ETV Bharat / state

ವಿಧಾನಸಭೆ ಚುನಾವಣೆ: ಈ ಬಾರಿ ಕದನ‌ ಕತೂಹಲ ಕೆರಳಿಸಿರುವ ಹೈ ಪ್ರೊಫೈಲ್ ಅಖಾಡಗಳಿವು!

author img

By

Published : Apr 1, 2023, 9:36 PM IST

Etv BharatAnalysis of the high profile constituencies
ಈ ಬಾರಿ ಕದನ‌ ಕತೂಹಲ ಕೆರಳಿಸಿರುವ ಹೈ ಪ್ರೊಫೈಲ್ ಅಖಾಡಗಳಿವು

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕುತೂಹಲ ಹೆಚ್ಚಿಸಿರುವ ಹೈ ಪ್ರೊಫೈಲ್ ಕ್ಷೇತ್ರಗಳ ವಿಶ್ಲೇಷಣೆ.

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ರಾಜಕೀಯ ಪಕ್ಷಗಳು ಬಿರುಬಿಸಿನಲ್ಲಿ ಬಿರುಸಿನ ಪ್ರಾಚಾರದಲ್ಲಿ ತೊಡಗಿವೆ. ಕ್ಷೇತ್ರ ರಣಕಣದ ಹುರಿಯಾಳುಗಳ ಆಯ್ಕೆ ಪ್ರಕ್ರಿಯೆ ಅಂತಿಮ‌ ಹಂತದಲ್ಲಿದ್ದು, ಸದ್ಯದ ಸನ್ನಿವೇಶದಲ್ಲಿ ರಾಜ್ಯದಲ್ಲಿ ಕೆಲ ಕ್ಷೇತ್ರಗಳಲ್ಲಿ ಚುನಾವಣಾ ಕದನ ಕುತೂಹಲಕ್ಕೆ ಕಾರಣವಾಗಿದೆ.

ಮೇ 10 ವಿಧಾನಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಚುನಾವಣೆ ದಿನಾಂಕ ಘೋಷಣೆ ಆಗ್ತಾ ಇದ್ದ ಹಾಗೇ ರಾಜ್ಯದಲ್ಲಿ ಚುನಾವಣಾ ರಣಕಣ ರಂಗೇರುತ್ತಿದೆ. ರಾಜಕೀಯ ಪಕ್ಷಗಳು ಕ್ಷೇತ್ರಗಳ ಅಭ್ಯರ್ಥಿ ಹೆಸರುಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿವೆ. ಈಗಾಗಲೇ ಕೆಲ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹೆಸರಿಸಲಾಗಿದೆ.‌ ಜಯಭೇರಿ ಬಾರಿಸಲು ರಾಜಕೀಯ ಪಕ್ಷಗಳು ಚುನಾವಣಾ ಆಖಾಡದಲ್ಲಿ ನಾನಾ ಕಸರತ್ತು ಆರಂಭಿಸಿವೆ.

ಈ ಬಾರಿಯ ಚುನಾವಣೆ ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿರಲಿದೆ.‌ ಅದರಲ್ಲೂ ಕೆಲ ಕ್ಷೇತ್ರಗಳಲ್ಲಂತೂ ಚುನಾವಣಾ ಕಣ ರಣರೋಚಕವಾಗಿದೆ. ರಾಜ್ಯದಲ್ಲಿ ಡಜನ್​​ಗೂ ಹೆಚ್ಚು ಹೈ ಪ್ರೊಫೈಲ್ ಕ್ಷೇತ್ರಗಳು ಕದನ ಕುತೂಹಲಕ್ಕೆ ಕಾರಣವಾಗಿದೆ. ಕೆಲ ಪ್ರಮುಖರ ಕ್ಷೇತ್ರಗಳಲ್ಲಿ ತೀವ್ರ ಪೈಪೋಟಿ ಏರ್ಪಡುತ್ತಿದೆ.‌ ಹೀಗಾಗಿ ಈ ಬಾರಿ ಚುನಾವಣೆಯಲ್ಲಿ ಕೆಲ ಕ್ಷೇತ್ರಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಕದನ ಕುತೂಹಲ ಮೂಡಿರುವ ಕ್ಷೇತ್ರ ಯಾವುದು?:

