ETV Bharat / state

ಹಾಲಿ ಶಾಸಕರ ಬದಲಿಗೆ ಹೊಸ ಮುಖಕ್ಕೆ ಮಣೆ: ಕೈ ಸುಟ್ಟುಕೊಂಡ ಬಿಜೆಪಿ

author img

By

Published : May 13, 2023, 8:35 PM IST

Updated : May 14, 2023, 9:41 AM IST

Bjp
ಬಿಜೆಪಿ

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್​ ಯಡಿಯೂರಪ್ಪ, ರವೀಂದ್ರನಾಥ್, ಹಾಲಾಡಿ ಶ್ರೀನಿವಾಸ ಶೆಟ್ಟಿ ಚುನಾವಣಾ ರಾಜಕೀಯದಿಂದ ಸ್ವಯಂ ನಿವೃತ್ತಿ ಪಡೆದ ಕ್ಷೇತ್ರಗಳು ಸೇರಿ 22 ಕಡೆ ಬಿಜೆಪಿ ಹಾಲಿ ಶಾಸಕರ ಬದಲಿಗೆ ಹೊಸ ಮುಖಗಳಿಗೆ ಮಣೆ ಹಾಕಿತ್ತು. ಇದರಲ್ಲಿ 14 ಕ್ಷೇತ್ರಗಳಲ್ಲಿ ಸೋಲು ಕಂಡಿದೆ.

ಬೆಂಗಳೂರು: ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಲಿ ಶಾಸಕರಿಗೆ ಟಿಕೆಟ್​ ನೀಡದೆ ಹೊಸಬರಿಗೆ ಮಣೆ ಹಾಕಿತ್ತು. ತಮ್ಮ ಪಕ್ಷದ ಟಿಕೆಟ್​ ತಪ್ಪಿಸಿಕೊಂಡ ಹಾಲಿ ಶಾಸಕರ ಕ್ಷೇತ್ರಗಳ ಫಲಿತಾಂಶ ಏನಾಗಿದೆ?. ಈ ಕ್ಷೇತ್ರಗಳಲ್ಲಿ ಪಕ್ಷದಿಂದ ಅಧಿಕೃತ ಟಿಕೆಟ್​ ಪಡೆದ ಅಭ್ಯರ್ಥಿಗಳ ಭವಿಷ್ಯ ಏನಾಗಿದೆ?. ಇಂತಹ ಕ್ಷೇತ್ರಗಳ ಮಾಹಿತಿ ಇಲ್ಲಿದೆ.

ಬಿಜೆಪಿಗೆ ಸೋಲು ಎಲ್ಲಿ, ಗೆಲುವು ಎಲ್ಲಿ?:

ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಕರ್ನಾಟಕ ಹೆಬ್ಬಾಗಿಲು. ದಕ್ಷಿಣದಲ್ಲಿ ಮೊದಲ ಬಾರಿಗೆ ಕೇಸರಿ ಪಕ್ಷ ಅಧಿಕಾರದ ಗದ್ದುಗೆ ಹೇರಲು ಸಾಧ್ಯವಾಗಿರುವುದ ಕರ್ನಾಟಕದಲ್ಲಿ ಮಾತ್ರ. ಆದರೆ, ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿಯಲು ಕಮಲ ಪಡೆಗೆ ಇದುವರೆಗೂ ಸಾಧ್ಯವಾಗಿಲ್ಲ. 2018ರ ವಿಧಾನಸಭಾ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದರೂ ಅಧಿಕಾರವನ್ನು ಹಿಡಿಯಲು ಅಪರೇಷನ್​ ಕಮಲ ಮಾಡಬೇಕಾಗಿ ಬಂದಿತ್ತು. ಆದ್ದರಿಂದ ನಿಶ್ಚಲ ಬಹುಮತದೊಂದಿಗೆ ಅಧಿಕಾರ ಉಳಿಸಿಕೊಳ್ಳಬೇಕೆಂದು ನಾನಾ ತಂತ್ರಗಳನ್ನು ಕೇಸರಿ ಪಡೆ ಹೆಣೆದಿತ್ತು.

