ETV Bharat / state

ಸರ್ಕಾರದ ಅಂಗಸಂಸ್ಥೆಗಳ ವ್ಯಾಜ್ಯಗಳನ್ನು ತಾವೇ ಬಗೆಹರಿಸಿಕೊಳ್ಳಬೇಕು: ಹೈಕೋರ್ಟ್

author img

By

Published : Jul 28, 2023, 1:45 PM IST

ಸರ್ಕಾರ ಮತ್ತು ಅದರ ಅಂಗಸಂಸ್ಥೆಗಳ ನಡುವಿನ ವ್ಯಾಜ್ಯಗಳನ್ನು ಸೂಕ್ತ ವೇದಿಕೆಯಲ್ಲಿ ಬಗೆಹರಿಸಿಕೊಳ್ಳಬೇಕು ಎಂದು ಹೈಕೋರ್ಟ್​ ಹೇಳಿದೆ.

ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ಸರ್ಕಾರ ಮತ್ತದರ ಅಂಗ ಸಂಸ್ಥೆಗಳ ನಡುವೆ ಎದುರಾಗುವ ವ್ಯಾಜ್ಯಗಳನ್ನು ಸೂಕ್ತ ವೇದಿಕೆಯಲ್ಲಿ ಬಗೆಹರಿಸಿಕೊಳ್ಳಬೇಕೇ ವಿನಃ ನ್ಯಾಯಾಲಯಗಳ ಮೊರೆ ಹೋಗುವುದು ಸರಿಯಾದ ಕ್ರಮವಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ನಗರದ ಬಿನ್ನಿಪೇಟೆಯಲ್ಲಿನ ಹಣ್ಣು, ಹೂವು ಮತ್ತು ತರಕಾರಿ ಕುರಿತ ವಿಶೇಷ ಎಪಿಎಂಸಿಯ ಕಾರ್ಯದರ್ಶಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ. ಸುನಿಲ್ ದತ್ ಯಾದವ್ ಅವರಿದ್ದ ಏಕ ಸದಸ್ಯಪೀಠ, ಭೂ ಸ್ವಾಧೀನ ಪರಿಹಾರ ಸಂಬಂಧ ವಿಶೇಷ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮತ್ತು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ ವ್ಯಾಜ್ಯವನ್ನು ಮೂರು ತಿಂಗಳಲ್ಲಿ ಪರಿಹರಿಸುವಂತೆ ನ್ಯಾಯಾಲಯ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿಗೆ ನಿರ್ದೇಶನ ನೀಡಿದೆ.

ಕೋರ್ಟ್‌ಗಳು ಈಗಾಗಲೇ ಪ್ರಕರಣಗಳ ಭಾರದಿಂದ ನಲುಗುತ್ತಿವೆ. ಆದ್ದರಿಂದ ರಾಜ್ಯ ಸರ್ಕಾರ ಮತ್ತು ಅದರ ಅಂಗ ಸಂಸ್ಥೆಗಳ ನಡುವಿನ ವ್ಯಾಜ್ಯಗಳನ್ನು ಪ್ರತ್ಯೇಕ ವೇದಿಕೆಗಳಲ್ಲಿ ಬಗೆಹರಿಸಿಕೊಳ್ಳಬೇಕು, ಅವುಗಳನ್ನು ಕೋರ್ಟ್‌ಗಳ ಮುಂದೆ ತರುವುದು ಸರಿಯಲ್ಲ. ಜತೆಗೆ, ಸರ್ಕಾರ ಸಾಧ್ಯವಾದಷ್ಟೂ ಕೋರ್ಟ್‌ಗಳಲ್ಲಿರುವ ವ್ಯಾಜ್ಯಗಳ ಹೊರೆಯನ್ನು ಇಳಿಸಲು ಪ್ರಯತ್ನ ಮಾಡಬೇಕು ಎಂದು ತಿಳಿಸಿದೆ.

