ETV Bharat / state

ಅಂತಿಮಗೊಳ್ಳದ ಕಾಂಗ್ರೆಸ್ 2ನೇ ಪಟ್ಟಿ: ಗುರುವಾರ ಮತ್ತೊಮ್ಮೆ ಸಭೆ ನಡೆಸಲು ತೀರ್ಮಾನ

author img

By

Published : Apr 5, 2023, 6:11 PM IST

Updated : Apr 6, 2023, 6:43 AM IST

ಕಾಂಗ್ರೆಸ್ ಮುಖಂಡರು
ಕಾಂಗ್ರೆಸ್ ಮುಖಂಡರು

ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆಗೊಳಿಸುವ ಬಗ್ಗೆ ಕಳೆದ ಎರಡು ದಿನಗಳಿಂದ ಕಾಂಗ್ರೆಸ್​ ನಾಯಕರು ದೆಹಲಿಯಲ್ಲಿ ಬೀಡುಬಿಟ್ಟು ಚರ್ಚಿಸುತ್ತಿದ್ದಾರೆ. ಆದರೆ ಪಟ್ಟಿ ಬಿಡುಗಡೆ ಚರ್ಚೆ ಬುಧವಾರ ಸಹ ಅಪೂರ್ಣಗೊಂಡಿದೆ.

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಅಂತಿಮಗೊಳಿಸಲು ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ನಡೆಸುತ್ತಿರುವ ಕಸರತ್ತು ಬುಧವಾರ ಸಹ ಅಪೂರ್ಣಗೊಂಡಿತು. ಎಐಸಿಸಿ ವರಿಷ್ಠರೊಂದಿಗೆ ಚರ್ಚಿಸಿ ಎರಡನೇ ಪಟ್ಟಿ ಅಂತಿಮಗೊಳಿಸಲು ರಾಜ್ಯ ಕಾಂಗ್ರೆಸ್ ನಾಯಕರು ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಬೀಡುಬಿಟ್ಟು ಮಾತುಕತೆ ನಡೆಸುತ್ತಿದ್ದಾರೆ. ಆದರೆ ಬಾಕಿ ಉಳಿದಿರುವ ನೂರು ಸ್ಥಾನಗಳಿಗೆ ಅಭ್ಯರ್ಥಿ ಅಂತಿಮಗೊಳಿಸುವುದು ಕಗ್ಗಂಟಾಗಿ ಪರಿಣಮಿಸಿದೆ. ಮೊದಲ ಹಂತದಲ್ಲಿ 124 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವುದು ಕಾಂಗ್ರೆಸ್​ಗೆ ಅಷ್ಟು ದೊಡ್ಡ ಸವಾಲಾಗಿ ಪರಿಣಮಿಸಲಿಲ್ಲ.

  • #WATCH | (CEC) will meet again tomorrow. We are finalising it and a list will be announced at the earliest: Karnataka Congress chief DK Shivakumar, in Delhi pic.twitter.com/4pLK1VYt5n

    — ANI (@ANI) April 5, 2023 " class="align-text-top noRightClick twitterSection" data=" ">

ಆಕಾಂಕ್ಷಿಗಳಿಂದ ಸಾಕಷ್ಟು ಒತ್ತಡ: ಹಾಲಿ ಶಾಸಕರು ಹಾಗೂ ಕಳೆದ ಸಾರಿ ಸ್ಪರ್ಧಿಸಿ ಸೋತಿರುವ ಜನಪ್ರಿಯ ನಾಯಕರಿಗೆ ಟಿಕೆಟ್ ಘೋಷಿಸಿ ಕೈ ತೊಳೆದುಕೊಂಡಿತ್ತು. ಆದರೆ ಅಲ್ಲಿಯೂ 8-10 ಕ್ಷೇತ್ರಗಳಲ್ಲಿ ಅಪಸ್ವರ ಕಾಡಿತ್ತು. ಇದರ ಜೊತೆ ಒಂಬತ್ತು ಹಾಲಿ ಶಾಸಕರನ್ನ ಮೊದಲ ಪಟ್ಟಿಯಲ್ಲಿ ಅಂತಿಮಗೊಳಿಸದೇ ಇರುವುದು ಸಹ ಇನ್ನಷ್ಟು ಒತ್ತಡಕ್ಕೆ ಕಾರಣವಾಗಿತ್ತು. ಟಿಕೆಟ್ ಅಂತಿಮಗೊಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ರಾಜ್ಯಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಆಕಾಂಕ್ಷಿಗಳಿಂದ ಸಾಕಷ್ಟು ಒತ್ತಡ ಕೇಳಿಬಂದಿತ್ತು.

