ETV Bharat / state

ರಾಜ್ಯದಲ್ಲಿ ಟೊಮೆಟೊ ಬಳಿಕ ಈರುಳ್ಳಿ ಬೆಲೆ ಹೆಚ್ಚಳ ಆತಂಕ; ಮಾರುಕಟ್ಟೆಗಳಿಗೆ ಆವಕ ಕುಸಿತ

author img

By ETV Bharat Karnataka Team

Published : Oct 11, 2023, 10:02 PM IST

ರಾಜ್ಯದಲ್ಲಿ ಈರುಳ್ಳಿ ಬೆಲೆ ಹೆಚ್ಚಳದ ಆತಂಕ ಎದುರಾಗಿದೆ.
ಈರುಳ್ಳಿ
ಈರುಳ್ಳಿ

ಗ್ರಾಹಕ ಮಂಜುನಾಥ

ಬೆಂಗಳೂರು : ಕಳೆದ ಕೆಲವು ತಿಂಗಳ ಹಿಂದೆ ಟೊಮೆಟೊ ಬೆಲೆ ಗಗನಕ್ಕೇರುವ ಮೂಲಕ ಗ್ರಾಹಕರನ್ನು ಕಂಗಾಲಾಗಿಸಿತ್ತು. ಇದೀಗ ಬೆಲೆ ಇಳಿದಿದೆ. ಆದರೆ, ಈರುಳ್ಳಿ ಬೆಲೆ ಹೆಚ್ಚಳದ ಆತಂಕ ಶುರುವಾಗಿದೆ. ರಾಜ್ಯದಲ್ಲಿ ಈರುಳ್ಳಿ ಬೆಳೆಯುವ ಜಿಲ್ಲೆಗಳಿಂದ ನಗರಕ್ಕೆ ಪೂರೈಕೆ ಬಹುತೇಕ ಕುಸಿದಿದೆ.

ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟದ ಮೂಲಕ ಮಹಾರಾಷ್ಟ್ರದ ಈರುಳ್ಳಿ ರಾಜ್ಯಕ್ಕೆ ಬರುತ್ತಿದ್ದು ಬೆಲೆ ನಿಯಂತ್ರಣದಲ್ಲಿದೆ. ಆದರೆ ಮಹಾರಾಷ್ಟ್ರದಲ್ಲಿ ಈರುಳ್ಳಿ ದರ ಏರಿಕೆಯಾಗಿ, ಪೂರೈಕೆ ಕಡಿಮೆಯಾದರೆ ರಾಜ್ಯದಲ್ಲೂ ದರ ಹೆಚ್ಚಳ ಆಗಲಿದೆ. ಕಡಿಮೆ ಬೆಳೆಯಿಂದಾಗಿ ಮತ್ತಷ್ಟು ಬೆಲೆ ಏರಿಕೆ ತಡೆಗೆ ಹಾಗೂ ಕೃತಕ ಅಭಾವ ಸೃಷ್ಟಿಗೆ ಅವಕಾಶವಾಗದಂತೆ ಕೇಂದ್ರದ ನಫೆಡ್‌ ಹಾಗೂ ನ್ಯಾಷನಲ್ ಕೋ ಆಪರೇಟಿವ್ ಕನ್ಸ್ಯೂಮರ್ಸ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ ಮೂಲಕ ಏಪ್ರಿಲ್‌, ಮೇ ತಿಂಗಳಲ್ಲಿ ಮಹಾರಾಷ್ಟ್ರದ ಈರುಳ್ಳಿ ಖರೀದಿಸಲಾಗಿದೆ. ಅದು ಸದ್ಯ ಬೆಂಗಳೂರು ಮಾರುಕಟ್ಟೆಗೆ ಪೂರೈಕೆಯಾಗುತ್ತಿದೆ ಎಂದು ತಿಳಿದುಬಂದಿದೆ.

