ETV Bharat / state

ಭಾರತ್ ಜೋಡೋ ಯಾತ್ರೆ ಪರಿಣಾಮಗಳ ಬಗ್ಗೆ ಅಧ್ಯಯನಕ್ಕೆ ಸಮಿತಿ ರಚನೆ: ಡಿಕೆಶಿ

author img

By

Published : Oct 25, 2022, 3:42 PM IST

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ನಾನು ಕೆಪಿಸಿಸಿ ಅಧ್ಯಕ್ಷನಾಗಿ ಇಂಥ ಐತಿಹಾಸಿಕ ಯಾತ್ರೆ ಮಾಡಿರುವುದರಿಂದ ನನಗೆ ಸಂತೋಷವಾಗಿದೆ. ದೇಶದಲ್ಲಿ ಖುದ್ದಾಗಿ ಜನರ ಸಮಸ್ಯೆ ಆಲಿಸಿದ ಏಕೈಕ ನಾಯಕ ಅಂದರೆ ಅದು ರಾಹುಲ್ ಗಾಂಧಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದರು.

ಬೆಂಗಳೂರು: ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆ ಪರಿಣಾಮಗಳ ಬಗ್ಗೆ ಅಧ್ಯಯನಕ್ಕೆ ಸಮಿತಿ ರಚನೆ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದರು.

ಕೆಪಿಸಿಸಿ ಕಚೇರಿಯಲ್ಲಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ ನೇತೃತ್ವದಲ್ಲಿ ಪಾದಯಾತ್ರೆ ಸಾಗಿದ ದಾರಿಗಳಲ್ಲಿ ಹಾಗೂ ಇತರ ಕಡೆಗಳಲ್ಲಿ ಆಗಿರುವ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲಾಗುವುದು. ಪಾದಯಾತ್ರೆಯ ಯಶಸ್ಸಿನ ಲಾಭವನ್ನು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಹೇಗೆ ಬಳಸಿಕೊಳ್ಳಬೇಕು ಹಾಗೂ ಮುಂದಿನ ಕಾರ್ಯಯೋಜನೆ ಬಗ್ಗೆ ಕಾರ್ಯತಂತ್ರ ರೂಪಿಸುವ ನಿಟ್ಟಿನಲ್ಲಿ ಮುಖಂಡರ ಜೊತೆ ಚರ್ಚೆ ನಡೆಸಲಾಗುವುದು ಎಂದರು.

ಭಾರತ್ ಜೋಡೋ ಬಗ್ಗೆ ಫೋಟೋ ಪ್ರದರ್ಶನ: ಭಾರತ್ ಜೋಡೋ ಪಾದಯಾತ್ರೆಯ ಫೋಟೋಗಳನ್ನು ಪ್ರದರ್ಶನ ಮಾಡಲಾಗುವುದು. ಬೆಂಗಳೂರು ಸೇರಿದಂತೆ ಜಿಲ್ಲೆಗಳಲ್ಲಿ ಫೋಟೋ ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗುವುದು. ಜೊತೆಗೆ ಡಾಕ್ಯುಮೆಂಟರಿಯನ್ನು ಮಾಡಲಾಗುವುದು ಎಂದು ಇದೇ ವೇಳೆ ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಮಾತನಾಡಿದರು

ಜನರ ಸಹಕಾರದಿಂದ ಯಾತ್ರೆ ಯಶಸ್ವಿ: ಭಾರತ್ ಜೋಡೋ ಯಾತ್ರೆ ರಾಜ್ಯದ ಜನರ ಸಹಕಾರದಿಂದ ಯಶಸ್ವಿ ಆಗಿದೆ. ರಾಹುಲ್ ನಡಿಗೆ ಜನಸಾಮಾನ್ಯರ ಕಡೆಗೆ ಆಗಿತ್ತು. ಇದೊಂದು ಆಂದೋಲನವಾಗಿತ್ತು‌. ದೇಶದ ರಾಜಕಾರಣವನ್ನೇ ಹೊಸ ದಿಕ್ಕಿಗೆ ತೆಗೆದುಕೊಂಡು ಹೋಗುವ ಆಂದೋಲನವಾಗಿ ರೂಪುಗೊಂಡಿದೆ. ಯುವಕರು, ಮಹಿಳೆಯರ ಸಾಗರ ಪಾದಯಾತ್ರೆಯಲ್ಲಿತ್ತು. ಪಾದಯಾತ್ರೆಯಲ್ಲಿ ಚಿಕ್ಕಮಕ್ಕಳ ಉತ್ಸಾಹ ಎದ್ದು ಕಾಣುತ್ತಿತ್ತು ಎಂದು ಹೇಳಿದರು.