Bjp Ticket denied mlas constituencies Results
ಸೋಲು-ಗೆಲುವಿನ ಅಂಕಿ-ಅಂಶ

ಅದರಲ್ಲೂ, ಆಡಳಿತ ವಿರೋಧಿ ಅಲೆಯಿಂದ ತಪ್ಪಿಸಿಕೊಳ್ಳಲು ಗುಜರಾತ್​ ಮಾಡೆಲ್​ಗೂ ಮೊರೆ ಹೋಗಿತ್ತು. ಇದರ ಪ್ರಕಾರ ಹಾಲಿ ಶಾಸಕರಿಗೆ ಟಿಕೆಟ್​ ತಪ್ಪಿಸಿ ಹೊಸ ಮುಖಗಳಿಗೆ ಮಣೆ ಹಾಕಿ ಜನರ ಮನ ಗೆಲ್ಲುವ ಕಸರತ್ತು ಮಾಡಿತ್ತು. ಜೊತೆಗೆ ಆರೋಪಗಳನ್ನು ಎದುರಿಸುತ್ತಿರುವ ಶಾಸಕರನ್ನು ದೂರವಿಟ್ಟು ಚುನಾವಣೆ ಗೆಲ್ಲುವ ತಂತ್ರಗಾರಿಕೆಯನ್ನು ರೂಪಿಸಿತ್ತು. ಅಷ್ಟೇ ಅಲ್ಲ, ಪಕ್ಷದ ಮಟ್ಟದಲ್ಲೇ ಆಂತರಿಕ ಮತದಾನದ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡುವ ವಿಧಾನವನ್ನು ಅಳವಡಿಸಿಕೊಂಡಿತ್ತು. ಇವೆಲ್ಲಗಳ ಪರಿಣಾಮ ಈ ಬಾರಿ ಬಿಜೆಪಿ ಹೊಸ ಮುಖಗಳು ಚುನಾವಣಾ ಕಣದಲ್ಲಿದ್ದವು.

Bjp Ticket denied mlas constituencies Results
ಸೋಲು-ಗೆಲುವಿನ ಅಂಕಿ-ಅಂಶ
  1. ಶಿಕಾರಿಪುರ: ಶಿಕಾರಿಪುರ ಕ್ಷೇತ್ರದಲ್ಲಿ ವಿಜಯೇಂದ್ರ ಗೆಲುವು ಸಾಧಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದರು. ಹೀಗಾಗಿ ಯಡಿಯೂರಪ್ಪ ಬದಲು ಪುತ್ರ ಬಿವೈ ವಿಜಯೇಂದ್ರ ಅವರನ್ನು ಬಿಜೆಪಿ ಕಣಕ್ಕೆ ಇಳಿಸಲಾಗಿತ್ತು. ಈ ಮೂಲಕ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಪ್ರವೇಶಿಸಿದ್ದ ಬಿ ವೈ ವಿಜಯೇಂದ್ರ ಸುಮಾರು 10 ಸಾವಿರ ಮತಗಳಿಂದ ಗೆಲುವು ಕಂಡಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ 70,802 ಮತಗಳ ಪಡೆದು ಎರಡನೇ ಪಡೆದಿದ್ದಾರೆ.
  2. ಹುಬ್ಬಳ್ಳಿ ಸೆಂಟ್ರಲ್​: ಹುಬ್ಬಳ್ಳಿ - ಧಾರವಾಡ ಸೆಂಟ್ರಲ್​ ಕ್ಷೇತ್ರದಲ್ಲಿ ಮಹೇಶ್ ಟೆಂಗಿನಕಾಯಿ 35 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ. ಮಾಜಿ ಸಿಎಂ ಆಗಿದ್ದ ಜಗದೀಶ್ ಶೆಟ್ಟರ್ ಅವರಿಗೆ ಬಿಜೆಪಿ ಟಿಕೆಟ್​ ನಿರಾಕರಿಸಿತ್ತು. ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆಯುವಂತೆ ನೇರವಾಗಿ ಬಿಜೆಪಿ ಹೈಕಮಾಂಡ್ ಸೂಚಿಸಿತ್ತು. ಆದರೆ, ಇದಕ್ಕೆ ಸೆಡ್ಡು ಹೊಡೆದಿದ್ದ ಶೆಟ್ಟರ್​ ಪಕ್ಷ ತೊರೆದು ಕಾಂಗ್ರೆಸ್​ ಸೇರಿ ಸ್ಪರ್ಧಿಸಿದ್ದರು. ಆದರೆ, ಈ ಕ್ಷೇತ್ರವನ್ನು ಆರು ಪ್ರತಿನಿಧಿಸಿದ್ದ ಶೆಟ್ಟರ್​ ಕಳೆದುಕೊಂಡಿದ್ದಾರೆ.
