ETV Bharat / state

ಮತದಾನದ ಪ್ರಮಾಣ ಹೆಚ್ಚಿಸಲು ತಂತ್ರಜ್ಞಾನದ ಮೊರೆ ಹೋದ ಚುನಾವಣಾ ಆಯೋಗ; ಆ್ಯಪ್ ಮೂಲಕ ಮತಗಟ್ಟೆ ಕ್ಯೂ ಸ್ಥಿತಿಗತಿ ಮಾಹಿತಿ

author img

By

Published : May 9, 2023, 6:43 PM IST

Election Commission
ಚುನಾವಣಾ ಆಯೋಗ

ಚುನಾವಣಾ' ಆ್ಯಪ್ ಅಪ್ಲಿಕೇಷನ್ ಮೂಲಕ ಮತದಾನ ಹೆಚ್ಚಿಸಲು ಚುನಾವಣಾ ಆಯೋಗ ಕಸರತ್ತು ನಡೆಸಿದೆ.

ಬೆಂಗಳೂರು : ಬೆಂಗಳೂರಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ನಾನಾ ಕಸರತ್ತು ನಡೆಸುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮತದಾರರನ್ನು ಮತಗಟ್ಟೆಗಳತ್ತ ಆಕರ್ಷಿಸಲು ಚುನಾವಣಾ ಆಯೋಗ ತಂತ್ರಜ್ಞಾನದ ಮೊರೆ ಹೋಗಿದೆ. ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಆ್ಯಪ್ ನ್ನು ಅಭಿವೃದ್ಧಿ ಪಡಿಸಿದೆ.

ಕರ್ನಾಟಕ ವಿಧಾನಸಭೆ 2023 ಚುನಾವಣೆ ನಾಳೆ ನಡೆಯಲಿದೆ. ನಾಳೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಇತ್ತ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವ ನಿಟ್ಟಿನಲ್ಲಿ ಚುನಾವಣಾ ಆಯೋಗ ನಾನಾ ಕಸರತ್ತು ನಡೆಸುತ್ತಿದೆ. ಅದರಲ್ಲೂ ಬೆಂಗಳೂರಲ್ಲಿ ಪ್ರತಿ ಬಾರಿಯೂ ಮತದಾರರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಕಳೆದ ಬಾರಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಕೇವಲ 55% ಆಗಿತ್ತು. ಪ್ರತಿ ಬಾರಿಯೂ ಬೆಂಗಳೂರು ಮತದಾನದ ಪ್ರಮಾಣ 55-57% ಆಸುಪಾಸಿನಲ್ಲೇ ಇರುತ್ತದೆ.

ಈ ಬಾರಿ ಬೆಂಗಳೂರು ವ್ಯಾಪ್ತಿಯಲ್ಲಿ 75% ಮತದಾನ ಆಗುವ ಗುರಿಯನ್ನು ಚುನಾವಣಾ ಆಯೋಗ ಹೊಂದಿದೆ. ಈ ನಿಟ್ಟಿನಲ್ಲಿ ಬಿಬಿಎಂಪಿ, ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ನಾನಾ ಕಸರತ್ತು ನಡೆಸುತ್ತಿದ್ದಾರೆ. ಜನಜಾಗೃತಿ ಜೊತೆಗೆ ಹಲವು ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅಷ್ಟೇ ಅಲ್ಲ, ಈ ಬಾರಿ ಒಂದು ಹೆಜ್ಜೆ ಮುಂದಿಟ್ಟ ಚುನಾವಣಾ ಆಯೋಗ ಬೆಂಗಳೂರಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ತಂತ್ರಜ್ಞಾನದ ಮೊರೆ ಹೋಗಿದೆ.