ಈ ವರ್ಷ ಬಿತ್ತನೆ ಪ್ರಮಾಣ ಇಳಿಮುಖವಾಗಿದ್ದು, ಕೃಷಿ ಉತ್ಪನ್ನ ಮಾರುಕಟ್ಟೆಗೆ ಸಾಕಷ್ಟು ಪ್ರಮಾಣದಲ್ಲಿ ಈರುಳ್ಳಿ ಬಂದಿಲ್ಲ. ಬೆಂಗಳೂರಿನ ಯಶವಂತಪುರ ಹೊರವಲಯದ ದಾಸನಪುರ ಎಪಿಎಂಸಿಯಲ್ಲಿ ಕ್ವಿಂಟಲ್‌ಗೆ 1,500 ರಿಂದ 2,500 ರೂ ಬೆಲೆಗೆ ಮಾರಾಟವಾಗುತ್ತಿದೆ. ಕಳೆದ 15 ದಿನಗಳ ಹಿಂದೆ ಚಿಲ್ಲರೆ ಮಾರುಕಟ್ಟೆಯಲ್ಲಿ ಸರಿಸುಮಾರು 20 ರೂಪಾಯಿ ಕೆ.ಜಿಗೆ ಸಿಗುತ್ತಿದ್ದ ಈರುಳ್ಳಿ ಈಗ ಸುಮಾರು 45 ರೂಪಾಯಿಗೆ ಮಾರಾಟವಾಗುತ್ತಿದೆ. ಪ್ರಮಾಣ ಕಡಿಮೆ ಇದ್ದರೂ ಕೃತಕ ಅಭಾವ ತಪ್ಪಿಸಲಾಗುತ್ತಿದೆ. ಕೇಂದ್ರ ಸರ್ಕಾರ ಈರುಳ್ಳಿ ಪೂರೈಸದಿದ್ದರೆ ಕೆ.ಜಿಗೆ 50 ರೂಪಾಯಿ ದಾಟುವ ಸಾಧ್ಯತೆ ಇತ್ತು ಎಂದು ಎಪಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ಚಿತ್ರದುರ್ಗ, ಚಳ್ಳಕೆರೆ, ಚಿಕ್ಕಬಳ್ಳಾಪುರ ಸೇರಿ ದಕ್ಷಿಣದ ರಾಜ್ಯಗಳಿಂದ ಈರುಳ್ಳಿ ಮಾರುಕಟ್ಟೆಗೆ ಬರುತ್ತಿದ್ದು, ಮುಂದಿನ ತಿಂಗಳಿನಲ್ಲಿ ಗದಗ, ವಿಜಯಪುರದಿಂದ ಪೂರೈಕೆಯಾಗಲಿದೆ. ಆದರೆ ಈ ವರ್ಷ ಬಿತ್ತನೆ ಕಡಿಮೆಯಾಗಿದೆ. ಬೆಂಗಳೂರಿನ ಯಶವಂತಪುರ ಎಪಿಎಂಸಿಗೆ 1.20 ಲಕ್ಷ ಚೀಲ ಈರುಳ್ಳಿ ಬರಬೇಕಿತ್ತು. ಆದರೆ 70 ಸಾವಿರ ಚೀಲಗಳು ಮಾತ್ರ ಬಂದಿದೆ. ಪೂರೈಕೆ ಕಡಿಮೆಯಿದ್ದರೂ ಸದ್ಯ ಬೆಲೆ ನಿಯಂತ್ರಣದಲ್ಲಿದೆ. ನಫೆಡ್‌, ಎನ್‌ಸಿಸಿಎಫ್‌ ಮೂಲಕ ಈರುಳ್ಳಿ ಪೂರೈಕೆ ಆಗುತ್ತಿರುವ ಕಾರಣ ಬೆಲೆ ಕಡಿಮೆಯಿದೆ. ಈ ವರ್ಷ ಅನಾವೃಷ್ಟಿಯಿಂದ ಈರುಳ್ಳಿ ಬೆಳೆ ಬಿತ್ತನೆ ಕಡಿಮೆಯಾಗಿದೆ. ಇದೇ ವೇಳೆ ಕಡಿಮೆ ಉತ್ಪನ್ನವಿದ್ದರೂ ಗುಣಮಟ್ಟದ ಈರುಳ್ಳಿ ಬರುತ್ತಿದೆ ಎಂದು ಬೆಂಗಳೂರು ಈರುಳ್ಳಿ ಮತ್ತು ಆಲೂಗಡ್ಡೆ ವರ್ತಕರ ಸಂಘದ ಕಾರ್ಯದರ್ಶಿ ಬಿ. ರವಿಶಂಕರ್‌ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಹೇಗಿದೆ ಈರುಳ್ಳಿ ಬೆಲೆ?: ಹುಬ್ಬಳ್ಳಿ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಸ್ಥಳೀಯ ಈರುಳ್ಳಿ ಕೆಲ ವಾರಗಳ ಹಿಂದೆ ಕೇವಲ 1,800 ರೂಪಾಯಿಗೆ ಒಂದು ಕ್ವಿಂಟಲ್‌ನಂತೆ ಮಾರಾಟವಾಗಿತ್ತು. ಆದರೆ ಇದೀಗ ದಿಢೀರ್ ಕ್ವಿಂಟಲ್​ಗೆ 2,600 ರೂಪಾಯಿ ಗಡಿ ದಾಟಿದೆ. ಉತ್ತಮ ಗುಣಮಟ್ಟದ ಪುಣೆ ಈರುಳ್ಳಿ ಕ್ವಿಂಟಲ್​ಗೆ ರೂ. 2,800, 2ನೇ ದರ್ಜೆಯ ಈರುಳ್ಳಿ ಕ್ವಿಂಟಲ್‌ಗೆ 1300 ರೂಪಾಯಿಯಿಂದ 2000 ರೂಪಾಯಿಗೆ ಭಾರಿ ಏರಿಕೆ ಆಗಿದೆ. ಮಾರುಕಟ್ಟೆಗೆ ಬರುತ್ತಿದ್ದ ಈರುಳ್ಳಿ ಕುಸಿತವೂ ಬೆಲೆ ಏರಿಕೆಗೆ ಕಾರಣವಾಗಿದೆ.

