ETV Bharat / state

ಪಿಎಸ್​ಐ ಹಗರಣ: ಜೂನ್​ 15ರ ಒಳಗೆ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್​ ಸೂಚನೆ

author img

By

Published : Apr 10, 2023, 7:48 PM IST

Etv Bharat
Etv Bharat

ಪಿಎಸ್​ಐ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿರುವ ಎಲ್ಲ ಅಭ್ಯರ್ಥಿಗಳ ಪಟ್ಟಿ ನೀಡಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

ಬೆಂಗಳೂರು: ರಾಜ್ಯದಲ್ಲಿ ನಡೆದ 545 ಹುದ್ದೆಗಳ ಪೋಲಿಸ್​ ಸಬ್​ಇನ್​ಸ್ಪೆಕ್ಟರ್​(ಪಿಎಸ್​ಐ) ನೇಮಕಾತಿ ಅಕ್ರಮದಲ್ಲಿ ಎಷ್ಟು ಮಂದಿ ಅಭ್ಯರ್ಥಿಗಳು ಭಾಗಿಯಾಗಿದ್ದಾರೆ ಎಂಬುದರ ಕುರಿತಂತೆ ಜೂನ್​ 15ರ ಒಳಗೆ ವರದಿ ಸಲ್ಲಿಸುವಂತೆ ಹೈಕೋರ್ಟ್​ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

ಪಿಎಸ್​ಐ ಪರೀಕ್ಷಾ ಅಕ್ರಮ ನಡೆದಿರುವ ಸಂಬಂಧ ಮರು ಪರೀಕ್ಷೆಗೆ ಆದೇಶಿಸಿದ್ದ ಕ್ರಮವನ್ನು ಪ್ರಶ್ನಿಸಿ ಕೋಲಾರದ ಚಂದನ್​ ಎಂಬುವರು ಸೇರಿದಂತೆ ಮತ್ತಿತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ನರೇಂದ್ರ ಮತ್ತು ನ್ಯಾಯಮೂರ್ತಿ ಶಿವಶಂಕರ್​ ಅಮರಣ್ಣನವರ್​ ಅವರಿದ್ದ ವಿಭಾಗೀಯ ಪೀಠ, ಪಿಎಸ್​ಐ​ ಅಕ್ರಮದಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳ ಪಟ್ಟಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಬೇಕು ಎಂದು ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ.

