರ ಹೋಗ ಬೇಕಾಗುತ್ತದೆ. ಆದ್ದರಿಂದ ಬೆಂಗಳೂರಿನ ಅಭಿವೃದ್ಧಿ ಕಾಮಗಾರಿಗಳಿಗೆ ಚುರುಕು ಮುಟ್ಟಿಸುವಂತೆ ಸಿಎಂಗೆ ಮನವಿ ಮಾಡಿದೆ.

(ಇದನ್ನೂ ಓದಿ: ದಾಖಲೆಯ ಮಳೆಗೆ ನಲುಗಿದ ಸಿಲಿಕಾನ್​ ಸಿಟಿ.. ಸಾಮಾಜಿಕ ಜಾಲತಾಣಗಳಲ್ಲಿ ಸೇವ್ ಬೆಂಗಳೂರು ಕ್ಯಾಂಪೇನ್ ಸದ್ದು)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.