ಆ್ಯಪ್ ಮೂಲಕ ಮತದಾನ ಹೆಚ್ಚಳಕ್ಕೆ ತಂತ್ರ : ಬೆಂಗಳೂರಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ತಂತ್ರಜ್ಞಾನದ ಮೊರೆ ಹೋಗಿದೆ. ಬಿಬಿಎಂಪಿ ಹಾಗೂ ಜಿಲ್ಲಾ ಚುನಾವಣಾ ಕಚೇರಿ ಜಂಟಿಯಾಗಿ ಮತಗಟ್ಟೆಯಲ್ಲಿನ ಸರತಿಸಾಲಿನ ಬಗ್ಗೆ ನೈಜ ಸಮಯವನ್ನು ತಿಳಿಯಲು ಮೊಬೈಲ್​ ಅಪ್ಲಿಕೇಷನ್​ ಅಭಿವೃದ್ಧಿಪಡಿಸಿದೆ. 'ಚುನಾವಣಾ' ಆ್ಯಪ್ ಅಪ್ಲಿಕೇಷನ್ ಮೂಲಕ ಮತಗಟ್ಟೆಯಲ್ಲಿನ ಸರತಿ ಸಾಲಿನ ಬಗ್ಗೆ ನೈಜ ಸಮಯವನ್ನು ತಿಳಿಯುವ ವ್ಯವಸ್ಥೆಯನ್ನು ಮಾಡಿದೆ.

ಈ ಆ್ಯಪ್ ಮತಗಟ್ಟೆಗಳ ಲೊಕೇಷನ್, ಮತಗಟ್ಟೆಗಳತ್ತ ನೇವಿಗೇಷನ್, ಅಭ್ಯರ್ಥಿಗಳ ಮಾಹಿತಿ, ಮತಗಟ್ಟೆ ಅಧಿಕಾರಿಗಳ ಮಾಹಿತಿ, ಮತಗಟ್ಟೆಯಲ್ಲಿನ ಸರತಿ ಸಾಲಿನ ಮಾಹಿತಿಯನ್ನು ವಾಸ್ತವ ಸಮಯದ ಆಧಾರದಲ್ಲಿ ನೀಡುತ್ತದೆ‌. ಅದರ ಜೊತೆಗೆ ಮತಗಟ್ಟೆಯಲ್ಲಿನ ಪಾರ್ಕಿಂಗ್ ಜಾಗಗಳ ಬಗ್ಗೆಯೂ ಮಾಹಿತಿ ನೀಡಲಿದೆ ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.

ಈ ಆ್ಯಪ್ ಮೂಲಕ ವಯಸ್ಸಾದವರು, ದಿವ್ಯಾಂಗರು ಪಿಕ್ ಅಪ್ ವ್ಯವಸ್ಥೆ ಮತ್ತು ವ್ಹೀಲ್ ಚೇರ್ ವ್ಯವಸ್ಥೆಯನ್ನು ಬುಕ್ ಮಾಡಬಹುದಾಗಿದೆ. ಕಳೆದ ಬಾರಿಯೂ ಈ ಆ್ಯಪ್ ನ್ನು ಬಳಸಲಾಗಿದ್ದು, ಸುಮಾರು ಮೂರು ಲಕ್ಷ ಮತದಾರರು ಆ್ಯಪ್ ಬಳಕೆ ಮಾಡಿದ್ದರು ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಮತಗಟ್ಟೆಯಲ್ಲಿನ ಕ್ಯೂ ಬಗ್ಗೆ ಮಾಹಿತಿ : ಅನೇಕ ಮತದಾರರು ಬಿರು ಬಿಸಿಲಿನಲ್ಲಿ ಮತದಾನ ಮಾಡಲು ಮನೆಯಿಂದ ಹೊರಗೆ ಬರುತ್ತಿಲ್ಲ. ‌ಜೊತೆಗೆ ಹಲವರು ಮತಗಟ್ಟೆಯಲ್ಲಿನ ಸರತಿಸಾಲು (ಹೆಚ್ಚಿನ ಕ್ಯೂ) ಕಾರಣ ಹೇಳಿ ಮತಗಟ್ಟೆಗಳತ್ತ ಹೆಜ್ಜೆನೇ ಹಾಕುವುದಿಲ್ಲ. ಅಂತಹವರನ್ನು ಮತಗಟ್ಟೆಗಳಿಗೆ ಬರುವಂತೆ ಪ್ರೇರೇಪಿಸಲು 'ಚುನಾವಣಾ' ಆ್ಯಪ್ ಅಭಿವೃದ್ಧಿ ಪಡಿಸಲಾಗಿದೆ.

