ETV Bharat / state

ಸಭಾಪತಿ ಹುದ್ದೆಗೆ ಬಿಜೆಪಿಯಲ್ಲಿಯೇ ಜಟಾಪಟಿ: ಹೊರಟ್ಟಿ ಆಯ್ಕೆಗೆ ಕಮಲ ಪಾಳೆಯದಲ್ಲಿ ಅಪಸ್ವರ

author img

By

Published : Sep 20, 2022, 12:26 PM IST

Updated : Sep 20, 2022, 12:41 PM IST

Legislative Council Chairman Election
ಸಾಂದರ್ಭಿಕ ಚಿತ್ರ

ಸಚಿವ ಸಂಪುಟ ಸಭೆಯಲ್ಲಿ ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಇದೇ 21ರಂದು ಚುನಾವಣೆ ನಡೆಸಲು ತೀರ್ಮಾನವಾಗಿದ್ದರೂ, ಈ ಕ್ಷಣದವರೆಗೆ ಚುನಾವಣೆ ವೇಳಾಪಟ್ಟಿ ಪ್ರಕಟಿಸಲಾಗಿಲ್ಲ.

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಹುದ್ದೆಗೆ ಅಭ್ಯರ್ಥಿ ಆಯ್ಕೆ ಮಾಡುವ ಸಂಬಂಧ ಬಿಜೆಪಿ ನಾಯಕರಲ್ಲಿಯೇ ಜಟಾಪಟಿ ಏರ್ಪಟ್ಟಿದೆ. ಜೆಡಿಎಸ್ ತೊರೆದು ಬಿಜೆಪಿ ಸೇರಿದ ಹಿರಿಯ ನಾಯಕ ಬಸವರಾಜ ಹೊರಟ್ಟಿ ಆಯ್ಕೆ ಮಾಡುವ ಬಗ್ಗೆ ಪಕ್ಷದಲ್ಲಿ ತೀವ್ರ ಗೊಂದಲ ಉಂಟಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಮತ್ತು ಇತರ ನಾಯಕರು ಸಭಾಪತಿ ಅಭ್ಯರ್ಥಿ ಸ್ಥಾನಕ್ಕೆ ಬಸವರಾಜ ಹೊರಟ್ಟಿಯವರ ಆಯ್ಕೆ ಮಾಡುವ ಪರವಾಗಿದ್ದರೆ, ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಹೊರಟ್ಟಿ ಆಯ್ಕೆಗೆ ಅಪಸ್ವರ ಎತ್ತಿದ್ದಾರೆ ಎನ್ನಲಾಗಿದೆ.

ಚುನಾವಣೆ ಮುಂದೂಡುವಂತೆ ಒತ್ತಡ?: ಸಚಿವ ಸಂಪುಟ ಸಭೆಯಲ್ಲಿ ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಇದೇ 21ರಂದು(ನಾಳೆ) ಚುನಾವಣೆ ನಡೆಸಲು ತೀರ್ಮಾನವಾಗಿದ್ದರೂ, ಈ ಕ್ಷಣದವರೆಗೆ ಚುನಾವಣೆ ವೇಳಾಪಟ್ಟಿ ಪ್ರಕಟಿಸಲಾಗಿಲ್ಲ ಮತ್ತು ಚುನಾವಣೆ ನಡೆಸುವ ಬಗ್ಗೆ ರಾಜ್ಯ ಪಾಲರ ಕಚೇರಿಗೆ ವರದಿ ಸಹ ನೀಡಿಲ್ಲ. ಹೊರಟ್ಟಿಯವರ ಆಯ್ಕೆ ಬಗ್ಗೆ ಗೊಂದಲ ಮೂಡಿದ್ದರಿಂದ ಸಭಾಪತಿ ಚುನಾವಣೆಯನ್ನು ನಾಳೆ ನಡೆಸದೆ ಮುಂದೂಡುವ ಬಗ್ಗೆಯೂ ಮುಖ್ಯಮಂತ್ರಿ ಬೊಮ್ಮಾಯಿ ಮೇಲೆ ಬಿಜೆಪಿ ಹೈಕಮಾಂಡ್ ಒತ್ತಡ ಹಾಕತೊಡಗಿದೆ ಎಂದು ತಿಳಿದು ಬಂದಿದೆ.