ಹುಬ್ಬಳ್ಳಿ ಎಪಿಎಂಸಿಗೆ ಸ್ಥಳೀಯ ಈರುಳ್ಳಿ 4045 ಕ್ವಿಂಟಾಲ್ ಆವಕವಿದೆ. ಪುಣೆ ಈರುಳ್ಳಿ 2866 ಕ್ವಿಂಟಾಲ್ ಆವಕವಿದ್ದು, ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಗೆ ಬರುತ್ತಿಲ್ಲ.‌ ಅದರಲ್ಲೂ ರೈತರು ಬಿತ್ತನೆಯಲ್ಲಿ ನಿರತರಾಗಿದ್ದು, ಮಾರುಕಟ್ಟೆಗೆ ಈರುಳ್ಳಿ ಬರುತ್ತಿರುವುದು ತಡವಾಗಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ. ಸಗಟು ಮಾರುಕಟ್ಟೆಯಲ್ಲಿ ಒಂದು ಬೆಲೆಯಾದ್ರೆ ಚಿಲ್ಲರೆ ಮಾರುಕಟ್ಟೆ ಹಾಗೂ ತರಕಾರಿ ಸಂತೆಯಲ್ಲಿ ಬೆಲೆ ಒಂದಕ್ಕೆ ಎರಡು ಪಟ್ಟು ಏರಿಕೆಯಾಗಿದೆ. ಒಂದು ಕೆಜಿ ಈರುಳ್ಳಿ 40-45 ರೂಪಾಯಿ ಇದೆ. ಇದು ಗ್ರಾಹಕರ ಕಣ್ಣಲ್ಲಿ ನೀರು ತರಿಸುವಂತಿದೆ.

ಮೊದಲೇ ಮುಂಗಾರು ಕೈ ಕೊಟ್ಟಿದೆ. ಹಿಂಗಾರು ಮಳೆ ಇಲ್ಲದೆ ರೈತರು ಪರದಾಡುತ್ತಿದ್ದಾರೆ. ಇದರ ಮಧ್ಯೆ ಈರುಳ್ಳಿ ಬೆಲೆ ಗಗನಕ್ಕೇರಿದ್ದು ನಮಗೆ ನುಂಗಲಾರದ ತುತ್ತಾಗಿದೆ. 15-20 ರೂಪಾಯಿ ಇದ್ದ ದರ ಏಕಾಏಕಿ 40-45 ರೂಪಾಯಿ ಆದ್ರೆ ಖರೀದಿಸುವದು ಹೇಗೆ?. ಜೀವನ ನಡೆಸುವುದೇ ದುಸ್ತರವಾಗಿದೆ ಎನ್ನುತ್ತಾರೆ ಗ್ರಾಹಕರಾದ ಮೆಹಬೂಬ್ ಹಾಗೂ ಮಂಜುನಾಥ್.