ಮತದಾರರು ತಮ್ಮ ಬೂತ್ ಸಂಖ್ಯೆಗೆ ಎಸ್ಎಂಎಸ್ ಮಾಡಿದರೆ ಬೂತ್ ನಲ್ಲಿರುವ ಸರತಿಸಾಲಿನ ಮಾಹಿತಿಯನ್ನು ನೀಡುತ್ತದೆ. ಅಥವಾ ಅವರು 'ಚುನಾವಣಾ' ಆ್ಯಪ್ ಮೂಲಕ ಕ್ಯೂ ಬಗ್ಗೆ ಮಾಹಿತಿ ತಿಳಿಯಬಹುದು. ಆ ಮೂಲಕ ಮತಗಟ್ಟೆಗಳಲ್ಲಿ ಮತಚಲಾಯಿಸಲು ಕಾಯುತ್ತಾ ನಿಂತಿರುವ ಮತದಾರರ ಮಾಹಿತಿಯನ್ನು ನೀಡುತ್ತದೆ. ಮತಗಟ್ಟೆಗಳಲ್ಲಿ ಹೆಚ್ಚಿನ ಕ್ಯೂ ಇಲ್ಲದಿದ್ದರೆ ಮತಗಟ್ಟೆಗೆ ಹೋಗಲು ಇದು ಅನುಕೂಲವಾಗಲಿದೆ.

ಮುಖ ಗುರುತಿಸುವಿಕೆ ತಂತ್ರಜ್ಞಾನ ಬಳಕೆ : ಅದೇ ರೀತಿ ಈ ಬಾರಿ ಚುನಾವಣಾ ಆಯೋಗ ಫೇಷಿಯಲ್ ರೆಕಾಗ್ನಿಷನ್ ಟೆಕ್ನಾಲಜಿ ಮೂಲಕ ಮತದಾರರು ಉದ್ದನೆಯ ಸರತಿಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಿ ನೇರವಾಗಿ ಮತಚಲಾವಣೆ ಮಾಡುವ ಹೊಸ ಅಪ್ಲಿಕೇಷನ್ ಅಭಿವೃದ್ಧಿ ಪಡಿಸಿದೆ.

ಆಪ್​ ಬಳಕೆ ಹೇಗೆ? : 'ಚುನಾವಣೆ' ಆ್ಯಪ್ ಮೂಲಕ ಮತಚೀಟಿ ಸಂಖ್ಯೆಯನ್ನು ಮತದಾರ ಎಂಟ್ರಿ ಮಾಡಬೇಕು. ಮೊಬೈಲ್ ‌ಸಂಖ್ಯೆ ನೋಂದಾಯಿಸಿದ ಬಳಿಕ ಒಟಿಪಿ ಜನರೇಟ್ ಆಗುತ್ತದೆ. ಬಳಿಕ ಆ್ಯಪ್ ಮೂಲಕ ಸೆಲ್ಫಿ ತೆಗೆಯಬೇಕು. ಈ ಪ್ರಕ್ರಿಯೆ ಬಳಿಕ ಮತದಾರ ತನ್ನ ಮತಗಟ್ಟೆಗೆ ಹೋದರೆ ಮತಗಟ್ಟೆ ಅಧಿಕಾರಿ ಟ್ಯಾಬ್ ನಲ್ಲಿ ಮಾಹಿತಿ ಪರಿಶೀಲಿಸಿ, ನೇರವಾಗಿ ಕೂಡಲೇ ಮತ ಚಲಾಯಿಸಲು ಅವಕಾಶ ನೀಡಲಾಗುತ್ತದೆ. ಅಧಿಕಾರಿಗಳು ಮತ್ತೊಮ್ಮೆ ಮತದಾರರ ಮುಖದ ಸ್ಕ್ಯಾನ್ ಮಾಡುತ್ತಾರೆ. ಬಳಿಕ ಕೂಡಲೇ ಯಾವುದೇ ದಾಖಲೆಗಳನ್ನು ಪರಿಶೀಲನೆಗೊಳಪಡಿಸದೇ ಮತ ಚಲಾವಣೆಗೆ ಅನುವು ಮಾಡಿಕೊಡಲಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಇದನ್ನೂ ಓದಿ : 224 ಕ್ಷೇತ್ರಗಳಿಗೆ ನಾಳೆ ಮತದಾನ: 1.5 ಲಕ್ಷ ಪೊಲೀಸರ ಭದ್ರತೆ, ಏನಾಗುತ್ತೆ 2615 ಅಭ್ಯರ್ಥಿಗಳ ಹಣೆಬರಹ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.