ವರುಣಾ ಕ್ಷೇತ್ರ: ಈ ಬಾರಿ ಕದನ ಕುತೂಹಲ ಕೆರಳಿಸಿರುವ ಕ್ಷೇತ್ರವಾಗಿದೆ. ಕಾರಣ ಈ‌ ಕ್ಷೇತ್ರದ ಸ್ಪರ್ಧಾಳು ಮಾಜಿ ಸಿಎಂ ಸಿದ್ದರಾಮಯ್ಯ. ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯಗೆ ವರುಣಾ ಕ್ಷೇತ್ರದಲ್ಲಿ ಟಿಕೆಟ್ ನೀಡಿದೆ. 2018ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಜೆ.ಟಿ. ದೇವೇಗೌಡ ಎದುರು 1,996 ಮತಗಳ ಅಂತರದಿಂದ ಸೋತಿದ್ದ ಸಿದ್ದರಾಮಯ್ಯ, ಬಾದಾಮಿಯಲ್ಲಿ ಶ್ರೀರಾಮುಲು ವಿರುದ್ಧ ಗೆಲುವು ಸಾಧಿಸಿದ್ದರು. ಈಗ ತನ್ನ ತಂದೆಗಾಗಿ ಕ್ಷೇತ್ರವನ್ನು ಪುತ್ರ ಯತೀಂದ್ರ ಬಿಟ್ಟು ಕೊಟ್ಟಿದ್ದಾರೆ.

ಶಿಗ್ಗಾಂವಿ‌ ಕ್ಷೇತ್ರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸ್ವಕ್ಷೇತ್ರ. 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಯ್ಯದ್ ಅಜೀಂ ಪ್ರೀಮ್ ಖಾದ್ರಿ ವಿರುದ್ಧ 9,265 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಬಾರಿ ಬದಲಾದ ರಾಜಕೀಯ ಲೆಕ್ಕಾಚಾರದೊಂದಿಗೆ ಶಿಗ್ಗಾವಿ ಕ್ಷೇತ್ರವೂ ಕದನ ಕುತೂಹಲಕ್ಕೆ ಕಾರಣವಾಗಿದೆ.‌ ಮೀಸಲಾತಿ ಗೊಂದಲ ಹಿನ್ನೆಲೆ ಸಿಎಂ ಬೊಮ್ಮಾಯಿಗೆ ಶಿಗ್ಗಾಂವಿ ಕ್ಷೇತ್ರ ಈಗ ಕಬ್ಬಿಣದ ಕಡಲೆಯಂತಾಗಿದೆ. ಅದರಲ್ಲೂ ಕಾಂಗ್ರೆಸ್ ಕ್ಷೇತ್ರದಲ್ಲಿ ಪಂಚಮಸಾಲಿ ಸಮುದಾಯದ ವಿನಯ್ ಕುಲಕರ್ಣಿಯನ್ನು ಕಣಕ್ಕಿಳಿಸಲು ಚಿಂತಿಸುತ್ತಿದೆ. ಇದರಿಂದ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ಏರ್ಪಡುವುದು ಖಚಿತವಾಗಿದೆ.

ಹಾಸನ ಕ್ಷೇತ್ರ: ಬಿಜೆಪಿಯ ಪ್ರೀತಂ ಗೌಡ ಜೆಡಿಎಸ್ ಪ್ರಾಬಲ್ಯವನ್ನು ಮುರಿದು ಹಾಸನ ಕ್ಷೇತ್ರದಲ್ಲಿ ವಿಜಯಪಾತಾಕೆ ಹಾರಿಸಿದ್ದರು. ಕಳೆದ ಬಾರಿ ಸುಮಾರು 13 ಸಾವಿರ ಮತಗಳ ಅಂತರದಿಂದ ಜೆಡಿಎಸ್ ಹೆಚ್‌ಎಸ್‌ ಪ್ರಕಾಶ್‌ ಅವರನ್ನು ಸೋಲಿಸಿದ್ದರು‌. ಇದೀಗ ಹಾಸನಕ್ಕೆ ಪ್ರೀತಂ ಗೌಡ ಹುರಿಯಾಳಾಗುವುದು ಖಚಿತ. ಆದರೆ ಈ ಬಾರಿ ಜೆಡಿಎಸ್‌ಗೆ ಕೌಟುಂಬಿಕ ಕಲಹ ಎದುರಾಗಿದ್ದು, ದೇವೇಗೌಡರ ಸೊಸೆ ಹೆಚ್‌.ಡಿ ರೇವಣ್ಣ ಅವರ ಪತ್ನಿ ಭವಾನಿ ಹಾಸನದಿಂದ ಸ್ಪರ್ಧಿಸಲು ಟಿಕೆಟ್‌ಗೆ ಪಟ್ಟು ಹಿಡಿದಿದ್ದಾರೆ.