ರೈತ ಅಶೋಕ್

ದಾವಣಗೆರೆಯಲ್ಲಿ ಈರುಳ್ಳಿ ಮಾರುಕಟ್ಟೆ: ಜಿಲ್ಲೆಯಲ್ಲಿ ಮಳೆ ಅಭಾವದಿಂದ ಈರುಳ್ಳಿ ಬೆಳೆ ಕುಂಠಿತವಾಗಿದ್ದು, ತಕ್ಕಮಟ್ಟಿಗೆ ಬೆಲೆ ಏರಿಕೆಯಾಗಿದೆ. ಮಾರುಕಟ್ಟೆಗೆ ಸ್ಥಳೀಯ ಈರುಳ್ಳಿ ರಫ್ತು ಗಣನೀಯವಾಗಿ ಕಡಿಮೆಯಾಗಿದ್ದರೂ ಕೂಡ ದಾವಣಗೆರೆಯಲ್ಲಿ ಮಹಾರಾಷ್ಟ್ರದ ನಾಸಿಕ್ ಹಾಗೂ ಸ್ಥಳೀಯ ಈರುಳ್ಳಿಯ ಬೆಲೆ ಹಂತವಾಗಿ ದುಬಾರಿಯಾಗುತ್ತಿದೆ. ಬೆಳೆದ ಈರುಳ್ಳಿಯ ಬೆಲೆ ದಸರಾ ಹಬ್ಬದ ಬಳಿಕ ಇಲ್ಲವೇ ದೀಪಾವಳಿ ನಂತರವೇ ಮತ್ತಷ್ಟು ಗಗನಕ್ಕೇರುವ ಸಾಧ್ಯತೆಗಳಿವೆ. ಹೋಲೆಸೆಲ್‌ನಲ್ಲಿ 30 ರೂಪಾಯಿಗೆ ಕೆ ಜಿ ಈರುಳ್ಳಿ ಮಾರಾಟವಾಗುತ್ತಿದ್ದರೆ, ರಿಟೇಲ್​ನಲ್ಲಿ 35 ರಿಂದ 40 ರೂಪಾಯಿಗೆ ಈರುಳ್ಳಿ ಮಾರಾಟವಾಗ್ತಿದೆ. ಕೆಲವೇ ದಿನಗಳಲ್ಲಿ ಈ ಬೆಲೆ ದ್ವಿಗುಣಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