  3. ಶಿವಮೊಗ್ಗ ನಗರ: ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಚನ್ನಬಸಪ್ಪ ಜಯ ಸಾಧಿಸಿದ್ದಾರೆ. ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಅವರಿಗೂ ಬಿಜೆಪಿ ಟಿಕೆಟ್​ ನೀಡಿರಲಿಲ್ಲ. ಹೀಗಾಗಿ ಈಶ್ವರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆದಿದ್ದರು. ಬಳಿಕ ಈಶ್ವರಪ್ಪ ಪ್ರತಿನಿಧಿಸುತ್ತಿದ್ದ ಈ ಕ್ಷೇತ್ರದಲ್ಲಿ ಕುಟುಂಬಕ್ಕೆ ಟಿಕೆಟ್​ ನೀಡಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಇದರ ಬದಲಿಗೆ ಚೆನ್ನಬಸಪ್ಪ ಅವರನ್ನು ಬಿಜೆಪಿ ಕಣಕ್ಕಿಳಿಸಿತ್ತು.
  4. ವಿಜಯನಗರ: ವಿಜಯನಗರ ಕ್ಷೇತ್ರದಲ್ಲಿ ಆನಂದ್ ಸಿಂಗ್ ಪುತ್ರ ಸಿದ್ಧಾರ್ಥ್ ಸಿಂಗ್‌ ಸೋತಿದ್ದಾರೆ. ವಿಜಯನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಆನಂದ್​ ಸಿಂಗ್​ ತಮ್ಮ ಬದಲಿಗೆ ಈ ಬಾರಿ ಪುತ್ರ ಸಿದ್ಧಾರ್ಥ್ ಸಿಂಗ್‌ ಅವರಿಗೆ ಬಿಜೆಪಿ ಟಿಕೆಟ್​ ಕೊಡಿಸಿದ್ದರು. ಆದರೆ, ಕಾಂಗ್ರೆಸ್​ನ ಗವಿಯಪ್ಪ ವಿರುದ್ಧ 30 ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ.
  5. ಸುಳ್ಯ: ಸುಳ್ಯ ಕ್ಷೇತ್ರದಲ್ಲಿ ಭಾಗೀರಥಿ ಮುರುಳ್ಯ ಗೆಲುವು ದಾಖಲಿಸಿದ್ದಾರೆ. ಎಸ್. ಅಂಗಾರ ಅವರಿಗೆ ಬಿಜೆಪಿ ಟಿಕೆಟ್​ ನೀಡಿರಲಿಲ್ಲ. ಬದಲಿಗೆ ಭಾಗೀರಥಿ ಮುರುಲ್ಯಾ ಅವರನ್ನು ಕಣಕ್ಕೆ ಇಳಿಸಿತ್ತು. ಹೀಗಾಗಿ ಆರಂಭದಲ್ಲಿ ಅಂಗಾರ ಚುನಾವಣಾ ರಾಜಕೀಯದಿಂದ ನಿವೃತ್ತಿಯನ್ನೂ ಘೋಷಿಸಿದ್ದರು. ಆದರೆ, ಬಳಿಕ ತಮ್ಮ ನಿರ್ಧಾರದಿಂದ ಹಿಂದೆ ಸರಿದು ಭಾಗೀರಥಿ ಮುರುಳ್ಯ ಅವರಿಗೆ ಬೆಂಬಲ ಪ್ರಕಟಿಸಿದ್ದರು.
  6. ಮೂಡಿಗೆರೆ: ಹಲವು ವಿವಾದಗಳ ಕಾರಣ ಮೂಡಿಗರೆ ಕ್ಷೇತ್ರದಲ್ಲಿ ಶಾಸಕ ಎಂಪಿ ಕುಮಾರಸ್ವಾಮಿ ಅವರಿಗೆ ಬಿಜೆಪಿ ಟಿಕೆಟ್​ ನಿರಾಕರಿಸಿತ್ತು. ಬದಲಿಗೆ ದೀಪಕ್​ ದೊಡ್ಡಯ್ಯ ಅವರಿಗೆ ಟಿಕೆಟ್​ ಕೊಟ್ಟಿತ್ತು. ಆದರೆ, ಇಲ್ಲಿ ಕಾಂಗ್ರೆಸ್​ನ ನಯನಾ ಮೋಟಮ್ಮ ಗೆದ್ದಿದ್ದರು. ಬಿಜೆಪಿ ಟಿಕೆಟ್​ ಸಿಗದ ಕಾರಣ ಕುಮಾರಸ್ವಾಮಿ ಜೆಡಿಎಸ್​ನಿಂದ​ ಸ್ಪರ್ಧೆ ಮಾಡಿದ್ದರು.