ಬೆಂಬಲಿಗರಿಗೆ ಟಿಕೆಟ್ ಕೊಡಿಸುವ ಕಸರತ್ತು: ಇದೀಗ ಎರಡನೇ ಪಟ್ಟಿಗೆ ಹೆಸರು ಅಂತಿಮಗೊಳಿಸುವ ಸಂದರ್ಭದಲ್ಲಿ ಒತ್ತಡ ಇನ್ನಷ್ಟು ಹೆಚ್ಚಾಗಿದೆ. ಪ್ರತಿಕ್ಷೇತ್ರಕ್ಕೂ ಒಬ್ಬ ಅಭ್ಯರ್ಥಿಯನ್ನು ಅಂತಿಮಗೊಳಿಸುವ ವಿಚಾರದಲ್ಲಿ ರಾಜ್ಯ ನಾಯಕರ ನಡುವೆ ಒಮ್ಮತ ಮೂಡಿ ಬರುತ್ತಿಲ್ಲ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಮ್ಮದೇ ಆದ ಪ್ರಭಾವ ಬೀರಿ ಬೆಂಬಲಿಗರಿಗೆ ಟಿಕೆಟ್ ಕೊಡಿಸುವ ಕಸರತ್ತು ನಡೆಸಿದ್ದಾರೆ. ಈ ಮಧ್ಯೆ ಇತರೆ ರಾಜ್ಯ ನಾಯಕರು ಸಹ ತಮ್ಮವರಿಗೆ ಟಿಕೆಟ್ ಕೊಡಿಸುವ ನಿಟ್ಟಿನಲ್ಲಿ ಒತ್ತಡ ಹೇರುತ್ತಿದ್ದಾರೆ.

2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಅವಕಾಶ ಇದೆ ಎಂಬ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಆಕಾಂಕ್ಷಿಗಳ ಒತ್ತಡ ಹೆಚ್ಚಾಗಿದೆ. ಮೇಲ್ನೋಟಕ್ಕೆ ಬಿಜೆಪಿಯ ಭ್ರಷ್ಟಾಚಾರ ಹಾಗೂ ಆಡಳಿತ ವಿರೋಧಿ ಅಲೆ ಕಾಂಗ್ರೆಸ್‌ಗೆ ಲಾಭದಾಯಕವಾಗಲಿದೆ ಎಂಬ ಮಾತುಗಳು ಕೇಳಿ ಬರುವ ಜೊತೆಗೆ ಸಮೀಕ್ಷೆಗಳು ಸಹ ಕಾಂಗ್ರೆಸ್​ಗೆ ಪೂರಕವಾಗಿ ಕಂಡುಬಂದಿವೆ. ಈ ಹಿನ್ನಲೆ ಸಾಕಷ್ಟು ಮಂದಿ ಟಿಕೆಟ್​ಗಾಗಿ ಒತ್ತಡ ಹೇರುತ್ತಿದ್ದಾರೆ.

ರಾಜ್ಯ ಕಾಂಗ್ರೆಸ್ ನಾಯಕರು ತಮ್ಮವರಿಗೆ ಟಿಕೆಟ್ ಕೊಡಿಸುವ ವಿಚಾರದಲ್ಲಿ ಕೆಲವೆಡೆ ಪ್ರತಿಷ್ಠೆ ಪ್ರದರ್ಶಿಸುತ್ತಿರುವುದು ಪಟ್ಟಿ ವಿಳಂಬವಾಗುವುದಕ್ಕೆ ಕಾರಣವಾಗಿದೆ. ಮಂಗಳವಾರ ಸಂಜೆಯೇ ಅಂತಿಮಗೊಳ್ಳಬೇಕಿದ್ದ ಎರಡನೇ ಪಟ್ಟಿ ಸಾಧ್ಯವಾಗದೆ ಇಂದಿಗೆ ಮುಂದೂಡಿಕೆಯಾಗಿತ್ತು. ಒಟ್ಟು ನೂರು ಕ್ಷೇತ್ರಗಳ ಪೈಕಿ 45 ಕ್ಷೇತ್ರಗಳಿಗೆ ಒಬ್ಬ ಅಭ್ಯರ್ಥಿಯನ್ನ ಅಂತಿಮಗೊಳಿಸಿರುವ ನಾಯಕರು ಉಳಿದ 55 ಕ್ಷೇತ್ರಗಳಿಗೆ ಒಮ್ಮತ ಮೂಡಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. ಬುಧವಾರ ಸಹ ಇದೇ ಪರಿಸ್ಥಿತಿ ಮುಂದುವರಿದಿದ್ದು, ಗುರುವಾರ ಮತ್ತೊಮ್ಮೆ ಸಭೆ ಸೇರಿ ಚರ್ಚಿಸಲು ತೀರ್ಮಾನಿಸಲಾಗಿದೆ.

ಕಾಂಗ್ರೆಸ್ ನಾಯಕರ ನಡುವೆ ಪಟ್ಟಿ ಅಂತಿಮಗೊಳಿಸುವ ವಿಚಾರದಲ್ಲಿ ಒಮ್ಮತ ಮೂಡದ ಹಿನ್ನೆಲೆ ಇಂದು ಮಧ್ಯರಾತ್ರಿ ಎರಡನೇ ಪಟ್ಟಿ ಬಿಡುಗಡೆ ಮಾಡಲು ನಿರ್ಧರಿಸಿದ್ದ ಕಾಂಗ್ರೆಸ್ ನಾಯಕರು ತಮ್ಮ ನಿರ್ಧಾರವನ್ನು ಹಿಂಪಡೆದಿದ್ದಾರೆ. ಗುರುವಾರ ಸಭೆಯಲ್ಲಿ ಶತಾಯ ಗತಾಯ ಒಮ್ಮತ ಮೂಡಿಸಿ ಪಟ್ಟಿ ಬಿಡುಗಡೆ ಮಾಡಲು ಯೋಚಿಸಿದ್ದಾರೆ.