ದಾವಣಗೆರೆ ಜಿಲ್ಲೆಯಲ್ಲಿ ಮಳೆ ಕೈ ಕೊಟ್ಟಿದೆ. ಟೊಮೆಟೊ ಬಳಿಕ ಈರುಳ್ಳಿ ಬೆಲೆಯೂ ಗಗನಕ್ಕೇರಿಕೆಯಾಗಲಿದೆ ಎಂದು ಮನಗಂಡು ಅನೇಕರು ಬೆಳೆದಿದ್ದರು. ಆದರೆ ಮಳೆ ಅಭಾವದಿಂದ ಬೆಳೆ ನೆಲಕಚ್ಚಿದೆ. ಅದರಿಂದ ಜಮೀನಿನಲ್ಲಿ ದೊರೆಯುವ ಅಲ್ಪಸ್ವಲ್ಪ ಈರುಳ್ಳಿಯನ್ನು ರೈತರು ದಾವಣಗೆರೆ ಮಾರುಕಟ್ಟೆಗೆ ತರುತ್ತಿದ್ದಾರೆ. ಸ್ಥಳೀಯ ಈರುಳ್ಳಿ ಮಾರುಕಟ್ಟೆಗೆ ಸ್ವಲ್ಪ ಪ್ರಮಾಣದಲ್ಲಿ ಬರುತ್ತಿದ್ದರಿಂದ ಕಡಿಮೆ ಗುಣಮಟ್ಟದ ಈರುಳ್ಳಿ ಬೆಲೆ 20 ರಿಂದ 25ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದ ನಾಸಿಕ್ ಈರುಳ್ಳಿಯ ಬೆಲೆ 30-35 ರೂಪಾಯಿ ಆಗಿದ್ದು, ರಿಟೇಲ್​ನಲ್ಲಿ 40 ರೂಪಾಯಿಗೆ ಒಂದು ಕೆಜಿ ಮಾರಾಟ ಆಗ್ತಿದೆ. ಹಳೇ ಈರುಳ್ಳಿ ಬರುತ್ತಿರುವುದರಿಂದ ಬೆಲೆ ಕಡಿಮೆ ಇದೆ. ನಾಸೀಕ್ ಈರುಳ್ಳಿ ಇಲ್ಲದ್ದಿದ್ದರೆ ಈರುಳ್ಳಿ ಬೆಲೆ ಐವತ್ತು ರೂಪಾಯಿ ಬೆಲೆ ದಾಟುವ ಸಂಭವ ದಟ್ಟವಾಗಿತ್ತು ಎಂದು ಈರುಳ್ಳಿ ದಲ್ಲಾಳಿ ಸಂಘದ ಅಧ್ಯಕ್ಷರ ಬಸವಲಿಂಗಪ್ಪ ಹೇಳಿದರು.

ಎಪಿಎಂಸಿ ವ್ಯಾಪಾರಿ ಮನೋಜ ಮತ್ತಿಕೊಪ್ಪ

ಬೆಳಗಾವಿ ಈರುಳ್ಳಿ ದರ: ಬೆಳಗಾವಿ ಮಾರುಕಟ್ಟೆಯಲ್ಲಿ ಕಳೆದ ಹದಿನೈದು ದಿನಗಳಿಂದ ಈರುಳ್ಳಿ ದರ ಏರಿಕೆಯತ್ತ ಸಾಗುತ್ತಿದೆ. ಮುಂಗಾರು ಮಳೆ ಕೈ ಕೊಟ್ಟ ಹಿನ್ನೆಲೆಯಲ್ಲಿ ಈರುಳ್ಳಿ ಇಳುವರಿ ಕಡಿಮೆಯಾಗಿದ್ದು, ಬೆಳಗಾವಿ ಎಪಿಎಂಸಿಯಲ್ಲಿ ಈರುಳ್ಳಿ ಅಭಾವ ಸೃಷ್ಟಿಯಾಗಿದೆ. ಹದಿನೈದು ದಿನಗಳ ಹಿಂದೆ ಕೆಜಿಗೆ 20-25 ರೂ.‌ ಮಾರಾಟ ಆಗುತ್ತಿದ್ದ ಈರುಳ್ಳಿ ಇದೀಗ 35-40 ರೂ. ಆಗಿದೆ.

