ETV Bharat / state

ಸಾಗರದಲ್ಲಿ ವಕೀಲರ ಭವನ ನಿರ್ಮಾಣಕ್ಕೆ ಕ್ರಮ ಜರುಗಿಸಲು ಹೈಕೋರ್ಟ್ ನಿರ್ದೇಶನ

author img

By

Published : Aug 17, 2020, 11:54 PM IST

ಹೈಕೋರ್ಟ್ ವಿಭಾಗೀಯ ಪೀಠ
ಹೈಕೋರ್ಟ್ ವಿಭಾಗೀಯ ಪೀಠ

ಸಾಗರದಲ್ಲಿ ವಕೀಲರ ಭವನ ನಿರ್ಮಿಸಲು ಅಗತ್ಯ ಕ್ರಮ ಜರುಗಿಸುವಂತೆ ಹೈಕೋರ್ಟ್​ನ ಮೂಲಸೌಕರ್ಯ ಮತ್ತು ನಿರ್ವಹಣೆ ವಿಭಾಗದ ರಿಜಿಸ್ಟ್ರಾರ್​ರಿಗೆ ಹೈಕೋರ್ಟ್ ವಿಭಾಗೀಯ ಪೀಠ ನಿರ್ದೇಶಿಸಿದೆ.

ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ವಕೀಲರ ಭವನ ನಿರ್ಮಿಸಲು ಅಗತ್ಯ ಕ್ರಮ ಜರುಗಿಸುವಂತೆ ಹೈಕೋರ್ಟ್​ನ ಮೂಲಸೌಕರ್ಯ ಮತ್ತು ನಿರ್ವಹಣೆ ವಿಭಾಗದ ರಿಜಿಸ್ಟ್ರಾರ್​ರಿಗೆ ಹೈಕೋರ್ಟ್ ವಿಭಾಗೀಯ ಪೀಠ ನಿರ್ದೇಶಿಸಿದೆ.

ಈ ಕುರಿತು ಸಾಗರ ವಕೀಲರ ಸಂಘ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಕೀಲ ಪಿ.ಪಿ.ಹೆಗ್ಡೆ ವಾದಿಸಿ, ವಕೀಲರ ಭವನ ನಿರ್ಮಾಣಕ್ಕೆ ಶೀಘ್ರ ಕ್ರಮ ವಹಿಸುವಂತೆ ನಿರ್ದೇಶಿಸಲು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರದ ಪರ ವಕೀಲರು, ನಿವೇಶನ ಮಂಜೂರಾತಿಗಷ್ಟೇ ಈ ಹಿಂದೆ ಮನವಿ ಸಲ್ಲಿಸಲಾಗಿದೆ. ಕಟ್ಟಡ ನಿರ್ಮಾಣಕ್ಕಲ್ಲ ಎಂದು ವಿವರಿಸಿದರು.

ಹೇಳಿಕೆ ದಾಖಲಿಸಿಕೊಂಡ ಪೀಠ, ಸಾಗರ ವಕೀಲರ ಭವನ ನಿರ್ಮಾಣಕ್ಕೆ ಯೋಜನೆ ರೂಪಿಸುವಂತೆ ಶಿವಮೊಗ್ಗ ಪ್ರಧಾನ ಜಿಲ್ಲಾ ನ್ಯಾಯಾಧೀಶರ ಮೂಲಕ ಲೋಕೋಪಯೋಗಿ ಇಲಾಖೆಯ ಶಿವಮೊಗ್ಗ ವಲಯದ ಮುಖ್ಯ ಅಭಿಯಂತರರಿಗೆ ಪ್ರಸ್ತಾವನೆ ತಲುಪುವಂತೆ ಹೈಕೋರ್ಟ್ ರಿಜಿಸ್ಟ್ರಾರ್ (ಮೂಲಸೌಕರ್ಯ ಮತ್ತು ನಿರ್ವಹಣೆ) ಅವರು ಕ್ರಮ ವಹಿಸಬೇಕು. ಹಾಗೆಯೇ ಲೋಕೋಪಯೋಗಿ ಇಲಾಖೆಯ ವಾಸ್ತುಶಿಲ್ಪಿ ಕಟ್ಟಡ ನಿರ್ಮಾಣಕ್ಕೆ ವಿಸ್ತೃತ ಯೋಜನೆಯನ್ನು ಸಿದ್ಧಪಡಿಸಿ ಕೊಡುವಂತೆ ಸೂಚಿಸಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಸೆ.11ಕ್ಕೆ ಮುಂದೂಡಿತು.

ಪ್ರಕರಣದ ಹಿನ್ನೆಲೆ: ಸಾಗರ ಕೋರ್ಟ್​ಗೆ ಹೊಂದಿಕೊಂಡಿರುವ ಖಾಲಿ ಜಾಗದಲ್ಲಿ 118x85 ಅಳತೆಯ ನಿವೇಶನವನ್ನು ವಕೀಲರ‌‌ ಭವನ ನಿರ್ಮಾಣಕ್ಕೆ‌‌‌‌ ಮಂಜೂರು ಮಾಡುವಂತೆ ಸಾಗರ ವಕೀಲರ ಸಂಘ ಮನವಿ ಮಾಡಿತ್ತು. ಆದರೆ, ಐದು ವರ್ಷಗಳಿಂದ ಸರ್ಕಾರ‌ ಹಾಗೂ ನ್ಯಾಯಾಂಗ‌ ಇಲಾಖೆ‌ ನಡುವೆ ಪತ್ರ ವ್ಯವಹಾರ ನಡೆದಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಹೈಕೋರ್ಟ್​ಗೆ ಪಿಐಎಲ್ ಸಲ್ಲಿಸಿದ್ದ ಸಾಗರ ವಕೀಲರ ಸಂಘ, ವಕೀಲರ ಭವನ ನ್ಯಾಯಾಲಯದ ಅವಿಭಾಜ್ಯ ಅಂಗ. ವಕೀಲರ ಭವನ ನಿರ್ಮಾಣ ಮಾಡುವುದು ಸರ್ಕಾರದ ಕರ್ತವ್ಯ. ಆದ್ದರಿಂದ ಕೂಡಲೇ ನಿವೇಶನವನ್ನು ನ್ಯಾಯಾಂಗ ಇಲಾಖೆಗೆ ಹಸ್ತಾಂತರಿಸಿ, ಸರ್ಕಾರದ ವೆಚ್ಚದಲ್ಲಿ ವಕೀಲರ ಭವನ ನಿರ್ಮಿಸಿ ಕೊಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.