ಇತ್ತ ಮಾಜಿ ಸಿಎಂ ಕುಮಾರಸ್ವಾಮಿ ಸ್ವರೂಪ್ ಅವರನ್ನು ಕಣಕ್ಕಿಳಿಸಲು ಮುಂದಾಗಿದ್ದಾರೆ. ಹೀಗಾಗಿ ಈ ಬಾರಿ ಹಾಸನದಲ್ಲಿ ಯಾರಾಗಲಿದ್ದಾರೆ ಜೆಡಿಎಸ್ ಅಭ್ಯರ್ಥಿ ಎಂಬುದು ಎಲ್ಲರ ಕೌತುಕ. ಹೀಗಾಗಿ ಹಾಸನ ಅಖಾಡ ಮತ್ತೊಂದು ಹೈ ಪ್ರೊಫೈಲ್ ಕದನ ಕುತೂಹಲದ ಕ್ಷೇತ್ರವಾಗಿದೆ.

ಕೋಲಾರ ಕ್ಷೇತ್ರ: ಕೋಲಾರ ಈ ಬಾರಿಯ ಮತ್ತೊಂದು ಹೈ ಪ್ರೊಪೈಲ್ ಕ್ಷೇತ್ರವಾಗುವ ಸಾಧ್ಯತೆ ಹೆಚ್ಚಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಟ್ರಿ ಈ ಕ್ಷೇತ್ರದ ಕದನ ಕುತೂಹಲವನ್ನು ಹೆಚ್ಚಿಸಿದೆ. ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಲು ಇಚ್ಛೆ ವ್ಯಕ್ತಪಡಿಸಿದ್ದಾರೆ. ವರುಣಾ ಜೊತೆ ಕೋಲಾರದಲ್ಲೂ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.‌ ಬಹುತೇಕ ಸಿದ್ದರಾಮಯ್ಯಗೆ ಹೈಕಮಾಂಡ್ ಕೋಲಾರ ಟಿಕೆಟ್ ನೀಡುವ ಸಾಧ್ಯತೆ ಇದೆ.

ಸಿದ್ದರಾಮಯ್ಯ ಕೋಲಾರ ಅಖಾಡಕ್ಕಿಳಿದರೆ, ರಾಜಕೀಯ ಚಿತ್ರಣ ಬದಲಾಗಲಿದೆ. ಕೋಲಾರ ರಣಕಣ ಭಾರೀ ಜಿದ್ದಾಜಿದ್ದಿನಿಂದ ಕೂಡಲಿದೆ. ಜೆಡಿಎಸ್ ಹಾಗೂ ಬಿಜೆಪಿ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿದ್ದು, ಸಿದ್ದರಾಮಯ್ಯಗೆ ತೀವ್ರ ಪೈಪೋಟಿ ನೀಡಲು ನಿರ್ಧರಿಸಿದೆ.‌ ಇತ್ತ ಕಾಂಗ್ರೆಸ್​​ನಲ್ಲಿನ ಆಂತರಿಕ ಕಲಹವೂ ಕೋಲಾರ ರಣಕಣದ ಕದನ ಕೌತುಕವನ್ನು ಇಮ್ಮಡಿಗೊಳಿಸಲಿದೆ.

