ETV Bharat / state

ವಿಧಾನಸೌಧದಲ್ಲಿ ಶಾಸಕ ಯತ್ನಾಳ್ ಅಸ್ವಸ್ಥ: ಆಸ್ಪತ್ರೆಗೆ ದೌಡಾಯಿಸಿದ ಬಿಎಸ್​ವೈ, ಸಿಎಂ, ಸ್ಪೀಕರ್​

author img

By

Published : Jul 19, 2023, 6:01 PM IST

Updated : Jul 19, 2023, 9:33 PM IST

ಆಸ್ಪತ್ರೆಗೆ ದೌಡಾಯಿಸಿದ ಬಿಎಸ್​ವೈ, ಸಿಎಂ, ಸ್ಪೀಕರ್​
ವಿಧಾನಸೌಧದಲ್ಲಿ ಶಾಸಕ ಯತ್ನಾಳ್ ಅಸ್ವಸ್ಥ: ಸ್ಟ್ರೆಚರ್​ನಲ್ಲಿ ಕೊಂಡೊಯ್ದ ಮಾರ್ಷಲ್​ಗಳು

ವಿಧಾನಸೌಧದಲ್ಲಿ ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಅಸ್ವಸ್ಥಗೊಂಡು ಕುಸಿದು ಬಿದ್ದಿರುವ ಘಟನೆ ನಡೆಯಿತು. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು.

ಆಸ್ಪತ್ರೆಗೆ ದೌಡಾಯಿಸಿದ ಬಿಎಸ್​ವೈ, ಸಿಎಂ, ಸ್ಪೀಕರ್​

ಬೆಂಗಳೂರು: ಪೀಠಕ್ಕೆ ಅಗೌರವ ತೋರಿಸಿದ ಹಿನ್ನೆಲೆಯಲ್ಲಿ ವಿಧಾನಸಭೆ ಅಧಿವೇಶನದಿಂದ 10 ಬಿಜೆಪಿ ಶಾಸಕರನ್ನು ಸ್ಪೀಕರ್ ಯು.ಟಿ.ಖಾದರ್ ಅಮಾನತು ಮಾಡಿ ಆದೇಶಿಸಿದ್ದಾರೆ. ಇನ್ನು ಈ ವೇಳೆ ಪ್ರತಿಭಟನಾ ನಿರತ ಬಿಜೆಪಿ ಸದಸ್ಯರನ್ನು ಮಾರ್ಷಲ್​ಗಳು ಹೊತ್ತೊಯ್ದಿದ್ದಾರೆ. ಮತ್ತೊಂದು ಕಡೆ ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಅಸ್ವಸ್ಥಗೊಂಡು ಕುಸಿದು ಬಿದ್ದ ಪ್ರಕರಣವೂ ನಡೆಯಿತು. ಅಸ್ವಸ್ಥಗೊಂಡ ಅವರನ್ನು ತಕ್ಷಣ ಸ್ಟ್ರೆಚರ್​ನಲ್ಲಿ ಮಾರ್ಷಲ್​ಗಳು ಹೊತ್ತು ಕೊಂಡು ಹೋಗಿ, ಆಸ್ಪತ್ರೆಗೆ ರವಾನಿಸಿದರು. ಸುದ್ದಿ ತಿಳಿದಾಕ್ಷಣ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆಸ್ಪತ್ರೆಗೆ ತೆರಳಿ ಮಾಜಿ ಸಚಿವ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಆರೋಗ್ಯ ವಿಚಾರಿಸಿದ್ರು.

ಇನ್ನು ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಅವರ ಬಳಿಕ ಸಿಎಂ ಸಿದ್ದರಾಮಯ್ಯ ಮತ್ತು ಸ್ಪೀಕರ್​ ಯುಟಿ ಖಾದರ್​ ಆಸ್ಪತ್ರೆಗೆ ತೆರಳಿ ಯತ್ನಾಳ್​ ಅವರ ಆರೋಗ್ಯವನ್ನು ವಿಚಾರಿಸಿದರು. ಯತ್ನಾಳ್​ ಆರೋಗ್ಗೆ ಸ್ಥೀರವಾಗಿದ್ದು, ಯಾವುದೇ ರೀತಿಯ ಭಯ ಪಡಬೇಕಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಪ್ರವೇಶದ್ವಾರದ ಗ್ಲಾಸ್ ಪೀಸ್ ಪೀಸ್: ಅಮಾನತು ಆದೇಶವನ್ನು ಖಂಡೀಸಿ ಪ್ರತಿಪಕ್ಷ ಸದಸ್ಯರು ಮತ್ತಷ್ಟು ಆಕ್ರೋಶ ವ್ಯಕ್ತಪಡಿಸಿದರು. ಸ್ಪೀಕರ್ ಚೇಂಬರ್​​​ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾಗ ಮಾರ್ಷಲ್​ಗಳು ಮಧ್ಯಪ್ರವೇಶಿಸಿದರು. ಈ ವೇಳೆ, ವಿಧಾನಸಭೆ ಪ್ರವೇಶ ದ್ವಾರದ ಬಳಿ ಮಾರ್ಷಲ್ ಹಾಗೂ ಬಿಜೆಪಿ ಶಾಸಕರ ನಡುವೆ ಮಾತಿನ ಚಕಮಕಿ ನಡೆಯಿತು. ನೂಕು ನುಗ್ಗಲು ವೇಳೆ ವಿಧಾನಸಭೆ ಪ್ರವೇಶ ದ್ವಾರದ ಗ್ಲಾಸ್ ಬಾಗಿಲು ಪುಡಿ ಪುಡಿಯಾಯಿತು.