ಬಸವರಾಜ ಹೊರಟ್ಟಿಯವರನ್ನು ಸಭಾಪತಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲು ಬಿಜಜೆಪಿಯಲ್ಲಿ ಕೆಲವು ಸಭಾಪತಿ ಸ್ಥಾನದ ಆಕಾಂಕ್ಷಿಗಳು ವಿರೋಧ ವ್ಯಕ್ತಪಡಿಸಿ ಬಿಜೆಪಿ ಹೈಕಮಾಂಡ್ ಮತ್ತು ಆರ್​ಎಸ್​ಎಸ್​ಗೆ ದೂರು ಸಲ್ಲಿಸಿದ್ದಾರೆ ಎನ್ನಲಾಗಿದೆ. ಆರ್​ಎಸ್​​ಎಸ್ ಮತ್ತು ಬಿಜೆಪಿ ಹೈಕಮಾಂಡ್ ಸದಸ್ಯರಲ್ಲಿ ಒಬ್ಬರಾದ ಬಿ.ಎಲ್ ಸಂತೋಷ್ ಅವರ ಮಧ್ಯಪ್ರವೆಶದಿಂದ ಸಭಾಪತಿ ಅಭ್ಯರ್ಥಿ ಆಯ್ಕೆ ಜಟಿಲಗೊಂಡಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ಹೈಕಮಾಂಡ್ ಒಪ್ಪಿಗೆ ಪಡೆದು ಜೆಡಿಎಸ್​​ನಲ್ಲಿದ್ದ ಬಸವರಾಜ ಹೊರಟ್ಟಿಯವರನ್ನು ಬಿಜೆಪಿಗೆ ಕರೆತರುವಾಗ ಚುನಾವಣೆಯಲ್ಲಿ ಗೆದ್ದರೆ ವಿಧಾನಪರಿಷತ್ ಸಭಾಪತಿಯಾಗಿ ಆಯ್ಕೆ ಮಾಡುವ ಭರವಸೆ ನೀಡಿದ್ದರು ಎನ್ನಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಸಹ ಹೊರಟ್ಟಿಯವರಿಗೆ ಸಭಾಪತಿ ಸ್ಥಾನ ನೀಡಲು ಸಹಮತ ಸೂಚಿಸಿದ್ದಾರೆ ಎನ್ನಲಾಗಿದೆ.

ಆದರೆ ಮೇಲ್ಮನೆ ಸಭಾಪತಿಯಾಗಿ ನೇಮಕ ಮಾಡುವ ಷರತ್ತಿನ ಮೇರೆಗೆ ಜೆಡಿಎಸ್ ತೊರೆದು ಬಿಜೆಪಿ ಸೇರಿದ ಬಸವರಾಜ ಹೊರಟ್ಟಿಗೆ ನೀಡಿದ್ದ ಮಾತನ್ನು ತಪ್ಪುವ, ಬಿಜೆಪಿ ವಚನ ಭ್ರಷ್ಟ ಪಕ್ಷವೆನಿಸುವ ಎಲ್ಲ ಲಕ್ಷಣಗಳು ಗೋಚರಿಸತೊಡಗಿವೆ.

