ETV Bharat / state

ಮೆಕಾಲೆ, ಕಾರ್ಲ್ ಮಾರ್ಕ್ಸ್ ಗರಡಿಯಲ್ಲಿ ತಯಾರಾದವರಿಂದ ಪಠ್ಯ ಪರಿಷ್ಕರಣೆ ಬೇಡಿಕೆ: ಸಿಟಿ ರವಿ ಟೀಕೆ

author img

By

Published : Jun 1, 2023, 3:30 PM IST

ct-ravi-spoke-about-the-revision-of-the-text
ಮೆಕಾಲೆ,ಕಾರ್ಲ್ ಮಾರ್ಕ್ಸ್ ಗರಡಿಯಲ್ಲಿ ತಯಾರಾದವರಿಂದ ಪಠ್ಯ ಪರಿಷ್ಕರಣೆ ಬೇಡಿಕೆ: ಸಿಟಿ ರವಿ ಟೀಕೆ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರಿಂದು ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಪಠ್ಯ ಪರಿಷ್ಕರಣೆ ಬೇಡಿಕೆ ಇಟ್ಟಿರುವ ತಜ್ಞರ ವಿರುದ್ಧ ಹರಿಹಾಯ್ದರು.

ಬೆಂಗಳೂರು: ಮೆಕಾಲೆ ಮತ್ತು ಕಾರ್ಲ್ ಮಾರ್ಕ್ಸ್ ಗರಡಿಯಲ್ಲಿ ತಯಾರಾದವರು ಪಠ್ಯಪುಸ್ತಕ ಪರಿಷ್ಕರಣೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿ ಊದುತ್ತಿದ್ದಾರೆ, ಗುಂಡು ತುಂಡು ಜೊತೆಯಲ್ಲಿದ್ದರೆ ಮಾತ್ರ ಬುದ್ದಿ ಓಡುವುದು ಸಿಗರೇಟ್ ಕೈಯಲ್ಲಿದ್ದರೆ ಮಾತ್ರ ಬುದ್ಧಿಜೀವಿ ಎಂದುಕೊಳ್ಳುವವರು ಮಾತ್ರ ಈಗಿನ ಪಠ್ಯಕ್ಕೆ ವಿರೋಧ ಮಾಡುತ್ತಿದ್ದಾರೆ, ಇವರಿಗೆ ಭಾರತೀಯತೆ ಎದ್ದು ನಿಲ್ಲುವುದು ಬೇಕಿಲ್ಲ ಎಂದು ಪಠ್ಯ ಪರಿಷ್ಕರಣೆ ಬೇಡಿಕೆ ಇಟ್ಟಿರುವ ತಜ್ಞರ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಠ್ಯ ಬದಲಾವಣೆಗೆ ಬೇಡಿಕೆ ಇಡುತ್ತಿರುವ ತಜ್ಞರೆಲ್ಲಾ ಮೆಕಾಲೆ ಮತ್ತು ಕಾರ್ಲ್ ಮಾರ್ಕ್ಸ್ ಗರಡಿಯಲ್ಲಿ ತಯಾರಾದವರು, ಮೆಕಾಲೆಗೆ ಭಾರತ ತಲೆ ಎತ್ತಿ ನಿಲ್ಲಬೇಕು ಎಂದು ಅನ್ನಿಸಲಿಲ್ಲ ಭಾರತ ಸದಾ ಗುಲಾಮಗಿರಿಯಲ್ಲಿ ಇರಬೇಕು ಎನ್ನುವುದು ಮೆಕಾಲೆಯ ಚಿಂತನೆಯಾಗಿತ್ತು. ಇಲ್ಲಿ ದಾಸ್ಯವನ್ನು ಒಪ್ಪಿಕೊಳ್ಳುವ ಜನರನ್ನ ತಯಾರಿಸುವ ಯೋಚನೆಯಲ್ಲಿಯೇ ಮೆಕಾಲೆ ಇದ್ದ ಮತ್ತೆ ಕೆಲವರು ಕಾಲ್ ಮಾರ್ಕ್ಸ್ ಗರಡಿಯಲ್ಲಿ ಪಳಗಿದ್ದಾರೆ ಎಂದು ಟೀಕಿಸಿದರು.

ನಮ್ಮ ದೇಶದ ಪ್ರಜಾಪ್ರಭುತ್ವದ ದೇಗುಲ ಸಂಸತ್ ಭವನ ಅದನ್ನ ವಿರೋಧಿಸುವುದರಲ್ಲಿ ಅರ್ಥವಿಲ್ಲ ಎನ್ನುವ ನಿಲುವನ್ನು ದೇವೇಗೌಡರ ವ್ಯಕ್ತಪಡಿಸಿದ್ದಾರೆ. ನಮ್ಮ ದೇಶವನ್ನ ಸಂಸತ್ತಿನ ಮೂಲಕ ಪರಿಚಯಿಸಬೇಕು ಎಂದರೆ ಅದನ್ನು ಬ್ರಿಟಿಷರು ನಿರ್ಮಾಣ ಮಾಡಿದ್ದರು. ಆದರೆ, ಇಂದು ಹಾಗೆ ಹೇಳಲು ಬರುವುದಿಲ್ಲ, ಈಗಿರುವ ಹೊಸ ಸಂಸತ್ತನ್ನ ಭಾರತೀಯರು ನಿರ್ಮಾಣ ಮಾಡಿದ್ದಾರೆ.