ಕಲಾಪ ರಣಾಂಗಣ: ಇದಕ್ಕೂ ಮುನ್ನ, ಭೋಜನ‌ ವಿರಾಮದ ಬಳಿಕ ವಿಧಾನಸಭೆ ಕಲಾಪ ರಣಾಂಗಣವಾಗಿ ಮಾರ್ಪಟ್ಟಿತು. ಅಮಾನತಾದ 10 ಶಾಸಕರಾದ ಅಶ್ವತ್ಥನಾರಾಯಣ್, ಅರವಿಂದ ಬೆಲ್ಲದ್, ವೇದ ವ್ಯಾಸ್ ಕಾಮತ್, ಆರಗ ಜ್ಞಾನೇಂದ್ರ, ಧೀರಜ್ ಮುನಿರಾಜು, ಆರ್.ಅಶೋಕ್​ರನ್ನು ಮಾರ್ಷಲ್​ಗಳು ಹರಸಾಹಸ ಪಟ್ಟು ಸದನದಿಂದ ಹೊತ್ತೊಯ್ದು, ಹೊರಗೆ ಕಳುಹಿಸಿದರು.

ಕುಸಿದು ಬಿದ್ದ ಯತ್ನಾಳ: ಇದಾದ ಬಳಿಕ ಅಮಾನತಾದ ಬಿಜೆಪಿ ಶಾಸಕರು ಇತರ ಬಿಜೆಪಿ ಶಾಸಕರು ಜೊತೆಗೂಡಿ ವಿಧಾನಸಭೆ ಮೊಗಸಾಲೆಯಲ್ಲಿನ ಸ್ಪೀಕರ್ ಕಚೇರಿ ಮುಂದೆ ಕೂತು ಪ್ರತಿಭಟನೆ ನಡೆಸಿದರು. ಈ ವೇಳೆ, ಸ್ಪೀಕರ್ ಹಾಗೂ ಸರ್ಕಾರದ ವಿರುದ್ಧ ಬಿಜೆಪಿ ಸದಸ್ಯರು ಧಿಕ್ಕಾರ ಕೂಗಿದರು. ಬಳಿಕ ಮಾರ್ಷಲ್​ಗಳು ಅಲ್ಲಿಂದ ಪ್ರತಿಭಟನಾ ನಿರತ ಬಿಜೆಪಿ ಸದಸ್ಯರನ್ನು ಹೊತ್ತೊಯ್ದರು. ಈ ವೇಳೆ, ವಿಧಾನಸಭೆ ಪ್ರವೇಶ ದ್ವಾರದ ಬಳಿ ನೂಕು ನುಗ್ಗಲು ಉಂಟಾಯಿತು. ಗದ್ದಲದ ಮಧ್ಯೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಸ್ವಸ್ಥರಾದರು. ಬಳಿಕ ಅವರನ್ನು ಸ್ಟ್ರೆಚರ್ ಮೂಲಕ ಆಂಬ್ಯುಲೆನ್ಸ್​ಗೆ ರವಾನಿಸಿ, ಅಲ್ಲಿಂದ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ: ವಿಧಾನಸೌಧದ ಕೆಂಗಲ್​ ಗೇಟ್​ನ ದ್ವಾರದಲ್ಲಿ ಬಿಜೆಪಿ ಶಾಸಕರು ಪ್ರತಿಭಟನೆ ನಡೆಸಿದರು. ಹಿರಿಯ ಶಾಸಕರಾದ ಸುರೇಶ್ ಕುಮಾರ್, ವಿ. ಸುನೀಲ್ ಕುಮಾರ್, ಮುನಿರತ್ನ, ಆರ್. ಅಶೋಕ್, ಅರವಿಂದ್ ಬೆಲ್ಲದ್, ಮಹೇಶ್ ಟೆಂಕಿನಕಾಯಿ, ಧೀರಜ್ ಮುನಿರಾಜು, ಚನ್ನಬಸಪ್ಪ, ಜ್ಯೋತಿ ಗಣೇಶ್, ಸಿ. ಕೆ ರಾಮಮೂರ್ತಿ ಮತ್ತಿತರ ಶಾಸಕರು ಪ್ರತಿಭಟನೆ ನಡೆಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ದೋಖಾ, ದೋಖಾ ಕಾಂಗ್ರೆಸ್ ದೋಖಾ, ಮೋಸ, ಮೋಸ ಕಾಂಗ್ರೆಸ್ ಮೋಸ ಎಂದು ಘೋಷಣೆ ಕೂಗಿದರು.

ಬಿಜೆಪಿ ಪ್ರತಿಭಟನೆಗೆ ಜೆಡಿಎಸ್‌ ಸಾತ್​: ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಸಚಿವ ಹೆಚ್. ಡಿ ರೇವಣ್ಣ ಸೇರಿದಂತೆ ಜೆಡಿಎಸ್‌ ಶಾಸಕರು, ಬಿಜೆಪಿ ಶಾಸಕರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ.

ಇದನ್ನೂ ಓದಿ: ಸದನದ ಪೀಠಕ್ಕೆ ಅಗೌರವ: 10 ಬಿಜೆಪಿ ಶಾಸಕರನ್ನು ಅಧಿವೇಶನ ಮುಗಿಯುವವರಗೆ ಅಮಾನತು ಮಾಡಿ ಸ್ಪೀಕರ್ ಆದೇಶ

Last Updated :Jul 19, 2023, 9:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.