  7. ಕೃಷ್ಣರಾಜ: ಕೆಆರ್ ಕ್ಷೇತ್ರದಲ್ಲಿ ಟಿಎಸ್​ ಶ್ರೀವತ್ಸ ಗೆಲುವು ಸಾಧಿಸಿದ್ದಾರೆ. ನಾಲ್ಕು ಬಾರಿ ಶಾಸಕರಾಗಿದ್ದ ಹಿರಿಯ ಮುಖಂಡ ರಾಮದಾಸ್ ಅವರಿಗೆ ಬಿಜೆಪಿ ಟಿಕೆಟ್​ ಕೊಟ್ಟಿರಲಿಲ್ಲ. ಪಕ್ಷದ ಈ ತೀರ್ಮಾನದಿಂದ ಆರಂಭದಲ್ಲಿ ರಾಮದಾಸ್ ಮುನಿಸಿಕೊಂಡಿದ್ದರು. ನಂತರದಲ್ಲಿ ಪಕ್ಷದಲ್ಲಿ ಸಕ್ರಿಯರಾಗಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದ ಶ್ರೀವತ್ಸ ಪರ ಕೆಲಸ ಮಾಡಿದ್ದರು.
  8. ಚನ್ನಗಿರಿ: ಚನ್ನಗಿರಿ ಕ್ಷೇತ್ರದಲ್ಲಿ ಹೆಚ್​ಎಸ್​ ಶಿವಕುಮಾರ್ ಸೋತಿದ್ದಾರೆ. ಲಂಚ ಪಡೆದ ಆರೋಪ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರಿಂದ ಹಾಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಧನಕ್ಕೆ ಒಳಗಾಗಿದ್ದರು. ಹೀಗಾಗಿ ಇದರ ಮುಜುಗರದಿಂದ ಪಾರಾಗಲು ಟಿಕೆಟ್​ ಕೊಟ್ಟಿರಲಿಲ್ಲ. ತಂದೆಗೆ ಟಿಕೆಟ್​ ಸಿಗಲ್ಲ ಎಂದು ಗೊತ್ತಾಗಿ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಲ್ಲಿಕಾರ್ಜುನ ಟಿಕೆಟ್ ಬಯಸಿದ್ದರು. ಆದರೆ, ಮಾಡಾಳ್ ಕುಟುಂಬದಲ್ಲಿ ಯಾರಿಗೂ​ ಮಣೆ ಹಾಕದೇ ಶಿವಕುಮಾರ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಆದರೆ, ಇಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಬಸವರಾಜ ಶಿವಗಂಗಾ ಗೆಲುವು ಕಂಡಿದ್ದಾರೆ.
  9. ಮಹದೇವಪುರ: ಮಹದೇವಪುರ ಕ್ಷೇತ್ರದಲ್ಲಿ ಅರವಿಂದ ಲಿಂಬಾವಳಿ ಪತ್ನಿ ಮಂಜುಳಾ ಲಿಂಬಾವಳಿ ಸೋಲು ಕಂಡಿದ್ದಾರೆ. ಅರವಿಂದ ಲಿಂಬಾವಳಿ ಅವರಿಗೆ ಬಿಜೆಪಿ ಟಿಕೆಟ್​ ನೀಡಿರಲಿಲ್ಲ. ಬದಲಿಗೆ ಪತ್ನಿ ಮಂಜುಳಾ ಲಿಂಬಾವಳಿ ಅವರಿಗೆ ಟಿಕೆಟ್​ ಕೊಟ್ಟು ಕಣಕ್ಕೆ ಇಳಿಸಿತ್ತು. ಆದರೆ, ಇಲ್ಲಿ ಕಾಂಗ್ರೆಸ್​ನ ಹೆಚ್​​ ನಾಗೇಶ್ ಗೆದ್ದಿದ್ದಾರೆ.