ಈಡೇರದ ನೀಡಿದ ಭರವಸೆ: ಆಪರೇಷನ್ ಕಮಲ ಮಾಡಿ ಕಾಂಗ್ರೆಸ್ ಮತ್ತು ಜೆಡಿಎಸ್​ನಿಂದ ಪಕ್ಷಕ್ಕೆ ಸೇರಿಸಿಕೊಂಡ ಹಲವರಿಗೆ ಮಾತು ಕೊಟ್ಟಂತೆ ಸೂಕ್ತ ಸ್ಥಾನ ಮಾನ ಕಲ್ಪಿಸುವುದರಲ್ಲಿ ಬಿಜೆಪಿ ಹಿಂದೆ ಬೀಳತೊಡಗಿದೆ. ವಲಸಿಗರಲ್ಲಿ ಕೆಲವರಿಗೆ ಪಕ್ಷ ಸೇರುವಾಗ ನೀಡಿದ ಆಶ್ವಾಸನೆಯನ್ನು ಈಡೇರಿಸಿಲ್ಲ ಎನ್ನುವ ಆಪಾದನೆಗಳಿವೆ.

ಹಿರಿಯ ಮುಖಂಡರಾದ ಮಾಜಿ ಸಚಿವ ಹೆಚ್.ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡದೆ ಬಿಜೆಪಿ ಮಾತು ತಪ್ಪಿದ ಬಗ್ಗೆ ಆರೋಪಗಳಿವೆ. ಅದರಂತೆ ಬಿಜೆಪಿ ಸರ್ಕಾರ ರಚಿಸಲು ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಸಚಿವ ರಮೇಶ ಜಾರಕಿ ಹೊಳಿಗೆ ಅಶ್ಲೀಲ ಸಿಡಿ ಪ್ರಕರಣದಲ್ಲಿ ಎಸ್​​ಐಟಿ ಕ್ಲೀನ್ ಚಿಟ್ ನೀಡಿದ ಬಳಿಕವೂ ಅವರಿಗೆ ಸಚಿವ ಪದವಿ ನೀಡದೇ ವಿಶ್ವಾಸ ದ್ರೋಹ ಮಾಡಿದೆ ಎಂದು ಆಪಾದಿಸಲಾಗಿದೆ.

ರಮೇಶ ಜಾರಕಿಹೊಳಿ ಜತೆ ಬಿಜೆಪಿ ಸೇರಿದ ಮಹೇಶ ಕುಮಟಲ್ಲಿ, ಶ್ರೀಮಂತ್ ಪಾಟೀಲ್ ಅವರಿಗೂ ಮಂತ್ರಿ ಸ್ಥಾನ ನೀಡಲಾಗಿಲ್ಲ. ಪಕ್ಷೇತರ ಶಾಸಕ ಆರ್.ಶಂಕರ್​ಗೆ ಸಹ ಸಚಿವ ಪದವಿ ನೀಡದೆ ವಂಚನೆ ಮಾಡಿದ ಆರೋಪ ಬಿಜೆಪಿ ಮೇಲಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಪ್ರತಾಪ ಗೌಡ ಪಾಟೀಲ್​​ ಅವರಿಗೆ ಸಹ ಎಂಎಲ್​ಸಿ ಅಥವಾ ಸಚಿವ ಸ್ಥಾನ ನೀಡಲಾಗಿಲ್ಲ. ಹೀಗೆ ಬಿಜೆಪಿ ಮಾತನ್ನ ನಂಬಿ ವಂಚನೆಗೊಳಗಾದವರು ಬಿಜೆಪಿಯ ವಿಶ್ವಾಸ ದ್ರೋಹದ ಬಗ್ಗೆ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

