ETV Bharat / state

ಕೆಪಿಎಸ್​​ಸಿಗೆ ಸದಸ್ಯರ ನೇಮಕ, ಇಂಧನ ನೀತಿ ತಿದ್ದುಪಡಿಗೆ ಸಂಪುಟ ಸಭೆ ನಿರ್ಧಾರ

author img

By

Published : Feb 9, 2023, 4:30 PM IST

Updated : Feb 9, 2023, 4:51 PM IST

important-decisions-in-karnataka-cabinet-meeting
ಕೆಪಿಎಸ್​​ಸಿಗೆ ಸದಸ್ಯರ ನೇಮಕ, ಇಂಧನ ನೀತಿ ತಿದ್ದುಪಡಿಗೆ ಸಂಪುಟ ಸಭೆಯಲ್ಲಿ ತೀರ್ಮಾನ

ಕೆಪಿಎಸ್​​ಸಿಯಲ್ಲಿ ಖಾಲಿ ಇರುವ ಒಬ್ಬ ಸದಸ್ಯರ ನೇಮಕಕ್ಕೆ ಮುಖ್ಯಮಂತ್ರಿಗಳಿಗೆ ಅಧಿಕಾರ, 30 ಸರ್ಕಾರಿ ಐಟಿಐಗಳ ಉನ್ನತೀಕರಣ ಸೇರಿ ವಿವಿಧ ಯೋಜನೆಗಳಿಗೆ ರಾಜ್ಯ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಸಂಪುಟ ಸಭೆ ನಿರ್ಧಾರಗಳ ಬಗ್ಗೆ ಸಚಿವ ಜೆ.ಸಿ.ಮಾಧುಸ್ವಾಮಿ ಮಾಹಿತಿ

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗಕ್ಕೆ(ಕೆಪಿಎಸ್‌ಸಿ) ಸದಸ್ಯರ ನೇಮಕ, ರಾಜ್ಯದ ಸರ್ಕಾರಿ ಐಟಿಐಗಳನ್ನು ಟಾಟಾ ಸಂಸ್ಥೆ ಸಹಭಾಗಿತ್ವದಲ್ಲಿ ಉನ್ನತೀಕರಣಗೊಳಿಸಲು ಕ್ರಮ, ಕರ್ನಾಟಕ ನವೀಕರಣ ಮಾಡಬಹುದಾದ ಇಂಧನ ನೀತಿ 2020-22ರಿಂದ 2022-27ಕ್ಕೆ ತಿದ್ದುಪಡಿಗೆ ಅನುಮೋದನೆ ಸೇರಿದಂತೆ ಹಲವು ಮಹತ್ವದ ನಿರ್ಧಾರಗಳಿಗೆ ಇಂದಿನ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, "ಕೆಪಿಎಸ್​​ಸಿಯಲ್ಲಿ ಒಂದು ಸ್ಥಾನ ಖಾಲಿಯಿದೆ. ಒಬ್ಬ ಸದಸ್ಯರ ನೇಮಕಕ್ಕೆ ಮುಖ್ಯಮಂತ್ರಿಗಳಿಗೆ ಅಧಿಕಾರ ನೀಡಲು ಒಪ್ಪಿಗೆ ನೀಡಲಾಗಿದೆ. ರಾಜ್ಯದಲ್ಲಿ 155 ಸರ್ಕಾರಿ ಐಟಿಐಗಳ ಪೈಕಿ 30 ಐಟಿಐಗಳನ್ನು ಟಾಟಾ ಸಂಸ್ಥೆಯ ಸಹಭಾಗಿತ್ವದಲ್ಲಿ 927 ಕೋಟಿ ರೂ. ವೆಚ್ಚದಲ್ಲಿ ಉನ್ನತೀಕರಿಸಲು ಅನುಮೋದನೆ ನೀಡಲಾಗಿದೆ. ಇದರಲ್ಲಿ 816 ಕೋಟಿ ರೂ.ಗಳನ್ನು ಸಂಸ್ಥೆಯೇ ಭರಿಸಲಿದೆ. ಉಳಿದ 111 ಕೋಟಿ ರೂ.ಗಳನ್ನು ಸರ್ಕಾರ ನೀಡಲಿದೆ. ಪ್ರತಿ ಐಟಿಐಗಳನ್ನು 27 ಕೋಟಿ ರೂ. ವೆಚ್ಚದಲ್ಲಿ ಉನ್ನತೀಕರಣ ಮಾಡಲಾಗುತ್ತಿದೆ" ಎಂದು ತಿಳಿಸಿದರು.