  10. ಪುತ್ತೂರು: ಪುತ್ತೂರು ಕ್ಷೇತ್ರದಲ್ಲಿ ಆಶಾ ತಿಮ್ಮಪ್ಪ ಸೋತಿದ್ದಾರೆ. ಹಾಲಿ ಶಾಸಕ ಸಂಜೀವ್ ಮಠಂದೂರು ಮತ್ತೊಮ್ಮೆ ಸ್ಪರ್ಧೆಗೆ ಇಚ್ಛಿಸಿದ್ದರೂ ಬಿಜೆಪಿ ಟಿಕೆಟ್​ ನೀಡಲು ಮನಸ್ಸು ಮಾಡಿರಲಿಲ್ಲ. ಇದೇ ವೇಳೆ ಹಿಂದೂ ಪರ ಸಂಘಟನೆಯ ಮುಖಂಡ ಅರುಣ್ ಪುತ್ತಿಲ ಅವರಿಗೆ ಬಿಜೆಪಿ ಟಿಕೆಟ್​ ನೀಡಬೇಕೆಂಬ ಒತ್ತಡ ಎದುರಾಗಿತ್ತು. ಆದರೂ, ಟಿಕೆಟ್​ ಸಿಗದ ಕಾರಣ ಅರುಣ್ ಪುತ್ತಿಲ ಪಕ್ಷೇತರರಾಗಿ ಸ್ಪರ್ಧಿಸಿ ಬಿಜೆಪಿಗೆ ಸವಾಲೊಡ್ಡಿದ್ದರು. ಇಲ್ಲಿ ಕಾಂಗ್ರೆಸ್​ನ ಅಶೋಕ ಕುಮಾರ ರೈ 66,607 ಪಡೆದು ಗೆಲುವು ಕಂಡಿದ್ದಾರೆ. ಪುತ್ತಿಲ 62,458 ಮತ ಪಡೆದು ಎರಡನೇ ಸ್ಥಾನ ಪಡೆದರೆ, ಆಶಾ 37,558 ಮತ ಪಡೆದು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.
  11. ಬೆಳಗಾವಿ ಉತ್ತರ: ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಬಿಜೆಪಿಯ ಹೊಸ ಮುಖ ಡಾ. ರವಿ ಪಾಟೀಲ್ ಸೋಲು ಕಂಡಿದ್ದಾರೆ. ಹಾಲಿ ಶಾಸಕ ಅನಿಲ್ ಬೆನಕೆ ಬಿಜೆಪಿ ಟಿಕೆಟ್​ ನಿರಾಕರಿಸಿತ್ತು. ಬದಲಿಗೆ ರವಿ ಪಾಟೀಲ್​ ಅವರಿಗೆ ಮಣೆ ಹಾಕಿತ್ತು. ಆದರೆ, ಟಿಕೆಟ್​ ಕೈ ತಪ್ಪಿದ್ದರಿಂದ ಆರಂಭದಲ್ಲಿ ಅನಿಲ ಬೆನಕೆ ಅಸಮಾಧಾನಗೊಂಡಿದ್ದರು. ಬೆಂಬಲಿಗರು ಲೋಕಸಭಾ ಸಂಸದೆ ಮಂಗಳಾ ಅಂಗಡಿ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ನಂತರದಲ್ಲಿ ತಮ್ಮ ಬಂಡಾಯ ಶಮನಗೊಳಿಸಿ ಪಕ್ಷದ ಅಭ್ಯರ್ಥಿಗೆ ಅನಿಲ ಬೆನಕೆ ಬೆಂಬಲ ಸೂಚಿಸಿದ್ದರು. ಆದರೂ, ಇಲ್ಲಿ ಕಾಂಗ್ರೆಸ್​ನ ಆಸೀಫ್​ ಸೇಠ್​ ಗೆದ್ದಿದ್ದಾರೆ.
  12. ರಾಮದುರ್ಗ: ರಾಮದುರ್ಗ ಕ್ಷೇತ್ರದಲ್ಲಿ ಚಿಕ್ಕ ರೇವಣ್ಣ ಸೋಲು ಕಂಡಿದ್ದಾರೆ. ಇಲ್ಲಿ ಸಹ ಹಾಲಿ ಶಾಸಕ ಮಹಾದೇವಪ್ಪ ಯಾದವಾಡ ಬದಲು ಇತ್ತಿಚೆಗಷ್ಟೇ ಪಕ್ಷ ಸೇರಿದ್ದ ಚಿಕ್ಕ ರೇವಣ್ಣ ಅವರಿಗೆ ಬಿಜೆಪಿ ಟಿಕೆಟ್​ ನೀಡಿತ್ತು. ಹೀಗಾಗಿ ಇಲ್ಲಿ ಕೂಡ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೇ, ಬಂಡಾಯ ಅಭ್ಯರ್ಥಿಯಾಗಿ ಮಹಾದೇವಪ್ಪ ಯಾದವಾಡ ನಾಮಪತ್ರ ಕೂಡ ಸಲ್ಲಿಸಿದ್ದರು. ಆದರೆ, ನಂತರ ಬಂಡಾಯ ಶಮನಗೊಳಿಸುವಲ್ಲಿ ಬಿಜೆಪಿ ನಾಯಕರು ಯಶಸ್ವಿಯಾಗಿದ್ದರು. ಆದರೂ, ಕಾಂಗ್ರೆಸ್​ನ ಅಶೋಕ ಪಟ್ಟಣ್ ಗೆಲುವು ದಾಖಲಿಸಿದ್ದಾರೆ.