ಈ ನಿಟ್ಟಿನಲ್ಲಿ ಗುರುವಾರ ಮತ್ತೊಂದು ಹಂತದ ಸಭೆ ನಡೆಯಲಿದ್ದು, ರಾತ್ರಿ ಪಟ್ಟಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಒಂದೊಮ್ಮೆ ಕಾಂಗ್ರೆಸ್ ನಾಯಕರು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗುವ ನಿರ್ಧಾರ ಮಾಡಿದ್ದಲ್ಲಿ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆ ಬಳಿಕವೇ ಎರಡನೇ ಪಟ್ಟಿ ಬಿಡುಗಡೆ ಆಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

ನಕಲಿ ಪಟ್ಟಿ ವೈರಲ್: ನಿನ್ನೆ ಬಿಜೆಪಿಯ ಮೊದಲ ಪಟ್ಟಿಯ ನೆಪದಲ್ಲಿ 100 ಅಭ್ಯರ್ಥಿಗಳನ್ನು ಒಳಗೊಂಡ ನಕಲಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಅದೇ ರೀತಿ ಇಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನೆಕ್ ಸಹಿ ಒಳಗೊಂಡ ನಕಲಿ ಪಟ್ಟಿಯನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಲಾಗಿದೆ. 50 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಇದು ನಕಲಿ ಎಂದು ಕಾಂಗ್ರೆಸ್ ಪಕ್ಷ ತನ್ನ ಟ್ವಿಟರ್ ಖಾತೆಯಲ್ಲಿ ಸ್ಪಷ್ಟಪಡಿಸಿದೆ. 50 ಸದಸ್ಯರ ನಕಲಿ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಕಾಂಗ್ರೆಸ್ ಟ್ವೀಟ್​ನಲ್ಲಿ, ಕೈಲಾಗದ ಬಿಜೆಪಿ ಎಂದಿನಂತೆ ತನ್ನ 'ಫೇಕ್ ಫ್ಯಾಕ್ಟರಿ'ಯನ್ನು ಚುರುಕುಗೊಳಿಸಿದೆ. ಕಾಂಗ್ರೆಸ್ ಪಕ್ಷದ 2ನೇ ಅಭ್ಯರ್ಥಿಗಳ ಪಟ್ಟಿ ಎಂಬ ಹೆಸರಿನಲ್ಲಿ ನಕಲಿ ಪಟ್ಟಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. 2ನೇ ಪಟ್ಟಿಯನ್ನು ಸದ್ಯದಲ್ಲೇ ಕಾಂಗ್ರೆಸ್ ಬಿಡುಗಡೆ ಮಾಡಲಿದೆ. ನಕಲಿ ಪಟ್ಟಿಯ ಬಗ್ಗೆ ಕಾಂಗ್ರೆಸ್ ಸೂಕ್ತ ತನಿಖೆಗಾಗಿ ದೂರು ನೀಡಲಿದೆ ಎಂದು ತಿಳಿಸಿದೆ.

ಇನ್ನೊಂದೆಡೆ, ಕಾಂಗ್ರೆಸ್ ನಕಲಿ ಎಂದು ಹೇಳಿರುವ ಎರಡನೇ ಪಟ್ಟಿಯಲ್ಲಿ ಕೋಲಾರ ಹಾಗೂ ಬಾದಾಮಿ ವಿಧಾನಸಭೆ ಕ್ಷೇತ್ರಗಳ ಪ್ರಸ್ತಾಪ ಆಗಿಲ್ಲ. ಬಹುತೇಕ ಸಂಭವನೀಯರು ಎಂದು ಹೇಳಲಾಗುತ್ತಿರುವ ಹೆಸರುಗಳನ್ನು ಸೇರಿಸಿ ಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ವಿಚಾರವಾಗಿಯೂ ಕಾಂಗ್ರೆಸ್ ತನ್ನ ದೂರು ಸಲ್ಲಿಕೆ ಮಾಡಲಿದ್ದು, ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೆ ಮಾಡಬೇಕಾಗಿದೆ.

ಇದನ್ನೂ ಓದಿ: ಐಟಿ, ಇಡಿ, ಸಿಬಿಐ ಬಿಜೆಪಿಯ ಪ್ರೈವೇಟ್ ಡಿಪಾರ್ಟ್ಮೆಂಟ್ ಆಗಿವೆ: ದಿನೇಶ್ ಗುಂಡೂರಾವ್

Last Updated :Apr 6, 2023, 6:43 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.