ಕ್ರಾಂತಿಕಾರಿ ಬದಲಾವಣೆ ಮಾಡಿದ್ದಾರೆ: ಈ ಯಶಸ್ಸು ಡಿಕೆಶಿಯದ್ದಲ್ಲ. ಒಂದು ಬೆಂಚ್ ಮಾರ್ಕ್ ಸೃಷ್ಟಿಸಿದೆವು. ನಾವೇ ಇದ್ದೆವು. ನಮಗೆ ಯಾವುದೇ ಈವೆಂಟ್ ಮ್ಯಾನೇಜರುಗಳು ಬೇಡ. ನಾವೇ ಎಲ್ಲವನ್ನು ನಿರ್ವಹಿಸಿದೆವು. ಇದೊಂದು ಕೇವಲ ಜನಸಂಪರ್ಕದ ಯಾತ್ರೆ ಅಲ್ಲ.‌ ಇದೊಂದು ಆಂದೋಲನ. 40% ಕಮಿಷನ್ ಹಳ್ಳಿ ಹಳ್ಳಿಗೂ ಮುಟ್ಟಿದೆ. 40% ಅಂದರೆ ಸಾಕು ಎಲ್ಲರು ಕಿರುಚಾಡುತ್ತಿದ್ದರು. ಅದರ ಬಿಸಿ ಮುಟ್ಟಿದೆ. ಜನರೇಷನ್ ಗ್ಯಾಪನ್ನು ರಾಹುಲ್ ಗಾಂಧಿ ಫಿಲ್ ಮಾಡಿದರು. ಹಿರಿಯರು ಯುವಕರ ನಡುವಿನ ಗ್ಯಾಪನ್ನು ತುಂಬಿಸಿದರು. ಇಡೀ ದೇಶದಲ್ಲಿ ಈ ಮೂಲಕ ಕ್ರಾಂತಿಕಾರಿ ಬದಲಾವಣೆ ಮಾಡಿದ್ದಾರೆ ಎಂದರು.

ಮಾಹಿತಿ ನನ್ನ ಬಳಿ ಇದೆ: ನಾನು ಕೆಪಿಸಿಸಿ ಅಧ್ಯಕ್ಷನಾಗಿ ಇಂಥ ಐತಿಹಾಸಿಕ ಯಾತ್ರೆ ಮಾಡಿರುವುದರಿಂದ ನನಗೆ ಸಂತೋಷವಾಗಿದೆ. ದೇಶದಲ್ಲಿ ಖುದ್ದಾಗಿ ಜನರ ಸಮಸ್ಯೆ ಆಲಿಸಿದ ಏಕೈಕ ನಾಯಕ ಅಂದ್ರೆ ಅವರು ರಾಹುಲ್ ಗಾಂಧಿ. ಇದರಿಂದ ಉತ್ತಮವಾದ ರಾಜಕೀಯ ಲಾಭ ಸಿಗಲಿದೆ. ಯಾತ್ರೆಯ ವೇಳೆ ಅವರವರ ಅರ್ಹತೆಗೆ ತಕ್ಕಂತೆ ಶ್ರಮ ಹಾಕಿದ್ದಾರೆ. ಯಾರು ಏನೇನು ಮಾಡಿದ್ದಾರೆ ಎಂಬ ಬಗ್ಗೆ ಪರಿಶೀಲನೆ ಮಾಡಿದ್ದೇವೆ. ಮಾಹಿತಿ ನನ್ನ ಬಳಿ ಇದೆ ಎಂದು ತಿಳಿಸಿದರು.

ಓದಿ: ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆ ಆಶಯ ಈಡೇರಿದೆಯಾ? : ಸಚಿವ ಸುಧಾಕರ್ ಪ್ರಶ್ನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.