ಸಂಸತ್​​ ನೋಡಿ ಸಂಕಟ ಪಡುತ್ತಿದ್ದಾರೆ: ಈಗ ಕಾಂಗ್ರೆಸ್​​ನವರ ಪರಿಸ್ಥಿತಿ ಹೇಗಾಗಿದೆ ಎಂದರೆ ಪಾಂಡವರು ಮಯ ಎನ್ನುವ ಶಿಲ್ಪಿಯಿಂದ ಇಂದ್ರಪ್ರಸ್ಥವನ್ನ ನಿರ್ಮಿಸಿದ್ದರು. ಅತ್ಯಂತ ವೈಭವವಾದ ಇಂದ್ರಪ್ರಸ್ಥವನ್ನು ನೋಡಿ ಸಂತೋಷ ಪಡುವ ಬದಲು ದುರ್ಯೋಧನ ಸೇರಿದಂತೆ ಕೌರವರು ಸಂಕಟ ಪಡುತ್ತಾರೆ. ಈ ಭವ್ಯವಾದ ಸಂಸತ್ತನ್ನ ನೋಡಿ ಕಾಂಗ್ರೆಸ್ಸಿಗರಿಗೆ ಮತ್ತು ಬಿಜೆಪಿ ವಿರೋಧಿಗಳಿಗೆ ಕೌರವರ ರೀತಿಯಲ್ಲೇ ಸಂಕಟವಾಗುತ್ತಿದೆ ಎಂದು ಕಾಂಗ್ರೆಸ್​​ ವಿರುದ್ಧ ಹರಿಹಾಯ್ದರು.

ಬಿಜೆಪಿ ಮತ್ತು ಮೋದಿ ನಿರ್ಮಾಣ ಮಾಡಿದರು ಎನ್ನುವುದೇ ಅವರ ಸಂಕಟಕ್ಕೆ ಕಾರಣ. ಇವರ ಕಾಲದಲ್ಲಿ ಸಂಸತ್​ ನಿರ್ಮಾಣವಾಗಿದ್ದರೇ 800 ಕೋಟಿ ಹೋಗಿ, 8,000 ಕೋಟಿಯಾಗುತ್ತಿತ್ತು. ಲೂಟಿ ಹೊಡೆಯುತ್ತಿದ್ದರು 10-20 ವರ್ಷವಾದರೂ ಸಂಸತ್ ಭವನ ನಿರ್ಮಾಣವಾಗುತ್ತಿರಲಿಲ್ಲ. ಆದರೆ, ಮೋದಿ ಕೇವಲ ಎರಡೂವರೆ ವರ್ಷದಲ್ಲಿ ದೇಶದ ಗುತ್ತಿಗೆದಾರ, ದೇಶದ ತಂತ್ರಜ್ಞರನ್ನು ಬಳಸಿಕೊಂಡು ಸಂಸತ್ ನಿರ್ಮಾಣ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು.

ದೇಶದ ಹೊರಗಡೆ ಹೋದರು ರಾಹುಲ್​ ವಿಷ ಕಾರುತ್ತಿದ್ದಾರೆ: ಈ ದೇಶದಲ್ಲಿ ಅತಿ ಹೆಚ್ಚು ಅಧಿಕಾರ ಕೊಟ್ಟಿದ್ದು ಕಾಂಗ್ರೆಸ್ಸಿಗೆ, ಆದರೆ ಜನಮಾನಸದಲ್ಲಿ ಆ ಭಾವನೆಯನ್ನು ಯಾಕೆ ಅವರ ಕೈಯಲ್ಲಿ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ, ಸ್ವತಃ ರಾಹುಲ್ ಗಾಂಧಿ ಅವರ ಕ್ಷೇತ್ರದಲ್ಲಿ ಯಾಕೆ ಸೋತರು ಇದನ್ನ ಅವರು ಅವಲೋಕನ ಮಾಡಿಕೊಳ್ಳಬೇಕು. ರಾಹುಲ್ ಗಾಂಧಿಯವರಿಗೆ ಇನ್ನೂ ಭಾರತವೇ ಅರ್ಥವಾಗಿಲ್ಲ ಇನ್ನು ಮೋದಿಯವರನ್ನು ಕಂಡರೆ ಮೊದಲೇ ಆಗುವುದಿಲ್ಲ, ಅದಕ್ಕಾಗಿ ದೇಶದ ಹೊರಗಡೆ ಹೋದರೂ ವಿಷವನ್ನೇ ಕಾರುತ್ತಿದ್ದಾರೆ ಎಂದರು.

