ETV Bharat / state

ಒತ್ತುವರಿ ಕುರಿತ ದೂರಿನನ್ವಯ ತನಿಖೆ ನಡೆಸುವ ಅಧಿಕಾರ ಬಿಬಿಎಂಪಿಗೆ ಇಲ್ಲ: ಹೈಕೋರ್ಟ್​

author img

By ETV Bharat Karnataka Team

Published : Dec 25, 2023, 5:04 PM IST

ಕಟ್ಟಡ ನಿರ್ಮಾಣದ ವೇಳೆ ಒತ್ತುವರಿಯ ಬಗ್ಗೆ ಯಾರಾದರೂ ದೂರು ಸಲ್ಲಿಸಿದರೆ, ತನಿಖೆ ನಡೆಸುವ ಅಧಿಕಾರ ಬಿಬಿಎಂಪಿಗೆ ಇಲ್ಲ ಎಂದು ಹೈಕೋರ್ಟ್ ಹೇಳಿದೆ.

bbmp-has-no-power-to-investigate-encroachment-allegations-says-high-court
ಒತ್ತುವರಿ ಸಂಬಂಧ ಬಂದ ದೂರಿನನ್ವಯ ತನಿಖೆ ನಡೆಸುವ ಅಧಿಕಾರ ಬಿಬಿಎಂಪಿಗೆ ಇಲ್ಲ: ಹೈಕೋರ್ಟ್​

ಬೆಂಗಳೂರು: ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಒತ್ತುವರಿ ಕುರಿತಂತೆ ಬರುವ ದೂರಿಗೆ ಸಂಬಂಧಿಸಿದಂತೆ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ತನಿಖೆ ನಡೆಸುವ ಅಧಿಕಾರ ಹೊಂದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು. ಆದರೆ, ದೂರಿನ ಸಂಬಂಧದ ಆಸ್ತಿಗೆ ಸಂಬಂಧಿಸಿದಂತೆ ಮಂಜೂರಾದ ನಕ್ಷೆಯ ಪ್ರಕಾರ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಮಾತ್ರ ಪರಿಶೀಲಿಸಬಹುದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಚೆನ್ನೈ ಮೂಲದ ಎಮರಾಲ್ಡ್ ಹವೇನ್ ಡೆವಲಪ್​ಮೆಂಟ್​ ಲಿಮಿಟೆಡ್ ಕಂಪನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕ ಸದಸ್ಯಪೀಠ, ಬಿಬಿಎಂಪಿ ನ್ಯಾಯಾಂಗ ಪ್ರಾಧಿಕಾರವಲ್ಲ. ಹಾಗಾಗಿ ಇಂತಹ ಪ್ರಕರಣಗಳಲ್ಲಿ ವ್ಯಾಜ್ಯದ ಬಗ್ಗೆ ವಿಚಾರಣೆ ನಡೆಸಲಾಗದು. ಅಲ್ಲದೆ, ಒತ್ತುವರಿ ಕುರಿತ ಎಲ್ಲಾ ಅಂಶಗಳು ಬಿಬಿಎಂಪಿ ವ್ಯಾಪ್ತಿಗೆ ಒಳಪಡುವುದಿಲ್ಲ. ಆದರೆ ನಕ್ಷೆ ಮಂಜೂರಾತಿ ಅಥವಾ ನಿಯಮ ಉಲ್ಲಂಘನೆಯಂತಹ ಪ್ರಕರಣಗಳು ಬಂದಾಗ ಅದರಲ್ಲಿ ಬಿಬಿಎಂಪಿ ಸಂಪೂರ್ಣ ಅಧಿಕಾರವಿದ್ದು, ಅದು ನಿಯಮದ ಪ್ರಕಾರ ಕಟ್ಟಡಗಳನ್ನು ನಿರ್ಮಿಸಲಾಗಿದೆಯೇ ಇಲ್ಲವೇ ಪರಿಶೀಲಿಸಬಹುದು ಎಂದು ತಿಳಿಸಿತು.