ಈ ಪ್ರಕರಣದಲ್ಲಿ ಅರ್ಜಿದಾರರು ಮತ್ತು ಬಿಎಂಆರ್‌ಸಿಎಲ್ ಎರಡೂ ಸರ್ಕಾರದ ಸಂಸ್ಥೆಗಳೇ ಆಗಿವೆ. ಸಂವಿಧಾನದ ಕಲಂ 12ಕ್ಕೆ ಒಳಪಡಲಿವೆ. ಅಲ್ಲದೆ, ರಾಜ್ಯ ಸರ್ಕಾರ ಮತ್ತು ಅದರ ಅಂಗ ಸಂಸ್ಥೆಗಳ ನಡುವೆ ವ್ಯಾಜ್ಯಗಳಿದ್ದ ಸಂದರ್ಭದಲ್ಲಿ ಅವುಗಳನ್ನು ಪರಿಹರಿಸಲು ಕರ್ನಾಟಕ ರಾಜ್ಯ ವ್ಯಾಜ್ಯ ಪರಿಹಾರ ನೀತಿ 2021 ಅಳವಡಿಸಿಕೊಳ್ಳಲಾಗಿದೆ. ಅದರಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿ ಈ ವ್ಯಾಜ್ಯವನ್ನು ಪರಿಹರಿಸಬೇಕು ಎಂದು ನ್ಯಾಯಪೀಠ ತಿಳಿಸಿದೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿಗೆ ಈ ಪ್ರಕರಣವನ್ನು ವರ್ಗಾಯಿಸಲಾಗುತ್ತಿದೆ. ಅದರಲ್ಲಿ ವಿಶೇಷ ಎಪಿಎಂಸಿ ಕಾರ್ಯದರ್ಶಿ, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರು ಅಥವಾ ಅವರ ಪ್ರತಿನಿಧಿ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯಕಾರಿ ಅಧಿಕಾರಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕೆಐಎಡಿಬಿ ವಿಶೇಷಭೂಸ್ವಾಧೀನ ಅಧಿಕಾರಿ ಒಳಗೊಂಡ ಸಮಿತಿ ಈ ಪರಿಹಾರ ನಿಗದಿಯ ಬಗ್ಗೆ ಸಭೆ ನಡೆಸಿ ತೀರ್ಮಾನಿಸಬೇಕು ಎಂದು ಆದೇಶದಲ್ಲಿ ಉಲ್ಲೆಖಿಸಿದೆ.

ಪ್ರಕರಣದ ಹಿನ್ನೆಲೆ ಏನು? : ಮೆಟ್ರೊ ಮಾರ್ಗಕ್ಕಾಗಿ ಬಿಎಂಆರ್‌ಸಿಎಲ್, ಎಪಿಎಂಸಿಗೆ ಸೇರಿದ 2147.03 ಚದರ ಮೀಟರ್ ವಿಸ್ತ್ರೀರ್ಣದ ಜಾಗವನ್ನು ಸ್ವಾಧೀನಪಡಿಸಿಕೊಂಡಿತ್ತು. ಆ ವಶಪಡಿಸಿಕೊಂಡಿದ್ದ ಭೂಮಿಗಾಗಿ ಬಿಎಂಆರ್‌ಸಿಎಲ್ 2019ರ ನ.9ರಂದು ಸಭೆ ನಡೆಸಿ, ಮಾರುಕಟ್ಟೆ ದರವನ್ನು ಆಧರಿಸಿ 15.35 ಲಕ್ಷ ಪರಿಹಾರವನ್ನು ನಿಗದಿ ಮಾಡಿತ್ತು. ಆದರೆ ಎಪಿಎಂಪಿ, ಪರಿಹಾರ ದರ ನಿಗದಿಪಡಿಸಿದ್ದ ಸಭೆಯಲ್ಲಿ ತಮ್ಮ ಪ್ರತಿನಿಧಿ ಯಾರೂ ಇರಲಿಲ್ಲ, ಹಾಗಾಗಿ ಆ ದರವನ್ನು ಒಪ್ಪುವುದಿಲ್ಲ ಎಂದು ಆಕ್ಷೇಪ ಎತ್ತಿತ್ತು. ಅಷ್ಟೇ ಅಲ್ಲದೆ, ಬಿಎಂಆರ್ ಸಿಎಲ್ ನಿಗದಿಪಡಿಸಿರುವ ಪರಿಹಾರ ಮೊತ್ತಕ್ಕೆ ತಮ್ಮ ಒಪ್ಪಿಗೆ ಇಲ್ಲ. ಹಾಗಾಗಿ ಅಧಿಕ ಪರಿಹಾರ ನೀಡುವಂತೆ ಬಿಎಂಆರ್ ಸಿಎಲ್ ಗೆ ನಿರ್ದೇಶನ ನೀಡಬೇಕೆಂದು ನ್ಯಾಯಾಲಯದ ಮೊರೆ ಹೋಗಿತ್ತು.

ಇದನ್ನೂ ಓದಿ: ವಿಚ್ಚೇದನ ಪ್ರಕರಣಗಳನ್ನು ಒಂದು ವರ್ಷದಲ್ಲಿ ಇತ್ಯರ್ಥಪಡಿಸಲು ಹೈಕೋರ್ಟ್ ನಿರ್ದೇಶನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.