ಇದೆಲ್ಲವೂ ರಾಹುಲ್ ಗಾಂಧಿಯವರಿಗೆ ಮೋದಿ ಅವರ ಅಭಿವೃದ್ಧಿ ಕಾರ್ಯ ಸಹಿಸಲಾಗುತ್ತಿಲ್ಲ. ಆಸ್ಟ್ರೇಲಿಯಾ ಪ್ರಧಾನಿ ಮೋದಿ ಅವರನ್ನು ಬಾಸ್ ಎಂದು ಕರೆಯುತ್ತಾರೆ. ಇತರ ಎಲ್ಲ ಬಲಿಷ್ಠ ರಾಷ್ಟ್ರಗಳ ನಾಯಕರು ಮೋದಿಯನ್ನ ಜಾಗತಿಕ ನಾಯಕ ಎಂದು ಹೊಗಳುತ್ತಾರೆ. ಆದರೆ, ರಾಹುಲ್ ಗಾಂಧಿ ಹಾಗೂ ಅವರಂತ ನಾಯಕರು ಮಾತ್ರ ತೆಗಳುತ್ತಿದ್ದಾರೆ, ಕೈಲಾಗದವರು ಮೈಪರಚಿಕೊಂಡರು ಎನ್ನುವ ಮಾನಸಿಕತೆಯಲ್ಲಿ ಮೋದಿಯವರನ್ನು ತೆಗಳುತ್ತಿದ್ದಾರೆ. ಆದರೆ, ಮೋದಿ ಜನರ ಹೃದಯದಲ್ಲಿ ಪ್ರತಿಷ್ಠಾಪನೆಗೊಂಡಿದ್ದಾರೆ ಎಂದು ಹೇಳಿದರು.

ಬಜರಂಗದಳ ದೇಶಭಕ್ತ ಸಂಘಟನೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ, ಕಾನೂನುಬಾಹಿರವಾಗಿ ಯಾವ ಸಂಘಟನೆಯ ಕೆಲಸ ಮಾಡುತ್ತದೆ ಎನ್ನುವುದು ಕೂಡ ಗೊತ್ತಿರುವ ಸಂಗತಿ, ಪಿಎಫ್ಐ ದೇಶಭಕ್ತ ಸಂಘಟನೆಯಲ್ಲ ಅವರ ಜೊತೆ ಕಾಂಗ್ರೆಸ್ಸಿನ ಸಂಪರ್ಕವಿದೆ ಹಾಗಾಗಿ ಅವರು ಏನು ಮಾಡುತ್ತಾರೆ ಮಾಡಲಿ ಅವರು ಬಜರಂಗದಳವನ್ನು ನಿಷೇಧ ಮಾಡಿಲಿ ಆನಂತರ ನಾವು ಮಾತನಾಡುತ್ತೇವೆ, ಬಜರಂಗದಳದ ಟ್ರ್ಯಾಕ್ ರೆಕಾರ್ಡ್ ದೇಶ ಭಕ್ತಿಯೇ ಹೊರತು ದೇಶದ್ರೋಹ ಅಲ್ಲ ಎಂದು ಟಾಂಗ್ ನೀಡಿದರು.

ದೇಶ ಸೋಲುವುದನ್ನು ಒಪ್ಪಿಕೊಳ್ಳುವುದಿಲ್ಲ: ಅವರು ಗೆದ್ದಿದ್ದಾರೆ ನಾವು ಸೋತಿದ್ದೇವೆ, ನಮ್ಮ ಪಕ್ಷ ಮತ್ತೆ ಲೋಕಸಭೆಯಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನ ಗೆಲ್ಲಬೇಕು ಇಲ್ಲಿ ಸೋತಿದ್ದು ಬಿಜೆಪಿ, ಆದರೆ ದೇಶ ಸೋಲಬಾರದು ಬಿಜೆಪಿ ಸೋತಿದ್ದನ್ನ ಒಪ್ಪಿಕೊಳ್ಳುತ್ತೇನೆ. ಆದರೆ ದೇಶ ಸೋಲುವುದನ್ನು ಒಪ್ಪಿಕೊಳ್ಳುವುದಿಲ್ಲ. ಬಿಜೆಪಿ ಕೇಂದ್ರದಲ್ಲಿ ಮತ್ತೆ ಗೆದ್ದರೆ ಮಾತ್ರ ದೇಶದ ಗೆಲುವಿನೋಟ ಮುಂದುವರೆಯಲಿದೆ ಹಾಗಾಗಿ ದೇಶ ಗೆಲ್ಲಬೇಕು ಎನ್ನುವ ಜನರೆಲ್ಲ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ನಿಲ್ಲಲಿದ್ದಾರೆ ಎನ್ನುವ ವಿಶ್ವಾಸವನ್ನು ಸಿ ಟಿ ರವಿ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮಣಿಪುರ ಹಿಂಸಾಚಾರ: ನಿವೃತ್ತ ನ್ಯಾಯಾಧೀಶರ ಸಮಿತಿಯಿಂದ ತನಿಖೆ, ನಾಳೆಯಿಂದ ಕೂಂಬಿಂಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.