ETV Bharat / state

ಬೆಂಗಳೂರು: ರಕ್ಷಣೆ ವೇಳೆ ದಾಳಿಗೆ ಮುಂದಾದ ಚಿರತೆ ಗುಂಡೇಟಿಗೆ ಬಲಿ

author img

By ETV Bharat Karnataka Team

Published : Nov 1, 2023, 7:28 PM IST

ರಕ್ಷಣೆ ವೇಳೆ ದಾಳಿಗೆ ಮುಂದಾದ ಚಿರತೆ ಗುಂಡೇಟಿಗೆ ಬಲಿ
ರಕ್ಷಣೆ ವೇಳೆ ದಾಳಿಗೆ ಮುಂದಾದ ಚಿರತೆ ಗುಂಡೇಟಿಗೆ ಬಲಿ

Shoot out on leopard: ಅರಣ್ಯ ಅಧಿಕಾರಿಗಳ ಕಾರ್ಯಾಚರಣೆ ವೇಳೆ ದಾಳಿಗೆ ಮುಂದಾದ ಚಿರತೆ ಗುಂಡೇಟಿಗೆ ಬಲಿಯಾಗಿದೆ.

ಬೆಂಗಳೂರು: ಕಳೆದ ಕೆಲ ದಿನಗಳಿಂದ ಬೆಂಗಳೂರು ಹೊರವಲಯದ ಕೆಲವೆಡೆ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ್ದ ಚಿರತೆ ಅರಣ್ಯ ಅಧಿಕಾರಿಗಳ ಕಾರ್ಯಾಚರಣೆ ವೇಳೆ ಗುಂಡೇಟಿಗೆ ಬಲಿಯಾಗಿದೆ.

ಮೂರು ದಿನಗಳ ಕಾರ್ಯಾಚರಣೆ ಬಳಿಕ ಬುಧವಾರ ಬೊಮ್ಮನಹಳ್ಳಿ ಬಳಿಯ ಕುಡ್ಲುಗೇಟ್​ ಬಳಿ ಚಿರತೆ ಸೆರೆ ಹಿಡಿಯಲಾಗಿತ್ತು. ಆದರೆ ಕಾರ್ಯಾಚರಣೆ ವೇಳೆ ಗುಂಡು ತಗುಲಿದ್ದ ಪರಿಣಾಮ ಅದು ಮೃತಪಟ್ಟಿದೆ. ಸೆರೆ ಹಿಡಿಯುವಾಗ ಚಿರತೆಯು ಅರಣ್ಯ ಇಲಾಖೆ ಸಿಬ್ಬಂದಿ, ಪಶು ವೈದ್ಯರು ಸೇರಿದಂತೆ ಮೂವರ ಮೇಲೆ ದಾಳಿ ಮಾಡಿ ಗಾಯಗೊಳಿಸಿತ್ತು. ಅದು ದಾಳಿ ಮಾಡಿದ ವೇಳೆ ಸಿಬ್ಬಂದಿಯೊಬ್ಬರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದರಿಂದ ಚಿರತೆಯ ಕತ್ತಿನ ಭಾಗಕ್ಕೆ ಗಾಯವಾಗಿತ್ತು. ಬಳಿಕ ರಕ್ಷಣೆ ಮಾಡಿ ಚಿರತೆ ಉಳಿಸಿಕೊಳ್ಳಲು ಯತ್ನಿಸಿದರೂ ಕೂಡ ಚಿಕಿತ್ಸೆ ಫಲಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿರತೆ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್​ ಎಸ್​ ಲಿಂಗರಾಜ ಅವರು, ''ರಕ್ಷಣೆ ವೇಳೆ ಚಿರತೆಯು ಪಶುವೈದ್ಯ ಕಿರಣ್​ ಹಾಗೂ ಮತ್ತೋರ್ವ ಸಿಬ್ಬಂದಿ ಮೇಲೆ ದಾಳಿ ಮಾಡಿದೆ. ಇದರಿಂದ ಇಬ್ಬರಿಗೂ ತೀವ್ರ ಗಾಯಗಳಾಗಿದೆ. ಇದೇ ವೇಳೆ ಮತ್ತೋರ್ವ ಸಿಬ್ಬಂದಿ ಮೇಲೆ ಎರಗಿದ್ದು, ಅವರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ತಕ್ಷಣ ಚಿರತೆಯನ್ನು ಬನ್ನೇರುಘಟ್ಟಕ್ಕೆ ರವಾನಿಸಿ ಚಿಕಿತ್ಸೆ ನೀಡಲಾಯಿತಾದರೂ ಸ್ಪಂದಿಸದೆ ಮೃತಪಟ್ಟಿದೆ'' ಎಂದು ಮಾಹಿತಿ ನೀಡಿದ್ದಾರೆ. ಚಿರತೆಯು ಜನರ ಮೇಲೆ ದಾಳಿ ಮಾಡಲು ಮುಂದಾದರೆ ಶೂಟ್ ಮಾಡುವಂತೆ ಮುಖ್ಯ ವನ್ಯಜೀವಿ ವಾರ್ಡನ್ ಅನುಮತಿ ನೀಡಿದ್ದರು ಎಂದರು.

ಇದನ್ನೂ ಓದಿ: ಬೆಂಗಳೂರು: ಅರಣ್ಯ ಸಿಬ್ಬಂದಿ ಗಾಯಗೊಳಿಸಿ ಪರಾರಿಯಾಗಿದ್ದ ಚಿರತೆ ಕೊನೆಗೂ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.