ETV Bharat / state

ಬಿಜೆಪಿಯಿಂದ ಚುನಾವಣಾ ಅಕ್ರಮ ತಡೆಯುವಂತೆ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಮನವಿ

author img

By

Published : Jan 30, 2023, 4:01 PM IST

congress-appeals-to-the-election-commission-to-prevent-bjp-election-irregularities
ಬಿಜೆಪಿ ಚುನಾವಣಾ ಅಕ್ರಮ ತಡೆಯುವಂತೆ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಮನವಿ

ರಮೇಶ್ ಜಾರಕಿಹೊಳಿ‌ ಹೇಳಿಕೆಯನ್ನು ಆಧಾರವಾಗಿ ಮಾಡಿಕೊಂಡ ಚುನಾವಣಾ ಆಯೋಗದ ಮೆಟ್ಟಿಲೇರಿದ ಕಾಂಗ್ರೆಸ್​ - 5 ಬೇಡಿಕೆಗಳೊಂದಿಗೆ ಆಯೋಗಕ್ಕೆ ದೂರು - ನ್ಯಾಯಸಮ್ಮತ ಚುನಾವಣೆ ನಡೆಸಬೇಕೆಂದು ಮನವಿ.

ಬೆಂಗಳೂರು: ಮತದಾರರಿಗೆ ತಲಾ 6 ಸಾವಿರ ರೂ. ನೀಡುವುದಾಗಿ ಹೇಳಿಕೆ ನೀಡಿರುವ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ಮಾಜಿ ಗೃಹ ಸಚಿವ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗರೆಡ್ಡಿ, ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಶಾಸಕ ರಿಜ್ವಾನ್ ಅರ್ಷದ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಮತ್ತಿತರರನ್ನು ಒಳಗೊಂಡ ನಿಯೋಗವು ಬೆಂಗಳೂರಿನ ರಾಜ್ಯ ಚುನಾವಣಾ ಆಯೋಗದ ಕಚೇರಿಗೆ ತೆರಳಿ ದೂರು ಸಲ್ಲಿಕೆ ಮಾಡಿದೆ.

ರಾಜ್ಯ ಚುನಾವಣಾ ಆಯೋಗದ ಮೂಲಕ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ ಕಾಂಗ್ರೆಸ್ ನಿಯೋಗ ಬಿಜೆಪಿಯ ಚುನಾವಣಾ ಅಕ್ರಮಗಳ ಕುರಿತು ದೂರು ನೀಡಿದ್ದು, ನಿಯಂತ್ರಿಸುವಂತೆ ಕೋರಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ‌ ಹೇಳಿಕೆಯನ್ನು ಆಧಾರವಾಗಿ ಮಾಡಿಕೊಂಡ ಕಾಂಗ್ರೆಸ್ ಚುನಾವಣಾ ಆಯೋಗದ ಮೆಟ್ಟಿಲೇರಿದೆ. ರಾಜ್ಯದ ಐದು ಕೋಟಿ ಮತದಾರರನ್ನು 30 ಸಾವಿರ ಕೋಟಿಗೆ ಖರೀದಿಸಲು ಬಿಜೆಪಿ ಸಂಚು ರೂಪಿಸಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಈ ಸಂಚಿಗೆ ಸಿಎಂ ಬೊಮ್ಮಾಯಿ, ಬಿಜೆಪಿ ಕೇಂದ್ರದ ಅಧ್ಯಕ್ಷ ಜೆಪಿ ನಡ್ಡಾ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರೇರಣೆ ನೀಡಿದ್ದಾರೆ. ಹಾಗಾಗಿ ಕೂಡಲೇ ಈ ಪ್ರಕರಣದ ಬಗ್ಗೆ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.