ರಾಮನಗರ ಕ್ಷೇತ್ರ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಸೊಸೆ ಹಾಗೂ ಹೆಚ್ ಡಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಗೆದ್ದು ಶಾಸಕರಾಗಿದ್ದರು. ಈ ಬಾರಿ ನಿಖಿಲ್ ಕುಮಾರ ಸ್ವಾಮಿ ಸ್ಪರ್ಧಿಸುತ್ತಿದ್ದಾರೆ. ತಮ್ಮ ಮಗನಿಗೆ ಹಾಲಿ ಶಾಸಕಿ ಅನಿತಾ ಕುಮಾರಸ್ವಾಮಿ ಕ್ಷೇತ್ರ ಬಿಟ್ಟು ಕೊಟ್ಟಿದ್ದಾರೆ. ಮಾಜಿ ಸಿಎಂ ಪುತ್ರ ಕಣಕ್ಕಿಳಿದಿರುವುದರಿಂದ ರಾಮನಗರ ಕ್ಷೇತ್ರ ಹೈ ಪ್ರೊಫೈಲ್ ಕ್ಷೇತ್ರವಾಗಿ ಬದಲಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಈ ಕ್ಷೇತ್ರದಲ್ಲಿ ತನ್ನದೇ ಲೆಕ್ಕಾಚಾರದೊಂದಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.

ಚನ್ನಪಟ್ಟಣ ಕ್ಷೇತ್ರ: 2018ರಲ್ಲಿ ರಾಮನಗರದ ಬದಲು ಇಲ್ಲಿಂದ ಸ್ಪರ್ಧಿಸಿದ್ದ ಹೆಚ್‌ ಡಿ ಕುಮಾರಸ್ವಾಮಿ, ಸಿ.ಪಿ. ಯೋಗೇಶ್ವರ್ ಅವರನ್ನು ಸೋಲಿಸಿದ್ದರು. ಕುಮಾರಸ್ವಾಮಿ ಮತ್ತೆ ಅದೇ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಸಹಜವಾಗಿಯೇ ಈ ಕ್ಷೇತ್ರ ಹೈ ಪ್ರೊಫೈಲ್ ರಣಕಣ. ಬಿಜೆಪಿಯಿಂದ ಪ್ರಬಲ ಅಭ್ಯರ್ಥಿ ಕ್ಷೇತ್ರದ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಕುಮಾರಸ್ವಾಮಿ ಹಾಗೂ ಸಿ.ಪಿ.ಯೋಗೇಶ್ವರ್ ಮಧ್ಯೆ ಹಿಂದಿನಿಂದಲೂ ಜಿದ್ದು ಇದ್ದು, ಈ ಬಾರಿಯ ಚುನಾವಣೆಯಲ್ಲಿ ಅದು ಪ್ರತಿಬಿಂಬಿಸಲಿದೆ. ಹೀಗಾಗಿ ಕ್ಷೇತ್ರದಲ್ಲಿ ಹೈ ಪ್ರೊಫೈಲ್ ಪೈಪೋಟಿ ಏರ್ಪಡಲಿದ್ದು, ರಣರೋಚಕವಾಗಿರಲಿದೆ.

ಶಿಕಾರಿಪುರ ಕ್ಷೇತ್ರ: ಮಾಜಿ ಸಿಎಂ ಮತ್ತು ಲಿಂಗಾಯತ ಪ್ರಬಲ ನಾಯಕ ಬಿ. ಎಸ್. ಯಡಿಯೂರಪ್ಪ ಪ್ರತಿನಿಧಿಸುತ್ತಿದ್ದ ಕ್ಷೇತ್ರ. ಚುನಾವಣಾ ರಾಜಕೀಯದಿಂದ ನಿವೃತ್ತಿಯಾದ ಅವರು, ಆ ಸ್ಥಾನವನ್ನು ತಮ್ಮ ಎರಡನೇ ಪುತ್ರ ಬಿ.ವೈ.ವಿಜಯೇಂದ್ರಗೆ ಬಿಟ್ಟು ಕೊಡಲು ಮುಂದಾಗಿದ್ದಾರೆ. ಹೈಕಮಾಂಡ್ ವಿಜಯೇಂದ್ರಗೆ ಶಿಕಾರಿಪುರದಲ್ಲೇ ಟಿಕೆಟ್ ನೀಡುತ್ತಾ ಎಂಬ ಕುತೂಹಲ ಮೂಡಿದೆ. ಅವರಿಗೆ ಟಿಕೆಟ್ ಸಿಗಬಹುದು ಎಂಬ ಮಾತು ಪ್ರಬಲವಾಗಿದ್ದು, ಸ್ಪರ್ಧೆಗಿಳಿದರೆ ಶಿಕಾರಿಪುರ ಕ್ಷೇತ್ರ ಹೈ ಪ್ರೊಫೈಲ್ ಕ್ಷೇತ್ರವಾಗುವುದರಲ್ಲಿ ಅನುಮಾನ ಇಲ್ಲ. ಕಾಂಗ್ರೆಸ್ ಶಿಕಾರಿಪುರದಲ್ಲಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿದ್ದು, ಕದನ‌ ಕುತೂಹಲ ಕೆರಳಿಸಿದೆ.

