ETV Bharat / state

ಕೋವಿಡ್ ಸೋಂಕು ತಡೆ: ಅಗತ್ಯ ಕ್ರಮಕ್ಕೆ ಮುಂದಾದ ಆರೋಗ್ಯ ಇಲಾಖೆ

author img

By

Published : Apr 10, 2023, 5:25 PM IST

ಕೋವಿಡ್ ಸೋಂಕು ಉಲ್ಭಣಗೊಳ್ಳುತ್ತಿದ್ದು ಬೆಂಗಳೂರು ನಗರದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್ ನಡೆಸಲಾಗಿದೆ.

ಆರೋಗ್ಯ ಇಲಾಖೆ
ಆರೋಗ್ಯ ಇಲಾಖೆ

ಬೆಂಗಳೂರು : ದೇಶದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಮುನ್ಸೂಚನೆ ಸಿಕ್ಕಿದ್ದು ಸೋಂಕು ತಡೆಗೆ ಆರೋಗ್ಯ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಮೇ 10 ರಂದು ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದ್ದು ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರ, ಬಹಿರಂಗ ಸಭೆಗಳು ನಡೆಯುವುದರಿಂದ ಅಪಾರ ಜನ ಸೇರುತ್ತಾರೆ. ಹೀಗಾಗಿ, ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಆರೋಗ್ಯ ಇಲಾಖೆ ಮುಂದಾಗಿದೆ.

ಮಾಕ್​ ಡ್ರಿಲ್​: ನಗರದ ಹಲವು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕು ತಡೆಗಟ್ಟುವ ಸಂಬಂಧ ಇಂದು ಮಾಕ್ ಡ್ರಿಲ್ ನಡೆಸಲಾಯಿತು. ಆಕ್ಸಿಜನ್ ಪ್ಲಾಂಟ್​ಗಳ ಡ್ರೈರನ್ ಕಾರ್ಯ ಸಹ ನಡೆಸಲಾಗಿದೆ. ನಗರದ ಬೌರಿಂಗ್, ಕೆ.ಸಿ.ಜನರಲ್ ಆಸ್ಪತ್ರೆ, ವಿಕ್ಟೋರಿಯಾ, ಸಿ.ವಿ.ರಾಮನ್ ನಗರ, ಜಯನಗರ ಸಾರ್ವಜನಿಕ ಆಸ್ಪತ್ರೆ ಹಾಗೂ ನಗರದ ಹಲವು ಖಾಸಗಿ ಆಸ್ಪತ್ರೆಗಳಲ್ಲೂ ಮಾಕ್ ಡ್ರಿಲ್ ನಡೆಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮಾಕ್ ಡ್ರಿಲ್ ವೇಳೆ ಆಕ್ಸಿಜನ್ ಪೂರೈಕೆ, ಬೆಡ್​ಗಳು ಹಾಗೂ ಔಷಧಗಳ ಪರಿಶೀಲನೆ ನಡೆಸಿ ಮಾಹಿತಿ ನೀಡಲಾಗುವುದು. ಸೋಂಕಿತರಿಗೆ ಅವಶ್ಯಕವಿರುವ ಆಮ್ಲಜನಕ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದ್ದು, ಆಕ್ಸಿಜನ್ ಪ್ಲಾಂಟ್​ಗಳಲ್ಲಿ ಡ್ರೈರನ್ ಮಾಡಿ ಅದರ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಸಿಬ್ಬಂದಿ, ಔಷಧಿ ಪರಿಶೀಲನೆ: ಆಸ್ಪತ್ರೆಗಳಲ್ಲಿರುವ ಆಕ್ಸಿಜನ್ ಪ್ಲಾಂಟ್​ಗಳು ಸರಿಯಾಗಿವೆಯೇ? ಎಂದು ಪರಿಶೀಲಿಸುವುದರ ಜೊತೆಗೆ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಹಾಗೂ ಔಷಧಿಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಈ ಹಿಂದೆ ಕೊರೊನಾ ಸೋಂಕಿತರಿಗೆ ಸೂಕ್ತ ಮಾಹಿತಿ ಕೊರತೆ ಹಾಗೂ ಆಕ್ಸಿಜನ್ ಸಿಗದ ಕಾರಣ ಹಲವು ಸಾವು-ನೋವು ಸಂಭವಿಸಿದ್ದವು. ಹಾಗಾಗಿ, ಈ ಬಾರಿ ಅಂತಹ ಯಾವುದೇ ತೊಂದರೆ ಆಗಬಾರದೆಂಬ ಉದ್ದೇಶದಿಂದ ಆರಂಭದಲ್ಲಿ ಮಾಕ್ ಡ್ರಿಲ್ ನಡೆಸಲಾಗುತ್ತಿದೆ. ಅದರ ಜೊತೆಗೆ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ದೇಶದಲ್ಲಿ ಕೋವಿಡ್‌ ಸೋಂಕು: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 5,880 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 14 ಜನ ಮೃತಪಟ್ಟಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, ಪ್ರಸ್ತುತ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 35,199 ರಷ್ಟಿದೆ ಎಂಬುದು ತಿಳಿದುಬಂದಿದೆ. ದೆಹಲಿ ಮತ್ತು ಹಿಮಾಚಲ ಪ್ರದೇಶದಲ್ಲಿ ತಲಾ ನಾಲ್ಕು ಸಾವುಗಳು ವರದಿಯಾಗಿವೆ. ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ ಮತ್ತು ರಾಜಸ್ಥಾನದಿಂದ ತಲಾ ಒಂದು ಮತ್ತು ಕೇರಳದಿಂದ ಎರಡು ಸಾವುಗಳು ವರದಿಯಾಗಿವೆ. ದೈನಂದಿನ ಸಕ್ರೀಯ ದರವು ಶೇಕಡಾ 6.91 ರಷ್ಟು ದಾಖಲಾಗಿದ್ದರೆ, ವಾರದ ಸಕ್ರೀಯ ಪ್ರಕರಣ ಶೇಕಡಾ 3.67 ರಷ್ಟಿದೆ.

ಇದನ್ನೂ ಓದಿ : ದಿನದಿನವೂ ಹೆಚ್ಚುತ್ತಿದೆ ಕೋವಿಡ್‌; ಸಿದ್ಧತೆಗಳ ಪರಿಶೀಲನೆಗೆ ದೇಶಾದ್ಯಂತ ಆಸ್ಪತ್ರೆಗಳಲ್ಲಿ ಅಣಕು ಕಸರತ್ತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.