5 ಬೇಡಿಕೆಗಳೊಂದಿಗೆ ಆಯೋಗಕ್ಕೆ ದೂರು: ದೂರು ಸಲ್ಲಿಸಿದ ಬಳಿಕ ಮಾಜಿ ಸಂಸದ ವಿಎಸ್ ಉಗ್ರಪ್ಪ ಮಾತನಾಡಿ, ರಮೇಶ್ ಜಾರಕಿಹೊಳಿ ಪ್ರತಿ ಮತದಾರರಿಗೆ ತಲಾ 6 ಸಾವಿರ ರೂ. ಕೊಡುತ್ತೇವೆ ಎಂದಿದ್ದಾರೆ. ನಾವು ಈಗಾಗಲೇ ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟಿದ್ದೇವೆ. ಆದರೆ, ಪೊಲೀಸರು ಈಗಲೂ ಕಾನೂನು ಸಲಹೆ ಪಡೆಯುತ್ತೇವೆ ಎಂದು ಹೇಳುತ್ತಿದ್ದಾರೆ. ಚುನಾವಣೆ ಆಯೋಗಕ್ಕೆ ಸಂಬಂಧಿಸಿದ ವಿಷಯ ಎಂದಿದ್ದಾರೆ. ಹೀಗಾಗಿ ಪ್ರಮುಖವಾಗಿ 5 ಬೇಡಿಕೆಗಳೊಂದಿಗೆ ಆಯೋಗಕ್ಕೆ ದೂರು ಕೊಟ್ಟಿದ್ದೇವೆ. ಸಂಪೂರ್ಣ ತನಿಖೆ ನಡೆಸಬೇಕು.

ವಜಾಗೊಳಿಸವಂತೆ ಆಗ್ರಹ: ಇದಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ, ನಡ್ಡಾ, ಕಟೀಲ್, ಬೊಮ್ಮಾಯಿ ಮೇಲೆ ಎಫ್ಐಆರ್ ದಾಖಲಿಸಲು ಆಯೋಗ ಸೂಚನೆ ಕೊಡಬೇಕು. ರಮೇಶ್ ಜಾರಕಿಹೊಳಿ ಹಾಗೂ ಸಿಎಂ ಬೊಮ್ಮಾಯಿ ಅವರನ್ನು ಶಾಸಕ ಸ್ಥಾನದಿಂದ ವಜಾ ಮಾಡಲು ನೋಟಿಸ್​ ಕೊಡಬೇಕು. ಜೊತೆಗೆ ನಡ್ಡಾ ಹಾಗೂ ಕಟೀಲ್ ಅವರಿಗೂ ನೋಟಿಸ್​ ಕೊಟ್ಟು ಎಂಪಿ ಸ್ಥಾನದಿಂದ ವಜಾ ಮಾಡಬೇಕು. 30 ಸಾವಿರ ಕೋಟಿ ರೂ. ಹಣದ ಹಿನ್ನೆಲೆಯ ತನಿಖೆಗೆ ಐಟಿ ಇಲಾಖೆಗೆ ಸೂಚಿಸಬೇಕು. ನ್ಯಾಯ ಸಮ್ಮತ ಚುನಾವಣೆ ಪಡೆಯಬೇಕೆಂದು ಆಯೋಗಕ್ಕೆ ಮನವಿ ಕೊಟ್ಟಿದ್ದೇವೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪರವಾಗಿ ಸಿಇಓಗೆ (ಮುಖ್ಯ ಚುನವಣಾ ಅಧಿಕಾರಿ) ದೂರು ನೀಡಿದ್ದೇವೆ. ರಮೇಶ್ ಜಾರಕಿಹೊಳಿ ಹೇಳಿಕೆ ಬಗ್ಗೆ ಸ್ಪಷ್ಟವಾಗಿ ಹೇಳಿದ್ದೇವೆ. ಪ್ರತೀ ಮತದಾರನಿಗೆ ಆರು ಸಾವಿರ ಕೊಡ್ತೇವೆ ಎಂದಿದ್ದಾರೆ. ಐದು ಕೋಟಿ ಮತದಾರರಿಗೆ ಮೂವತ್ತು ಸಾವಿರ ಕೋಟಿ ಹಂಚಲು ಹುನ್ನಾರ ಮಾಡಿದ್ದಾರೆ. ಲೀಗಲ್ ಓಪಿನಿಯನ್ ತಗೋತೀವಿ ಎಂದು ಸಿಇಒ ಹೇಳಿದ್ದಾರೆ.