ಈ ರೀತಿಯ ವಿಚಾರದಲ್ಲಿ ಸಿವಿಲ್ ಕೋರ್ಟ್ ಏನಾದರೂ ಆದೇಶ ನೀಡಿದರೆ ಅದನ್ನು ಕಂಪನಿ ಪಾಲಿಸಬೇಕಾಗುತ್ತದೆ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರರಾದ ಎಮರಾಲ್ಡ್ ಹವೇನ್ ಡೆವಲಪ್​ಮೆಂಟ್​ ಲಿಮಿಟೆಡ್ ಕಂಪನಿ ಬೆಂಗಳೂರಿನ ಬೇಗೂರು ಹೋಬಳಿಯ ಬಸಾಪುರ ಗ್ರಾಮದಲ್ಲಿ ತನ್ನ 4 ಎಕರೆ ಜಾಗದಲ್ಲಿ ತಳಮಹಡಿ ಹೊರತುಪಡಿಸಿ 18 ಮಹಡಿಗಳ ಕಟ್ಟಡವನ್ನು ನಿರ್ಮಾಣ ಮಾಡಿತ್ತು. ಆದರೆ ಕವಿತಾ ಶಂಕರ್ ಎಂಬವರು ತನ್ನ ಒಂದು ಎಕರೆ ಜಾಗವನ್ನು ಕಂಪನಿ ಒತ್ತುವರಿ ಮಾಡಿಕೊಂಡಿದೆ ಎಂದು ದೂರು ನೀಡಿದ್ದರು. ಅದನ್ನು ಆಧರಿಸಿ 2023ರ ಸೆ.14ರಂದು ಬಿಬಿಎಂಪಿಯ ನಗರ ಯೋಜನಾ ವಿಭಾಗದ ಸಹಾಯಕ ನಿರ್ದೇಶಕರು ನೋಟಿಸ್ ನೀಡಿ, ದಾಖಲೆಗಳನ್ನು ಒದಗಿಸುವಂತೆ ಸೂಚನೆ ನೀಡಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರ ಕಂಪೆನಿ ಹೈಕೋರ್ಟ್‌ ಮೆಟ್ಟಿಲೆರಿತ್ತು.

ಅಲ್ಲದೆ, ಭೂಮಿಯನ್ನು 2019ರಲ್ಲಿ ಖರೀದಿಸಲಾಗಿತ್ತು. ಆನಂತರ ಬಿಬಿಎಂಪಿಯಿಂದ ನಕ್ಷೆ ಅನುಮೋದನೆ ಪಡೆದ ನಂತರ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದಲ್ಲಿ ನೋಂದಾಯಿಸಿ ಕಟ್ಟಡ ನಿರ್ಮಾಣ ಚಟುವಟಿಕೆಯನ್ನು ಆರಂಭಿಸಲಾಗಿತ್ತು. ಕವಿತಾ ಹಿಂದಿನ ಭೂ ಮಾಲೀಕರ ಕಡೆಯಿಂದ ಜಿಪಿಎ ಹೊಂದಿದ್ದಾರೆ. ಕಟ್ಟಡ ನಿರ್ಮಾಣ ಆರಂಭವಾದ ಬಳಿಕ ತಾವೇ ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನಲಾದ ಜಾಗದ ಮಾಲೀಕರು ಎಂದು ದಾವೆ ಹೂಡಿದ್ದಾರೆ. ಆದರೆ, ಬಿಬಿಎಂಪಿಗೆ ಒತ್ತುವರಿಯ ಬಗ್ಗೆ ತನಿಖೆ ನಡೆಸುವ ಯಾವುದೇ ಅಧಿಕಾರವಿಲ್ಲ, ಆ ಅಧಿಕಾರ ಸಿವಿಲ್ ಕೋರ್ಟ್‌ಗೆ ಮಾತ್ರ ಇದೆ ಎಂದು ಕಂಪನಿ ಹೇಳಿತ್ತು.

ಇದನ್ನೂ ಓದಿ: ಹೈಕೋರ್ಟ್​ಗೆ ಚಳಿಗಾಲದ ರಜೆ: ರಜಾಕಾಲೀನ ಪೀಠಗಳಿಂದ ತುರ್ತು ಅರ್ಜಿಗಳ ವಿಚಾರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.