ಬೀದಿಬದಿ ವ್ಯಾಪಾರಿ‌ ದಿವ್ಯಾ ರಾಥೋಡ್​ ಈಟಿವಿ ಭಾರತ್​ ಜೊತೆಗೆ ಮಾತನಾಡಿ, ಎಪಿಎಂಸಿಯಲ್ಲಿ ನಮಗೆ 28, 29 ರೂ. ಸಿಗುತ್ತಿದೆ. ಕಳೆದ ಒಂದು ತಿಂಗಳಿನಿಂದ ದರ ಏರಿಕೆಯಾಗಿದೆ. ದರ ಕಡಿಮೆ ಮಾಡುವಂತೆ ಗ್ರಾಹಕರು ಚೌಕಾಶಿ ಮಾಡುತ್ತಾರೆ. ಆದರೆ, ನಮಗೆ ನಷ್ಟ ಮಾಡಿಕೊಂಡು ಹೇಗೆ? ವ್ಯಾಪಾರ ಮಾಡುವುದು ಎಂದು ಪ್ರಶ್ನಿಸಿದರು. ಎಪಿಎಂಸಿ ವ್ಯಾಪಾರಿ ಮನೋಜ ಮತ್ತಿಕೊಪ್ಪ ಮಾತನಾಡಿ, ಈ ಬಾರಿ ಸರಿಯಾಗಿ ಮಳೆ ಆಗದೆ ಇದ್ದರಿಂದ‌ ನಿರೀಕ್ಷೆಯಷ್ಟು ಈರುಳ್ಳಿ ಮಾರುಕಟ್ಟೆಗೆ ಬಂದಿಲ್ಲ. ಹಾಗಾಗಿ, ಕಳೆದ 13 ದಿನಗಳಿಂದ ದರದಲ್ಲಿ ಏರಿಕೆ ಕಂಡಿದೆ. ಕೇಂದ್ರ ಸರ್ಕಾರ ಬೇರೆ ದೇಶಗಳಿಗೆ ಈರುಳ್ಳಿ ರಫ್ತು ಮಾಡಲು ಶೇ.40ರಷ್ಟು ತೆರಿಗೆ ಹಾಕಿದ್ದರಿಂದ ಮಹಾರಾಷ್ಟ್ರ ಸೇರಿ ಇನ್ನಿತರ ಕಡೆಗಳ ಹಳೆ ಉಳ್ಳಾಗಡ್ಡಿ ಹೊರಗೆ ಬಂದಿದ್ದರಿಂದ ಮಾರುಕಟ್ಟೆ ಉಳಿದಿದೆ. ಭವಿಷ್ಯದ ದರದಲ್ಲಿ ಇನ್ನೂ ಹೆಚ್ಚಿಗೆ ಆಗುವ ಸಾಧ್ಯತೆಯಿದೆ ಎಂದು ಹೇಳಿದರು.

ಈರುಳ್ಳಿ ವ್ಯಾಪಾರಿಯ ಪ್ರತಿಕ್ರಿಯೆ

ಶಿವಮೊಗ್ಗದಲ್ಲಿ ಈರುಳ್ಳಿ ದರ: ಜಿಲ್ಲೆಯಲ್ಲಿ ಈರುಳ್ಳಿ ದರ ದಿನೇ ದಿನೇ ಗಗನಕ್ಕೆ ಏರುತ್ತಲಿದೆ. ಮಾರುಕಟ್ಟೆಯಲ್ಲಿ ಅಗತ್ಯಕ್ಕೆ ತಕ್ಕಂತೆ ಲಭ್ಯವಾಗುತ್ತಿದ್ದರೂ ದರ ಮಾತ್ರ ದುಬಾರಿಯಾಗುತ್ತಿದೆ. ಈರುಳ್ಳಿ ಬೆಳೆಯುವ ಪ್ರದೇಶಗಳಲ್ಲಿ ಅಗತ್ಯ ಇಳುವರಿ ಇಲ್ಲದೆ ಇರುವುದು ಹಾಗೂ ಮಳೆ ಕೈ ಕೊಟ್ಟಿರುವುದರಿಂದ ಹೆಚ್ಚಿನ ಇಳುವರಿ ಇಲ್ಲದಂತಾಗಿದೆ. ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿ ಈರುಳ್ಳಿ ಬೆಳೆಯುವುದಿಲ್ಲ. ಉತ್ತರ ಕರ್ನಾಟಕ ಭಾಗ, ಮಧ್ಯ ಕರ್ನಾಟಕದ ಚಿತ್ರದುರ್ಗ, ತುಮಕೂರು ಸೇರಿದಂತೆ ಚಿಕ್ಕಮಗಳೂರಿನ ಕೆಲ ತಾಲೂಕುಗಳಲ್ಲಿ ಬೆಳೆಯುತ್ತಾರೆ. ಅಲ್ಲೆಲ್ಲ ಹೋಲ್​ಸೆಲ್​ನಲ್ಲಿ ಈರುಳ್ಳಿ ಪ್ರತಿ ಕೆ.ಜಿಗೆ 25-30 ರೂ. ತನಕ ದರ ಇದೆ. ಕಳೆದ ತಿಂಗಳು 15-20 ರೂ. ದರದಲ್ಲಿ ಈರುಳ್ಳಿ ಲಭ್ಯವಾಗುತ್ತಿತ್ತು. ಈಗ ಈರುಳ್ಳಿ ದುಬಾರಿ ಆಗುತ್ತಿದೆ. ಶಿವಮೊಗ್ಗದಂತಹ ಜಿಲ್ಲಾ ಕೇಂದ್ರದಲ್ಲಿ ಈರುಳ್ಳಿ ಮಂಡಿಯಲ್ಲಿಯೇ 30 ರೂ ಕೆ. ಜಿ ದರ ಇದ್ರೆ, ರಿಟೇಲ್​ನಲ್ಲಿ ಮಾರುವವರು 35-40 ರೂ ಗೆ ಮಾರಾಟ ಮಾಡುತ್ತಿದ್ದಾರೆ.

