ETV Bharat / state

2023ರಲ್ಲಿ ಹೈಕೋರ್ಟ್‌ ಹೊರಡಿಸಿದ ಪ್ರಮುಖ ಆದೇಶಗಳು ಯಾವುವು?

author img

By ETV Bharat Karnataka Team

Published : Dec 26, 2023, 9:43 PM IST

Important orders passed by the High Court during the last one year
ಕಳೆದ ಒಂದು ವರ್ಷದ ಅವಧಿಯಲ್ಲಿ ಹೈಕೋರ್ಟ್‌ನಿಂದ ಹೊರಬಿದ್ದ ಪ್ರಮುಖ ಆದೇಶಗಳು

2023ರ ಒಂದು ವರ್ಷದ ಅವಧಿಯಲ್ಲಿ ಹೈಕೋರ್ಟ್​ನಿಂದ ಹೊರಬಿದ್ದ ಪ್ರಮುಖ ಆದೇಶಗಳು ಇಂತಿವೆ..

ಬೆಂಗಳೂರು: ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಹಲವು ವೈಯಕ್ತಿಕ ಖಾತೆಗಳನ್ನು ನಿರ್ಬಂಧಿಸಿದ್ದ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕ್ರಮ ಪ್ರಶ್ನಿಸಿದ್ದ ಅರ್ಜಿಗೆ 50 ಲಕ್ಷ ರೂಪಾಯಿ ದಂಡ ವಿಧಿಸಿ ಹೈಕೋರ್ಟ್ ಆದೇಶಿಸಿತ್ತು. ಅವಮಾನಿಸುವ ಮತ್ತು ಟೀಕಿಸುವ ಉದ್ದೇಶವಿಲ್ಲದೆ ಜಾತಿ ಹೆಸರನ್ನು ಪ್ರಸ್ತಾಪಿಸಿ ನಿಂದಿಸಿದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ ಅಪರಾಧವಾಗುವುದಿಲ್ಲ ಎಂದು ತೀರ್ಪು ನೀಡಿತ್ತು.

ಆಮ್ ಆದ್ಮಿ ಪಕ್ಷಕ್ಕೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ನೀಡುವ ಮನವಿ ಪರಿಗಣಿಸುವಂತೆ ಹೈಕೋರ್ಟ್ ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು. ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠ ಸೋಮವಾರ ಒಂದೇ ದಿನ 522 ಪ್ರಕರಣಗಳನ್ನು ವಿಚಾರಣೆ ನಡೆಸಿ ದಾಖಲೆ ಬರೆದಿದೆ. ವಿಧಾನಸಭೆ ಚುನಾವಣೆ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ರ‍್ಯಾಲಿಗೆ ಅವಕಾಶ ನೀಡಿತ್ತು.

ಬಾಡಿಗೆ ತಾಯ್ತನ (ನಿಯಂತ್ರಣ) ಕಾಯಿದೆ 2021ರ ಅಡಿ ಮಕ್ಕಳಿಲ್ಲದ ದಂಪತಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅನುವಂಶಿಕ (ಜೆನೆಟಿಕ್), ದೈಹಿಕ ಮತ್ತು ಆರ್ಥಿಕ ಸ್ಥಿತಿಗಳಗಳ ಕುರಿತು ಪರೀಕ್ಷೆಗೊಳಪಡಿಸಿ ಮುಂದಿನ ಕ್ರಮಕ್ಕೆ ಮುಂದಾಗಲು ನಿರ್ದೇಶನ ನೀಡಿತ್ತು. ದೃಷ್ಟಿ ವಿಶೇಷ ಚೇತನರೂ ಸೇರಿದಂತೆ ದಿವ್ಯಾಂಗರಿಗೆ ನೆರವಾಗಲು ಬಸ್​ಗಳಲ್ಲಿ ಆಡಿಯೋ ರೂಪದಲ್ಲಿ ಪ್ರಕಟಣಾ ವ್ಯವಸ್ಥೆ ಅಳವಡಿಸುವಂತೆ ಖಾಸಗಿ ಬಸ್ ಆಪರೇಟರ್​ಗಳಿಗೆ ನಿರ್ದೇಶನ ನೀಡಲು ಈಗಾಗಲೇ ಸೂಚನೆ ನೀಡಿದೆ.