ಹೊರಟ್ಟಿ- ಸಿಎಂ ಭೇಟಿ: ಸಭಾಪತಿ ಅಭ್ಯರ್ಥಿಯಾಗಿ ಆಯ್ಕೆ ಮಾಡಲು ವಿಳಂಬವಾಗುತ್ತಿರುವುದರಿಂದ ಮತ್ತು ಸಭಾಪತಿ ಚುನಾವಣೆ ಮುಂದೂಡುವ ಸಾಧ್ಯತೆ ಹಿನ್ನೆಲೆ ಬಸವರಾಜ ಹೊರಟ್ಟಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿ ಸಮಾಲೋಚನೆ ಮಾಡಿದ್ದಾರೆ. ಹೈಕಮಾಂಡ್ ಜತೆ ಮಾತನಾಡಿ ಅಭ್ಯರ್ಥಿಯಾಗಿ ಆಯ್ಕೆ ಮಾಡಲು ಶ್ರಮಿಸುವುದಾಗಿ ಸಿಎಂ ಅವರು ಹೊರಟ್ಟಿಗೆ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಬಿಜೆಪಿ ನಡೆಗೆ ಹೊರಟ್ಟಿ ಬೇಸರ: ವಿಧಾನ ಪರಿಷತ್ ಸಭಾಪತಿ ಚುನಾವಣೆಗೆ ತಮ್ಮನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಲು ಬಿಜೆಪಿ ಮೀನಾಮೇಶ ಮಾಡುತ್ತಿರುವ ಬಗ್ಗೆ ಬಸವರಾಜ ಹೊರಟ್ಟಿ ಬಹಳಷ್ಟು ನೊಂದಿದ್ದಾರೆ. ಯಾವುದೇ ಪಕ್ಷವಾದರೂ ಸ್ವಂತ ಶಕ್ತಿ ಮೇಲೆ ಗೆಲ್ಲುವ ಸಾಮರ್ಥ್ಯವಿರುವ ತಮಗೆ ಪಕ್ಷಕ್ಕೆ ಸೇರಿಸಿಕೊಂಡು ಚುನಾವಣೆಯಲ್ಲಿ ಗೆದ್ದ ಬಳಿಕ ನೀಡಿದ್ದ ಭರವಸೆ ಈಡೇರಿಸದಿರುವ ಕುರಿತು ಆತ್ಮೀಯರಲ್ಲಿ ಮಾತನಾಡುವಾಗ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಸಭಾಪತಿಯಾಗಿ ಆಯ್ಕೆ ಮಾಡುವ ಬಗ್ಗೆ ಆಶ್ವಾಸನೆ ಕೊಟ್ಟಿದ್ದರಿಂದಲೇ ಬಿಜೆಪಿಗೆ ಸೇರಲಾಯಿತು. ಪಕ್ಷ ಸೇರುವ ಮುನ್ನ ನೀಡಿದ್ದ ಮಾತಿನಂತೆ ನಡೆದುಕೊಳ್ಳದೆ ವಿಶ್ವಾಸ ದ್ರೋಹ ಮಾಡುತ್ತಿರುವ ಬಿಜೆಪಿ ವಚನ ಭ್ರಷ್ಟತೆ ಬಗ್ಗೆ ಕಟು ಟೀಕೆಗಳೂ ಕೇಳಿ ಬರುತ್ತಿವೆ.

ಪ್ರತಿ ಚುನಾವಣೆಯಲ್ಲಿ ಸತತವಾಗಿ ಗೆಲ್ಲುತ್ತಲೇ ಬರುತ್ತಿರುವ ಬಸವರಾಜ ಹೊರಟ್ಟಿಯಂತಹ ಹಿರಿಯ ನಾಯಕರಿಗೂ ಬಿಜೆಪಿ ವಿಶ್ವಾಸ ದ್ರೋಹ ಮಾಡದೇ ಆಡಿದ ಮಾತನ್ನು ಉಳಿಸಿಕೊಳ್ಳಬೇಕು. ಇಲ್ಲವಾದಲ್ಲಿ ಪಕ್ಷದ ಮೇಲೆ ಅಪನಂಬಿಕೆ ಬರುತ್ತದೆ ಎನ್ನುವ ಅಭಿಪ್ರಾಯವನ್ನು ಕೆಲವು ಮುಖಂಡರು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹೊರಟ್ಟಿಗೆ ಸಭಾಪತಿ ಸ್ಥಾನ ನೀಡಲು ವಿರೋಧ, ಕೇಶವಕೃಪಾ ಅಂಗಳ ತಲುಪಿದ ವಿವಾದ: ಚುನಾವಣೆ ಮುಂದೂಡಿಕೆ?

Last Updated :Sep 20, 2022, 12:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.