ETV Bharat / state

ಅಕ್ರಮ ವಿದ್ಯುತ್ ಸಂಪರ್ಕ ಪಡೆದ ಆರೋಪ: ಬೆಸ್ಕಾಂಗೆ ದಂಡ ಕಟ್ಟಿದ ಹೆಚ್‌.ಡಿ.ಕುಮಾರಸ್ವಾಮಿ

author img

By ETV Bharat Karnataka Team

Published : Nov 17, 2023, 11:56 AM IST

Illegal electricity connection allegation  Former CM Kumaraswamy fined Bescom  Illegal electricity connection news  ಅಕ್ರಮ ವಿದ್ಯುತ್ ಸಂಪರ್ಕ ಪಡೆದ ಆರೋಪ  ಬೆಸ್ಕಾಂಗೆ ದಂಡ ಕಟ್ಟಿದ ಮಾಜಿ ಸಿಎಂ ಕುಮಾರಸ್ವಾಮಿ  ಬೆಸ್ಕಾಂ ಇಲಾಖೆಗೆ ದಂಡ  ದೀಪಾವಳಿ ಹಿನ್ನೆಲೆ ಮನೆಗೆ ವಿದ್ಯುತ್ ಅಲಂಕಾರ  ಅಕ್ರಮ ವಿದ್ಯುತ್ ಸಂಪರ್ಕ  ಬೆಸ್ಕಾಂಗೆ ದಂಡ ಪಾವತಿ
ಅಕ್ರಮ ವಿದ್ಯುತ್ ಸಂಪರ್ಕ ಪಡೆದ ಆರೋಪ

ಅಕ್ರಮ ವಿದ್ಯುತ್ ಸಂಪರ್ಕ ಪಡೆದ ಆರೋಪ ಎದುರಿಸುತ್ತಿರುವ ಹೆಚ್.ಡಿ.ಕುಮಾರಸ್ವಾಮಿ ಅವರು ಬೆಸ್ಕಾಂಗೆ ದಂಡ ಪಾವತಿಸಿದ್ದಾರೆ.

ಬೆಂಗಳೂರು: ದೀಪಾವಳಿ ಹಿನ್ನೆಲೆಯಲ್ಲಿ ಮನೆಗೆ ವಿದ್ಯುತ್ ಅಲಂಕಾರ ಮಾಡಲು ಅಕ್ರಮ ವಿದ್ಯುತ್ ಸಂಪರ್ಕ ಪಡೆದ ಆರೋಪ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ, ಬೆಸ್ಕಾಂಗೆ ದಂಡ ಪಾವತಿಸಿದ್ದಾರೆ. ಜೆ.ಪಿ.ನಗರದ ನಿವಾಸಕ್ಕೆ ವಿದ್ಯುತ್ ಅಲಂಕಾರ ಮಾಡಲಾಗಿತ್ತು. ಇದಕ್ಕಾಗಿ ಮನೆ ಪಕ್ಕದಲ್ಲಿರುವ ಕಂಬದಿಂದ ಅಕ್ರಮವಾಗಿ ವಿದ್ಯುತ್ ಬಳಸಿಕೊಂಡಿರುವ ಬಗ್ಗೆ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಕಾಂಗ್ರೆಸ್ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿತ್ತು.

ದಂಡ ಕಟ್ಟುವ ಮುನ್ನ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿ, 'ದೀಪಾವಳಿಗೆ ನನ್ನ ಮನೆಗೆ ವಿದ್ಯುತ್ ದೀಪಗಳ ಅಲಂಕಾರ ಮಾಡಲು ಖಾಸಗಿ ಡೆಕೋರೇಟರ್ ಒಬ್ಬರಿಗೆ ಹೇಳಲಾಗಿತ್ತು. ಅವರು ಮನೆಗೆ ವಿದ್ಯುತ್ ದೀಪಗಳ ಅಲಂಕಾರ ಮಾಡಿದ ಮೇಲೆ ಪಕ್ಕದಲ್ಲಿಯೇ ಇದ್ದ ಕಂಬದಿಂದ ವಿದ್ಯುತ್ ಸಂಪರ್ಕ ಪಡೆದು ಪರೀಕ್ಷೆ ಮಾಡಿದ್ದಾರೆ. ಆಗ ನಾನು ಬಿಡದಿಯ ತೋಟದಲ್ಲಿದ್ದೆ. ನಿನ್ನೆ ರಾತ್ರಿ ಮನೆಗೆ ವಾಪಸ್ ಬಂದಾಗ ಈ ವಿಷಯ ನನ್ನ ಗಮನಕ್ಕೆ ಬಂತು. ತಕ್ಷಣ ಅದನ್ನು ತೆಗೆಸಿ ಮನೆಯ ಮೀಟರ್ ಬೋರ್ಡ್​ನಿಂದಲೇ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮಾಡಿದ್ದೇನೆ. ಇದು ವಾಸ್ತವ ಸ್ಥಿತಿ. ಇದರಲ್ಲಿ ಮುಚ್ಚುಮರೆ ಏನೂ ಇಲ್ಲ' ಎಂದು ಸ್ಪಷ್ಟನೆ ನೀಡಿದ್ದರು.