ಇದನ್ನು ಓದಿ: ಕೋವಿಡ್ ಸೋಂಕು ತಡೆ: ಅಗತ್ಯ ಕ್ರಮಕ್ಕೆ ಮುಂದಾದ ಆರೋಗ್ಯ ಇಲಾಖೆ

ವಿಚಾರಣೆ ವೇಳೆ ಸರ್ಕಾರದ ಪರವಾಗಿ ವಾದ ಮಂಡಿಸಿದ ಅಡ್ವೋಕೇಟ್​ ಜನರಲ್​ ಪ್ರಭುಲಿಂಗ ನಾವದಗಿ, ರಾಜ್ಯದಲ್ಲಿ ಸರ್ಕಾರದ ಕ್ರಮಕ್ಕೆ ತಡೆ ನೀಡಬೇಕು ನಡೆಯುತ್ತಿದ್ದು, ಈವರೆಗೂ 110 ಜನರನ್ನು ಬಂಧಿಸಲಾಗಿದೆ. ಇನ್ನೂ ಪ್ರಕರಣದ ತನಿಖೆ ಪ್ರಗತಿಯ ಹಂತದಲ್ಲಿದೆ. ಪರೀಕ್ಷೆಯಲ್ಲಿ ವಿದ್ಯುನ್ಮಾನ ಉಪಕರಣಗಳಾದ ಬ್ಲೂಟೂಟ್​ ಬಳಸಿ ನಕಲು ಮಾಡಲಾಗಿದೆ. ಇದೊಂದು ದೊಡ್ಡ ಹಗರಣವಾಗಿದೆ ಎಂದು ಪೀಠಕ್ಕೆ ಅಡ್ವೊಕೇಟ್​ ಜನರಲ್​ ವಿವರಣೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ, ನರೇಂದ್ರ ನೇತೃತ್ವದ ನ್ಯಾಯಪೀಠ, ದೊಡ್ಡ ಹಗರಣ ಎಂಬುದಾಗಿ ಹೇಳುತ್ತೀರಿ. ಆದರೆ, ಕಳೆದ ಒಂದು ವರ್ಷದಿಂದ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ನಾವಡಗಿ ಅವರನ್ನು ಪ್ರಶ್ನಿಸಿತು. ಅಲ್ಲದೆ, ಕೆಲವರು ಮಾಡಿದ ತಪ್ಪಿನಿಂದಾಗಿ ಇತರಿಗೆ ಶಿಕ್ಷೆ ನೀಡುವುದು ಎಷ್ಟು ಸರಿ ಎಂದೂ ಮರು ಪ್ರಶ್ನಿಸಿತು. ತನಿಖಾಧಿಕಾರಿಗಳಿಗೆ ಜೂನ್​ 15 ವರೆಗೂ ಕಾಲಾವಕಾಶ ನೀಡೋಣ. ಅಷ್ಟರಲ್ಲಿ ತನಿಖೆ ಪೂರ್ಣಗೊಳಿಸದಿದ್ದಲ್ಲಿ ಮುಂದಿನ ಆದೇಶ ನೀಡಲಾಗುವುದು ಎಂದು ಇದೇ ವೇಳೆ ನ್ಯಾಯಪೀಠ ತಿಳಿಸಿತು.

ಇದನ್ನು ಓದಿ:ಬಿಜೆಪಿ ಟಿಕೆಟ್‌ಗಾಗಿ ಆಕಾಂಕ್ಷಿಯ ಅಭಿಮಾನಿಯಿಂದ 20 ಕಿ.ಮೀ ದೀರ್ಘ ದಂಡ ನಮಸ್ಕಾರ

ಅರ್ಜಿದಾರರ ಪರವಾಗಿ ವಾದ ಮಂಡಿಸಿದ ವಕೀಲರು, ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಯಾವುದೇ ರೀತಿಯ ಅಕ್ರಮವನ್ನು ನಡೆಸಿಲ್ಲ. ಆದರೂ ಮತ್ತೊಮ್ಮೆ ಪರೀಕ್ಷೆಗೆ ನಡೆಸಲು ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಲು ಮುಂದಾಗಿರುವ ಸರ್ಕಾರದ ಕ್ರಮಕ್ಕೆ ಘನ ನ್ಯಾಯಾಲಯ ತಡೆ ನೀಡಬೇಕು. ತಪ್ಪಿತಸ್ಥ ಅಭ್ಯರ್ಥಿಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಜಿ.ನರೇಂದ್ರ ಅವರ ನೇತೃತ್ವದ ಪೀಠ, ಆರೋಪಿಗಳು ತಂತ್ರಜ್ಞಾನವನ್ನು ಬಳಸಿಕೊಂಡು ಮಾಡಿರುವ ಕೃತ್ಯವಾಗಿದೆ. ಜತೆಗೆ, ವಿಧಾನ ಸಭೆ ಚುನಾವಣೆ ನಡೆಯುತ್ತಿದೆ. ಪೊಲೀಸ್​ ಸಿಬ್ಬಂದಿ ಚುನಾವಣಾ ಕಾರ್ಯದಲ್ಲಿದ್ದಾರೆ. ಆದ್ದರಿಂದ ಜೂನ್​ 15ರ ಒಳಗೆ ಸಂಪೂರ್ಣ ವರದಿಯನ್ನು ಸಲ್ಲಿಸಬೇಕು ಎಂದು ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತ್ತು.

ಇದನ್ನೂ ಓದಿ:ಬೆಂಗಳೂರಿನಲ್ಲಿ ₹8 ಕೋಟಿ ಮೌಲ್ಯದ ಡ್ರಗ್ಸ್‌ ಪತ್ತೆ: ಐವರು ವಿದೇಶಿಗರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.