ಶಿವಮೊಗ್ಗ ಕ್ಷೇತ್ರ: ಕಮಿಷನ್ ಆರೋಪದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕೆ.ಎಸ್.ಈಶ್ವರಪ್ಪ ಇಲ್ಲಿನ ಹಾಲಿ ಶಾಸಕ. ಆದರೆ ಈ ಬಾರಿ ಶಿವಮೊಗ್ಗ ಕ್ಷೇತ್ರದಲ್ಲಿ ಟಿಕೆಟ್​​ಗಾಗಿ ಭಾರೀ ಪೈಪೋಟಿ ಏರ್ಪಟ್ಟಿದೆ. ಕೆ.ಎಸ್.ಈಶ್ವರಪ್ಪ ಈ ಬಾರಿಯೂ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಆದರೆ, ಆಯನೂರು ಮಂಜುನಾಥ್ ಕೂಡ ಟಿಕೆಟ್​​ಗಾಗಿ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಕ್ಷೇತ್ರ ಕದನ‌ ಕುತೂಹಲಕ್ಕೆ ಕಾರಣವಾಗಿದೆ.

ಟಿಕೆಟ್ ಸಿಗದೇ ಹೋದಲ್ಲಿ ಆಯನೂರು ಮಂಜುನಾಥ್ ಕಾಂಗ್ರೆಸ್ ಸೇರುವ ಮಾತು ದಟ್ಟವಾಗಿ ಕೇಳಿ ಬರುತ್ತಿದೆ. ಟಿಕೆಟ್ ಯಾರಿಗೆ ಸಿಕ್ಕರೂ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಸಮರ ಏರ್ಪಡಲಿದೆ. ಒಂದು ವೇಳೆ ಬಿಜೆಪಿ ಕೆ.ಎಸ್.ಈಶ್ವರಪ್ಪಗೆ ಟಿಕೆಟ್ ನೀಡಿದರೂ ಇಬ್ಬರ ಮಧ್ಯೆ ತೀವ್ರ ಪೈಪೋಟಿ ಏರ್ಪಡಲಿದೆ. ಈಶ್ವರಪ್ಪರಿಗೆ ಟಿಕೆಟ್ ಕೈ ತಪ್ಪಿದರೆ ಚುನಾವಣಾ ಅಖಾಡದಲ್ಲಿ ಯಾವ ರೀತಿ ಹೆಜ್ಜೆ ಇಡಲಿದ್ದಾರೆ ಎಂಬ‌ ಕುತೂಹಲ ಮೂಡಿದೆ.

ಸೊರಬ ಕ್ಷೇತ್ರ: ಕುಮಾರ್ ಬಂಗಾರಪ್ಪ ಬಿಜೆಪಿಯ ಹಾಲಿ ಶಾಸಕರು‌. ಈ ಬಾರಿ ಮತ್ತೆ ಕುಮಾರ ಬಂಗಾರಪ್ಪಗೆ ಬಿಜೆಪಿ ಟಿಕೆಟ್ ನೀಡುವ ಸಾಧ್ಯತೆ ಇದೆ. ಇತ್ತ ಅವರ ಸಹೋದರ ಮಧು ಬಂಗಾರಪ್ಪಗೆ ಸೊರಬ ಕ್ಷೇತ್ರದಿಂದ ಕಾಂಗ್ರೆಸ್​ ಟಿಕೆಟ್ ನೀಡಲಾಗಿದೆ. ಹಾಗಾಗಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಬಂಗಾರಪ್ಪ ಅವರ ಇಬ್ಬರು ಪುತ್ರರಾದ ಬಿಜೆಪಿ ಹಾಲಿ ಶಾಸಕ ಕುಮಾರ್ ಬಂಗಾರಪ್ಪ ಮತ್ತು ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಮತ್ತೆ ಒಂದೇ ಕ್ಷೇತ್ರದಿಂದ ಪರಸ್ಪರ ಕಣಕ್ಕಿಳಿಯಲಿದ್ದಾರೆ.

