ETV Bharat / state

ಕಾಂಗ್ರೆಸ್​ನಿಂದ "ಮತ್ತೆ ಘರ್ಜಿಸಲಿದೆ ಕರ್ನಾಟಕ" ಎಂಬ ಹೊಸ ಕ್ಯಾಂಪೇನ್ ಶುರು.. ಲೋಗೊ ಬಿಡುಗಡೆ

author img

By

Published : Mar 29, 2023, 8:51 PM IST

Etv Bharat
Etv Bharat

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಕಾಂಗ್ರೆಸ್​ನ "ಮತ್ತೆ ಘರ್ಜಿಸಲಿದೆ ಕರ್ನಾಟಕ" ಎಂಬ ಹೊಸ ಕ್ಯಾಂಪೇನ್​ಗೆ ಚಾಲನೆ ನೀಡಿ ಲೋಗೋ ಬಿಡುಗಡೆ ಮಾಡಿದ್ದಾರೆ.

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ಕಾಂಗ್ರೆಸ್ ಪಕ್ಷ "ಮತ್ತೆ ಘರ್ಜಿಸಲಿದೆ ಕರ್ನಾಟಕ" ಎಂಬ ಹೊಸ ಕ್ಯಾಂಪೇನ್ ಆರಂಭಿಸಿದೆ. ಈ ಅಭಿಯಾನಕ್ಕೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಅವರು ಚಾಲನೆ ನೀಡಿ ಲೋಗೋ ಬಿಡುಗಡೆ ಮಾಡಿದ್ದಾರೆ. ಈ ಅಭಿಯಾನವು ಕರ್ನಾಟಕದ ಜನರಿಗೆ ಪಕ್ಷದ ಬದ್ಧತೆಯನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ ಮತ್ತು ಎಲ್ಲರಿಗೂ ಉತ್ತಮ ಭವಿಷ್ಯವನ್ನು ಸೃಷ್ಟಿಸುವ ದೂರದೃಷ್ಟಿಯನ್ನು ಹೊಂದಿದೆ ಎಂದರು.

"ಡಬಲ್ ಇಂಜಿನ್ ಸರ್ಕಾರದಿಂದ ಕರ್ನಾಟಕದ ಜನರು ನಿರಾಸೆಗೊಂಡಿದ್ದಾರೆ. ಅವರು ಕೋವಿಡ್-19, ಆರ್ಥಿಕ ಕುಸಿತ ಮತ್ತು ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ ಸೇರಿದಂತೆ ಅನೇಕ ಕಠಿಣ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬಿಜೆಪಿಯಿಂದ ಕರ್ನಾಟಕಕ್ಕಾದ ಅನ್ಯಾಯವನ್ನು ಕನ್ನಡಿಗರು ಇನ್ನೂ ಮರೆತಿಲ್ಲ. ಹೀಗಾಗಿ ಕನ್ನಡಿಗರ ಈ ಸವಾಲುಗಳನ್ನು ಎದುರಿಸಲು ಮತ್ತು ಎಲ್ಲರಿಗೂ ಉತ್ತಮ ಭವಿಷ್ಯವನ್ನು ಸೃಷ್ಟಿಸಲು ನಾವು ಬದ್ಧರಾಗಿದ್ದೇವೆ." ಎಂದು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

"ಕರ್ನಾಟಕ ಮತ್ತೊಮ್ಮೆ ಘರ್ಜಿಸುತ್ತದೆ" ಅಭಿಯಾನವು ಕರ್ನಾಟಕದ ಜನರೊಂದಿಗೆ ಸಂಪರ್ಕ ಸಾಧಿಸಲು ಮತ್ತು ರಾಜ್ಯದ ಭವಿಷ್ಯಕ್ಕಾಗಿ ಪಕ್ಷದ ದೃಷ್ಟಿಕೋನವನ್ನು ಹಂಚಿಕೊಳ್ಳಲು ಗಮನ ನೀಡುತ್ತದೆ. ಈ ಅಭಿಯಾನವು ರ‍್ಯಾಲಿಗಳು, ಮನೆ-ಮನೆ ಪ್ರಚಾರ, ಸಾಮಾಜಿಕ ಮಾಧ್ಯಮಗಳ ಪ್ರಚಾರ ಮತ್ತು ಕನ್ನಡಿಗರ ನಾಡಿ ಮಿಡಿತ ಹಾಗೂ ಅವರಿಗಾದ ಅನ್ಯಾಯವನ್ನು ಸರಿಪಡಿಸಿ ಮತ್ತೆ ಕರ್ನಾಟಕವು ಘರ್ಜಿಸುವಂತೆ ಮಾಡುವ ಎಲ್ಲ ರೀತಿಯ ಕಾರ್ಯಕ್ರಮಗಳನ್ನು ಇದು ಒಳಗೊಂಡಿರುತ್ತದೆ.