ಈರುಳ್ಳಿ ನಮ್ಮ ಪ್ರತಿದಿನದ ದಿನ ಬಳಕೆಯ ವಸ್ತುವಾಗಿದೆ. ಹೀಗೆ ಈರುಳ್ಳಿ ಪ್ರತಿದಿನ ಏರುತ್ತಲೆ ಹೋದ್ರೆ ಏನ್ ಮಾಡುವುದು. ಅಡುಗೆಗೆ ನಾಲ್ಕು ಆಗುವ ಕಡೆ ಒಂದೇ ಹಾಕಬೇಕಾದ ಸ್ಥಿತಿ ಬರಲಿದೆ. ಮಳೆ ಇಲ್ಲದ ಕಾರಣ ದರ ಏರಿಕೆ ಆಗಿದೆ. ಮುಂದೆ ದರ ಕಡಿಮೆ ಆಗಬಹುದು ಎನ್ನುತ್ತಾರೆ ಗೃಹಿಣಿ ನಾಗರತ್ನ.

ಈರುಳ್ಳಿ ಹೋಲ್​ಸೆಲ್ ವ್ಯಾಪಾರಿ ಸೈಯದ್ ಅವರು ಮಾತನಾಡಿ, ನಮ್ಮ ಕರ್ನಾಟಕದ ಈರುಳ್ಳಿ ಮುಂದಿನವಾರ ಮಾರುಕಟ್ಟೆ ಪ್ರವೇಶ ಮಾಡಲಿದೆ. ಈಗ ನಮಗೆ ಮಹಾರಾಷ್ಟ್ರದಿಂದ ಈರುಳ್ಳಿ ಬರುತ್ತಿದೆ. ಹಾಲಿ ಇರುವ ದರ ಅಷ್ಟೆನೂ ಹೆಚ್ಚಾಗಿಲ್ಲ. ಕಳೆದ ವರ್ಷ ಮಳೆಯಿಂದ ಈರುಳ್ಳಿ ಬೆಳೆ ಅಷ್ಟೆನೂ ಬರಲಿಲ್ಲ. ಈಗ ಮಳೆಯಿಲ್ಲದೆ ಇಳುವರಿ ಕಡಿಮೆ ಆಗಿದೆ. ಇನ್ನೂ ಮುಂದಿನ ವಾರಗಳಲ್ಲಿ ಹಾಲಿ ಇರುವ ಈರುಳ್ಳಿ ದರಕ್ಕಿಂತ 10 ರೂ. ಹೆಚ್ಚಾಗಬಹುದು ಎನ್ನುತ್ತಾರೆ.

