ETV Bharat / state

ಗುತ್ತಿಗೆದಾರರಿಗೆ ಬಿಡುಗಡೆಯಾಗದ ಹಣ.. ಹೈಕೋರ್ಟ್​ನಿಂದ ಕೆಎಸ್​ಟಿಡಿಸಿಗೆ ಬಿತ್ತು ದಂಡ

author img

By

Published : Sep 10, 2022, 9:33 AM IST

high-court-fined-2-lakh-for-kstdc-for-not-releasing-money
ಹಣ ಬಿಡುಗಡೆ ಮಾಡದ ಕೆಎಸ್​ಟಿಡಿಸಿಗೆ 2 ಲಕ್ಷ ದಂಡ ವಿಧಿಸಿದ ಹೈಕೋರ್ಟ್​

ಗುತ್ತಿಗೆದಾರರಿಗೆ ಸಮಯಕ್ಕೆ ಹಣ ಬಿಡುಗಡೆ ಮಾಡದ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತಕ್ಕೆ ಹೈಕೋರ್ಟ್ ದಂಡದ ಬಿಸಿ ನೀಡಿದೆ.ಗುತ್ತಿಗೆದಾರರಿಗೆ ಬಿಡುಗಡೆಯಾಗದ ಹಣ.. ಹೈಕೋರ್ಟ್​ನಿಂದ ಕೆಎಸ್​ಟಿಡಿಸಿಗೆ 2 ಲಕ್ಷ ರೂಪಾಯಿ ದಂಡ

ಬೆಂಗಳೂರು: ತನ್ನ ಅಧೀನದ ಕಟ್ಟಡವೊಂದನ್ನು ನವೀಕರಣಗೊಳಿಸಿ ಕೊಟ್ಟ ಗುತ್ತಿಗೆದಾರರಿಗೆ ಸಮಯಕ್ಕೆ ಹಣ ಬಿಡುಗಡೆ ಮಾಡದ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತಕ್ಕೆ (ಕೆಎಸ್‌ಟಿಡಿಸಿ) ಹೈಕೋರ್ಟ್ ಎರಡು ಲಕ್ಷ ರೂ. ದಂಡ ವಿಧಿಸಿದೆ.

ಬೆಂಗಳೂರಿನ ಗುತ್ತಿಗೆದಾರ ಎಂ.ಚಿರಂಜೀವಿ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನ್ಯಾಯಪೀಠ, ಸರ್ಕಾರದ ಸಂಸ್ಥೆಗೆ ಕೆಲಸ ಮಾಡಿಕೊಟ್ಟಿದ್ದರೂ ಸೂಕ್ತ ಸಮಯಕ್ಕೆ ಹಣ ಬಿಡುಗಡೆ ಮಾಡಿಲ್ಲ. ಇದರಿಂದ ಗುತ್ತಿಗೆದಾರನಿಗೆ ಕಿರಿಕಿರಿ ಉಂಟಾಗಿದೆ. ಹಾಗಾಗಿ, ದೊಡ್ಡ ಪ್ರಮಾಣದಲ್ಲಿ ದಂಡ ವಿಧಿಸಲು ಸೂಕ್ತ ಪ್ರಕರಣ ಇದಾಗಿದೆ. ಸಾರ್ವಜನಿಕ ಹಿತಾಸಕ್ತಿಯನ್ನು ಅಪಾಯದ ಸ್ಥಿತಿಗೆ ದೂಡುವಂತಹ ಸರ್ಕಾರ ಸಂಸ್ಥೆಗಳ ಉದಾಸೀನತೆಯನ್ನು ನ್ಯಾಯಾಲಯ ಸಹಿಸುವುದಿಲ್ಲ ಎಂಬ ಸಂದೇಶವು ರವಾನೆಯಾಗಬೇಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಅಲ್ಲದೆ, ಹಣ ಬಿಡುಗಡೆಗೆ ವಿನಾಕರಣ ವಿಳಂಬ ಮಾಡಿದ ಕೆಎಸ್‌ಟಿಡಿಸಿಗೆ 2 ಲಕ್ಷ ರೂಪಾಯಿ ದಂಡ ವಿಧಿಸಿದೆ. ಅಲ್ಲದೆ, ಬಾಕಿ ಉಳಿಸಿಕೊಂಡಿರುವ ಕಾಮಗಾರಿ ಹಣವನ್ನು ಶೇ.12ರಷ್ಟು ಬಡ್ಡಿಯೊಂದಿಗೆ ಪಾವತಿಸಬೇಕು ಎಂದು ಆದೇಶಿಸಿದೆ. ಈ ಆದೇಶ ಪಾಲಿಸಿದ ಬಗ್ಗೆ ಆರು ವಾರದಲ್ಲಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್‌ಗೆ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದೆ.

ಪ್ರಕರಣದ ಹಿನ್ನೆಲೆ ಏನು?: ಪ್ರವಾಸ್ಯೋದ್ಯಮ ಇಲಾಖೆಗೆ ಸಂಬಂಧಿಸಿದ ಕಟ್ಟಡವೊಂದರ ನವೀಕರಣ ಕಾಮಗಾರಿಯನ್ನು ಕೆಎಸ್‌ಟಿಡಿಸಿಯಿಂದ ಅರ್ಜಿದಾರರು ಗುತ್ತಿಗೆ ಪಡೆದಿದ್ದರು. ಕಾಮಗಾರಿ ಪೂರ್ಣಗೊಳಿಸಿ 2017ರ ಏಪ್ರಿಲ್​ 4ರಂದು ಕಟ್ಟಡವನ್ನು ಹಸ್ತಾಂತರಿಸಲಾಗಿತ್ತು. ಅದೇ ವರ್ಷ ಏ.10ರಂದು ಕಟ್ಟಡ ಉದ್ಘಾಟನೆ ಮಾಡಲಾಗಿತ್ತು. ಕಾಮಗಾರಿಯ ಬಗ್ಗೆ ಆಕ್ಷೇಪವೂ ಮಾಡಿರಲಿಲ್ಲ. ಕಾಮಗಾರಿ ತೃಪ್ತಿದಾಯಕವಾಗಿರುವುದಾಗಿ ದೃಢೀಕರಣ ಪತ್ರ ಸಹ ವಿತರಿಸಲಾಗಿತ್ತು. ಆದರೆ, ಕಟ್ಟಡ ಉದ್ಘಾಟನೆಯಾಗಿ ಹಲವು ತಿಂಗಳು ಕಳೆದರೂ ಗುತ್ತಿಗೆದಾರನಿಗೆ ಹಣ ಬಿಡುಗಡೆ ಮಾಡಿರಲಿಲ್ಲ. ಇದನ್ನು ಪ್ರಶ್ನಿಸಿ ಗುತ್ತಿಗೆದಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ಬಿಬಿಎಂಪಿ ವಾರ್ಡ್​ ಪುನರ್​ ವಿಂಗಡಣೆ ಸಮರ್ಥಿಸಿಕೊಂಡ ಸರ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.