  13. ಹೊಸದುರ್ಗ: ಹೊಸದುರ್ಗ ಕ್ಷೇತ್ರದಲ್ಲಿ ಎಸ್. ಲಿಂಗಮೂರ್ತಿ ಪರಾಭವಗೊಂಡಿದ್ದಾರೆ. ಸರ್ಕಾರ ಮತ್ತು ಪಕ್ಷದ ಮುಖಂಡರ ಪರ ಬಹಿರಂಗವಾಗಿ ಟೀಕಿಸಿದ್ದ ಕಾರಣಕ್ಕೆ ಗೂಳಿಹಟ್ಟಿ ಶೇಖರ್ ಬಿಜೆಪಿ ಟಿಕೆಟ್​ ನಿರಾಕರಿಸಲಾಗಿತ್ತು. ಟಿಕೆಟ್​ ಸಿಗದ ಕಾರಣ ಪಕ್ಷಕ್ಕೆ ಗೂಳಿಹಟ್ಟಿ ರಾಜೀನಾಮೆ ಕೊಟ್ಟು ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದರು. ಇಬ್ಬರ ನಡುವೆ ಕಾಂಗ್ರೆಸ್​ನ ಬಿಜಿ ಗೋವಿಂದಪ್ಪ ಗೆದ್ದಿದ್ದಾರೆ.
  14. ಉಡುಪಿ: ಉಡುಪಿ ಕ್ಷೇತ್ರದಲ್ಲಿ ಯಶಪಾಲ್ ಸುವರ್ಣ ಗೆಲುವು ಕಂಡಿದ್ದಾರೆ. ದೇಶಾದ್ಯಂತ ಸದ್ದು ಮಾಡಿದ್ದ ಹಿಜಾಬ್​ ವಿವಾದದಲ್ಲಿ ಮುನ್ನಲೆಯಲ್ಲಿದ್ದ ಶಾಸಕ ರಘುಪತಿ ಭಟ್ ಅವರಿಗೆ ಬಿಜೆಪಿ ಟಿಕೆಟ್​ ನೀಡದೇ ಅಚ್ಚರಿ ಮೂಡಿಸಿತ್ತು. ಟಿಕೆಟ್​ ನಿರಾಕರಿಸಿದ ಕಾರಣ ರಘುಪತಿ ಭಟ್ ಕಣ್ಣೀರು ಸಹ ಹಾಕಿದ್ದರು. ಆದರೆ, ನಂತರ ತಮ್ಮ ಬಂಡಾಯ ಶಮನಗೊಳಿಸಿ ಪಕ್ಷದ ಅಧಿಕೃತ ಅಭ್ಯರ್ಥಿ ಯಶಪಾಲ್ ಸುವರ್ಣ ಅವರಿಗೆ ಬೆಂಬಲ ಸೂಚಿಸಿದ್ದರು.
  15. ಕಾಪು: ಕಾಪು ಕ್ಷೇತ್ರದಲ್ಲಿ ಸುರೇಶ್ ಶೆಟ್ಟಿ ಜಯ ದಾಖಲಿಸಿದ್ದಾರೆ. ಹಾಲಿ ಶಾಸಕ ಲಾಲಾಜಿ ಮೆಂಡನ್ ಅವರಿಗೆ ಬಿಜೆಪಿ ಟಿಕೆಟ್​ ನೀಡಿರಲಿಲ್ಲ. ಪಕ್ಷದ ಈ ನಿರ್ಧಾರದಿಂದ ಕಾರ್ಯಕರ್ತರಲ್ಲಿ ಕೊಂಚ ಗೊಂದಲ ಉಂಟಾಗಿತ್ತು. ಬಂಡಾಯದ ಬಗ್ಗೆ ಮಾತುಗಳು ಸಹ ಕೇಳಿ ಬಂದಿದ್ದವು. ಆದರೆ, ಬಳಿಕ ಖುದ್ದು ಮೆಂಡನ್​ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸುವುದಾಗಿ ಘೋಷಿಸಿದ್ದರು.