"ಸೊರಬದಲ್ಲಿ ತಾಲೂಕು ಆಡಳಿತ ಸೌಧ, ಪುರಸಭೆ ಕಾರ್ಯಾಲಯ ಹಾಗೂ ತಾಲೂಕು ಪಂಚಾಯಿತಿ ಕಚೇರಿ ಒಳಗೊಂಡಂತೆ ವಿಸ್ತಾರ ಸೌಧ ಕಟ್ಟಡವನ್ನು 49.60 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲು ಅಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ವಿಜಯಪುರ ಜಿಲ್ಲೆಯ ಶ್ರೀ ಸಿದ್ದೇಶ್ವರ ವಿದ್ಯಾ ಅಭಿವೃದ್ಧಿ ಟ್ರಸ್ಟ್, ಹಿರೇಮಠ ಇವರಿಗೆ ತಿಕೋಟ ತಾಲೂಕಿನ ನವರಸಪುರ ಗ್ರಾಮದಲ್ಲಿ ಮಂಜೂರು ಮಾಡಿರುವ 5 ಎಕರೆ ಜಮೀನಿಗೆ ವಿಧಿಸಿರುವ ಮೊತ್ತ ಪರಿಷ್ಕರಿಸಲಾಗಿದೆ. ನಿರ್ಮಲ ಭಾರತ ಚಾರಿಟಬಲ್ ಟ್ರಸ್ಟ್‌, ಮಂಗಳೂರು ಇವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕೊಣಾಜೆ ಗ್ರಾಮದಲ್ಲಿ ಮಂಜೂರು ಮಾಡಿರುವ 2 ಎಕರೆ ಜಮೀನಿಗೆ ವಿಧಿಸಿರುವ ಮೊತ್ತ ಪರಿಷ್ಕರಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಯಲಾಪುರ ಗ್ರಾಮದ ಸ.ನಂ. 128ರಲ್ಲಿ 1 ಎಕರೆ ಜಮೀನನ್ನು ಬುಡಕಟ್ಟು (ವನವಾಸಿ) ಜನಾಂಗದ ವಿದ್ಯಾರ್ಥಿನಿಲಯ ನಿರ್ಮಾಣಕ್ಕಾಗಿ ವನವಾಸಿ ಕಲ್ಯಾಣ ಸಂಸ್ಥೆಗೆ ಮಂಜೂರಾತಿಗೆ ಅನುಮೋದನೆ ನೀಡಲಾಗಿದೆ" ಎಂದು ಹೇಳಿದರು.

"ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು ಇದರ ಅಡಿಯಲ್ಲಿ ಬಳ್ಳಾರಿ ಹಗರಿಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ನೂತನ ಕೃಷಿ ಕಾಲೇಜನ್ನು 25 ಕೋಟಿ ರೂ. ಅಂದಾಜು ಮೊತ್ತದಲ್ಲಿ ಸ್ಥಾಪಿಸಲು ಒಪ್ಪಿಗೆ ನೀಡಲಾಗಿದೆ. ರಾಜ್ಯಕ್ಕೆ ಅನ್ವಯಿಸುವಂತೆ ಹೆಚ್ಚು ರೆಸಲ್ಯೂಶನ್​ನ ಇತ್ತೀಚಿನ ಉಪಗ್ರಹ ದತ್ತಾಂಶವನ್ನು 18.00 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ."

"ಹಾವೇರಿ ಜಿಲ್ಲೆಯ ಹಿರೆಕೆರೂರಿನ ಸರ್ವಜ್ಞ ಪ್ರಾಧಿಕಾರದ ವತಿಯಿಂದ ಹಾವೇರಿ, ಹಿರೆಕೆರೂರು, ಮಾಸೂರು, ಅಬಲೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು 25 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ಚಾಮರಾಜನಗರ ಜಿಲ್ಲೆಯ 166 ಗ್ರಾಮಗಳಿಗೆ ಜಲ ಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರು ಒದಗಿಸಲು 26 ಕೋಟಿ ರೂ. ವೆಚ್ಚದ ಯೋಜನೆಗೆ ಒಪ್ಪಿಗೆ ನೀಡಿದ್ದು, ಇದರಲ್ಲಿ 14,5 ಕೋಟಿ ರೂ. ಕೇಂದ್ರ ಸರ್ಕಾರದ್ದು, 11.5 ಕೋಟಿ ರೂ. ರಾಜ್ಯ ಸರ್ಕಾರದ ಅನುದಾನ ಬಳಸಲಾಗುತ್ತದೆ" ಎಂದರು.

"ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರದ 15 ಗ್ರಾಮಗಳಿಗೆ ಜಲ ಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರು ಒದಗಿಸಲು 26 ಕೋಟಿ ರೂ. ಹಾಗೂ ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಬೈನಾಪುರ ಸೇರಿದಂತೆ 12 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲು 32 ಕೋಟಿ ರೂ. ನೀಡಲು ಒಪ್ಪಲಾಗಿದೆ. ಈ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಲಾ 16 ಕೋಟಿ ರೂ. ವೆಚ್ಚ ಮಾಡಲಿವೆ" ಎಂದು ವಿವರಿಸಿದರು.