ಕಳೆದ ಬಾರಿ ಜೆಡಿಎಸ್ ಮಧು ಅವರಿಗೆ ಟಿಕೆಟ್ ನೀಡಿತ್ತು. ಆದರೆ ಈ ಬಾರಿ ಅವರು ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದಾರೆ. ಸೊರಬ ಕ್ಷೇತ್ರ ಈ ಬಾರಿ ಅಣ್ಣ ತಮ್ಮಂದಿರ ಪೈಪೋಟಿಗೆ ವೇದಿಕೆಯಾಗುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ಸಹಜವಾಗಿ ಕದನ‌ ಕುತೂಹಲ ಹೆಚ್ಚಿದೆ.

ಗಂಗಾವತಿ ಕ್ಷೇತ್ರ: ಗಣಿ ಉದ್ಯಮಿ ಮತ್ತು ಬಿಜೆಪಿಯ ಮಾಜಿ ಸಚಿವ ಜಿ ಜನಾರ್ದನ ರೆಡ್ಡಿ ತಮ್ಮ ಹೊಸ ಪಕ್ಷ 'ಕರ್ನಾಟಕ ರಾಜ್ಯ ಪ್ರಗತಿ ಪಕ್ಷ'ದ ಅಭ್ಯರ್ಥಿಯಾಗಿ ಇಲ್ಲಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಹೀಗಾಗಿ ಗಂಗಾವತಿ ಈ ಚುನಾವಣೆಯಲ್ಲಿ ಇದ್ದಕ್ಕಿದ್ದಂತೆ ಮಹತ್ವ ಪಡೆದುಕೊಂಡಿದೆ. ಸದ್ಯ ಬಿಜೆಪಿಯ ಪರಣ್ಣ ಈಶ್ವರಪ್ಪ ಮುನವಳ್ಳಿ ಈ ಕ್ಷೇತ್ರದ ಶಾಸಕರಾಗಿದ್ದಾರೆ. ಗಣಿದಣಿ ಜನಾರ್ಧನ ರೆಡ್ಡಿ ಎಂಟ್ರಿಯಿಂದ ಈ‌ ಕ್ಷೇತ್ರ ಇದೀಗ ಹೈ ಪ್ರೊಫೈಲ್ ಆಗಿ ಪರಿಣಮಿಸಿದೆ. ರೆಡ್ಡಿ ಬಿಜೆಪಿ ತೆಕ್ಕೆಯಿಂದ ಕ್ಷೇತ್ರವನ್ನು ಕಸಿಯಲಿದ್ದಾರೆಯಾ ಎಂಬುದು ಕುತೂಹಲ ಮೂಡಿಸಿದೆ.

ಗೋಕಾಕ ಕ್ಷೇತ್ರ: ಬೆಳಗಾವಿಯ ಪ್ರಬಲ ಜಾರಕಿಹೊಳಿ ಕುಟುಂಬದ ರಮೇಶ್ ಜಾರಕಿಹೊಳಿ ಅವರು 1999 ರಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಲೈಂಗಿಕ ಹಗರಣದ ನಂತರ ಜಾರಕಿಹೊಳಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಜಾರಕಿಹೊಳಿ ಕಾಂಗ್ರೆಸ್ ತೊರೆದು 2019ರಲ್ಲಿ ಬಿಜೆಪಿ ಸೇರಿದ್ದರು. ಈ ಬಾರಿಯೂ ರಮೇಶ್ ಜಾರಕಿಹೊಳಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ರಮೇಶ್ ಜಾರಕಿಹೊಳಿಗೆ ಈ ಬಾರಿಯೂ ಬಿಜೆಪಿ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದೆ. ಆದರೆ ಬದಲಾದ ರಾಜಕೀಯ ಲೆಕ್ಕಾಚಾರ, ಆರೋಪಗಳಿಂದ ಗೋಕಾಕ್ ಕ್ಷೇತ್ರದ ಮೇಲೆ ಎಲ್ಲರ ಕಣ್ಣಿದೆ. ಕಾಂಗ್ರೆಸ್ ಶತಾಯಗತಾಯ ರಮೇಶ್ ಜಾರಕಿಹೊಳಿ ಸೋಲಿಗೆ ರಣತಂತ್ರ ಹೆಣೆಯುತ್ತಿದೆ. ಹೀಗಾಗಿ ಕ್ಷೇತ್ರದಲ್ಲಿ ಕದನ ಕತೂಹಲ ಹೆಚ್ಚಾಗಿದೆ.