ಆಸ್ತಿ ಖಾತೆ ಕೋರಿ ಸಲ್ಲಿಸಿರುವ ಅರ್ಜಿಗಳ ಸ್ವೀಕೃತಿ ಮತ್ತು ಅವುಗಳ ಸ್ಥಿತಿಗತಿಗೆ ಸಂಬಂಧಿಸಿದ ಮಾಹಿತಿಯನ್ನು ಸಂಬಂಧಿತ ನಗರ ಸಭೆಗಳು ಆನ್​ಲೈನ್​ನಲ್ಲಿ (ವೆಬ್ ಹೋಸ್ಟಿಂಗ್) ದಾಖಲಿಸಲು ಸೂಚಿಸಿತ್ತು. ರಾಜ್ಯದಲ್ಲಿ 13,352 ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಸರ್ಕಾರಕ್ಕೆ ಸಮ್ಮತಿಸಿತ್ತು. ಕೋಳಿ ಸಾಕಾಣಿಕೆ ಮಾಡುವುದು ಕೃಷಿ ಚಟುವಟಿಕೆಯಾಗಿದೆ. ಇದಕ್ಕೆ ವಾಣಿಜ್ಯ ಚಟುವಟಿಕೆ ಆಧಾರದಲ್ಲಿ ತೆರಿಗೆ ವಿಧಿಸಲು ಗ್ರಾಮ ಪಂಚಾಯತಿಗೆ ಅಧಿಕಾರವಿಲ್ಲ ಎಂದು ಆದೇಶಿಸಿತ್ತು.

ಆರ್ಥಿಕವಾಗಿ ದುರ್ಬಲರಿಗೆ ಸಂವಿಧಾನ ಮತ್ತು ಚುನಾವಣಾ ಆಯೋಗದ ನಿಯಮಗಳು ಹಾಗೂ ಮಾರ್ಗಸೂಚಿಗಳ ಪ್ರಕಾರ ಗ್ಯಾರಂಟಿ ಘೋಷಣೆ ಮಾಡಿರುವುದಾಗಿ ಹೈಕೋರ್ಟ್​ಗೆ ಸಿ.ಎಂ.ಸಿದ್ದರಾಮಯ್ಯ ತಿಳಿಸಿದ್ದರು. ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 69 ‘ಎ’ ಅಡಿ ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆ ಕೆಲವು ಖಾತೆಗಳಿಗೆ ನಿರ್ಬಂಧ ವಿಧಿಸಲು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಎಕ್ಸ್ ಕಾರ್ಪ್(ಹಿಂದಿನ ಟ್ವಿಟರ್) 25 ಲಕ್ಷ ರೂ. ಠೇವಣಿ ಹೂಡಿತ್ತು.

ಅಧ್ಯಯನ ನಡೆಸದೆ ಮಹಿಳೆಯರಿಗೆ ಉಚಿತ ಬಸ್ ಸೇವೆ (ಶಕ್ತಿ ಯೋಜನೆ)ಯನ್ನು ಪ್ರಶ್ನಿಸಿದ್ದ ಕಾನೂನು ವಿದ್ಯಾರ್ಥಿ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಅರ್ಜಿ ಹಿಂಪಡೆಯಲು ಅವಕಾಶ ನೀಡಿತ್ತು. ಪರಿಶಿಷ್ಟ ಜಾತಿ ಸಮುದಾಯದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದಲ್ಲಿ ನಟ, ನಿರ್ದೇಶಕ ಉಪೇಂದ್ರ ವಿರುದ್ಧ ದಾಖಲಾಗಿದ್ದ ಎಫ್​ಆರ್​ಗೆ ತಡೆ ನೀಡಿತ್ತು. ಸರ್ಕಾರಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಮೊದಲನೇ ತರಗತಿಗೆ ಪ್ರವೇಶ ಪಡೆಯಲು ಆರು ವರ್ಷ ತುಂಬಿರಬೇಕೆಂಬ ಸರ್ಕಾರದ ಅಧಿಸೂಚನೆಯನ್ನು ಹೈಕೋರ್ಟ್ ಮಾನ್ಯ ಮಾಡಿತ್ತು.