ಇದನ್ನೂ ಓದಿ:ಕರ್ನಾಟಕ ವಿಧಾನಸಭೆ ಚುನಾವಣೆ: ಮೇ 10ಕ್ಕೆ ಮತದಾನ, 13ಕ್ಕೆ ಫಲಿತಾಂಶ

"ಕರ್ನಾಟಕದ ಜನರು ಉತ್ತಮ ಭವಿಷ್ಯಕ್ಕಾಗಿ ನಮ್ಮ ದೃಷ್ಟಿಕೋನವನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸ ನಮಗಿದೆ. ಸಮೃದ್ಧ, ಎಲ್ಲರನ್ನೂ ಒಳಗೊಳ್ಳುವ ಮತ್ತು ಎಲ್ಲರಿಗೂ ಅವಕಾಶಗಳನ್ನು ಒದಗಿಸುವ ರಾಜ್ಯವನ್ನು ನಿರ್ಮಿಸಲು ನಾವು ಬದ್ಧರಾಗಿದ್ದೇವೆ. ಕಾಂಗ್ರೆಸ್ ನಾಯಕತ್ವದಲ್ಲಿ ಕರ್ನಾಟಕ ಮತ್ತೆ ಘರ್ಜಿಸಲಿದೆ ಎಂದು ನಾವು ನಂಬುತ್ತೇವೆ." ಎಂದು ಎಂ.ಬಿ.ಪಾಟೀಲ್ ಹೇಳಿದರು. "ಕರ್ನಾಟಕ ಮತ್ತೊಮ್ಮೆ ಘರ್ಜಿಸಲಿದೆ" ಅಭಿಯಾನವು ಕನ್ನಡದ ಹೆಮ್ಮೆ ಹಾಗೂ ಕರ್ನಾಟಕದ ಘನತೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತರಲಿದೆ. ಈ ಮೂಲಕ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎನ್ನುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಸುರ್ಜೇವಾಲಾ ಟ್ವೀಟ್: ರಾಜ್ಯದಲ್ಲಿ ಚುನಾವಣೆ ದಿನಾಂಕ ಘೋಷಣೆಯಾದ ಹಿನ್ನೆಲೆ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ದುರ್ಗಾಷ್ಟಮಿಯ ಪುಣ್ಯ ದಿನದಂದು ಕೇಂದ್ರ ಚುನಾವಣಾ ಆಯೋಗ ಕರ್ನಾಟಕ ಚುನಾವಣೆಯನ್ನು ಘೋಷಿಸಿದೆ. 40% ಸರ್ಕಾರ ಮತ್ತು ಅದರ ಲಜ್ಜೆಗೆಟ್ಟ ಲೂಟಿಯಿಂದ ರಾಜ್ಯವನ್ನು ಮುಕ್ತಗೊಳಿಸಲು ಕಾಂಗ್ರೆಸ್ ಸಂಕಲ್ಪ ಮಾಡಿದೆ. ಬ್ರಾಂಡ್ ಕರ್ನಾಟಕ ಪುನರ್ ನಿರ್ಮಾಣ ಮಾಡೋಣ! ಕನ್ನಡಿಗರ ಅಭಿಮಾನ ಬೆಳೆಯಲಿ! ಕಾಂಗ್ರೆಸ್‌ ಭರವಸೆಗಳನ್ನು ಜಾರಿಗೆ ತರೋಣ! ಕರ್ನಾಟಕ ಗೆಲ್ಲಲಿ ಎಂದು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ:ಕರ್ನಾಟಕದಲ್ಲಿ ಕಾಂಗ್ರೆಸ್​ ಗೆಲುವು ಸಾಧಿಸಲಿದೆ.. ರಾಹುಲ್, ಪ್ರಿಯಾಂಕಾ ಪ್ರಚಾರ ನಡೆಸಲಿದ್ದಾರೆ ಎಂದ ಖರ್ಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.