ನ್ಯಾಯಸಮ್ಮತ ಚುನಾವಣೆ ನಡೆಸಬೇಕು ಎಂದು ಮನವಿ: ಈ ಬಗ್ಗೆ ತನಿಖೆ ಆಗಬೇಕು, ಸಿಎಂ, ನಡ್ಡಾ, ಜಾರಕಿಹೊಳಿ ಸೇರಿ ಸಂಬಂಧಿಸಿದವರ ಮೇಲೆ ಎಫ್​ಐಆರ್ ದಾಖಲು ಮಾಡಲು ಸೂಚಿಸಬೇಕು ಫ್ರೀ ಅಂಡ್ ಫೇರ್ ಎಲೆಕ್ಷನ್ ನಡೆಯಲು ಬಿಡ್ತಿಲ್ಲ. ನಡ್ಡಾ, ಕಟೀಲ್ ಅವರನ್ನು ಪಾರ್ಲಿಮೆಂಟ್ ಸದಸ್ಯತ್ವದಿಂದ ಅನರ್ಹಗೊಳಿಸಬೇಕು. ಐಟಿ, ಇಡಿ ಅಧಿಕಾರಿಗಳಿಗೆ ಪ್ರಕರಣ ನೀಡಬೇಕು ಎಂದು ಒತ್ತಾಯಿಸಿದರು. ನಿಮ್ಮ ಶಾಸಕರು ಕೂಡ ಟಿವಿ ಹಂಚುತ್ತಿದ್ದಾರೆ, ಕುಕ್ಕರ್ ಹಂಚುತ್ತಿದ್ದಾರೆ ಎಂಬ ಪ್ರಶ್ನೆಗೆ, ನಾವು ಸಿಇಒ ಅವರಿಗೆ ಸಂವಿಧಾನದ ಆರ್ಟಿಕಲ್ 324ರಂತೆ ಮುಕ್ತ ನ್ಯಾಯಸಮ್ಮತ ಚುನಾವಣೆ ನಡೆಸಬೇಕು ಎಂದು ಮನವಿ ಮಾಡಿದ್ದೇವೆ.

ನಾನು ಮಾಡಿರಲಿ, ಮತ್ತೊಬ್ಬರು ಮಾಡಿರಲಿ, ಮತ್ತೊಂದು ಪಕ್ಷದವರು ಮಾಡಿರಲಿ. ಅದನ್ನು ನಿಯಂತ್ರಿಸುವುದು, ಕ್ರಮ ಕೈಗೊಳ್ಳುವುದು ಆಯೋಗದ ಕರ್ತವ್ಯ. ಆ ಕೆಲಸವನ್ನು ಆಯೋಗ ಮಾಡಬೇಕು. ನಮ್ಮ ಮಾಹಿತಿ ಪ್ರಕಾರ ನಮ್ಮ ಶಾಸಕರು ಆ ರೀತಿ ಮಾಡಿಲ್ಲ. ನಿಮ್ಮ ಹತ್ತಿರ ಅಥವಾ ಬಿಜೆಪಿ ಅವರ ಹತ್ತಿರ ಆ ಬಗ್ಗೆ ಮಾಹಿತಿ ಇದ್ದರೆ ಅದನ್ನು ಆಯೋಗಕ್ಕೆ ಕೊಡಬೇಕು. ಹಾಗಿದ್ದಲ್ಲಿ ಕ್ರಮ ಜರುಗಿಸಲು ನಮ್ಮ ಅಭ್ಯಂತರ ಇಲ್ಲ ಎಂದರು.

ಇದನ್ನೂ ಓದಿ: ಡಿಕೆಶಿ ವಿರುದ್ಧ ಸಾಹುಕಾರ್‌ ಸಮರ: ಸಿಡಿ ಗ್ಯಾಂಗ್​ ಬೇಗ ಬಂಧಿಸಬೇಕೆಂದು ಜಾರಕಿಹೊಳಿ ಒತ್ತಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.