ETV Bharat / state

'ದೂರದೃಷ್ಟಿ ಇಲ್ಲದ ಸಂಪೂರ್ಣ ನಿರಾಶಾದಾಯಕ ಬಜೆಟ್': ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಸುರ್ಜೇವಾಲಾ

author img

By

Published : Feb 1, 2023, 4:17 PM IST

randeep surjewala
​ರಣದೀಪ್​ ಸಿಂಗ್​ ಸುರ್ಜೇವಾಲಾ

ಇದೊಂದು ದೂರದೃಷ್ಟಿ ಇಲ್ಲದ ನಿರಾಶಾದಾಯಕ ಬಜೆಟ್‌ ಅನ್ನೋದು ಕಾಂಗ್ರೆಸ್‌ ನಾಯಕ ರಣದೀಪ್​ ಸಿಂಗ್​ ಸುರ್ಜೇವಾಲಾ ಅಭಿಪ್ರಾಯ.

ಕೇಂದ್ರ ಬಜೆಟ್‌: ಕಾಂಗ್ರೆಸ್ ಪ್ರತಿಕ್ರಿಯೆ

ದೇವನಹಳ್ಳಿ (ಬೆಂಗಳೂರು): "ಮೋದಿ ಸರ್ಕಾರದ ಬಜೆಟ್​ ಸಂಪೂರ್ಣ ನಿರಾಶಾದಾಯಕವಾಗಿದೆ. ಮಧ್ಯಮ ಮತ್ತು ಬಡವರ್ಗ ಸೇರಿದಂತೆ ಯಾರಿಗೂ ಬಜೆಟ್​ನಿಂದ ಅನುಕೂಲವಾಗಿಲ್ಲ. ಹೂಡಿಕೆದಾರರಿಗೆ ಯಾವುದೇ ರೀತಿಯ ಕೊಡುಗೆ ಇಲ್ಲ. ಖಾಸಗಿ ಹಾಗೂ ಕ್ಯಾಪಿಟಲ್​ ಇನ್ವೆಸ್ಟ್​ಮೆಂಟ್​ಗೆ ಬೆಂಬಲ ಇಲ್ಲ" ಎಂದು ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಣದೀಪ್​ ಸಿಂಗ್​ ಸುರ್ಜೇವಾಲಾ ಟೀಕಿಸಿದರು.

ದೆಹಲಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು ಬಜೆಟ್​ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದರು. "ರಫ್ತು ಹೆಚ್ಚು ಮಾಡುವ ಬಗ್ಗೆ ಮುಂಗಡ ಪತ್ರದಲ್ಲಿ ಸ್ಪಷ್ಟ ಮಂಡನೆ ಇಲ್ಲ. ದೇಶದ ಮೂಲಭೂತ ಸೌಕರ್ಯಗಳಿಗೆ ಯಾವುದೇ ಹೂಡಿಕೆಯ ಬಗ್ಗೆ ತಿಳಿಸಿಲ್ಲ. ಆರ್ಥಿಕ ಅಭಿವೃದ್ಧಿಯ ಬಗ್ಗೆ ಮುಂಗಾಣ್ಕೆ ಇಲ್ಲ" ಎಂದರು.

"ಅಂತಾರಾಷ್ಟ್ರೀಯವಾಗಿ ಕಚ್ಚಾ ತೈಲದ ಬೆಲೆ ಶೇ 34 ಇಳಿಕೆ ಆಗಿದೆ. ಗ್ಯಾಸ್​ ಬೆಲೆಯಲ್ಲಿ ಶೇ 40 ಇಳಿಕೆ ಆಗಿದೆ. ಆದರೆ ಬಜೆಟ್​ನಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆ ಇಳಿಸಿಲ್ಲ. ಕನಿಷ್ಟ ಪೆಟ್ರೋಲ್​ ಮತ್ತು ಡೀಸೆಲ್​ನಲ್ಲಿ 20 ರೂ ಇಳಿಕೆ ಮಾಡಬಹುದಿತ್ತು. ಗ್ಯಾಸ್‌ ಸಿಲಿಂಡರ್​ ದರವನ್ನು 500 ರೂ ವರೆಗೆ ಇಳಿಕೆ ಮಾಡಬೇಕಿತ್ತು" ಎಂದು ಹೇಳಿದರು.

"ನಿರುದ್ಯೋಗ ಸಮಸ್ಯೆ ದೇಶದಲ್ಲಿ ತಾಂಡವವಾಡುತ್ತಿದೆ. ಆದರೆ ಉದ್ಯೋಗ ಸೃಷ್ಟಿ ಮತ್ತು ಅದಕ್ಕೆ ಸಂಬಂಧಿಸಿ ವಿಷಯದಲ್ಲಿ ಬಜೆಟ್​ನಲ್ಲಿ ಏನೂ ಇಲ್ಲ. ಖಾಸಗಿ ಬಂಡವಾಳ ಹೂಡಿಕೆ ಹಾಗೂ ಎಮ್​ಎಸ್​ಎಮ್​ಇಗಳ ಸ್ಥಾಪನೆಗೆ ಅಗತ್ಯ ಕ್ರಮಗಳ ಬಗ್ಗೆಯೂ ತಿಳಿಸಿಲ್ಲ. ಸರ್ಕಾರಿ ಉದ್ಯೋಗದ ಬಗ್ಗೆಯೂ ಬಜೆಟ್​ನಲ್ಲಿ ಯಾವುದೇ ಮಾರ್ಗಸೂಚಿ ಇಲ್ಲ. ನಿರುದ್ಯೋಗದ ಕುರಿತು ಬಜೆಟ್​ನಲ್ಲಿ ಯಾವುದೇ ದೃಷ್ಟಿಕೋನಗಳಿಲ್ಲ" ಎಂದು ಹರಿಹಾಯ್ದರು.

"ಗ್ರಾಮೀಣ ಅಭಿವೃದ್ಧಿ ಮತ್ತು ಕೃಷಿ ಭಾರತದ ಬೆಳವಣಿಗೆಯ ಮೂಲ. ಅವುಗಳಿಗೂ ಯಾವುದೇ ಪ್ರಾಶಸ್ತ್ಯ ನೀಡಿಲ್ಲ. ಕೇವಲ ಹಳೆಯ ಯೋಜನೆಗಳನ್ನೇ ಮತ್ತೆ ಪಾಲಿಶ್​ ಮಾಡಿ ಮಂಡಿಸಲಾಗಿದೆ ಮತ್ತು ಅದಕ್ಕೆ ಒಂದಿಷ್ಟು ಬಂಡವಾಳವನ್ನು ಹೆಚ್ಚಾಗಿ ಹೂಡಿಕೆ ಮಾಡಲಾಗಿದೆ. ರೈತರ ಬೇಡಿಕೆಯ ಬೆಂಬಲ ಬೆಲೆಯ ಬಗ್ಗೆ ಬಜೆಟ್​ನಲ್ಲಿ ಯಾವುದೇ ದೃಷ್ಟಿಕೋನಗಳಿಲ್ಲ" ಎಂದು ಸುರ್ಜೇವಾಲ ಟೀಕಿಸಿದರು.

ಇದನ್ನೂ ಓದಿ: ದಿಢೀರ್ ದೆಹಲಿಗೆ ಹಾರಿದ ಬಿಎಸ್​ವೈ.. ಕೇಂದ್ರದಿಂದ ಉತ್ತಮ ಬಜೆಟ್ ಎಂದ ಮಾಜಿ ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.