ಸಂಪುಟದ ಇತರ ನಿರ್ಧಾರಗಳೇನು?

  • ಮಡಿಕೇರಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಕಟ್ಟಡ ನಿರ್ಮಾಣಕ್ಕೆ 12 ಕೋಟಿ ರೂ ಅನುದಾನ.
  • ಕಲಬುರಗಿಯಲ್ಲಿ ಪಿಪಿ ಮಾದರಿಯಲ್ಲಿ ಬಸ್ ನಿಲ್ದಾಣ ಹಾಗೂ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಒಪ್ಪಿಗೆ.
  • ಗದಗ ಜಿಲ್ಲೆಯಲ್ಲಿ ವೀರರಾಣಿ ಚೆನ್ನಮ್ಮನ ಹೆಸರಿನಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ನರಗುಂದ ಇವರಿಗೆ 2 ಎಕರೆ ಜಮೀನು ಮಂಜೂರು.
  • ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ನಗರ ಸೇರಿದಂತೆ 363 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ 350 ಕೋಟಿ ರೂ. ವೆಚ್ಚದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ.
  • ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ತಾಲೂಕು ಆಸ್ಪತ್ರೆಯನ್ನು 100 ಹಾಸಿಗೆಯಿಂದ 200 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸಲು ಒಪ್ಪಿಗೆ. ಇದಕ್ಕೆ 23 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವ ತೀರ್ಮಾನ.
  • ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದಲ್ಲಿ ನಿರ್ಮಾಣವಾಗುತ್ತಿರುವ 300 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಉಪಕರಣಗಳನ್ನು ಖರೀದಿಸಲು 24 ಕೋಟಿ ರೂ. ಬಿಡುಗಡೆಗೆ ಒಪ್ಪಿಗೆ.
  • ಬೆಂಗಳೂರಿನ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ಟೋಲ್ ಘಟಕವನ್ನು ಒಡೆದು ಹಾಕಿರುವ ಬಗ್ಗೆ ತನಿಖೆ ನಡೆಸಲು ಸಂಪುಟದಲ್ಲಿ ತೀರ್ಮಾನ.
  • ಹಾವೇರಿ ಜಿಲ್ಲೆಯ ಶಿಗ್ಗಾವಿಯ ಕಲ್ಯಾಣ ಗ್ರಾಮದಲ್ಲಿ ಸರ್ಕಾರಿ ಉಪಕರಣ ಮತ್ತು ತರಬೇತಿ ಕೇಂದ್ರ ಸ್ಥಾಪಿಸುವ 73.75 ಕೋಟಿ ರೂ. ಹಾಗೂ ಹಾವೇರಿಯ ನೆಲಗೊಳ ಗ್ರಾಮದಲ್ಲಿ ಬಹುಕೌಶಲ್ಯ ತರಬೇತಿ ಕೇಂದ್ರ ಬಾಲಕರ ವಿದ್ಯಾರ್ಥಿ ನಿಲಯಕ್ಕೆ 37.55 ಕೋಟಿ ರೂ. ಯೋಜನೆಗೆ ಒಪ್ಪಿಗೆ.
  • ರಾಜ್ಯಕ್ಕೆ ಅನ್ವಯಿಸುವಂತೆ ಹೆಚ್ಚು ರೆಸಲ್ಯೂಷನ್‌ ಉಪಗ್ರಹ ದತ್ತಾಂಶ ಖರೀದಿಗೆ 15 ಕೋಟಿ ಅನುದಾನ.
  • ಚಿಕ್ಕಬಳ್ಳಾಪುರ ನೆಲಮಂಗಲ ರಸ್ತೆ ಅಭಿವೃದ್ಧಿಗೆ ಪರಿಷ್ಕೃತ ಅಂದಾಜು 8 ಕೋಟಿ 40 ಲಕ್ಷದಿಂದ 10.13 ಲಕ್ಷಕ್ಕೆ ಏರಿಕೆಗೆ ಅನುಮೋದನೆ.
  • ವಿದ್ಯುತ್ ಸರಬರಾಜು ಕಂಪನಿಗಳಿಗೆ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಿಂದ 13,000 ಕೋಟಿ ಸಾಲ ಪಡೆಯಲು ಸರ್ಕಾರಿ ಖಾತ್ರಿ ಒದಗಿಸಲು ಅನುಮೋದನೆ.

ಇದನ್ನೂ ಓದಿ: ನಾಳೆಯಿಂದ ಬಜೆಟ್​ ಅಧಿವೇಶನ ಆರಂಭ: ಸರ್ಕಾರದ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್ ಸಿದ್ಧತೆ

Last Updated :Feb 9, 2023, 4:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.