ಮೈಸೂರಲ್ಲಿ ಈರುಳ್ಳಿ ದರ: ಮೈಸೂರಿನ ಬಂಡಿಪಾಳ್ಯ ಸಗಟು ಈರುಳ್ಳಿ ಮಾರುಕಟ್ಟೆಗೆ ಮಹಾರಾಷ್ಟ್ರದಿಂದ ಹೆಚ್ಚಾಗಿ ಈರುಳ್ಳಿ ಬರುತ್ತದೆ. ಈ ಮಾರುಕಟ್ಟೆಯಿಂದ ಕೇರಳ ಸೇರಿದಂತೆ ಸುತ್ತಮುತ್ತ ಪ್ರದೇಶಗಳಿಗೆ ಈರುಳ್ಳಿಯನ್ನ ತೆಗೆದುಕೊಂಡು ಹೋಗುತ್ತಾರೆ. ಸಾಮಾನ್ಯವಾಗಿ ದಸರಾ, ದೀಪಾವಳಿ ಆಗಿರುವುದರಿಂದ ಈರುಳ್ಳಿ ಬೆಲೆ ಕೆಜಿಗೆ 28 ರಿಂದ 30 ರೂ. ಆಗಿದೆ. ಒಳ್ಳೆಯ ಈರುಳ್ಳಿ ಬೆಲೆ 35ಕ್ಕೂ ಹೆಚ್ಚಿದ್ದು, ಸಾಮಾನ್ಯವಾಗಿ ಮೈಸೂರು ನಗರಕ್ಕೆ ಕಡಿಮೆ ಪ್ರಮಾಣದ ಈರುಳ್ಳಿ ಎಂದರೆ ಪ್ರತಿನಿತ್ಯ 90 ಟನ್ ಈರುಳ್ಳಿ ಅಗತ್ಯವಿದೆ.

ಸುತ್ತಮುತ್ತಲ ಪ್ರದೇಶಗಳಿಗೆ ಇಲ್ಲಿಂದಲೇ ಈರುಳ್ಳಿ ತೆಗೆದುಕೊಂಡು ಹೋಗುತ್ತಾರೆ ಎಂದು ಈರುಳ್ಳಿ ವ್ಯಾಪಾರಸ್ಥರು ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ಈರುಳ್ಳಿ ಬೆಲೆ ಹೆಚ್ಚಾಗಲು ಕಾರಣವೇನೆಂದರೆ ಹಬ್ಬಗಳ ಸೀಸನ್ ಆಗಿದ್ದು, ಜೊತೆಗೆ ಇತ್ತೀಚಿಗೆ ಮಹಾರಾಷ್ಟ್ರ ಭಾಗದಲ್ಲಿ ಮಳೆ ಹೆಚ್ಚಾಗಿರುವುದರಿಂದ ಬೆಳೆಗಳು ನಾಶವಾಗಿದೆ. ಇದು ಬೆಲೆ ಹೆಚ್ಚಾಗಲು ಕಾರಣವಾಗಿದೆ ಎಂದು ಎನ್ನುತ್ತಾರೆ ಬಂಡಿಪಾಳ್ಯ ಈರುಳ್ಳಿ ವ್ಯಾಪಾರಸ್ತ ಚೇತನ್ ಕುಮಾರ್.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈರುಳ್ಳಿ ಬೆಲೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈರುಳ್ಳಿ ಬೆಲೆ ಸದ್ಯ ಸ್ಥಿರವಾಗಿದೆ. ಬೆಲೆ ಹೆಚ್ಚಾಗುವ ಸಾಧ್ಯತೆ ಇದ್ದು, ಸದ್ಯ ಈ ಹಿಂದಿನಂತೆಯೇ ಬೆಲೆ ಇದೆ. ಈರುಳ್ಳಿ ರಖಂ ದರ ಕೆಜಿಗೆ ರೂ. 28.50 ಯಿಂದ 30 ರೂ ಇದೆ. ಚಿಲ್ಲರೆ ದರ ಕೆಜಿಗೆ 35 ರಿಂದ 40 ವರೆಗೆ ಇದೆ. ದಕ್ಷಿಣ ಕನ್ನಡ ಜಿಲ್ಲೆಗೆ ಪ್ರತಿದಿನ 250 ಟನ್ ಈರುಳ್ಳಿ ಸರಬರಾಜು ಆಗುತ್ತದೆ. ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ನೆರೆಯ ರಾಜ್ಯ ಕೇರಳದ ಕಾಸರಗೋಡು, ಕಾಂಞಂಗಾಡ್‌ವರೆಗೆ ಸರಬರಾಜಾಗುತ್ತದೆ. ಈವರೆಗೆ ಈರುಳ್ಳಿ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ.

ಇದನ್ನೂ ಓದಿ: ದಾವಣಗೆರೆ: ಮಾರುಕಟ್ಟೆಯಲ್ಲಿ ಮಹಾರಾಷ್ಟ್ರದ ಈರುಳ್ಳಿಯದ್ದೇ ದರ್ಬಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.