  16. ದಾವಣಗೆರೆ ಉತ್ತರ: ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಲೋಕಿಕೆರೆ ನಾಗರಾಜ್​ ಸೋತಿದ್ದಾರೆ. ಇಲ್ಲಿ ಶಾಸಕರಾಗಿದ್ದ ಎಸ್​ಎ ರವೀಂದ್ರನಾಥ್ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದರು. ಐದು ಬಾರಿ ಶಾಸಕರಾಗಿದ್ದ ರವೀಂದ್ರನಾಥ್ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಅನಾರೋಗ್ಯದ ಕಾರಣದಿಂದ ಚುನಾವಣೆಯಿಂದ ದೂರ ಸರಿದ್ದಿದ್ದರು. ನಂತರದಲ್ಲಿ ಪಕ್ಷದ ಅಭ್ಯರ್ಥಿಯ ಪರವಾಗಿ ಪ್ರಚಾರ ತೊಡಗಿ ಬೆಂಬಲ ಸೂಚಿಸಿದ್ದರು. ಆದರೆ, ಕಾಂಗ್ರೆಸ್​ನ ಎಸ್​ಎಸ್​ ಮಲ್ಲಿಕಾರ್ಜುನ ಗೆದ್ದಿದ್ದಾರೆ.
  17. ಕಲಘಟಗಿ: ಕಲಘಟಗಿ ಕ್ಷೇತ್ರದಲ್ಲಿ ನಾಗರಾಜ ಛಬ್ಬಿ ಸೋಲು ಕಂಡಿದ್ದಾರೆ. ಹಾಲಿ ಶಾಸಕ ಸಿಎಂ ನಿಂಬಣ್ಣವರ ಅವರಿಗೆ ಬಿಜೆಪಿ ಟಿಕೆಟ್​ ನಿರಾಕರಣೆ ಮಾಡಿತ್ತು. ಇದರಿಂದ ಆರಂಭದಲ್ಲಿ ನಿಂಬಣ್ಣವರ ಅಸಮಾಧಾನ ವ್ಯಕ್ತಪಡಿಸಿದ್ದರು. ಮತ್ತೊಂದೆಡೆ, ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿಯಾಗಿದ್ದ ನಾಗರಾಜ ಛಬ್ಬಿ ಅವರಿಗೆ ಟಿಕೆಟ್​ ಕೈ ತಪ್ಪಿತ್ತು. ಮಾಜಿ ಸಚಿವ ಸಂತೋಷ್ ಲಾಡ್​ ಅವರಿಗೆ ಕಾಂಗ್ರೆಸ್​ ಟಿಕೆಟ್​ ನೀಡಿತ್ತು. ಇದರಿಂದ ಬಂಡಾಯ ಎದ್ದಿದ್ದ ನಾಗರಾಜ ಛಬ್ಬಿ ಬಿಜೆಪಿ ಸೇರಿ ಸ್ಪರ್ಧೆ ಮಾಡಿದ್ದರು. ಆದರೆ, ಲಾಡ್​ ಗೆದ್ದಿದ್ದಾರೆ.
  18. ಹಾವೇರಿ: ಹಾವೇರಿ ಕ್ಷೇತ್ರದಲ್ಲಿ ಗವಿಸಿದ್ದಪ್ಪ ದ್ಯಾಮಣ್ಣನವರ್ ಸೋತಿದ್ದಾರೆ. ಇಲ್ಲಿನ ಶಾಸಕರಾಗಿದ್ದ ನೆಹರು ಓಲೇಕಾರ ಮತ್ತು ಪುತ್ರರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿತ್ತು. ಅವ್ಯವಹಾರದ ಪ್ರಕರಣದಲ್ಲಿ ಜೈಲು ಶಿಕ್ಷೆಯೂ ಪ್ರಕಟವಾಗಿತ್ತು. ಇದರಿಂದ ಬಿಜೆಪಿ ಟಿಕೆಟ್​ ಕೊಟ್ಟಿರಲಿಲ್ಲ. ಬದಲಿಗೆ ಗವಿಸಿದ್ದಪ್ಪ ದ್ಯಾಮಣ್ಣನವರ್ ಅವರಿಗೆ ಕಮಲ ಪಕ್ಷ ಟಿಕೆಟ್​ ನೀಡಿತ್ತು. ಇಲ್ಲಿ ಕಾಂಗ್ರೆಸ್​ನ ರುದ್ರಪ್ಪ ಲಮಾಣಿ ಗೆಲುವು ಕಂಡಿದ್ದಾರೆ.