ದೇವನಹಳ್ಳಿ ಕ್ಚೇತ್ರ: ಕೆ.ಹೆಚ್.ಮುನಿಯಪ್ಪ ಈ ಬಾರಿ ದೇವನಹಳ್ಳಿಯಿಂದ ಕಾಂಗ್ರೆಸ್ ಹುರಿಯಾಳು. ಹೀಗಾಗಿ ದೇವನಹಳ್ಳಿ ಅಖಾಡ ಎಲ್ಲರ ಕೌತುಕಕ್ಕೆ ಕಾರಣವಾಗಿದೆ. ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಕೋಲಾರದಿಂದ ಸೋಲು ಅನುಭವಿಸಿರುವ ಅವರು ಈ ಬಾರಿ ವಿಧಾನಸಭೆ ಕಣದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಆದರೆ ಮುನಿಯಪ್ಪ ಸ್ಪರ್ಧೆಗೆ ಸ್ಥಳೀಯ ಕಾಂಗ್ರೆಸ್ ಮುಖಂಡರಿಂದ ತೀವ್ರ ವಿರೋಧ ಇದೆ. ಹೀಗಾಗಿ ಕ್ಷೇತ್ರದಲ್ಲಿ ಬಂಡಾಯದ ಬಿಸಿ ಹೆಚ್ಚುವ ಸಾಧ್ಯತೆ ಇದೆ. ಇತ್ತ ಜೆಡಿಎಸ್ ಹಾಲಿ ಶಾಸಕ ಎಲ್.ಎನ್.ನಾರಾಯಣ ಸ್ವಾಮಿ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಜೆಡಿಎಸ್ ಪ್ರಾಬಲ್ಯ ಹಾಗೂ ಪಕ್ಷದೊಳಗಿನ ಆಂತರಿಕ ತಿಕ್ಕಾಟದಿಂದ ಕೆ.ಹೆಚ್.ಮುನಿಯಪ್ಪ ಹಣೆಬರಹ ಏನಾಗಲಿದೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಬಳ್ಳಾರಿ ನಗರ ಕ್ಷೇತ್ರ: ಮಾಜಿ ಸಚಿವ, ಗಣಿ ಉದ್ಯಮಿ ಹಾಗೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಮುಖ್ಯಸ್ಥ ಜಿ.ಜನಾರ್ದನ ರೆಡ್ಡಿ ಇಲ್ಲಿಂದ ತಮ್ಮ ಪತ್ನಿ ಅರುಣಾ ಲಕ್ಷ್ಮಿ ಅವರನ್ನು ಕಣಕ್ಕಿಳಿಸುವುದಾಗಿ ಘೋಷಿಸಿದ್ದಾರೆ. ರೆಡ್ಡಿ ಸಹೋದರ ಜಿ ಸೋಮಶೇಖರ ರೆಡ್ಡಿ ಹಾಲಿ ಬಿಜೆಪಿ ಶಾಸಕರಾಗಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಮಾವ-ಸೊಸೆ ಮಧ್ಯೆ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ.

ಇದನ್ನೂ ಓದಿ:ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ ನಿಕ್ಕಿ: ಏಪ್ರಿಲ್​ 10 ರ ಬಳಿಕ ಪ್ರಕಟ ಸಾಧ್ಯತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.