'ಈ ಅಚಾತುರ್ಯಕ್ಕೆ ನನ್ನ ವಿಷಾದವಿದೆ. ಬೆಸ್ಕಾಂ ಅಧಿಕಾರಿಗಳು ಬಂದು ಪರೀಕ್ಷೆ ಮಾಡಿ ನೋಟಿಸ್ ನೀಡಲಿ. ದಂಡ ಕಟ್ಟುತ್ತೇನೆ. ಇದನ್ನೇ ರಾಜ್ಯ ಕಾಂಗ್ರೆಸ್​ ದೊಡ್ಡದು ಮಾಡಿ ಪ್ರಚಾರ ಗಿಟ್ಟಿಸುವ ಕೆಲಸ ಮಾಡುತ್ತಿದೆ. ಆ ಪಕ್ಷದ ಕ್ಷುಲ್ಲಕ ಮನಸ್ಥಿತಿಯ ಬಗ್ಗೆ ನನಗೆ ಮರುಕ ಇದೆ' ಎಂದು ವ್ಯಂಗ್ಯವಾಡಿದ್ದರು.

'ನಾನೇನು ರಾಜ್ಯದ ಆಸ್ತಿ ಕಬಳಿಸಿಲ್ಲ. ಕಂಡವರ ಭೂಮಿಗೆ ಬೇಲಿ ಹಾಕಿಲ್ಲ. ಇನ್ನೊಬ್ಬರ ರಕ್ತ ಕುಡಿದು ಧನದಾಹ ತೀರಿಸಿಕೊಂಡಿಲ್ಲ. ಕುಮಾರಸ್ವಾಮಿ ವಿದ್ಯುತ್ ಕಳ್ಳತನ ಮಾಡಿದ್ದಾರೆ, ಬೆಸ್ಕಾಂ ಕ್ರಮ ಕೈಗೊಳ್ಳಲಿ ಎಂದು ಉಪ ಮುಖ್ಯಮಂತ್ರಿಗಳು ಹೇಳಿದ್ದಾರೆ. ನಾನು ಮನೆಯಲ್ಲೇ ಇದ್ದೇನೆ. ಬೆಸ್ಕಾಂ ಅಧಿಕಾರಿಗಳು ಬರಲಿ. ಅವರ ಯಾವುದೇ ಕ್ರಮಕ್ಕೆ ನಾನು ಸಿದ್ಧ' ಎಂದಿದ್ದರು.

ಈ ಬಗ್ಗೆ ಮಾಧ್ಯಮಕ್ಕೂ ಪ್ರತಿಕ್ರಿಯಿಸಿದ ಹೆಚ್​ಡಿಕೆ, "ದೇಶ ಮತ್ತು ರಾಜ್ಯ ಮುಳುಗಿ ಹೋಗುವಂತಹ ಕೆಲಸ ನಾನೇನೂ ಮಾಡಿಲ್ಲ. ಸರ್ಕಾರದ ನೀತಿ ನಿಯಮಗಳ ಪ್ರಕಾರ ಏನು ದಂಡ ಕಟ್ಟಬೇಕೋ ಅದಕ್ಕೆ ನಾನು ಸಿದ್ಧ ಇದ್ದೇನೆ. ನೋಟಿಸ್​ ಕೊಡಿ ಅಂತ ನಾನೇ ಕೇಳಿದ್ದೇನೆ. ವಿದ್ಯುತ್ ಕಳ್ಳತನ ಮಾಡುವ ದರಿದ್ರ ನನಗೆ ಬಂದಿಲ್ಲ. 2-3 ಸಾವಿರ ರೂ ದರದ ವಿದ್ಯುತ್ ಕದಿಯಬೇಕಾ ನಾನು?. ಮನೆ ಹತ್ತಿರ ಬರುವವರಿಗೆ ನಾನು ಹಣ ನೀಡುತ್ತೇನೆ" ಎಂದು ಕಾಂಗ್ರೆಸ್​​ಗೆ ತಿರುಗೇಟು ನೀಡಿದ್ದರು.

ಕುಮಾರಸ್ವಾಮಿ ತಮ್ಮ ಮಾತಿನಂತೆ ಬೆಸ್ಕಾಂಗೆ 68 ಸಾವಿರ ರೂ.ಗೂ ಹೆಚ್ಚು ದಂಡ ಕಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಯಾರೋ ಮಾಡಿದ ಅಚಾತುರ್ಯವನ್ನು ನಾನೇ ಒಪ್ಪಿಕೊಂಡೆ: ಹೆಚ್‌.ಡಿ.ಕುಮಾರಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.