ಹೈಕೋರ್ಟ್​ನ ವಿಡಿಯೋ ಕಾನ್ಫರೆನ್ಸ್ ವೇಳೆ ಅನುಚಿತ ಘಟನೆ ನಡೆದ ಹಿನ್ನೆಲೆ ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ಪೀಠಗಳಲ್ಲಿ ಲೈವ್ ಸ್ಟ್ರೀಮಿಂಗ್ ಮತ್ತು ವಿಡಿಯೋ ಕಾನ್ಫರೆನ್ಸಿ ಸ್ಥಗಿತಗೊಳಿಸಲಾಗಿತ್ತು. ವಾರದ ಬಳಿಕ ಪುನರಾರಂಭಿಸಲಾಗಿತ್ತು. ಅತ್ಯಾಚಾರಕ್ಕೆ ಒಳಗಾಗಿ ಗರ್ಭ ಧರಿಸಿದಲ್ಲಿ ಗರ್ಭಪಾತ ಮಾಡಿಸಲು ಮಾರ್ಗಸೂಚಿ ರೂಪಿಸಲು ತಜ್ಞರ ಸಮಿತಿ ರಚಿಸಲು ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ಬೆಳಗಾವಿ ತಾಲೂಕಿನಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಪ್ರಕರಣ ದುಶ್ಯಾಸನ ರಾಜ್ಯವಾದಂತಿದೆ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಸಾಲ ವಸೂಲಾತಿ ನ್ಯಾಯಮಂಡಳಿಗೆ (ಡಿಆರ್ಟಿ) ನಾಗರಿಕರ ಪಾಸ್ಪೋರ್ಟ್ ವಶಕ್ಕೆ ಪಡೆದುಕೊಳ್ಳುವ ಅಧಿಕಾರವಿಲ್ಲ ಎಂದು ಆದೇಶಿಸಿತ್ತು. ಸುತ್ತಲು ಅಮಾನವೀಯ ಕೃತ್ಯ ನಡೆಯುತ್ತಿದ್ದರೂ ಅದನ್ನು ತಡೆಯದೆ ಮೌನ ವಹಿಸುವವರಿಗೆ ದಂಡ ವಿಧಿಸಬಹುದಾದ ಸಾಮೂಹಿಕ ಜವಾಬ್ದಾರಿ ನಿಗದಿಪಡಿಸಲು ಸರ್ಕಾರಕ್ಕೆ ಮೌಖಿಕ ಸಲಹೆ ನೀಡಿತ್ತು.

ರಸ್ತೆ ಸಂಚಾರ ನಿಯಂತ್ರಣ ಸಲುವಾಗಿ ಶಾಲಾ, ಕಾಲೇಜುಗಳ ಸಮಯ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ಗೆ ಸರ್ಕಾರ ತಿಳಿಸಿತ್ತು. ಬಿಬಿಎಂಪಿ ವ್ಯಾಪ್ತಿಯ ಆಸ್ತಿಗಳನ್ನು ಆಧಾರ್ ಸಂಖ್ಯೆಯೊಂದಿಗೆ ಕ್ಯೂ ಆರ್ ಕೋಡ್ ತಂತ್ರಜ್ಞಾನ ಜಾರಿಗೆ ಸೂಚಿಸಿತ್ತು. ದಾಖಲೆಗಳ ಸತ್ಯಾಂಶ ಪರಿಶೀಲನೆ ನಡೆಸದೆ ವೀಸಾ ಅವಧಿ ವಿಸ್ತರಿಸಿದ್ದ ಬೆಂಗಳೂರಿನ ಪ್ರಾದೇಶಿಕ ವಿದೇಶಿಯರ ನೋಂದಣಿ ಅಧಿಕಾರಿ (ಎಫ್‌ಆರ್‌ಆರ್‌ಒ) ಕ್ರಮಕ್ಕೆ ಹೈಕೋರ್ಟ್​ ತೀವ್ರ ತರಾಟೆಗೆ ತೆಗೆದುಕೊಂಡಿತ್ತು.

ಇದನ್ನೂ ಓದಿ: ಒತ್ತುವರಿ ಕುರಿತ ದೂರಿನನ್ವಯ ತನಿಖೆ ನಡೆಸುವ ಅಧಿಕಾರ ಬಿಬಿಎಂಪಿಗೆ ಇಲ್ಲ: ಹೈಕೋರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.