  19. ಮಾಯಕೊಂಡ: ಮಾಯಕೊಂಡ ಕ್ಷೇತ್ರದಲ್ಲಿ ಬಸವರಾಜ್ ನಾಯ್ಕ್ ಸೋಲು ಕಂಡಿದ್ದಾರೆ. ಹಾಲಿ ಶಾಸಕ ಪ್ರೊ. ಲಿಂಗಣ್ಣ ಬದಲಿಗೆ ನಾಯ್ಕ್​ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿತ್ತು. ಆದರೆ, ಮಾಜಿ ಶಾಸಕರಾಗಿದ್ದ ನಾಯ್ಕ್​ ಅವರಿಗೆ ಟಿಕೆಟ್​ ನೀಡಿದ್ದು ಕೂಡ ಪಕ್ಷದಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. 10ಕ್ಕೂ ಹಚ್ಚು ಜನ ಟಿಕೆಟ್​ ಆಕಾಂಕ್ಷಿಗಳು ಇದ್ದಿದ್ದರಿಂದ ಹೊಸ ಮುಖಕ್ಕೆ ಟಿಕೆಟ್​ ನೀಡಬೇಕಾಗಿತ್ತು ಎಂದು ಪಟ್ಟು ಹಿಡಿದಿದ್ದರು. ಅಲ್ಲದೇ, ಬಂಡಾಯ ಅಭ್ಯರ್ಥಿಯಾಗಿ ಬಿಜೆಪಿಯ ಮತ್ತೊಬ್ಬ ಮುಖಂಡ ಶಿವಪ್ರಕಾಶ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್​ನ ಕೆಎಸ್​ ಬಸವಂತಪ್ಪ ಗೆದ್ದಿದ್ದಾರೆ.
  20. ಬೈಂದೂರು: ಬೈಂದೂರು ಕ್ಷೇತ್ರದಲ್ಲಿ ಬಿಜೆಪಿಯ ಹೊಸ ಮುಖ ಗುರುರಾಜ್ ಗಂಟಿಹೊಳೆ ಜಯ ಸಾಧಿಸಿದ್ದಾರೆ. ಹಾಲಿ ಶಾಸಕ ಸುಕುಮಾರ್ ಶೆಟ್ಟಿ ಅವರಿಗೆ ಟಿಕೆಟ್​ ಕೈ ತಪ್ಪಿದ್ದರಿಂದ ಅಭಿಮಾನಿಗಳು ಮತ್ತು ಬೆಂಬಲಿಗರು ಆಕ್ರೋಶಗೊಂಡಿದ್ದರು. ಆದರೂ, ಕಾಂಗ್ರೆಸ್​ನ ಗೋಪಾಲ್ ಪೂಜಾರಿ ವಿರುದ್ಧ ಗಂಟಿಹೊಳೆ ಗೆದ್ದಿದ್ದಾರೆ.
  21. ಕುಂದಾಪುರ: ಕುಂದಾಪುರ ಕ್ಷೇತ್ರದಿಂದ ಕಿರಣ್ ಕೊಡ್ಗಿ ಭರ್ಜರಿ ಗೆಲುವು ಕಂಡಿದ್ದಾರೆ. ಐದು ಬಾರಿ ಶಾಸಕರಾಗಿದ್ದ ಹಾಲಾಡಿ ಶ್ರೀನಿವಾಸ್​​ ಶೆಟ್ಟಿ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದರು. ಇದರಿಂದ ಹೊಸ ಮುಖ ಕೊಡ್ಗಿ ಅವರಿಗೆ ಬಿಜೆಪಿ ಕಣಕ್ಕೆ ಇಳಿಸಿತ್ತು. ಸ್ವಯಃ ನಿವೃತ್ತಿ ಘೋಷಣೆ ಮಾಡಿದ್ದ ಹಾಲಾಡಿ ಶ್ರೀನಿವಾಸ್ ಶೆಟ್ಟಿ​ ಕ್ಷೇತ್ರದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಪರವಾಗಿ ಪ್ರಚಾರ ಕಾರ್ಯ ಕೈಗೊಂಡಿದ್ದರು.
  22. ಶಿರಹಟ್ಟಿ: ಶಿರಹಟ್ಟಿ ಕ್ಷೇತ್ರದಲ್ಲಿ ಚಂದ್ರು ಲಮಾಣಿ ಜಯ ಸಾಧಿಸಿದ್ದಾರೆ. ಹಾಲಿ ಶಾಸಕ ರಾಮಪ್ಪ ಲಮಾಣಿ ಅವರಿಗೆ ಟಿಕೆಟ್​ ನಿರಾಕರಿಸಿತ್ತು. ಬದಲಿಗೆ ಶಿರಹಟ್ಟಿ ತಾಲೂಕಾಸ್ಪತ್ರೆಯಲ್ಲಿ ವೈದ್ಯರಾಗಿದ್ದ ಚಂದ್ರು ಲಮಾಣಿ ಅವರಿಗೆ ಟಿಕೆಟ್​ ಕೊಟ್ಟಿತ್ತು.
Last Updated :May 14, 2023, 9:41 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.